ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು (ಫೆ.17) ಪುದುಚೇರಿ ಪ್ರವಾಸದಲ್ಲಿದ್ದು, ಮೀನುಗಾರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಸಂವಾದ ನಡೆಸಲಿದ್ದಾರೆ.
ಪಪ್ಪಮಾಲ್ ಕೋವಿಲ್ನಲ್ಲಿ ಮೀನುಗಾರ ಸಮುದಾಯದೊಂದಿಗೆ ಸಂವಾದ ನಡೆಸಿದ ಅವರು ವಿವಾದಿತ ಕೃಷಿ ಕಾನೂನುಗಳು ಮೀನುಗಾರರ ಮೇಲೇಯೂ ಪರಿಣಾಮ ಬೀರಲಿವೆ ಎಂದು ತಿಳಿಸಿದ್ದಾರೆ.
’ರಾಷ್ಟ್ರದ ಬೆನ್ನೆಲುಬಾಗಿರುವ ರೈತರ ವಿರುದ್ಧ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಅಂಗೀಕರಿಸಿತು. ಮೀನುಗಾರರ ಸಭೆಯಲ್ಲಿ ನಾನು ರೈತರ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರ. ನಾನು ನಿಮ್ಮನ್ನು ಸಮುದ್ರದ ರೈತರು ಎಂದು ಪರಿಗಣಿಸುತ್ತೇನೆ” ಎಂದಿದ್ದಾರೆ. ಭೂಮಿ ಹೊಂದಿರುವ ರೈತರು ದೆಹಲಿಯಲ್ಲಿ ಸಚಿವಾಲಯವನ್ನು ಹೊಂದಲು ಸಾಧ್ಯವಾದರೆ, ಸಮುದ್ರದ ರೈತರಿಗೆ ಏಕೆ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತು ಮಾಡುತ್ತಿರುವ RSS: ಕುಮಾರಸ್ವಾಮಿ ಆತಂಕ
“ಪ್ರಸ್ತುತ ಕೇಂದ್ರ ಸರ್ಕಾರವು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಮೇಲೆ ಆಕ್ರಮಣ ಮಾಡುತ್ತಿದೆ. ಎಲ್ಲಾ ವ್ಯವಹಾರಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳಿಂದ ನಿಯಂತ್ರಿಸಬೇಕೆಂದು ಸರ್ಕಾರ ಬಯಸುತ್ತಿದೆ. ಆದರೆ, ನಮ್ಮ ದೃಷ್ಟಿಕೋನ ವಿಭಿನ್ನವಾಗಿದೆ. ನಾವು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಬಲಪಡಿಸಲು ಬಯಸುತ್ತೇವೆ. ಏಕೆಂದರೆ ಅದು ಈ ದೇಶದ ಶಕ್ತಿ ಎಂದು ನಾವು ನಂಬಿದ್ದೇವೆ” ಎಂದು ರಾಹುಲ್ ಗಾಂಧಿ ಸಂವಾದದಲ್ಲಿ ಮಾತನಾಡಿದ್ದಾರೆ.
ಇನ್ನು ಕಾಲೇಜು ವಿದ್ಯಾರ್ಥಿಗಳೊಂದಿಗೆ, ಸಾರ್ವಜನಿಕರೊಂದಿಗೂ ಸಂವಾದ ನಡೆಸಲಿದ್ದಾರೆ. ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯಲಿದ್ದು, ರಾಹುಲ್ ಗಾಂಧಿ ಅವರ ಭೇಟಿ ಕೂಡ ಹೊಸ ಚುನಾವಣಾ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.
ಪುದುಚೇರಿಯಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಬಿಕ್ಕಟಿನ ನಡುವೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಾ. ಕಿರಣ್ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಹುದ್ದೆಯಿಂದ ಫೆ.16 ರಂದು ತೆಗೆದುಹಾಕಿದ್ದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಜನವರಿಯಲ್ಲಿ ಆರೋಪಿಸಿದ್ದರು. “ಕಿರಣ್ ಬೇಡಿ ಅವರು ದಿನನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದರು. ಪುದುಚೇರಿಯಲ್ಲಿ ಜಾತ್ಯತೀತ ಪಕ್ಷಗಳ ಜನರು, ಕೋಮುವಾದಿ ಅಂಶಗಳನ್ನು ಅನುಮತಿಸುವುದಿಲ್ಲ” ಎಂದು ಮುಖ್ಯಮಂತ್ರಿ ವಿ. ನಾರಾಯಣಸಾಮಿ ಮತ್ತೊಮ್ಮೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪುದುಚೇರಿ ಲೆಫ್ಟಿನೆಂಟ್-ಗವರ್ನರ್: ’ಜೀವಮಾನದ ಅನುಭವ’ ಎಂದ ಡಾ.ಕಿರಣ್ ಬೇಡಿ