ಕೇರಳದ ಕೊಚ್ಚಿಯ ಸಮಾವೇಶ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿರುವುದನ್ನು ದೃಢಪಡಿಸಿರುವುದಾಗಿ ರಾಜ್ಯ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಶೇಕ್ ದರ್ವೇಶ್ ಸಾಹೇಬ್ ಹೇಳಿದ್ದಾರೆ.
ಕೊಚ್ಚಿಯ ಕಲಾಮಸ್ರಿಯಲ್ಲಿರುವ ಜಮ್ರಾ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ನಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಪ್ರಾರ್ಥನೆ ವೇಳೆ 9ರ ಸುಮಾರಿಗೆ ಸರಣಿ ಸ್ಪೋಟಗಳು ಸಂಭವಿಸಿದ್ದವು.
ವರದಿಗಳ ಪ್ರಕಾರ, ತನಿಖಾ ತಂಡವು ಸಭಾಂಗಣದಿಂದ ಐಇಡಿ ಅವಶೇಷಗಳನ್ನು ವಶಪಡಿಸಿಕೊಂಡಿದೆ.
ಮಾದ್ಯಮಗಳ ಜೊತೆ ಮಾತನಾಡಿದ ಡಿಜಿಪಿ, ಪ್ರಾಥಮಿಕ ತನಿಖೆಯಲ್ಲಿ ಐಇಡಿ ಸಾಧನವನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ. ತನಿಖೆಗೆ ವಿಶೇಷ ತಂಡ ರಚಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ದೃಢೀಕರಿಸದ ಸುದ್ದಿಗಳನ್ನು ಹರಡಬಾರದು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಎನ್ಐಎ ತನಿಖಾಧಿಕಾರಿಗಳ ತಂಡವು ಸ್ಥಳದಲ್ಲಿದೆ. ಟಿಫಿನ್ ಬಾಕ್ಸ್ನಲ್ಲಿ ಇರಿಸಲಾಗಿದ್ದ ಐಇಡಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಬ್ಲಾಸ್ಟ್ ನಡೆಯುವ ಸ್ವಲ್ಪ ಮೊದಲು ಕನ್ವೆನ್ಷನ್ ಸೆಂಟರ್ನಿಂದ ವೇಗವಾಗಿ ಕಾರು ತೆರಳುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಸ್ಪೋಟಕ ಇಟ್ಟ ವ್ಯಕ್ತಿ ಕಾರಿನಲ್ಲಿ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಸ್ಫೋಟದ ನಂತರ ಪೊಲೀಸರು ಸಮಾವೇಶ ಕೇಂದ್ರವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾಡಳಿತವು ಪ್ರಾರ್ಥನಾ ಸಭೆಗೆ ಬಂದವರನ್ನು ತಕ್ಷಣ ಅಲ್ಲಿಂದ ವಾಹನಗಳ ಮೂಲಕ ಕಳುಹಿಸಿದ್ದಾರೆ.
ಕೊಚ್ಚಿಯ ಸಮಾವೇಶ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಇದನ್ನು ಓದಿ: ಕೊಚ್ಚಿ; ಸರಣಿ ಸ್ಪೋಟ ಘಟನೆ ಗಂಭೀರವಾದುದು; ಸಿಎಂ ಪಿಣರಾಯ್ ವಿಜಯನ್