ಶನಿವಾರ ತಡರಾತ್ರಿ ಕೇರಳದ ಪತನಂತಿಟ್ಟಾ ಜಿಲ್ಲೆಯಲ್ಲಿ ಕೊರೊನಾ ರೋಗಿಗೆ ಆಂಬ್ಯುಲೆನ್ಸ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದ್ದು, ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಆಂಬುಲೆನ್ಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಒಂದೇ ಕುಟುಂಬದ ಇಬ್ಬರು ಮಹಿಳೆಯರಿಗೆ ಕೊರೊನಾ ದೃಢಪಟ್ಟಿತ್ತು. ಕೇರಳದಲ್ಲಿ ಕೊರೊನಾ ನಿಯಮಗಳ ಪ್ರಕಾರ, ರೋಗಿಗಳನ್ನು ಆಂಬುಲೆನ್ಸ್ ಮೂಲಕ ಮಾತ್ರ ಆಸ್ಪತ್ರೆಗೆ ಸಾಗಿಸಲು ಅವಕಾಶವಿದೆ. ಮಧ್ಯರಾತ್ರಿಯ ಹೊತ್ತಿಗೆ ಆಂಬ್ಯುಲೆನ್ಸ್ ಬಂದಿದ್ದು, ರೋಗಿಯನ್ನು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೌಲಭ್ಯ ಕೇಂದ್ರದ ಅಧಿಕಾರಿಗಳು ಒಬ್ಬ ರೋಗಿಯನ್ನು ಮಾತ್ರ ದಾಖಲಿಸಿಕೊಂಡಿದ್ದು, ಮತ್ತೊಬ್ಬ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಚಾಲಕರಿಗೆ ಸೂಚಿಸಿದರು. ಆಗ ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಚಾಲಕನು ಆಂಬುಲೆನ್ಸ್ ಅನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿ ವಾಹನದೊಳಗಿನ ರೋಗಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೋಗಿಗೆ ಬೆದರಿಕೆ ಹಾಕಿದ್ದಾನೆ. ಆದರೆ ಆಸ್ಪತ್ರೆಗೆ ದಾಖಲಾದ ನಂತರ ಈ ಘಟನೆಯ ಬಗ್ಗೆ ಆಕೆ ವೈದ್ಯರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಅತ್ಯಾಚಾರ, ಕೊಲೆ ಯತ್ನ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!
ಆರೋಗ್ಯ ಅಧಿಕಾರಿಗಳು ಆರೋಪಿಯನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದರು. “ಪ್ರತಿ ಆಂಬುಲೆನ್ಸ್ನಲ್ಲಿ ಕನಿಷ್ಠ ಇಬ್ಬರು ಉದ್ಯೋಗಿಗಳು ಇರಬೇಕು ಮತ್ತು ಕೇವಲ ಮಹಿಳಾ ರೋಗಿಗಳಾಗಿದ್ದರೆ ವಿಶೇಷ ಕಾಳಜಿ ವಹಿಸಬೇಕು” ಎಂದು ಕಟ್ಟುನಿಟ್ಟಿನ ಸೂಚನೆಗಳಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವಾಲಯದ ಅಧಿಕಾರಿಗಳು ಘಟನೆಯ ತನಿಖೆಗಾಗಿ ಆದೇಶಿಸುವುದಾಗಿ ಹೇಳಿದರು.
“ಇದು ಆಘಾತಕಾರಿ ಘಟನೆ. ಇಂತಹ ಘಟನೆಗಳು ನಡೆಯದಂತೆ ಸಚಿವಾಲಯ ಕ್ರಮ ಕೈಗೊಂಡಿದೆ. ಇಂದಿನಿಂದ ಹೆಚ್ಚಿನ ಆರೋಗ್ಯ ಕಾರ್ಯಕರ್ತರನ್ನು ಆಂಬುಲೆನ್ಸ್ಗಳಲ್ಲಿ ನಿಯೋಜಿಸಲಾಗುವುದು” ಎಂದು ಕೇರಳ ಶಾಸಕಾಂಗ ಸಭೆಯಲ್ಲಿ ಅರ್ನಮುಲಾ ಕ್ಷೇತ್ರವನ್ನು ಪ್ರತಿನಿಧಿಸುವ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್ವಾದಿ) ನಾಯಕಿ ವೀಣಾ ಜಾರ್ಜ್ ಹೇಳಿದ್ದಾರೆ.
ಪತನಂತಿಟ್ಟಾ ಪೊಲೀಸ್ ಅಧೀಕ್ಷಕ (ಎಸ್ಪಿ) ಕೆ.ಜಿ ಸೈಮನ್, “ಇದು ಯೋಜಿತ ಅಪರಾಧವೆಂದು ತೋರುತ್ತದೆ. ನಾವು ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ನಾವು ವಿಚಾರಣೆಯನ್ನು ಪ್ರಾರಂಭಿಸುತ್ತೇವೆ” ಎಂದು ಹೇಳಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಕೆ ಶೈಲಾಜಾ ಈ ಘಟನೆಯು ಅಮಾನವೀಯವಾಗಿದ್ದು, ಇಂತಹ ಘಟನೆಗಳು ಸಂಭವಿಸಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: IPS ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ಮುಂದುವರಿದ ಡಿಸ್ಲೈಕ್ಸ್ ಸುರಿಮಳೆ