ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ದಿಶಾ ರವಿ ಬಂಧನಕ್ಕೆ ಸಂಬಂಧಿಸಿದಂತೆ ತಾನು ಮಾಡಿದ್ದ ಟ್ವೀಟ್ಗೆ ಸಮರ್ಥನೆ ನೀಡಿದ್ದಾರೆ. ಸಚಿವರು ತಮ್ಮ ಟ್ವೀಟ್ನಲ್ಲಿ “ರಾಷ್ಟ್ರ ವಿರೋಧಿ ಚಿಂತನೆಯ ಬೀಜಗಳನ್ನು ನಾಶಮಾಡಬೇಕು” ಎಂದು ಬರೆದುಕೊಂಡಿದ್ದರು. ಇದು ದೇಶದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ ಈಗ ಸಚಿವರು ತಮ್ಮ ಹೇಳಿಕೆಗೆ ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸುವಂತೆ ಸ್ವೀಡಿಷ್ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದ ಟೂಲ್ಕಿಟ್ಗೆ ಸಂಬಂಧಿಸಿದಂತೆ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿಯನ್ನು ಬಂಧಿಸಲಾಗಿತ್ತು. ಇದರ ಬಗ್ಗೆ ಅನಿಲ್ ವಿಜ್ ಪ್ರತಿಕ್ರಿಯಿಸಿದ್ದರು. “ರಾಷ್ಟ್ರ ವಿರೋಧಿ ಚಿಂತನೆಯ ಬೀಜಗಳನ್ನು ಹೊಂದಿರುವವರು ದಿಶಾ ರವಿಯಾದರೂ ಸರಿ ಅಥವಾ ಬೇರೆಯವರಾದರೂ ಸರಿ, ಅದನ್ನು ಸಂಪೂರ್ಣವಾಗಿ ನಾಶಮಾಡಬೇಕು” ಎಂದು ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.
देश विरोध का बीज जिसके भी दिमाग में हो उसका समूल नाश कर देना चाहिए फिर चाहे वह #दिशा_रवि हो यां कोई और ।
— ANIL VIJ MINISTER HARYANA (@anilvijminister) February 15, 2021
ಮಂಗಳವಾರ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡ ಅನಿಲ್ ವಿಜ್, “ನಾನು ಆ ಜನರ ನಾಶಕ್ಕೆ ಕರೆ ನೀಡಿಲ್ಲ. ರಾಷ್ಟ್ರಕ್ಕೆ ವಿರುದ್ಧವಾದ ಚಿಂತನಾ ಪ್ರಕ್ರಿಯೆಯನ್ನು ನಾಶ ಮಾಡಬೇಕು ಎಂದು ಕರೆ ನೀಡಿದ್ದೇನೆ. ನಾವು ಚಿಂತನೆಗಳನ್ನು ಶುದ್ಧೀಕರಿಸಲು ಬಯಸುತ್ತೇವೆ ಅಷ್ಟೆ. ಈ ಚಿಂತನಾ ಪ್ರಕ್ರಿಯೆಯನ್ನು ಬಿತ್ತಿದ ಬೀಜಗಳ ನಾಶದ ಬಗ್ಗೆ ನಾನು ಮಾತನಾಡಿದ್ದೇನೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! – ಲಿಯೋ ಸಾಲ್ಡಾನಾ
ಅದಾಗ್ಯೂ ಅನಿಲ್ ವಿಜ್ ಅವರ ಹೇಳಿಕೆಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಬೆಂಗಳೂರು ಮೂಲದ ಕ್ಯಾಂಪೇನ್ ಎಗೈನ್ಸ್ಟ್ ಹೇಟ್ ಸ್ಪೀಚ್ ಎನ್ನುವ ತಂಡವೊಂದು ಸಚಿವರ ವಿರುದ್ಧ ದೂರು ದಾಖಲಿಸಿದೆ.
ಈ ದೂರಿಗೆ ಸ್ಪಂದಿಸುವುದಾಗಿ ಹೇಳಿದ ಸಚಿವರು, “ಈ ಜನರು (ಕ್ಯಾಂಪೇನ್ ಎಗೈನ್ಸ್ಟ್ ಹೇಟ್ ಸ್ಪೀಚ್) ಇಂಗ್ಲಿಷ್ ಶಾಲೆಗಳಿಂದ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಹಿಂದಿ ಅರ್ಥವಾಗುವುದಿಲ್ಲ. ನನ್ನ ಟ್ವೀಟ್ಗೆ ಸಂಬಂಧಿಸಿದಂತೆ ಜರ್ಮನಿಯಿಂದಲೂ ದೂರು ದಾಖಲಾಗಿದೆ. ಆದರೂ ನನ್ನ ಟ್ವೀಟನ್ನು ನಿರ್ಬಂಧಿಸಿಲ್ಲ. ಇದರಿಂದ ನನ್ನ ಟ್ವೀಟ್ನಲ್ಲಿ ಯಾವುದೇ ದೋಷವಿಲ್ಲ ಎಂಬುವುದು ತಿಳಿಯುತ್ತದೆ” ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ವಿದೇಶಿಯರೊಂದಿಗೆ ಸೇರಿಕೊಂಡು ನಡೆಸುವ ಪಿತೂರಿಯನ್ನು ನಿಲ್ಲಿಸಬೇಕು. ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ಕಿಟ್ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ದಿಶಾ ರವಿ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಗಳು ಹೊರಬರುತ್ತಿವೆ. ರಾಷ್ಟ್ರದ ವಿರುದ್ಧ ಜನರನ್ನು ಸಂಘಟಿಸುವ ಮತ್ತು ವಿದೇಶಿಯರೊಂದಿಗೆ ಪಿತೂರಿ ನಡೆಸುತ್ತಿರುವ ಎಲ್ಲ ಜನರ ಜೊತೆಗಿನ ಇಂತಹ ಲಿಂಕ್ಗಳನ್ನು ಹೊರಗೆಳೆಯಬೇಕು ಎಂದು ಸಚಿವರು ಹೇಳಿದ್ದಾರೆ ಎಂಬುದಾಗಿ ಸ್ಕ್ರಾಲ್ ಇನ್ ವರದಿ ಮಾಡಿದೆ.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಭಯೋತ್ಪಾದಕರ ಕೈವಾಡವಿದೆ ಮತ್ತು ಖಲೀಸ್ತಾನಿಗಳ ಹಸ್ತಕ್ಷೇಪವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4 ರಂದು ಎಫ್ಐಆರ್ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಿಶಾಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ