ಉತ್ತರ ಪ್ರದೇಶದ ಎರಡು ಹೃದಯ ಕಲಕುವ ಫೋಟೋಗಳು ಬಹಳ ದುಃಖದಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿವೆ. ಗ್ರಾಮೀಣ ಉತ್ತರ ಪ್ರದೇಶದ ಕೋವಿಡ್ ಪೀಡಿತ ಕುಟುಂಬಗಳ ಪರಿಸ್ಥಿತಿಯನ್ನು ಇವು ತೆರೆದಿಡುತ್ತವೆ.
ಒಂದು ಫೋಟೊ, ಒಬ್ಬ ವಯಸ್ಸಾದ, ಗಡ್ಡದ ವ್ಯಕ್ತಿಯು ಮಹಿಳೆಯ ಮೃತ ದೇಹವನ್ನು ಬೈಸಿಕಲ್ನಲ್ಲಿ ಸಾಗಿಸುತ್ತಿರುವುದನ್ನು ತೋರಿಸುತ್ತದೆ. ಇನ್ನೊಂದರಲ್ಲಿ, ಬೈಸಿಕಲ್ ಶವದ ಸಮೇತ ನೆಲಕ್ಕೆ ಒರಗಿದ್ದನ್ನು ತೋರಿಸುತ್ತದೆ.
ಕೊನೆಗೆ ಆ ವ್ಯಕ್ತಿಗೆ ಸಹಾಯ ಮಾಡಿದ ಸ್ಥಳೀಯ ಪೊಲೀಸರು ಸಾಮಾಜಿಕ ಬಹಿಷ್ಕಾರ ಮತ್ತು ಭಯದ ಕ್ರೂರ ಕತೆಯನ್ನು ಬಹಿರಂಗಪಡಿಸಿದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಫೋಟೋದಲ್ಲಿರುವ ವ್ಯಕ್ತಿ, 70 ವರ್ಷದ ತಿಲಖ್ಧಾರಿ, ಉತ್ತರ ಪ್ರದೇಶದ ಜೌನ್ಪುರದ ಅಂಬರ್ಪುರ್ ಗ್ರಾಮದ ನಿವಾಸಿ. ಈ ಗ್ರಾಮವು ರಾಜ್ಯ ರಾಜಧಾನಿ ಲಕ್ನೋದಿಂದ 275 ಕಿ.ಮೀ. ದೂರದಲ್ಲಿದೆ. ಅವರ ಪತ್ನಿ ಕೋವಿಡ್ನಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಸ್ಪತ್ರೆಯು ಅವರ ಶವವನ್ನು ಆಂಬ್ಯುಲೆನ್ಸ್ನಲ್ಲಿ ಮನೆಗೆ ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಥಳೀಯರು ಊರಿನ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಹಳ್ಳಿಯಲ್ಲಿ ಸೋಂಕಿನ ಹರಡುವಿಕೆಗೆ ಕಾರಣವಾಗುತ್ತದೆ ಎಂಬುದು ಅವರ ನಂಬಿಕೆ.
ಈ ಪ್ರದೇಶಗಳಲ್ಲಿ ಕೋವಿಡ್ ಬೇರೆಡೆಯಷ್ಟು ತೀವ್ರವಾಗಿ ಇಲ್ಲದಿದ್ದರೂ, ಸ್ಥಳೀಯರು ಕೋವಿಡ್ ಕುರಿತು ತುಂಬ ಭಯಭೀತರಾಗಿದ್ದಾರೆ. ಗ್ರಾಮಸ್ಥರನ್ನು ಮನವೊಲಿಸಲು ಸಾಧ್ಯವಾಗದೆ, ತಿಲಖ್ಧಾರಿ ತನ್ನ ಹೆಂಡತಿಯ ಶವವನ್ನು ಹತ್ತಿರದ ಸಾಯಿ ನದಿ ದಂಡೆಗೆ ರವಾನಿಸಲು ನಿರ್ಧರಿಸಿದರು. ಗ್ರಾಮಸ್ಥರು ದೇಹವನ್ನು ಎತ್ತಲು ಸಹ ಸಹಾಯ ಮಾಡಲು ನಿರಾಕರಿಸಿದರು.
ಹತಾಶೆಯಲ್ಲಿ, ತಿಲಿಕ್ಧಾರಿ ಅದನ್ನು ತನ್ನ ಸೈಕಲ್ನಲ್ಲಿ ಸಾಗಿಸಲು ನಿರ್ಧರಿಸಿದ್ದಾರೆ ಎಂದು ಜೌನ್ಪುರದ ಮಡಿಯಾಹೂನ್ನ ಹಿರಿಯ ಪೊಲೀಸ್ ಅಧಿಕಾರಿ ಪಿ. ಉಪಾಧ್ಯಾಯ ಹೇಳಿದರು.
ಆದರೆ ಅರ್ಧದಾರಿಯಲ್ಲೇ, 70 ವರ್ಷ ವಯಸ್ಸಿನ ತಿಲಕ್ಧಾರಿ ಅವರಿಗೆ ಸೈಕಲ್ ನಿಯಂತ್ರಣ ತಪ್ಪಿತು. ಶವದ ಸಮೇತ ಸೈಕಲ್ ನೆಲಕ್ಕೆ ಉರುಳಿತು.
ರಸ್ತೆಯಲ್ಲಿ ಹಣೆ ಮೇಲೆ ಕೈ ಹೊತ್ತು ಅಸಹಾಯಕತೆಯಿಂದ ಕುಳಿತಿದ್ದ ತಿಲಕ್ಧಾರಿಯನ್ನು ಹಾದುಹೋಗುವ ಪೊಲೀಸ್ ಒಬ್ಬರು ಗಮನಿಸಿ, ಹಿರಿಯ ಅಧಿಕಾರಿಗೆ ತಿಳಿಸಿದರು.
ಕೂಡಲೇ ಪೊಲೀಸರು ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವಸ್ತುಗಳನ್ನು ತಂದರು. ಸ್ಥಳೀಯ ಮುಸ್ಲಿಂ ವ್ಯಕ್ತಿಯ ಸಹಾಯದಿಂದ ಅಂತ್ಯಕ್ರಿಯೆ ನಡೆಸಲಾಯಿತು.
ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಇದುವರೆಗೆ 3,00,041 ಪ್ರಕರಣಗಳನ್ನು ದಾಖಲಿಸಿದೆ ಮತ್ತು 11,943 ಸಾವುಗಳು ದಾಖಲಾಗಿವೆ.
ಒಟ್ಟಾರೆಯಾಗಿ, ದೇಶವು ಇಂದು 3,79 ಲಕ್ಷ ಕೊರೊನಾ ವೈರಸ್ ಪ್ರಕರಣಗಳಲ್ಲಿ ಅತಿ ಹೆಚ್ಚು ಏರಿಕೆ ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ 3,645 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಶವಸಂಸ್ಕಾರದಲ್ಲಿ ಮುಸ್ಲಿಮರ ಸಮರ್ಪಣಾ ಮನೋಭಾವ
ಕೋವಿಡ್ ಈ ದೇಶದಲ್ಲಿ ಬಿಡಾರ ಹೂಡಿ ಒಂದು ವರ್ಷವಾದರೂ ಬಹುತೇಕರಿಗೆ ಸರಿಯಾದ ವೈಜ್ಞಾನಿಕ ತಿಳವಳಿಕೆ ನೀಡುವಲ್ಲಿ ಸರ್ಕಾರ ಮತ್ತು ಸಮಾಜ ಸೋತಿವೆ. ಹೀಗಾಗಿಯೇ ಎಷ್ಟೊ ಕುಟುಂಬಗಳು ತಮ್ಮ ಮನೆ ಸದಸ್ಯರು ಕೋವಿಡ್ನಿಂದ ಮೃತರಾದಾಗ ಶವಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಗಮನಾರ್ಹವಾದ, ಪ್ರಶಂಸನೀಯವಾದ ಮತ್ತು ಅನಕರಣೀಯವಾದ ಕೆಲಸವನ್ನು ನೂರಾರು ಕಡೆ ಮುಸ್ಲಿಂ ಯುವಕರು ಮಾಡುತ್ತಿದ್ದಾರೆ. ಅವರು ಜಾತಿ-ಧರ್ಮ ನೋಡದೇ ಕೋವಿಡ್ ಶವಗಳ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: #ResignModi ಹ್ಯಾಷ್ಟ್ಯಾಗ್ ನಿರ್ಬಂಧಿಸಿ ಟೀಕೆಗೊಳಗಾದ ಫೇಸ್ಬುಕ್: ಟೀಕೆ ನಂತರ ಎಚ್ಚೆತ್ತು ಮರುಸ್ಥಾಪನೆ
ಕಷ್ಟ ಕಾಲದಲ್ಲಿ ಮನುಷ್ಯರು ಮಾನವೀಯತೆಯನ್ನು ತೋರಿಸಬೇಕೇ ಹೊರತು ಅಮಾನವೀಯತೆಯನ್ನು ಅಲ್ಲ.