ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ವಿವಿಪ್ಯಾಟ್ಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸುವ ಸಲುವಾಗಿ ಭೇಟಿಯಾಗಲು ಇಂಡಿಯಾ ಒಕ್ಕೂಟದ ನಾಯಕರ ತಂಡಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.
ರಾಜೀವ್ ಕುಮಾರ್ ಅವರ ಭೇಟಿಗೆ ಅವಕಾಶ ಕೋರಿ ಜೈರಾಮ್ ರಮೇಶ್ ಡಿಸೆಂಬರ್ 30,2023ರಂದು ಪತ್ರ ಬರೆದಿದ್ದು, ವಿವಿಪ್ಯಾಟ್ಗಳ ಕುರಿತು ಇಂಡಿಯಾ ಒಕ್ಕೂಟದ ಸಭೆಯಲ್ಲಿ ಚರ್ಚಿಸಲಾದ ಅಂಶಗಳ ಬಗ್ಗೆ ಚರ್ಚಿಸಲು ಅವಕಾಶ ಕೋರಿದ್ದಾರೆ.
ನಮ್ಮ (ಇಂಡಿಯಾ ಒಕ್ಕೂಟ) ನಿರ್ಣಯಗಳ ಪ್ರತಿಯನ್ನು ಹಸ್ತಾಂತರಿಸಲು ಮತ್ತು ಚರ್ಚೆ ನಡೆಸಲು ಮುಖ್ಯ ಚುನಾವಣಾ ಆಯುಕ್ತರ ಭೇಟಿಗೆ ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಇದುವರೆಗೆ ಅವಕಾಶ ದೊರೆತಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕರ 3-4 ಸದಸ್ಯರ ತಂಡ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ವಿವಿಪ್ಯಾಟ್ ಕುರಿತ ನಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡುವಂತೆ ನಾನು ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ 9ರಂದು ಒಂದು ಮನವಿ ಸಲ್ಲಿಸಲಾಗಿತ್ತು ಹಾಗೂ ನಂತರದ ಹಲವು ಸಭೆಗಳಲ್ಲಿಯೂ ಚರ್ಚಿಸಲಾಗಿತ್ತು. ಇದಕ್ಕೆ ಸಾಮಾನ್ಯ ಉತ್ತರವನ್ನು ಆಗಸ್ಟ್ 23ರಂದು ನೀಡಿದ್ದ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿರುವ ಇವಿಎಂ ಕುರಿತಾದ ಎಫ್ಎಕ್ಯುಗಳನ್ನು ಓದುವಂತೆ ಸೂಚಿಸಿತ್ತು. ಆದರೆ, ಭೇಟಿಗೆ ಅವಕಾಶ ಕಲ್ಪಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ವಿವಿಪ್ಯಾಟ್ ಸ್ಲಿಪ್ಗಳನ್ನು ಮತದಾರರಿಗೆ ನೀಡಬೇಕು ಹಾಗೂ ನಂತರ ವಿವಿಪ್ಯಾಟ್ ಸ್ಲಿಪ್ಗಳ ಶೇ100ರಷ್ಟು ಎಣಿಕೆ ನಡೆಯಬೇಕು ಎಂದು ಆಗ್ರಹಿಸಲಾಗಿತ್ತು.
ಇದನ್ನೂ ಓದಿ : ರೇಪ್ ಕೇಸ್: ಬಂಧಿತ ಬಿಜೆಪಿ ನಾಯಕರ ಮನೆಗಳನ್ನು ಯಾವಾಗ ಕೆಡವುತ್ತೀರಿ-ಯೋಗಿಗೆ ಮಹುವಾ ಪ್ರಶ್ನೆ