Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ತುಮಕೂರು ನಗರ: ಹೊಸ ಮುಖಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ - ಬಿಜೆಪಿಯಲ್ಲಿ ಒಳಬೇಗುದಿ

ತುಮಕೂರು ನಗರ: ಹೊಸ ಮುಖಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ – ಬಿಜೆಪಿಯಲ್ಲಿ ಒಳಬೇಗುದಿ

ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 11 ಚುನಾವಣೆಗಳಲ್ಲಿ ಸತತವಾಗಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿಯೂ ಅದನ್ನೆ ಮುಂದುವರೆಸಿದೆ.

- Advertisement -
- Advertisement -

ಇಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ತುಮಕೂರು ನಗರದಲ್ಲಿ ಹೊಸ ಮುಖಕ್ಕೆ ಮನ್ನಣೆ ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತನ್ನ ಮನೆಯನ್ನೇ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ ಸೇವೆ ನೀಡುವ ಮೂಲಕ ಗಮನ ಸೆಳೆದಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಇಕ್ಬಾಲ್ ಅಹಮದ್ ಅವರಿಗೆ ಟಿಕೆಟ್ ದೊರೆತಿದೆ.

ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 11 ಚುನಾವಣೆಗಳಲ್ಲಿ ಸತತವಾಗಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾ ಬಂದಿದೆ. ನಾಲ್ಕು ಬಾರಿ ಗೆದ್ದು, ಏಳು ಬಾರಿ ಸೋತರೂ ಮುಸ್ಲಿಮರಿಗೆ ಟಿಕೆಟ್ ನೀಡುವ ಪರಿಪಾಠ ಮುಂದುವರಿಸಿದೆ. ಈ ಬಾರಿಯೂ ಅದನ್ನೆ ಪುನಾರಾವರ್ತಿಸಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚಿತ್ರಣ ಈ ರೀತಿ ಇದೆ.

ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣದಿಂದ ತುಮಕೂರು ನಗರ ಕ್ಷೇತ್ರದ ಜೊತೆಗೆ ಈ ಹಿಂದೆ ಕೋರ, ಗೂಳೂರು, ಹೆಬ್ಬೂರು, ಬೆಳ್ಳಾವಿ ಕ್ಷೇತ್ರಗಳು ಇದ್ದವು. 1952ರಲ್ಲಿ ಇದ್ದ ಕೋರ ಕ್ಷೇತ್ರವನ್ನು ಕೈಬಿಟ್ಟು 1957ರಲ್ಲಿ ಹೆಬ್ಬೂರು ಕ್ಷೇತ್ರವನ್ನು ಅಸ್ತಿತ್ವಕ್ಕೆ ತರಲಾಯಿತು. 1967ರ ಹೊತ್ತಿಗೆ ಹೆಬ್ಬೂರು ಬದಲಿಗೆ ಗೂಳೂರು ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ಅಸ್ತಿತ್ವಕ್ಕೆ ಬಂದಿತು. ಆನಂತರ ಅದನ್ನು ಕೈಬಿಟ್ಟು 1978ರ ವೇಳೆಗೆ ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ಬೆಳ್ಳಾವಿ ಬದಲಿಗೆ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸೃಷ್ಟಿಸಲಾಯಿತು. ಈಗ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳು ಅಸ್ತಿತ್ವ ಉಳಿಸಿಕೊಂಡಿವೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರ – ರಾಜಕೀಯ ಇತಿಹಾಸ

ಇದುವರೆಗೂ ತುಮಕೂರು ನಗರದಲ್ಲಿ ನಡೆದ 15 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ, ಎರಡು ಬಾರಿ ಜನತಾ ಪಕ್ಷ ಮತ್ತು ಎರಡು ಬಾರಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಲ್ಲಿ ಜೆಡಿಎಸ್ ಖಾತೆ ತೆರೆಯಲು ವಿಫಲವಾಗಿರುವುದನ್ನು ಗಮನಿಸಬಹುದು.

1989ರಲ್ಲಿ ಜನತಾ ಪಕ್ಷದ ಲಕ್ಷ್ಮಿ ನರಸಿಂಹಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಎಸ್.ಶಫಿ ಅಹಮದ್ ಎದುರು ಸೋಲುಕಂಡರು. 1994ರ ನಂತರ ತುಮಕೂರು ನಗರ ಕ್ಷೇತ್ರ ಬಿಜೆಪಿ ವಶವಾಯಿತು. ಆ ಚುನಾವಣೆಯಲ್ಲಿ ಸಂಘಪರಿವಾರದ ಹಿನ್ನಲೆಯ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1999 ಮತ್ತು 2004ರಲ್ಲಿಯೂ ಸಹ ಸೊಗಡು ಶಿವಣ್ಣ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರ ಎದುರು ಗೆದ್ದು ಹ್ಯಾಟ್ರಿಕ್ ಸಾಧಿಸಿದರು. 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಇಲಾಖೆ ಸಚಿವರಾಗಿದ್ದರು. ಅಲ್ಲದೆ 2008ರಲ್ಲಿ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ವಿರುದ್ಧ ಕೇವಲ 1,949 ಮತಗಳ ಅಂತರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರೆನಿಸಿಕೊಂಡರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪರಿಸರ ಖಾತೆ ಸಚಿವರಾಗಿದ್ದರು.

2013ರ ಚುನಾವಣೆ ವೇಳೆಗೆ ಬಿಜೆಪಿ ಇಬ್ಭಾಗವಾಗಿತ್ತು. ಬಿಜೆಪಿಯಿಂದ ಸೊಗಡು ಶಿವಣ್ಣ ಸ್ಪರ್ಧಿಸಿದರೆ, ಯಡಿಯೂರಪ್ಪನವರ ಕೆಜೆಪಿಯಿಂದ ಇಂಜಿನಿಯರ್ ಜಿ.ಬಿ.ಜ್ಯೋತಿ ಗಣೇಶ್ ಕಣಕ್ಕಿಳಿದಿದ್ದರು. ಇವರಿಬ್ಬರ ನಡುವಿನ ಮತ ವಿಭಜನೆಯ ಲಾಭ ಪಡೆದ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ಕೇವಲ 3,608 ಮತಗಳಿಂದ ಗೆದ್ದು ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. ಡಾ. ರಫಿಕ್ ಅಹ್ಮದ್ 43,681 ಮತಗಳನ್ನು ಪಡೆದರೆ, ಕೆಜೆಪಿಯ ಜಿ.ಬಿ.ಜ್ಯೋತಿಗಣೇಶ್ 40,073 ಮತಗಳನ್ನು ಗಳಿಸಿ ಪೈಪೋಟಿ ನೀಡಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎನ್. ಗೋವಿಂದರಾಜುರವರು 38,322 ಮತಗಳನ್ನು ಪಡೆದರೆ, ಬಿಜೆಪಿಯ ಸೊಗಡು ಶಿವಣ್ಣ ಕೇವಲ 13,159 ಮತಗಳಿಗೆ ಕುಸಿದು ಮುಖಭಂಗ ಅನುಭವಿಸಿದ್ದರು.

2018ರ ವೇಳೆಗೆ ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಂಡಿತ್ತು. ಆಗ ಸೊಗಡು ಶಿವಣ್ಣನವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಯಡಿಯೂರಪ್ಪ ಬಣದ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಅಭ್ಯರ್ಥಿಯಾದರು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ. ರಫಿಕ್ ಅಹ್ಮದ್ ಮತ್ತು ಜೆಡಿಎಸ್‌ನಿಂದ ಎನ್. ಗೋವಿಂದರಾಜು ಸ್ಪರ್ಧಿಸಿದ್ದರು. ಮೂರು ಜನರ ತ್ರಿಕೋನ ಹಣಾಹಣಿಯಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ 5,293 ಮತಗಳ ಅಂತರದಿಂದ ಗೆದ್ದು ಬಂದರು. ಅವರು 60,421 ಮತಗಳನ್ನು ಪಡೆದರೆ ಜೆಡಿಎಸ್‌ನ ಗೋವಿಂದರಾಜುರವರು 55,128 ಮತಗಳನ್ನು ಪಡೆದರು. ಕಾಂಗ್ರೆಸ್‌ನ ರಫೀಕ್ ಅಹಮದ್ 51,219 ಮತಗಳನ್ನು ಪಡೆದ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,65,000; ಮುಸ್ಲಿಂ: 60,000; ಲಿಂಗಾಯಿತ: 50,000; ಪರಿಶಿಷ್ಟ ಜಾತಿ: 40,000; ಒಕ್ಕಲಿಗ: 40,000; ಕುರುಬ: 15,000; ಎಸ್‌ಟಿ: 11,000; ಗೊಲ್ಲರು: 8,000; ಇತರೆ: 41,000

ಹಾಲಿ ಪರಿಸ್ಥಿತಿ

ಮೊದಲ ಬಾರಿಗೆ ಶಾಸಕರಾದ ಜ್ಯೋತಿ ಗಣೇಶ್ ತುಮಕೂರಿನಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ, ಡಿಜಿಟಲ್ ಲೈಬ್ರರಿ, ಅಮಾನಿ ಕೆರೆ ಅಭಿವೃದ್ಧಿ, ಕಾಲೇಜು ಕಟ್ಟಡ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜನರೊಟ್ಟಿಗೆ ಉತ್ತಮ ಬಾಂಧವ್ಯ ಸಹ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಸಾಕಷ್ಟು ಹಣ ಮಾಡಿದ್ದಾರೆ, ಪ್ರತಿ ಕಾಮಗಾರಿಗಳಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಸಹ ಅವರ ಮೇಲಿದೆ. ಕಾಂಗ್ರೆಸ್ ಕಾರ್ಯಕರ್ತರು ಜ್ಯೋತಿಗಣೇಶ್ ವಿರುದ್ಧ ಪೆಎಂಎಲ್‌ಎ ಪ್ರತಿಭಟನೆ ಸಹ ನಡೆಸಿ ಬಂಧನಕ್ಕೊಳಗಾಗಿದ್ದರು.

ಜ್ಯೋತಿ ಗಣೇಶ್

ಜ್ಯೋತಿಗಣೇಶ್‌ರವರ ತಂದೆ ಜಿ.ಎಸ್ ಬಸವರಾಜುರವರು ಕಾಂಗ್ರೆಸ್‌ನಿಂದ ಬಂದವರಾಗಿದ್ದು ಬಿಜೆಪಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮಣಿಸಿ ಸಂಸದರಾಗಿದ್ದಾರೆ. ಅಪ್ಪ ಮಗ ಇಬ್ಬರೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಜ್ಯೋತಿಗಣೇಶ್‌ರವರಿಗೆ ಬಿಜೆಪಿ ಟಿಕೆಟ್ ಸಿಗುವುದು ಡೌಟ್ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಕೆಲದಿನಗಳ ಹಿಂದೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿದ್ದವು. ಸದ್ಯ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಗುದ್ದಾಟ

ಲಿಂಗಾಯತ ಸಮುದಾಯದ ಹಾಲಿ ಶಾಸಕ ಜ್ಯೋತಿಗಣೇಶ್ ಮರು ಆಯ್ಕೆ ಬಯಸಿ ಬಿಜೆಪಿ ಟಿಕೆಟ್ ಬೇಕೆಂದು ಕೇಳಿದ್ದಾರೆ. ಆದರೆ ಹಲವು ಹಾಲಿ ಶಾಸಕರಿಗೆ ಬಿಜೆಪಿ ಈ ಬಾರಿ ಖೊಕ್ ನೀಡುತ್ತದೆ ಎಂಬ ಸುದ್ದಿ ಬೆನ್ನಲ್ಲೆ ಮಾಜಿ ಸಚಿವ, ಮಾಜಿ ಶಾಸಕ ಲಿಂಗಾಯತ ಸಮುದಾಯದ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. 2018ರಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಸ್ಪರ್ಧಿಸಲಿಲ್ಲ. ಆದರೆ ಈ ಬಾರಿ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಶಿವಣ್ಣನವರ ಹಿಂದೆ ಆರ್‌ಎಸ್‌ಎಸ್ ಇದ್ದು, ಅವರು ಈಗಾಗಲೇ ವೋಟು ಕೊಡಿ, ನೋಟು ಕೊಡಿ ಎಂದು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದಾರೆ.

ಸೊಗಡು ಶಿವಣ್ಣ

ಉಳಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಮತ್ತು ವೈಶ್ಯ ಸಮುದಾಯದ ಎನ್.ಎಸ್ ಜಯಕುಮಾರ್ ಸಹ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಇವರಿಬ್ಬರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಎನ್ ಗೋವಿಂದರಾಜುರವರಿಗೆ ಟಿಕೆಟ್ ಘೋಷಿಸಿದೆ. ಅವರು ಈ ಹಿಂದೆಯೆಲ್ಲ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಆದರೆ ಸತತ ಎರಡು ಚುನಾವಣೆಗಳಲ್ಲಿ ಸೋತ ನಂತರ ಬೇಸರಗೊಂಡು ನೀರು ಕೊಡುವುದನ್ನು ನಿಲ್ಲಿಸಿದ್ದರು. ಈಗ ಚುನಾವಣೆ ಸಮಯದಲ್ಲಿ ಅವರು ಸಕ್ರಿಯರಾಗಿದ್ದಾರೆ. ಈ ಬಾರಿ ಎಂಎಲ್‌ಎ ಆಗಲೇಬೇಕೆಂದು ಕೆಲಸ ಮಾಡುತ್ತಿದ್ದಾರೆ.

ಗೋವಿಂದರಾಜು

ಕಾಂಗ್ರೆಸ್

ಈ ಬಾರಿ ಮೂವರು ಮುಸ್ಲಿಂ ಸಮುದಾಯದ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಕಸರತ್ತು ನಡೆಸಿದ್ದರು. ಅದರಲ್ಲಿ ಇಕ್ಬಾಲ್ ಅಹಮದ್ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಸೋತಿರುವ ಡಾ.ರಫೀಕ್ ಅಹ್ಮದ್ ಮತ್ತು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಅಟ್ಟಿಕಾ ಬಾಬುರವರು ಕಾಂಗ್ರೆಸ್ ಟಿಕೆಟ್ ಬೇಕೆಂದು ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ ಇಕ್ಬಾಲ್ ಅಹಮದ್‌ರವರ ಕೈ ಹಿಡಿದಿದೆ.

ಕೋವಿಡ್ ಸಂದರ್ಭದಲ್ಲಿ ತನ್ನ ಮನೆಯನ್ನೆ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ ಗಮನ ಸೆಳೆದಿದ್ದ ಅವರು ತನಗೆ ಮಾಜಿ ಶಾಸಕ ಶಫಿ ಅಹ್ಮದ್ ಬೆಂಬಲ ಇದೆ ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ.

 

 

 

2023ರ ಸಾಧ್ಯಾಸಾಧ್ಯತೆ

ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತಗಳು, ದಲಿತ, ಕುರುಬ ಸಮುದಾಯದ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಕಳೆದ ಸಾರಿ ಇದ್ದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಇಲ್ಲಿದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಗಾಗಿ ಐದನೇ ಮುಸ್ಲಿಂ ಶಾಸಕರಾಗಲು ಅವರು ಕಾತುರರಾಗಿದ್ದಾರೆ.

ಅದೇ ರೀತಿ ಜೆಡಿಎಸ್‌ನಲ್ಲಿಯೂ ಸಹ ಗೋವಿಂದರಾಜುರವರಿಗೆ ಯಾವುದೇ ಬಂಡಾಯ ಮತ್ತು ಒಳೇಟಿನ ಭೀತಿ ಇಲ್ಲ. ಎರಡು ಬಾರಿ ಸೋತಿರುವ ಅನುಕಂಪ ಅವರಿಗಿದೆ. ಒಮ್ಮೆಯೂ ಜೆಡಿಎಸ್ ಗೆದ್ದಲ್ಲದ ತುಮಕೂರು ನಗರದಲ್ಲಿ ಈ ಬಾರಿ ಖಾತೆ ತೆರೆಯಲು ಉತ್ಸುಕರಾಗಿದ್ದಾರೆ.

ಆದರೆ ಬಿಜೆಪಿಗೆ ಮಾತ್ರ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಉಳಿದುಕೊಂಡಿದೆ. ಜ್ಯೋತಿ ಗಣೇಶ್ ಮತ್ತು ಸೊಗಡು ಶಿವಣ್ಣ ಇಬ್ಬರೂ ಹಠ ಹಿಡಿದಿದ್ದು, ಟಿಕೆಟ್ ವಂಚಿತರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಬಾರಿ ಬಿಜೆಪಿಯಲ್ಲಿ ಉಂಟಾಗುವ ಬಂಡಾಯದ ಲಾಭ 2013ರಂತೆ ಕಾಂಗ್ರೆಸ್‌ಗೆ ದೊರಕಲಿದೆಯೊ ಅಥವಾ ಜೆಡಿಎಸ್ ಪಡೆದೆಕೊಳ್ಳಲಿದೆಯೊ ಕಾದು ನೋಡಬೇಕಿದೆ.

ಮಹಾನಗರ ಪಾಲಿಕೆಯಾದ ನಂತರ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೂ ಆಯ್ಕೆಯಾಗಿದೆ. ನೂರಾರು ಕೋಟಿ ಬಿಡುಗಡೆಯಾದರೂ ಇನ್ನೂ ಸ್ಮಾರ್ಟ್ ಮಾತ್ರ ಆಗಿಲ್ಲ. ಜಿಲ್ಲೆಯ ಹೆಮ್ಮೆಯ ಹೆಚ್‌ಎಂಟಿ ಕೈಗಾರಿಕೆ ಮುಚ್ಚಿಹೋಗಿದೆ. ಅಕ್ರಮ ಗಣಿಗಾರಿಕೆ ನಿರಾತಂಕವಾಗಿದ್ದು, ಗಣಿ ಬಾಧಿತ ಪ್ರದೇಶಗಳಿಗೆ ಪರಿಹಾರಧನ ತಲುಪುತ್ತಲೇ ಇಲ್ಲ. ರೈತರ ಸಮಸ್ಯೆಗಳು ಎಂದಿನಂತೆ ಮುಂದುವರಿದಿವೆ. ವಸತಿ-ನಿವೇಶನ ರಹಿತರ ಕಡೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಹಾಕಿಲ್ಲ. ರಸ್ತೆಗಳು ಮತ್ತು ಕುಡಿಯುವ ನೀರು ಅಷ್ಟಕಷ್ಟೆ ಇರುವ ತುಮಕೂರು ಜಿಲ್ಲೆ ಚುನಾವಣೆಗೆ ಹೋಗುತ್ತಿದೆ. ಜನ ಯಾವ ತೀರ್ಮಾನ ಮಾಡುತ್ತಾರೆ? ಹೊಸ ಮುಖಗಳಿಗೆ ಮತ ನೀಡುವರೊ, ಇಲ್ಲ ಬಿಜೆಪಿಗೆ ಮತ್ತೊಂದು ಅವಕಾಶ ನೀಡುವರೊ ಕಾದು ನೋಡಬೇಕಿದೆ.

ಇದನ್ನೂ ಓದಿ; ಕೆ.ಆರ್ ಪೇಟೆ: ಜೆಡಿಎಸ್‌ನಿಂದ ಬಂದ ದೇವರಾಜುರವರಿಗೆ ಕಾಂಗ್ರೆಸ್ ಟಿಕೆಟ್ – ಕ್ಷೇತ್ರದ ಸ್ಥಿತಿ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...