ಬಂಗಾಳದ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷ ಸಿಪಿಐ(ಎಂ) ಕೋಲ್ಕತ್ತಾದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದೆ.
ಸಿಪಿಐ(ಎಂ) ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ಜೋರಾಸಂಕೋ ಮತ್ತು ಕಾಳಿಘಾಟ್ ಸೇರಿ ನಗರದ ಹಲವು ಭಾಗಗಳಲ್ಲಿ ಪಡಿತರ ಅಂಗಡಿಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿದ್ದು, ರಾಜ್ಯದ ಟಿಎಂಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
2011 ರಿಂದ 2021ರವರೆಗೆ ಪ.ಬಂಗಾಳದಲ್ಲಿ ಆಹಾರ ಇಲಾಖೆ ಖಾತೆಯನ್ನು ಹೊಂದಿದ್ದ ಮಲ್ಲಿಕ್ ಪ್ರಸ್ತುತ ರಾಜ್ಯದ ಅರಣ್ಯ ಸಚಿವರಾಗಿದ್ದಾರೆ. ಬಹುಕೋಟಿ ಪಡಿತರ ವಿತರಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶುಕ್ರವಾರ ಮುಂಜಾನೆ ಇಡಿ ಅವರನ್ನು ಬಂಧಿಸಿದೆ.
ಟಿಎಂಸಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳಿಗೆ ಪಡಿತರ ಹಗರಣವು ಒಂದು ಉದಾಹರಣೆಯಾಗಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಆಪಾದಿತ ಹಗರಣದಿಂದ ಸಂತ್ರಸ್ತರಾಗಿರುವ ಜನರಿಗೆ ಟಿಎಂಸಿ ಸರ್ಕಾರ ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಪ್ರತಿಯೊಬ್ಬರಿಗೂ ಸಬ್ಸಿಡಿ ಆಹಾರ ಧಾನ್ಯಗಳ ಲಭ್ಯತೆಯನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಟಿಎಂಸಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಪಶ್ಚಿಮ ಬಂಗಾಳದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಹೇಳಿದೆ.
ಇದನ್ನು ಓದಿ: ಕೊಚ್ಚಿ; ಸರಣಿ ಸ್ಪೋಟ ಘಟನೆ ಗಂಭೀರವಾದುದು; ಸಿಎಂ ಪಿಣರಾಯ್ ವಿಜಯನ್