Homeಕರ್ನಾಟಕಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡರಿಗೆ ಕಾಂಗ್ರೆಸ್‌ ಟಿಕೆಟ್; ಒಕ್ಕಲಿಗರ ಮತ ವಿಭಜನೆಯಾದರೆ ಜಿಟಿಡಿ ಗೆಲುವು ಕಷ್ಟವೇ?

ಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡರಿಗೆ ಕಾಂಗ್ರೆಸ್‌ ಟಿಕೆಟ್; ಒಕ್ಕಲಿಗರ ಮತ ವಿಭಜನೆಯಾದರೆ ಜಿಟಿಡಿ ಗೆಲುವು ಕಷ್ಟವೇ?

- Advertisement -
- Advertisement -

ಸಾಂಸ್ಕೃತಿಕ ನಗರಿ ಮೈಸೂರು ನಗರದ ಸುತ್ತ ಹಬ್ಬಿಕೊಂಡಿರುವ, ನಗರ ಹಾಗೂ ಗ್ರಾಮೀಣ ಸೊಗಡು ಎರಡೂ ಬೆರೆತ ವಿಶಿಷ್ಟ ವಿಧಾನಸಭಾ ಕ್ಷೇತ್ರ- ಚಾಮುಂಡೇಶ್ವರಿ. ರಾಜಕೀಯವಾಗಿ ಎಂದಿಗೂ ರಾಜ್ಯದ ಗಮನ ಸೆಳೆಯುವ, ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವು, ಮೊದಲಿನಿಂದಲೂ ಕಾಂಗ್ರೆಸ್- ಜೆಡಿಎಸ್‌ನ ಪ್ರಬಲ ಪೈಪೋಟಿಯ ನೆಲ. ಈಗ ಜೆಡಿಎಸ್ ಮತ್ತು ಕಾಂಗ್ರೆಸ್‌ ಪಕ್ಷಗಳ ಹುರಿಯಾಳುಗಳು ಅಂತಿಮವಾಗಿದ್ದಾರೆ. ಜೆಡಿಎಸ್‌ನಿಂದ ಜಿ.ಟಿ.ದೇವೇಗೌಡ, ಕಾಂಗ್ರೆಸ್‌ನಿಂದ ಮಾವಿನಹಳ್ಳಿ ಸಿದ್ದೇಗೌಡ ಕಣಕ್ಕಿಳಿಯುತ್ತಿದ್ದಾರೆ.

ಮೈಸೂರು ನಗರದೊಳಗೆ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿದ್ದರೆ ಮೈಸೂರು ಹೊರವಲಯಕ್ಕೆ ಹೊಂದಿಕೊಂಡಂತೆ ನಗರದ ಸುತ್ತಲೂ ಚಾಮುಂಡೇಶ್ವರಿ ಕ್ಷೇತ್ರ ಹಬ್ಬಿದೆ. ಈ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆಸಕ್ತಿದಾಯಕ ಸಂಗತಿಗಳು ಗೋಚರಿಸುತ್ತವೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಇಲ್ಲಿ ಪ್ರಸ್ತುತ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಬಳಿಕ ಶಾಸಕ ಜಿ.ಟಿ.ದೇವೇಗೌಡ ಅವರ ವರ್ಚಸ್ಸು ಹೆಚ್ಚಿದೆ.

2008ರ ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮೈಸೂರು ತಾಲೂಕು ಮತ್ತು ನಗರದ ಕೆಲವು ವಾರ್ಡ್‌ಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ ವರುಣ ಹೋಬಳಿಯನ್ನು ಪ್ರತ್ಯೇಕಿಸಿ, ಟಿ.ನರಸೀಪರ ಹಾಗೂ ವರುಣದ ಭಾಗಶಃ ಪ್ರದೇಶಗಳನ್ನು ಸೇರಿಸಿ ವರುಣ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. ಆ ನಂತರದಲ್ಲಿ ವರುಣಾ, ಸಿದ್ದರಾಮಯ್ಯನವರ ಕಾರ್ಯಕ್ಷೇತ್ರವಾಯಿತು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಸುಮಾರು ಮೂರು ಲಕ್ಷದಷ್ಟು ಜನಸಂಖ್ಯೆ ಇರುವ ಈ ಕ್ಷೇತ್ರದಲ್ಲಿ 75 ಸಾವಿರ ಒಕ್ಕಲಿಗ, 48 ಸಾವಿರ ಪರಿಶಿಷ್ಟ ಜಾತಿ, 35 ಸಾವಿರ ಕುರುಬ, 35 ಸಾವಿರ ಲಿಂಗಾಯತ, 30 ಸಾವಿರ ಪರಿಶಿಷ್ಟ ಪಂಗಡ, 14 ಸಾವಿರ ವಿಶ್ವಕರ್ಮ, 13 ಸಾವಿರ ಬ್ರಾಹ್ಮಣ, 12 ಸಾವಿರ ಮುಸ್ಲಿಂ ಹಾಗೂ ಇತರೆ ಸಮುದಾಯಗಳ 40 ಸಾವಿರ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. 2018ರ ಚುನಾವಣೆಯ ಮಾಹಿತಿ ಪ್ರಕಾರ ಪುರುಷರು 1,49,999, ಮಹಿಳೆಯರು-1,45,881 ಸೇರಿ ಒಟ್ಟು 2,95,880 ಮತದಾರರಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 13 ವಿಧಾನಸಭಾ ಚುನಾವಣೆಗಳಲ್ಲಿ ಐದು ಬಾರಿ ಸಿದ್ದರಾಮಯ್ಯನವರು ಗೆದ್ದಿದ್ದಾರೆ. ರಾಜಕೀಯ ಏಳುಬೀಳುಗಳಲ್ಲಿ ಜೆಡಿಎಸ್‌ ತೊರೆದ ಸಿದ್ದರಾಮಯ್ಯನವರು 2006ರಲ್ಲಿ ಕಾಂಗ್ರೆಸ್ ಸೇರಿದರು. 2006ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಿದ್ದರಾಮಯ್ಯನವರ ರಾಜಕೀಯ ಬದುಕಿನ ತಿರುವುಗಳಲ್ಲಿ ಒಂದಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರು 1,15,512 ಮತಗಳನ್ನು ಪಡೆದರೆ ಜೆಡಿಎಸ್‌ನ ಶಿವಬಸಪ್ಪ ಅವರು 1,15,255 ಮತಗಳನ್ನು ಪಡೆದು ಕೇವಲ 257 ಮತಗಳ ಅಂತರದಲ್ಲಿ ಸೋಲುಂಡರು. ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಒಂದು ವೇಳೆ ಸೋತಿದ್ದರೆ ಬಹುಶಃ ಅವರ ರಾಜಕೀಯ ವರ್ಚಸ್ಸು ಮುಗಿದುಹೋಗುತ್ತಿತ್ತು ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಯಾಗಿ ವರುಣಾ ರಚಿಸಿದಾಗ 2008 ಮತ್ತು 2013ರಲ್ಲಿ ಸಿದ್ದರಾಮಯ್ಯ ವರುಣಾದಿಂದ ಗೆದ್ದರು.

ಚಾಮುಂಡೇಶ್ವರಿಗೆ ಜಿಟಿಡಿ ಪ್ರವೇಶ

ಮೈಸೂರು ತಾಲ್ಲೂಕಿನ ಗುಂಗ್ರಾಲ್‌ಛತ್ರದ ನಿವಾಸಿಯಾದ ಜಿ.ಟಿ.ದೇವೇಗೌಡ ಅವರು ಮೂಲತಃ ಸಹಕಾರ ಕ್ಷೇತ್ರದ ಧುರೀಣರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದವರು. ಜನತಾ ದಳದಲ್ಲಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರಿಂದ ಜಿ.ಟಿ.ಡಿ. ಹುಣಸೂರು ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಳ್ಳಬೇಕಾಯಿತು. 2004ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿಟಿಡಿ (60258), ಕಾಂಗ್ರೆಸ್ ಅಭ್ಯರ್ಥಿ ಎಸ್.ಚಿಕ್ಕಮಾದು (46126) ಅವರನ್ನು 14,132 ಮತಗಳ ಅಂತರದಲ್ಲಿ ಮಣಿಸಿದರು. ಆದರೆ 2008ರ ಚುನಾವಣೆ ವೇಳೆಗೆ ಚಿಕ್ಕಮಾದು ಜೆಡಿಎಸ್ ಸೇರಿ, ಟಿಕೆಟ್ ಪಡೆದರು. ಎಚ್.ಡಿ.ಕುಮಾರಸ್ವಾಮಿಯವರು ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೆ ಮೋಸ ಮಾಡಿದರು ಎಂಬ ಕಾರಣವೊಡ್ಡಿ ಜೆಡಿಎಸ್ ತೊರೆದ ಜಿ.ಟಿ.ಡಿ. ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಂಡರು. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದರು. 2008ರ ಚುನಾವಣೆಯಲ್ಲಿ ಎಸ್.ಚಿಕ್ಕಮಾದು (42456) ಎರಡನೇ ಸ್ಥಾನ ಪಡೆದರೆ, ಜಿಟಿಡಿ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ (57497) ಅವರು 15,041 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಆ ನಂತರದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರೂ ಆದ ಜಿಟಿಡಿ, 2013ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮರಳಿದರು. ಈ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಸತ್ಯನಾರಾಯಣ (68761) ಅವರನ್ನು ಜಿ.ಟಿ.ಡಿ. (75864) 7,103 ಮತಗಳ ಅಂತರದಲ್ಲಿ ಸೋಲುಣಿಸಿದರು.

ಜಿ.ಟಿ.ದೇವೇಗೌಡರ ಹೆಸರು ಹೆಚ್ಚು ಚರ್ಚೆಗೆ ಒಳಗಾಗಿದ್ದು 2018ರ ವಿಧಾನಸಭಾ ಚುನಾವಣೆಯಲ್ಲಿ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಿಂದ ಕಣಕ್ಕಿಳಿದರು. ಆದರೆ ಸೋಲಿನ ಭೀತಿಯನ್ನು ಎದುರಿಸುತ್ತಿದ್ದರಿಂದ ಬಾದಾಮಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿದರು. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಜನಮುಖಿಯಾದ ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆದಿದ್ದ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ನಕಾರಾತ್ಮಕ ಸಂದೇಶವನ್ನೂ ರವಾನಿಸಿತ್ತು. ಸಿದ್ದರಾಮಯ್ಯ- ಜಿ.ಟಿ.ದೇವೇಗೌಡರ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿತು. ಕ್ಷೇತ್ರ ವಿಂಗಡಣೆಯಾದ ಮೇಲೆ ಬಹುತೇಕ ಚಾಮುಂಡೇಶ್ವರಿಯ ಸಂಪರ್ಕ ಕಳೆದುಕೊಂಡಂತಿದ್ದ ಸಿದ್ದರಾಮಯ್ಯನವರಿಗೆ ಈ ಚುನಾವಣೆ ಭಾರಿ ಪೆಟ್ಟು ನೀಡಿತು. 121325 ಮತಗಳನ್ನು ಪಡೆದ ಜಿಟಿಡಿ, 36,042 ಮತಗಳ ಅಂತರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದು ಈಗ ಇತಿಹಾಸ.

ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಸರಿಯಾದ ಸ್ಥಾನಮಾನಗಳನ್ನು ಸಿದ್ದರಾಮಯ್ಯನವರು ತಮ್ಮ ಸಂಪುಟದಲ್ಲಿ ನೀಡಲಿಲ್ಲ, ಪ್ರಸಾದ್ ಅವರಿಗೆ ಅನ್ಯಾಯವಾಗಿದೆ ಎಂಬ ಬೇಸರ ದಲಿತರಲ್ಲಿ ಇತ್ತು. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದ ದಲಿತರ ಮತಗಳು ಸಿದ್ದರಾಮಯ್ಯನವರ ವಿರುದ್ಧ ಬಿದ್ದವು ಎಂದು ವಿಶ್ಲೇಷಿಸಲಾಗಿದೆ. ಒಕ್ಕಲಿಗ ಸಮುದಾಯ ಶೇ.100ರಷ್ಟು ಜಿಟಿಡಿಯವರನ್ನು ಬೆಂಬಲಿಸಿತು; ನಾಯಕ ಸಮುದಾಯ ಕೈಹಿಡಿಯಿತು; ಮುಖ್ಯಮಂತ್ರಿ ಅಭ್ಯರ್ಥಿಯನ್ನು ಯಾರು ಸೋಲಿಸುತ್ತಾರೆಂಬ ಉದಾಸೀನತೆಯೂ ಸಿದ್ದರಾಮಯ್ಯನವರಿಗೆ ಇತ್ತು ಎನ್ನುತ್ತಾರೆ ಕ್ಷೇತ್ರದ ಜನತೆ.

ಜೆಡಿಎಸ್‌ನೊಂದಿಗೆ ಜಿಟಿಡಿ ಮುನಿಸು ಮತ್ತೆ ಸಖ್ಯ

2018ರ ಚುನಾವಣೆಯಲ್ಲಿ ರಾಜ್ಯದ ಫಲಿತಾಂಶ ಅತಂತ್ರವಾಗಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಯಿತು. ಎಚ್.ಡಿ ದೇವೇಗೌಡರ ಕುಟುಂಬದ ಸಂಬಂಧಿ ಹಾಗೂ ಮೈಸೂರು ವಿವಿ ನಿವೃತ್ತ ಕುಲಪತಿ ಕೆ.ಎಸ್.ರಂಗಪ್ಪ (2018ರ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದವರು) ಅವರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರನ್ನಾಗಿ ತಂದು ಕೂರಿಸುವ ಪ್ರಯತ್ನವನ್ನು ಮಾಡಲಾಯಿತು. ಮತ್ತೊಂದೆಡೆ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ಜಿ.ಟಿ.ಡಿಯವರಿಗೆ ಇಷ್ಟವಿರಲಿಲ್ಲ. ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ಧಿ ಇಲಾಖೆ, ಕಂದಾಯ ಅಥವಾ ಗೃಹ ಇಲಾಖೆ ನೀಡಬೇಕೆಂದು ಜಿಟಿಡಿ ಆಶಿಸಿದ್ದರು. ಇದು ಜೆಡಿಎಸ್‌ನೊಂದಿಗೆ ಮುನಿಸಿಕೊಳ್ಳಲೂ ಕಾರಣವಾಯಿತು.

2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೊಡಿಸಬೇಕೆಂದು ಜಿ.ಟಿ.ಡಿ. ಆಶಿಸಿದ್ದರು. ಆದರೆ ಹುಣಸೂರು ಕ್ಷೇತ್ರದ ಟಿಕೆಟ್ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಖಾತ್ರಿಯಾಯಿತು. ವಿಶ್ವನಾಥ್ ಗೆದ್ದರು. ಆದರೆ ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಸರ್ಕಾರ ಉರುಳಲು ಕಾರಣವಾದರು. ನಂತರ ಘೋಷಣೆಯಾದ ಹುಣಸೂರು ಉಪಚುನಾವಣೆಯಲ್ಲಾದರೂ ಹರೀಶ್‌ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಬೇಕೆಂದು ಜಿಟಿಡಿ ಆಶಿಸಿದರು. ಆದರೆ ದೇವರಹಳ್ಳಿ ಸೋಮಶೇಖರ್ ಅವರಿಗೆ ಟಿಕೆಟ್ ದೊರಕಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಟಿಡಿಯವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದರು. ಸುಮಾರು ಮೂರೂವರೆ ವರ್ಷ ಜೆಡಿಎಸ್ ಕಚೇರಿಯತ್ತ ಜಿಟಿಡಿ ಕಾಲಿಡಲಿಲ್ಲ. ಕುಮಾರಸ್ವಾಮಿ, ದೇವೇಗೌಡರೊಂದಿಗೆ ಸಂಬಂಧ ಹಳಸಿತ್ತು. ಆದರೆ ಚುನಾವಣೆ ಹತ್ತಿರವಾದಂತೆ ಜೆಡಿಎಸ್ ಪಕ್ಷಕ್ಕೂ ಜಿಟಿಡಿಯವರ ಅನಿವಾರ್ಯತೆ ಅರ್ಥವಾಗತೊಡಗಿತ್ತು. ಹೀಗಾಗಿ ಹುಣಸೂರು ಕ್ಷೇತ್ರದಲ್ಲಿ ಜಿ.ಡಿ.ಹರೀಶ್ ಗೌಡ ಅವರಿಗೆ ಟಿಕೆಟ್, ಚಾಮುಂಡೇಶ್ವರಿಯಲ್ಲಿ ತಮಗೆ ಟಿಕೆಟ್ ಖಾತ್ರಿ ಮಾಡಿಕೊಂಡ ಬಳಿಕ ಪಕ್ಷದೊಂದಿಗೆ ಜಿಟಿಡಿ ಸಕ್ರಿಯವಾಗಿದ್ದಾರೆ.

ಜೆಡಿಎಸ್‌ನೊಳಗೆ ಅಸಮಾಧಾನ

ಮೂರೂವರೆ ವರ್ಷಗಳಿಂದ ಪಕ್ಷದಿಂದ ದೂರವಿದ್ದು, ಈಗ ಮಗನಿಗೆ ಟಿಕೆಟ್ ಖಾತ್ರಿಯಾದ ಬಳಿಕ ಮತ್ತೆ ಜೆಡಿಎಸ್ ಸಖ್ಯವನ್ನು ಜಿಟಿಡಿ ಬೆಳೆಸಿದ್ದಾರೆಂಬ ಸಿಟ್ಟು ಕೆಲವು ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಹೊಗೆಯಾಡುತ್ತಿದೆ. ಹೀಗಾಗಿಯೇ ಜೆಡಿಎಸ್ ತೊರೆದ ಸ್ಥಳೀಯ ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ (ಈಗ ಕಾಂಗ್ರೆಸ್ ಅಭ್ಯರ್ಥಿ) ಮೊದಲಾದವರು ಸೇರಿ ’ಸ್ವಾಭಿಮಾನಿ ಸಮಾವೇಶ’ ಮಾಡಿದ್ದರು. ಇದಕ್ಕೆ ಪರ್ಯಾಯವಾಗಿ ಜೆಡಿಎಸ್ ಯುವ ಮುಖಂಡರಾದ ಜಿ.ಡಿ.ಹರೀಶ್‌ಗೌಡ, ನಿಖಿಲ್ ಕುಮಾರಸ್ವಾಮಿಯವರೆಲ್ಲ ಸೇರಿ ಯುವ ನಾಯಕರ ಸಮಾವೇಶ ನಡೆಸಿದ್ದರು.

ಅಪ್ಪ ಮತ್ತು ಮಗ ಇಬ್ಬರೂ ಗೆದ್ದರೆ ಕ್ಷೇತ್ರದ ಮೇಲೆ ಇನ್ಯಾರ ಹಿಡಿತವೂ ಇಲ್ಲದಂತಾಗುತ್ತದೆ ಎಂಬ ಕಾರಣಕ್ಕೆ ಒಕ್ಕಲಿಗರೇನಾದರೂ ಒಳೇಟು ನೀಡಿದರೆ ಜಿಟಿಡಿಯವರಿಗೆ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಜೆಡಿಎಸ್ ಎಂಎಲ್‌ಸಿ ಮಂಜೇಗೌಡ ಅವರಿಗೂ ಒಳಗೊಳಗೆ ಜಿ.ಟಿ.ಡಿಯವರ ಮೇಲೆ ಬೇಸರವಿದೆ ಎನ್ನಲಾಗುತ್ತಿದೆ. ಇವರು ಕೂಡ ಒಂದಿಷ್ಟು ಒಳೇಟು ಕೊಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ.

ಮಾವಿನಹಳ್ಳಿ ಸಿದ್ದೇಗೌಡರು ಪೈಪೋಟಿ ನೀಡಬಲ್ಲರೇ?

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್‌) ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಟಿಕೆಟ್ ನೀಡಲಾಗಿದೆ.

ಈ ಕ್ಷೇತ್ರದಿಂದ ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ರಾಕೇಶ್‌ ಪಾಪಣ್ಣ, ಲೇಖಾ ವೆಂಕಟೇಶ್‌, ಕೂರ್ಗಳ್ಳಿ ಮಹದೇವ್‌, ಅರುಣ್‌ ಕುಮಾರ್‌, ಕೃಷ್ಣಕುಮಾರ್‌ ಸಾಗರ್‌, ಬೆಳ್ಳುಳ್ಳಿ ಬಸವರಾಜ್‌, ಮೆಲ್ಲಳ್ಳಿ ಮಹದೇವಸ್ವಾಮಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಸಮರ ಸಾರಿ ಜೆಡಿಎಸ್‌ ತೊರೆದು ಈಚೆಗೆ ಕಾಂಗ್ರೆಸ್‌ ಸೇರಿದವರಲ್ಲಿ ಒಬ್ಬರಾದ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ.

ಸಿದ್ದೇಗೌಡ ಅವರು ಪಕ್ಷದ ನಿಯಮದಂತೆ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಅವರು ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆಗಾಗಲೇ ಅರ್ಜಿ ಸ್ವೀಕರಿಸುವ ಸಮಯವೇ ಮುಗಿದು ಹೋಗಿತ್ತು. ಆದರೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಗಾಗಲೇ ಅರ್ಜಿ ಸಲ್ಲಿಸಿರುವವರೊಂದಿಗೆ ಈಚೆಗೆ ಪಕ್ಷಕ್ಕೆ ಸೇರಿದವರೂ ಟಿಕೆಟ್‌ ಆಕಾಂಕ್ಷಿಗಳು ಇರಬಹುದು ಎಂದು ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ ಅವರು ನನಗೇ ಬಿ ಫಾರಂ ಕೊಡುವುದಾಗಿ ತಿಳಿಸಿದ್ದಾರೆ ಎಂದು ಈಚೆಗೆ ಕಾಂಗ್ರೆಸ್‌ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದೇಗೌಡ ಹೇಳಿಕೊಂಡಿದ್ದರು. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವುದರಿಂದಾಗಿ, ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರನ್ನು ಎದುರಿಸಲು ಒಕ್ಕಲಿಗ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರ ಸಿದ್ದೇಗೌಡ ಅವರಿಗೆ ನೆರವಾಗಿದೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ಜಿ.ಟಿ.ದೇವೇಗೌಡರ ಅತ್ಯಾಪ್ತರಾಗಿದ್ದವರಲ್ಲಿ ಮಾವಿನಹಳ್ಳಿ ಸಿದ್ದೇಗೌಡರು ಒಬ್ಬರು. ಮೈಮುಲ್‌ ಅಧ್ಯಕ್ಷರಾಗಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು. ಯಡಿಯೂರಪ್ಪ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಸಿದ್ದೇಗೌಡರು ಮೈಮುಲ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಜಿ.ಟಿ.ದೇವೇಗೌಡರಂತೆಯೇ ಸಿದ್ದೇಗೌಡ ಅವರೂ ಸಹಕಾರಿ ಕ್ಷೇತ್ರದ ಅನುಭವಿಯಾಗಿದ್ದಾರೆ. ಜೊತೆಗೆ ಜಯಪುರ ಹೋಬಳಿ ಭಾಗದಲ್ಲಿ ಪ್ರಬಲವಾಗಿದ್ದಾರೆ. ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಇದ್ದೇ ಇವೆ. ಒಂದು ವೇಳೆ ಸಿದ್ದೇಗೌಡರು ಒಕ್ಕಲಿಗರ ಮತಗಳನ್ನು ವಿಭಜಿಸಿದರೆ ಜಿ.ಟಿ.ಡಿಯವರಿಗೆ ಪೈಪೋಟಿ ನೀಡಲೂಬಹುದು. ಒಂದು ಕಾಲದ ಆಪ್ತರ ನಡುವೆ ಈಗ ಪೈಪೋಟಿ ಏರ್ಪಟ್ಟಿದೆ.

ಕಳೆದ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದ ವಿಚಾರಗಳು ಈಗಾಗಲೇ ಹಳಸಲಾಗತೊಡಗಿವೆ. ಶ್ರೀನಿವಾಸ ಪ್ರಸಾದ್ ಫ್ಯಾಕ್ಟರ್ ಇಳಿಮುಖವಾಗಿದೆ. ದಲಿತರಿಗೆ ಮೀಸಲಾದ ಅನುದಾನ ದಿನೇದಿನೇ ಕಡಿತವಾಗುತ್ತಿದೆ. ಬಿಜೆಪಿ ದಲಿತ ವಿರೋಧಿ ಆಡಳಿತ ನಡೆಸುತ್ತಿದೆ ಎಂಬ ಅಸಮಾಧಾನವಿದ್ದು, ಕಾಂಗ್ರೆಸ್‌ನತ್ತ ಮತ್ತೆ ದಲಿತರು ವಾಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ದಲಿತರ ಮತಗಳು ಕಾಂಗ್ರೆಸ್ ತೆಕ್ಕೆಗೆ ಮರಳುವ ಸಾಧ್ಯತೆ ಇದೆ.

ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು

ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಸಂಬಂಧಿ ವಾಸು ಅವರು ಕಾಂಗ್ರೆಸ್‌ನಲ್ಲಿದ್ದರೆ, ಅವರ ಮಕ್ಕಳು ಬಿಜೆಪಿ ಸೇರಿಕೊಂಡಿದ್ದಾರೆ. ವಾಸು ಅವರ ಪುತ್ರ ಕವೀಶ್‌ಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಊಹಾಪೋಹಗಳಿವೆ. ಆದರೆ ಜಿಟಿಡಿಯವರ ಮುಂದೆ ಕವೀಶ್ ಸ್ಪರ್ಧೆ ನೆಪಮಾತ್ರವಾಗುತ್ತದೆ ಎಂಬುದು ಸುಳ್ಳಲ್ಲ. ಇದರ ಜೊತೆಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಯಾರಾದರೂ ಸ್ಪರ್ಧಿಸಿದರೆ ಮಾತ್ರ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಬಹುದು, ಇಲ್ಲವಾದರೆ ಜಿಟಿಡಿಯೊಂದಿಗೆ ಹೊಂದಾಣಿಕೆಯ ರಾಜಕಾರಣವಷ್ಟೇ ಇಲ್ಲಿ ನಡೆಯುತ್ತದೆ ಎನ್ನುತ್ತಾರೆ ಕ್ಷೇತ್ರದ ನಾಡಿಮಿಡಿತ ಬಲ್ಲವರು.

ಅಂದಹಾಗೆ ಚಾಮುಂಡೇಶ್ವರಿಯಲ್ಲಿ ಜಾತಿ ಸಮೀಕರಣವೇ ಅಂತಿಮ ಅಸ್ತ್ರ, ಅಭಿವೃದ್ಧಿ ನಗಣ್ಯ. ’ನ್ಯಾಯಪಥ’ದೊಂದಿಗೆ ಮಾತನಾಡಿದ ಕ್ಷೇತ್ರದ ಮತದಾರರೊಬ್ಬರು, “ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಜಾತಿಯೇ ಚುನಾವಣಾ ಫಲಿತಾಂಶವನ್ನು ನಿರ್ಣಯಿಸುತ್ತದೆ. ಅಭಿವೃದ್ಧಿಯನ್ನು ಪರಿಗಣಿಸುವಂತಿದ್ದರೆ ಸಿದ್ದರಾಮಯ್ಯನವರನ್ನೇಕೆ ಸೋಲಿಸುತ್ತಿದ್ದರು?” ಎಂದು ಪ್ರಶ್ನಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು...

0
ಒತ್ತೆಯಾಳುಗಳ ಬಿಡುಗಡೆ ಮೂಲಕ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದ ನಡುವೆಯೇ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಗಾಝಾದ ದಕ್ಷಿಣ ನಗರವಾದ ರಫಾದ ಮೇಲೆ ಸೋಮವಾರ (ಮೇ 6) ರಾತ್ರಿ ವಾಯುದಾಳಿ ನಡೆಸುವ...