Homeಮುಖಪುಟಕೊರೋನಾ - ಭಾರತದ ಆರ್ಥಿಕತೆ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಏನೇಳ್ತಾರೆ?

ಕೊರೋನಾ – ಭಾರತದ ಆರ್ಥಿಕತೆ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಏನೇಳ್ತಾರೆ?

- Advertisement -
- Advertisement -

ಕೊರೋನಾ ವೈರಸ್ ಹಾವಳಿ ಜನರನ್ನು ಸಾವಿನತ್ತ ದೂಡುವ ಆತಂಕ ಒಂದು ಕಡೆಯಾದರೆ, ಮತ್ತೊಂದೆಡೆ ಈ ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುವ ಆತಂಕ ಮತ್ತೊಂದು ಕಡೆ. ಹೀಗೆ ಎರಡು ಆತಂಕಗಳನ್ನು ಒಟ್ಟಿಗೇ ಎದುರಿಸಬೇಕಾದಂತಹ ಸನ್ನಿವೇಶದಲ್ಲಿ ನಾವೆಲ್ಲಾ ಇದ್ದೇವೆ.

ಕೊರೋನ ಕಾರಣಕ್ಕೆ ಉಂಟಾಗುವ ಆರ್ಥಿಕ ದುಸ್ಥಿತಿ ಕೊರೋನಾದಷ್ಟೆ ಅಥವಾ ಅದಕ್ಕಿಂತ ಹೆಚ್ಚು ಜನರ ಜೀವನವನ್ನು ಬಲಿತೆಗೆದುಕೊಳ್ಳುವ ಆತಂಕವನ್ನು ಕೆಲ ಖ್ಯಾತ ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬಂದೆರಗಲಿರುವ (ಆಗಲೇ ಒಂದು ಮಟ್ಟಿಗೆ ಎರಗಿರುವ) ಆರ್ಥಿಕ ಸಂಕಷ್ಟದಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಭಾರತದ ಖ್ಯಾತ ಆರ್ಥಿಕ ತಜ್ಞರು ಏನು ಹೇಳಿದ್ದಾರೆ ನೋಡೋಣ.

ಮೊದಲನೆಯದಾಗಿ, “ದ ಎಕನಾಮಿಸ್ಟ್” ಮ್ಯಾಗಜಿನ್‍ನ ಸಂಶೋಧನಾ ಗುಂಪಿನ ಅಧ್ಯಯನದ ಪ್ರಕಾರ ಕೊರೋನದಿಂದಾಗಿ ವಿಶ್ವದ ಒಟ್ಟು ಜಿಡಿಪಿ ಮೊದಲು ನಿರೀಕ್ಷಿಸಿದ್ದ +2.3% ಬೆಳವಣಿಗೆಯ ಬದಲಾಗಿ -2.2%ರಷ್ಟು ನಕಾರಾತ್ಮಕ ಬೆಳವಣಿಗೆ ಸಾಧಿಸಲಿದೆ. ಅಂದರೆ ವಿಶ್ವದ ಒಟ್ಟು ಬೆಳವಣಿಗೆ 4.5%ರಷ್ಟು ಕಡಿಮೆಯಾಗಲಿದೆ.

ಇದು ಟ್ರಿಲಿಯನ್‍ಗಟ್ಟಲೆ ಡಾಲರ್ ನಷ್ಟಕ್ಕೆ ಕಾರಣವಾಗಲಿದೆ.

ಅದೇ ರೀತಿ ಕೊರೋನದಿಂದಾಗಿ ಪಶ್ಚಿಮ ಯೂರೋಪ್ -6%ರಷ್ಟು, ಅಮೆರಿಕ -2.8%, ಚೀನಾ +1% ಮತ್ತು ಭಾರತ +2.1% ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿವೆ.

ಇದರ ಪ್ರಕಾರ ಭಾರತ ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ನಷ್ಟ ಅನುಭವಿಸಲಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ.
ಇದೆಲ್ಲಕ್ಕೆ ಅರ್ಥಶಾಸ್ತ್ರಜ್ಞರು ಏನು ಹೇಳುತ್ತಾರೆ ನೋಡೋಣ.

ಅಮತ್ರ್ಯ ಸೆನ್
ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ

ಪ್ರಜಾಪ್ರಭುತ್ವದೊಳಗಿನ ಪರಸ್ಪರ ಸಹಕಾರದಿಂದ ಮಾತ್ರ ಈ ಸಮಸ್ಯೆ ಗೆಲ್ಲಲು ಸಾಧ್ಯ:

ನಾನು ಇದನ್ನು ಕೊರೋನ ವಿರುದ್ದದ ಯುದ್ದ ಅಂತ ಕರೆಯಲ್ಲ. ಯುದ್ದ ಎಂದಾಗ ಅದಕ್ಕೊಬ್ಬನೇ ಒಬ್ಬ ಲೀಡರ್ ಇರ್ತಾನೆ. ಉದಾಹರಣೆಗೆ ನೆಪೋಲಿಯನ್ ಅಥವಾ ಸ್ಟಾಲಿನ್ ಆಗ ಇದ್ದಹಾಗೆ. ಆದರೆ ಈ ಕೊರೋನ ಸೃಷ್ಟಿಸಿರುವ ಸಂಕಷ್ಟವನ್ನು ನಾವೆಲ್ಲಾ ಒಟ್ಟಾಗಿ ಎದುರಿಸಬೇಕಿದೆ. ಹಾಗಾಗಿ ಇದನ್ನು ಯುದ್ದ ಎನ್ನುವುದೇ ಒಂದು ತಪ್ಪು ಹೋಲಿಕೆ.

ಅದರಲ್ಲೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಜನರಿಗೆ ಹಲವು ಆದ್ಯತೆಗಳಿರುತ್ತವೆ. ಕೆಲವರಿಗೆ ಕೊರೋನಾ ಓಡಿಸುವುದು ಮಾತ್ರವೇ ಮುಖ್ಯ ಆದ್ಯತೆಯಾಗಿ ಕಂಡರೆ, ಇನ್ನು ಹಲವರಿಗೆ ಅವತ್ತಿನ ಊಟದ ಪ್ರಶ್ನೆಯೇ ಮುಖ್ಯವಾಗಿರುತ್ತದೆ.

ಒಟ್ಟಾರೆ ಈ ಸಂದರ್ಭದಲ್ಲಿ ಮುಖ್ಯವಾಗಿ ಕಲಿಯಬೇಕಾದ ಪಾಠಗಳೆಂದರೆ, 1) ಇದನ್ನು ಪರಸ್ಪರ ಸಹಕಾರದಿಂದಷ್ಟೇ ಎದುರಿಸಲು ಸಾಧ್ಯ. ಪರಸ್ಪರ ಸಹಕಾರಿಯಾಗಿರುವ ಸವಲತ್ತು ನಮ್ಮ ಪ್ರಜಾಪ್ರಭುತ್ವದೊಳಗೆಯೇ ಅಂತರ್ಗತವಾಗಿದೆ. ಸರ್ಕಾರದ ಪಾಲಿಸಿಯನ್ನು ವಿಮರ್ಶಿಸಿದರೆ ಅದನ್ನು ದೇಶವಿರೋಧಿ ಎಂದು ಪರಿಗಣಿಸದೆ ಟೀಕೆಯನ್ನು ಸಕಾರಾತ್ಮಕವಾದ ಸಲಹೆಗಳನ್ನಾಗಿ ಪರಿಗಣಿಸಿ ಕೆಲಸ ಮಾಡುವುದು ಇಂದಿನ ತುರ್ತು ಅಗತ್ಯ.

2) ನಮ್ಮ ಆರೋಗ್ಯ ವ್ಯವಸ್ಥೆ ಅತ್ಯಂತ ದುಸ್ಥಿತಿಯಲ್ಲಿದೆ. ಅದರಲ್ಲೂ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಂತೂ ಭಾರೀ ಅಭಿವೃದ್ದಿ ಕಾಣಬೇಕಿದೆ. ಈಗ ಕೊರೋನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ಚೀನಾ, ಕೊರಿಯ, ತೈವಾನಿನಂತ ದೇಶಗಳಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳ ವ್ಯವಸ್ಥೆ ಭಾರತಕ್ಕಿಂತ ಅತ್ಯುತ್ತಮ ಸ್ಥಿತಿಯಲ್ಲಿವೆ.

ಭಾರತದ ಆರೋಗ್ಯ ವ್ಯವಸ್ಥೆಯನ್ನು ಸರ್ಕಾರದ ವ್ಯವಸ್ಥೆಯಾಗಿಯೇ ಉನ್ನತ ಮಟ್ಡಕ್ಕೇರಿಸುವುದು ಪ್ರಥಮ ಆದ್ಯತೆಯಾಗಬೇಕಿದೆ.

3) ಹಾಗೆಯೇ ಶೈಕ್ಷಣಿಕ ವ್ಯವಸ್ಥೆಯನ್ನು ಕೂಡ ರಾಷ್ಟ್ರೀಕರಣಗೊಳಿಸುವುದು ಪ್ರಥಮ ಆದ್ಯತೆಯಾಗಬೇಕಿದೆ. ಇದಕ್ಕೆ ಯೂರೋಪ್ ದೇಶಗಳ ಉದಾಹರಣೆ ತೆಗೆದುಕೊಳ್ಳಬಹುದಾಗಿದೆ.

4) ಈಗ ಉಂಟಾಗಿರುವ ಅಥವಾ ಇನ್ನೂ ಗಂಭೀರವಾಗಲಿರುವ ಆರ್ಥಿಕ ದುಸ್ಥಿತಿಯ ಭಾರತದಂತಹ ದೇಶದಲ್ಲಿ ನಿಧಾನವಾಗಿ ಸರಿಯಾಗಲಿದೆ. ಆದ್ದರಿಂದ ಆರ್ಥಿಕ ಸಂಕಷ್ಟದ ಕಾರಣ ಒಡ್ಡದೆ ಬಡಜನರಿಗೆ ಸಂಪೂರ್ಣ ಆರ್ಥಿಕ ಬೆಂಬಲ ನೀಡಬೇಕಿದೆ.

ಅರವಿಂದ್ ಸುಬ್ರಮಣ್ಯನ್
ಮಾಜಿ ಮುಖ್ಯ ಆರ್ಥಿಕ ಸಲಹೆಗಾರರು,ಭಾರತ ಸರ್ಕಾರ

ರಾಜ್ಯಗಳಿಗೆ ಅತಿಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡಬೇಕಿದೆ. ಭಾರತಕ್ಕೆ ಈ ಕೊರೋನ ತಂದಿರುವ ಆರ್ಥಿಕ ಸಂಕಷ್ಟ ಮೂರು ಕಾರಣಗಳಿಂದಾಗಿ ಬೇರೆ ದೇಶಗಳಿಗಿಂತ ಹೆಚ್ಚು ಗಂಭೀರ.

1) ಭಾರತದ ಆರ್ಥಿಕತೆಯು ಕೊರೋನ ಬರುವುದಕ್ಕಿಂತ ಮುಂಚೆಯೇ ಹಿನ್ನಡೆಯಲ್ಲಿತ್ತು.

2) ಭಾರತದ ವ್ಯೆದ್ಯಕೀಯ ವ್ಯವಸ್ಥೆ ಮೊದಲಿಂದಲೂ ಅತ್ಯಂತ ದುರ್ಬಲವಾಗಿದ್ದು ಈಗಿನ ಪ್ಯಾಂಡೆಮಿಕ್‍ನ್ನು ಎದುರಿಸುವ ಶಕ್ತಿ ಹೊಂದಿಲ್ಲ ದಿರುವುದು.

3) ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು.

ದ ಎಕನಾಮಿಸ್ಟ್ ಅಧ್ಯಯನ ಹೇಳಿರುವುದಕ್ಕಿಂತ ಹೆಚ್ಚಿನ ಜಿಡಿಪಿ ನಷ್ಟ ಭಾರತಕ್ಕೆ ಉಂಟಾಗಲಿದೆ. ಇದಕ್ಕೆ ಉದಾಹರಣೆಯಾಗಿ ಈ ಲಾಕ್‍ಡೌನಿಂದ ಕೇವಲ ಒಂದು ತಿಂಗಳ ಜಿಡಿಪಿ ನಷ್ಟವಾದರೂ ಸಹ ಭಾರತದ ಜಿಡಿಪಿ 2.1% ವೇಗದಲ್ಲಿ ಬೆಳೆಯಲು ಸಾಧ್ಯವಿಲ್ಲ.

ಪರಿಸ್ಥಿತಿ ಹೀಗಿದ್ದರೂ ಸಹ ಕೇಂದ್ರ ಸರ್ಕಾರ ಈ ದೇಶದ ಬಡವರಿಗೆ ನೇರ ನಗದು ವರ್ಗಾವಣೆಯ ಮೂಲಕ ಸಹಾಯ ಮಾಡಿದರೆ ಮಾತ್ರ ಬಡವರು ಉಳಿಯಲು ಮತ್ತು ಆರ್ಥಿಕತೆ ಮುಂದೆ ಪುಟಿದೇಳಲು ಸಾಧ್ಯವಾಗುತ್ತದೆ.

ಹಾಗಾಗಿ ಕೇಂದ್ರ ಅಥವಾ ರಾಜ್ಯದ ವಿತ್ತೀಯ ಕೊರತೆಯನ್ನು ಕಡೆಗಣಿಸಿ ಕನಿಷ್ಟ ಒಂಬತ್ತು ಲಕ್ಷ ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆರ್ಥಿಕ ಪುನಶ್ಚೇತನಕ್ಕಾಗಿ ಅದರಲ್ಲೂ ಬಡಜನರಿಗಾಗಿ ವ್ಯಯಿಸಲೇಬೇಕಿದೆ.

ಹಾಗೂ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರಗಳು ಉದಾರವಾಗಿ ಹಣ ಖರ್ಚುಮಾಡುವ ವಾತಾವರಣ ನಿರ್ಮಿಸಬೇಕಿದೆ.

ಇದಕ್ಕಾಗಿ ಹೆಚ್ಚು ನೋಟುಗಳನ್ನು ಪ್ರಿಂಟ್ ಮಾಡಬೇಕಾಗಿ ಬಂದರೂ ಈ ಕೆಲಸ ಅಗತ್ಯವಾಗಿ ಮಾಡಬೇಕಿದೆ.

ಅಮಿತ್ ಸೇರು
ಸೀನಿಯರ್ ಫೆಲೋ, ಹೂಮರ್ ಇನ್ಸ್‍ಟಿಟ್ಯೂಟ್

ಭಾರತ ಜಿಡಿಪಿಯ ಕನಿಷ್ಟ 5%ರಷ್ಟು ಖರ್ಚು ಮಾಡಬೇಕಿದೆ. ಅಮೆರಿಕವು ಈ ಕೊರೋನ ಸಂಕಷ್ಟದಿಂದ ಪಾರಾಗಲು ಎರಡು ಟ್ರಿಲಿಯನ್ ಡಾಲರ್ (ಸುಮಾರು ನೂರೈವತ್ತು ಲಕ್ಷ ಕೋಟಿಗಳು) ಅಂದರೆ ತನ್ನ ಜಿಡಿಪಿಯ 10%ನ್ನು ಮೀಸಲಿರಿಸಿದೆ. ಭಾರತ ಆರ್ಥಿಕವಾಗಿ ಈ ಮೊದಲೇ ಸಂಕಷ್ಟದಲ್ಲಿದ್ದುದು ನಿಜವಾಗಿದ್ದರೂ ಕೂಡ ಈಗಿನ ಮತ್ತಷ್ಟು ಸಂಕಷ್ಟದಿಂದ ಹೊರಬರಲು ಕನಿಷ್ಟ ತನ್ನ ಜಿಡಿಪಿಯ 5%ರನ್ನಾದರೂ ಖರ್ಚು ಮಾಡಲೇಬೇಕು. ಈ ಹಣವನ್ನು ಆದಷ್ಟು ನೇರ ನಗದು ವರ್ಗಾವಣೆ ಮತ್ತು ಇತರ ಸಬ್ಸಿಡಿಗಳಿಗಾಗಿ ಬಳಸಬೇಕಾಗಿದೆ.ಈ ಹಣದಲ್ಲಿ ಮುಖ್ಯ ಭಾಗವನ್ನು ತಕ್ಷಣದ ವೈದ್ಯಕೀಯ ಸಿದ್ದತೆಗೆ ಬಳಸಬೇಕು.

ಕೌಶಿಕ್ ಬಸು
ಕಾರ್ನೆಲ್ ಯೂನಿವರ್ಸಿಟಿ ಪ್ರೋಫೆಸರ್, ಮಾಜಿ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ

ಜೀವ ಮೊದಲು ಆರ್ಥಿಕತೆ ಆಮೇಲೆ ಎನ್ನುವುದು ಪೂರ್ಣ ತಪ್ಪು; ಏಕೆಂದರೆ ದರಿದ್ರ ಆರ್ಥಿಕ ಸ್ಥಿತಿ ಕೊರೋನಕ್ಕಿಂತ ಹೆಚ್ಚು ಜನರನ್ನು ಬಲಿಪಡೆಯುತ್ತದೆ.

ಲಾಕ್‍ಡೌನ್ ಎನ್ನುವುದು ಎಕಾನಮಿಯನ್ನೇ ನಿಂತುಹೋಗುವಂತೆ ಮಾಡುವುದನ್ನ ತಡೆಯಲೇಬೇಕಿದೆ. ಲಾಕ್‍ಡೌನಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವವರು ಬಡವರು ಮತ್ತು ವಲಸೆ ಕಾರ್ಮಿಕರು.

ವೈರಸ್ ಹಾವಳಿ ತಡೆಯುತ್ತಲೇ ಎಕಾನಮಿ ಅಭಿವೃದ್ದಿಯಾಗುವಂತಹ ಕ್ರಮಗಳನ್ನೂ ಕೈಗೊಳ್ಳಬೇಕು.

ಒಂದು ಕಡೆ ಬಡವರಿಗೆ ವಿಶೇಷ ಪ್ಯಾಕೇಜ್ ಜಾರಿಮಾಡುವುದರ ಜೊತೆ ಲಾಕ್‍ಡೌನನ್ನು ಹಂತಹಂತವಾಗಿ ಸಡಿಲಿಸಲೇಬೇಕು.

ಉದಾಹರಣೆಗೆ, ಏಪ್ರಿಲ್ ಹದಿನಾಲ್ಕರ ನಂತರ ತಮ್ಮ ಕೆಪಾಸಿಟಿಯ ಅರ್ಧದಷ್ಟು ಜನರನ್ನು ತುಂಬಿಕೊಂಡು ಸಂಚರಿಸಲು ರೈಲು ಮತ್ತು ವಿಮಾನಯಾನಕ್ಕೆ ಅನುಮತಿ ಇತ್ಯಾದಿ.

ಕನಿಷ್ಟ ಮುಂದಿನ ಆರು ತಿಂಗಳು ವಿತ್ತೀಯ ಕೊರತೆ ಬಗ್ಗೆ ಚಿಂತಿಸದೆ ಸರ್ಕಾರ ಹಣ ಖರ್ಚು ಮಾಡಬೇಕಿದೆ.

ಅಭಿಜಿತ್ ಬ್ಯಾನರ್ಜಿ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು

ಜನರಿಗೆ ಕೈಗೆ ನಗದು ನೀಡಲೇಬೇಕು. ಜನರ ಕೈಗೆ ನಗದು ನೀಡದಿದ್ದರೆ ಅವರು ಭಾರೀ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ದೇಶದ ಆರ್ಥಿಕತೆಯ ಚೇತರಿಕೆಯೇ ಕಷ್ಟವಾಗಲಿದೆ. ಜನರಿಗೆ ಉಚಿತ ರೇಷನ್ ನೀಡುವುದರ ಜೊತೆಗೆ ಅವಶ್ಯಕತೆ ಇರುವವರೆಲ್ಲರಿಗೂ ನಗದು ಹಣ ನೀಡಲೇಬೇಕು.ಉದ್ಯಮಗಳಿಗೆ ಸಾಲಮರುಪಾವತಿಗೆ ಐದಾರು ತಿಂಗಳು ಬಡ್ಡಿರಹಿತ ರಜೆ ನೀಡುವಂತೆ ರಿಸರ್ವ್ ಬ್ಯಾಂಕ್ ನಿಯಮಾವಳಿ ರೂಪಿಸಬೇಕು. ಹಾಗೆಯೇ ಈಗ ರೈತರಿಗೆ ಹಿಂಗಾರು ಬೆಳೆ ಕೊಯ್ಲಿನ ಕಾಲವಾಗಿದ್ದು ಕಾರ್ಮಿಕರ ಕೊರತೆಯಿಂದಾಗಿ ಕೊಯ್ಲಿಗೆ ತೊಂದರೆಯಾದರೆ ಬರುವ ವರ್ಷದ ಆಹಾರಕ್ಕೇ ಕೊರತೆ ಒಂದು ಕಡೆಯಾದರೆ ಮತ್ತೊಂದೆಡೆ ಕೋಟ್ಯಂತರ ರೈತರ ಆದಾಯಕ್ಕೆ ಏಟುಬೀಳಲಿದೆ. ಹಾಗಾಗಿ ಹಿಂಗಾರು ಬೆಳೆ ಕೊಯ್ಲಿಗೆ ತೊಂದರೆಯಾಗದಂತ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಿದೆ.

ಎಸ್ತರ್ ಡುಫ್ಲೊ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ

ಈಗ ಬುದ್ದಿವಂತಿಕೆ ಬಳಸುವುದಕ್ಕಿಂತ ತ್ವರಿತವಾಗಿ ಕೆಲಸ ಮಾಡಬೇಕಿದೆ (Don’t think clever but act quickly) ಅವಶ್ಯವುಳ್ಳ ಜನರಿಗೆ ತಕ್ಷಣ ನೇರ ನಗದು ವರ್ಗಾವಣೆ ಮಾಡಬೇಕಾಗಿದೆ. ಈಗಾಗಲೇ ತುಂಬ ವಿಳಂಬವಾಗಿದೆ. ಹಾಗಾಗಿ, ನಿಜವಾಗಿ ಅವಶ್ಯಕತೆಯುಳ್ಳವರು ಯಾರು ಎಂದು ಹುಡುಕಿ ಸಮಯ ವ್ಯಯಿಸದೆ ಒಂದುಮಟ್ಟಿಗೆ ದುರುಪಯೋಗ ಆದರೂ ಪರವಾಗಿಲ್ಲ; ಹಣವನ್ನು ಈಗಲೇ ಜನರಿಗೆ ಹಂಚಲೇಬೇಕಾಗಿದೆ. ಜನಧನ್ ಅಕೌಂಟುಗಳು, ನರೇಗ ಅಕೌಂಟುಗಳು ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹಣ ಕೊಡಲೇಬೇಕಿದೆ. ಇಲ್ಲದಿದ್ದರೆ, ಜನರು ಬೀದಿಗೆ ಬರುವುದನ್ನು ತಡೆಯಲು ಪೊಲೀಸರಿಗೂ ಕಷ್ಟವಾಗಬಹುದು.

ಸ್ಥೂಲವಾಗಿ ನೋಡಿದಾಗ ಎಲ್ಲ ಅರ್ಥಿಕ ತಜ್ಞರ ಒಟ್ಟಾರೆ ಅಭಿಪ್ರಾಯ ಹೀಗಿದೆ:

1) ಈಗ ಕೇಂದ್ರ ಕೊಟ್ಟಿರುವ ಕೊರೋನ ಅನುದಾನ ಜಿಡಿಪಿಯ ಕೇವಲ 1% ಆಗಿದೆ. ಇದನ್ನು ತಕ್ಷಣ ಕನಿಷ್ಟ 5%ಗೆ ಏರಿಸಬೇಕು.

2) ಈ ಹಣವನ್ನು ಜನರಿಗೆ ನೇರ ನಗದು ವರ್ಗಾವಣೆ ಮಾಡಲು ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಬಳಸಬೇಕು.

3) ಕೊರೋನ ತಡೆಯುವಲ್ಲಿ ಮತ್ತು ಜನರಿಗೆ ನಗದು ವರ್ಗಾವಣೆ ಮಾಡುವಲ್ಲಿ ರಾಜ್ಯಗಳ ಪಾತ್ರ ಬಹುಮುಖ್ಯವಾದ್ದರಿಂದ ಕೇಂದ್ರವು ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಅನುದಾನವನ್ನು ತಕ್ಷಣವೇ ಕೊಡಬೇಕು.

4) ಈ ಪ್ರಕ್ರಿಯೆಯಲ್ಲಿ ವಿತ್ತೀಯ ಕೊರತೆ ಉಂಟಾಗುವುದನ್ನು ತಕ್ಷಣದಲ್ಲಿ ಕಡೆಗಣಿಸಬೇಕು.

ಒಟ್ಟಾರೆಯಾಗಿ ಕೇಂದ್ರ ಸರಕಾರ ಜಿಡಿಪಿಯ ಕನಿಷ್ಟ 5%ನ್ನು ವ್ಯಯಿಸಿ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದರೆ ಜನರು ಲಾಕ್‍ಡೌನ್ ಪಾಲಿಸಲು ಅನುಕೂಲವಾಗುತ್ತದೆ.

ಇದರಿಂದ ಕೊರೋನ ಹರಡುವಿಕೆಯನ್ನು ತಡೆಗಟ್ಟಲೂ ಅನುಕೂಲವಾಗುತ್ತದೆ.

ಇಷ್ಟಲ್ಲದೆ ತಮಗೆ ಬಂದ ಹಣವನ್ನು ಜನರು ತಮ್ಮ ನಿತ್ಯ ಅವಶ್ಯಕತೆಗಳಿಗೋಸ್ಕರ ಖರ್ಚು ಮಾಡುವುದರಿಂದ ಲಾಕ್‍ಡೌನ್ ಮದ್ಯದಲ್ಲೂ ಆರ್ಥಿಕತೆಯಲ್ಲಿ ಒಂದು ಮಟ್ಟದ ಬೇಡಿಕೆ ಇದ್ದೇ ಇರುತ್ತದೆ. ಇದರಿಂದಾಗಿ ಆರ್ಥಿಕತೆ ಉಳಿಯಲು ಮತ್ತು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...