ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
ಇಂದು (ಫೆ.28) ವಿಧಾನಸಭೆಯಲ್ಲಿ ಮಾತನಾಡಿದ ಅವರು, “ನಾವು ದೇಶ ಪ್ರೇಮದ ಬಗ್ಗೆ ಮಾತನಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ದೇಶ ಪ್ರೇಮ ಹೇಳಿಕೊಡಬೇಕಾ? ಕಾಂಗ್ರೆಸ್ನವರು ಇತರರಿಂದ ದೇಶ ಪ್ರೇಮದ ಪಾಠ ಕಲಿಯಬೇಕಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷ ಎಷ್ಟು ಜನರನ್ನು ತ್ಯಾಗ ಮಾಡಿದೆ. ದೇಶ ಪ್ರೇಮ ಅಲ್ಲಿಂದ ಬರಲಿಲ್ವಾ ನಮಗೆ?. ಸ್ವಾತಂತ್ಯಕ್ಕೆ ಎಷ್ಟು ಜನರನ್ನು ಬಲಿ ಕೊಟ್ಟಿದ್ದೇವೆ ನಾವು, ಅದನ್ನು ಮರೆತಿಲ್ಲ ಎಂದರು.
ಕಾಂಗ್ರೆಸ್ನವರಿಗೆ ದೇಶಪ್ರೇಮ ಅನ್ನುವುದು ರಕ್ತಗತವಾಗಿ ಬಂದಿದೆ. ನಮಗೆ ದೇಶ ಪ್ರೇಮದ ಪಾಠ ಹೇಳಿಕೊಡುವ ಅಗತ್ಯ ಯಾರಿಗೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ನವರು ಎಷ್ಟು ಜನರು ತ್ಯಾಗ ಮಾಡಿದ್ದಾರೆ ಎಂಬುದನ್ನು ಮರೆಯಬಾರದು.@INCKarnataka pic.twitter.com/NOgW8Sg5Hc
— Dr. G Parameshwara (@DrParameshwara) February 28, 2024
“ಬಿಜೆಪಿಯ ಸುನಿಲ್ ಕುಮಾರ್ ಹೇಳಿದಂತೆ ಈಗಿನ ಕಾಂಗ್ರೆಸ್ ಬೇರೆ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮ ಭದ್ಧತೆ, ಧ್ಯೇಯ ಯಾವುದೂ ಬದಲಾಗಿಲ್ಲ. 1885ರಲ್ಲಿ ಪ್ರಾರಂಭವಾದ ಕಾಂಗ್ರೆಸ್ನ ಭದ್ಧತೆ ಇವತ್ತಿಗೂ ಕೂಡ ಬದಲಾಗಿಲ್ಲ. ನಮ್ಮ ಧ್ಯೇಯದ ಒಂದೇ ಒಂದು ಶಬ್ಧ ನಾವು ಬದಲಾಯಿಸಿಲ್ಲ. ದೇಶ ಪ್ರೇಮ ಕಾಂಗ್ರೆಸ್ನವರಿಗೆ ರಕ್ತಗತವಾಗಿ ಬಂದಿದೆ. ಹಾಗಂತ ಬಿಜೆಪಿಯವರಿಗೆ ಬಂದಿಲ್ಲ ಎನ್ನುತ್ತಿಲ್ಲ. ಆದರೆ, ಕಾಂಗ್ರೆಸ್ನವರಿಗೆ ದೇಶ ಪ್ರೇಮ ಹೇಳಿ ಕೊಡುವುದು ಅಷ್ಟು ಸಮಂಜಸವಲ್ಲ. ಕಾಂಗ್ರೆಸ್ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿಕೊಡುವ ಅಗತ್ಯ ಇಲ್ಲ” ಎಂದು ಖಾರವಾಗಿ ನುಡಿದರು.
“ಪಾಕಿಸ್ತಾನಕ್ಕೆ ಬೆಂಬಲ ಕೊಡುತ್ತೀರಿ, ಪಾಕಿಸ್ತಾನದ ಬಾವುಟ ಹಾರಿಸುವವರಿಗೆ ಮತ್ತು ಪಾಕಿಸ್ತಾನ್ ಝಿಂದಾಬಾದ್ ಕೂಗುವವರಿಗೆ ನೀವು ಸಹಕಾರ ಕೊಡುತ್ತೀರಿ ಎಂಬ ಆರೋಪ ನಮ್ಮ ಮೇಲೆ ಮಾಡುತ್ತೀದ್ದೀರಿ. 1972ರಲ್ಲಿ ನಾವು ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದೆವು. ಇನ್ನೇನು ಪಾಕಿಸ್ತಾನವನ್ನೇ ನಾವು ಮುಗಿಸುತ್ತಿದ್ದೆವು. ಇಸ್ಲಾಮಾಬಾದ್ವರೆಗೆ ನಾವು ಹೋಗಿದ್ದೆವು. ಅಂತಹ ನಮಗೆ ಪಾಕಿಸ್ತಾನದ ಮೇಲೆ ಅಭಿಮಾನವಿದೆ, ನಾವು ಪಾಕಿಸ್ತಾನದ ಪರ ಜೈಕಾರ ಕೂಗಿದವರನ್ನು ಬೆಂಬಲಿಸುತ್ತಿದ್ದೇವೆ ಎನ್ನುತ್ತಿದ್ದೀರಲ್ಲ” ಎಂದು ಹೇಳಿದರು.
ಇದನ್ನೂ ಓದಿ : ಪಾಕಿಸ್ತಾನ ಪರ ಘೋಷಣೆ ಆರೋಪ ಸಾಬೀತಾದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ