Homeಅಂಕಣಗಳುನಾನು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮಾಧ್ಯಮವನ್ನು ಜನರ ತೆಕ್ಕೆಗೆ ಮರಳಿ ಪಡೆಯುವ ಬಗ್ಗೆ ಎರಡು...

ನಾನು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮಾಧ್ಯಮವನ್ನು ಜನರ ತೆಕ್ಕೆಗೆ ಮರಳಿ ಪಡೆಯುವ ಬಗ್ಗೆ ಎರಡು ಮಾತು

- Advertisement -
- Advertisement -

ಗೆಳೆಯರೇ ನನಗೆ ಈಗ ಮೂರು ವರ್ಷ ತುಂಬಿ ನಾಲ್ಕಕ್ಕೆ ಬಿದ್ದಿದೆ. ಭಾರತದಲ್ಲಿ ಈಗ ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಜನಪರ ಮಾಧ್ಯಮ ಜನಪರವಾಗಿದ್ದುಕೊಂಡು, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಗುಣವನ್ನು ಜಾಗೃತವಾಗಿರಿಸಿಕೊಂಡು, ಸಾರ್ವಜನಿಕರಿಗೆ ಅವರ ಹಿತಕ್ಕೋಸ್ಕರ ಇನ್‌ಫಾರ್ಮಡ್ ಒಪಿನಿಯನ್ ನೀಡಬಲ್ಲ ಮಾಧ್ಯಮವಾಗಿ ಉಳಿದುಕೊಳ್ಳುವ ಸರಾಸರಿ ಆಯುಷ್ಯನ್ನು ಲೆಕ್ಕ ಹಾಕುವುದು ಬಹಳ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಹೇಳುವುದಾದರೆ ನನಗೆ ಮೂರು ತುಂಬಿರುವುದು ಕೂಡ ಒಂದು ಪ್ರಮುಖ ಘಟ್ಟ ಎಂತಲೇ ನನಗೆ ಭಾಸವಾಗುತ್ತಿದೆ.

ನಾನು ಹುಟ್ಟಿದ್ದಕ್ಕೆ ಕಾರಣವಾದ ಸಂಗತಿಗಳು ಸಂತಸದವಲ್ಲ ಎಂಬುದು ನಿಮಗೆ ತಿಳಿದೇ ಇದೆ. ಅಲ್ಲದೆ, ನಾನು ಸೆಪ್ಟಂಬರ್ 5, 2018ರಂದು ಈ ಅವತಾರ ತಳೆಯುವುದಕ್ಕೂ ಮುಂಚಿತವಾಗಿ ’ನಾನು ಗೌರಿ’ ಹೆಸರಿನಲ್ಲಿ ಇದ್ದುದ್ದರಿಂದ ಈ ಮೂರು ವರ್ಷದ ಸಂಖ್ಯೆ ಕೂಡ ಅಷ್ಟು ನಿಖರವಾದದ್ದಲ್ಲ. ಇದೊಂದು ರೀತಿ, ಶಾಲೆಗೆ ಸೇರಿಸಿದ ದಿನ ಮತ್ತು ನಿಜವಾಗಿ ಹುಟ್ಟಿದ ದಿನ ಎನ್ನಬಹುದೇನೋ! ಇಲ್ಲಿ ಸಂಭ್ರಮಿಸುವ ಯಾವುದೇ ಉದ್ದೇಶ ಇಲ್ಲವಾದ್ದರಿಂದ ಖಾಸಗಿ ಪ್ರಸಾರಕ್ಕೆ ’ನಾನು ಗೌರಿ’ ಪತ್ರಿಕೆ ಮತ್ತು ’ನಾನುಗೌರಿ.ಕಾಮ್’ ಆನ್‌ಲೈನ್ ಸುದ್ದಿತಾಣ ಹುಟ್ಟಿದ ದಿನ 10 ಏಪ್ರಿಲ್ 2018 ಕೂಡ ಮುಖ್ಯವಾದದ್ದೇ. ಈಗ ನನ್ನನ್ನು ನಾನು ಪರಿಶೀಲಿಸಿಕೊಳ್ಳಲು, ನಾನು ಸರಿಯಾರ ರೀತಿಯಲ್ಲಿ ಬೆಳೆಯುತ್ತಿದ್ದೇನೆಯೇ-ಮನ್ನಡೆಯುತ್ತಿದ್ದೇನೆಯೇ ಎಂದು ಕೇಳಿಕೊಳ್ಳಲು, ಕಳೆದ ವರ್ಷದ ಅವಧಿಯಲ್ಲಿ ನನ್ನ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ಸಣ್ಣ ಕೃತಜ್ಞತೆಯನ್ನು ಸಮರ್ಪಿಸಲು, ಇದನ್ನೇ ನಾಲ್ಕನೇ ವರ್ಷಕ್ಕ ಕಾಲಿಡುತ್ತಿರುವ ಜನ್ಮದಿನ ಎಂದು ನೆಪಮಾತ್ರಕ್ಕೆ ಅಂದುಕೊಳ್ಳೋಣ.

ನಾನು, ‘ಆ’ ಅಥವಾ ‘ಈ’ ದರಿದ್ರ ಟಿವಿಯನ್ನು ನೋಡುವುದಿಲ್ಲ, ಜಾಹೀರಾತಿನಿಂದ ಮತ್ತು ಜಾಹೀರಾತಿಗೋಸ್ಕರವೇ ಬದುಕಿರುವ ರದ್ದಿ ಪೇಪರುಗಳನ್ನು ಓದುವುದಿಲ್ಲ ಎಂದುಕೊಂಡು ಇದ್ದುಬಿಡುವ ಕಾಲ ಮುಗಿದುಹೋಗಿದೆ ಅಲ್ಲವೇ ಪ್ರಿಯ ಓದುಗರೇ? ಮಾಧ್ಯಮಗಳು ಸ್ವತಂತ್ರವಾಗಿ ಉಳಿಯುವ ಕಾಲ ಹೋಗಿ, ನಾಗರಿಕರ ಹಿತಕ್ಕಾಗಿ ಆಡಳಿತ ವ್ಯವಸ್ಥೆಗಳನ್ನು ಪ್ರಶ್ನಿಸುವ ಕಾಲ ಮುಗಿದುಹೋಗಿ, ತನ್ನನ್ನು ಕೊಂಡುಕೊಂಡಿರುವ ಬಂಡವಾಳದಾರರ ಪರವಾಗಿ, ಅವರಿಗೆ ಬೇಕಿರುವ ಸರ್ಕಾರಗಳನ್ನು ಉಳಿಸುವ ಮತ್ತು ಅವರ ಪರವಾಗಿ ವಕಾಲತ್ತು ವಹಿಸುವ, ಸಮ್ಮತಿಯನ್ನು ಉತ್ಪಾದಿಸುವ ಸಾಧನಗಳಾಗಿ ಬದಲಾಗಿ ವರ್ಷಗಳೇ ಉರುಳಿವೆ. ಎಲ್ಲವನ್ನೂ ಬಿಟ್ಟು ನಾನು ನನ್ನಪಾಡಿಗೆ ಇರುತ್ತೇನೆ ಎಂದು ಕುಳಿತುಕೊಳ್ಳುವ ಆಯ್ಕೆ ಇರಲು ಸಾಧ್ಯವಿಲ್ಲ.

ನಮ್ಮ ದೇಶದಲ್ಲಿ ದೊಡ್ಡ ಕಾರ್ಪೊರೆಟ್ ಸಂಸ್ಥೆಗಳ ಹಿಡಿತ ಮತ್ತು ಸರ್ವಾಧಿಕಾರದ ಧೋರಣೆಯ ಪ್ರಭುತ್ವಗಳ ಸಮಸ್ಯೆಯ ಜೊತೆಗೆ, ಬಹುಸಂಖ್ಯಾ ಧಾರ್ಮಿಕರ ತೀವ್ರವಾದ ಕೂಡ ಸೇರಿಕೊಂಡಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಈ ಧಾರ್ಮಿಕ ತೀವ್ರವಾದವೇ ಗೌರಿ ಲಂಕೇಶರ ಕೊಲೆಗೆ ಕಾರಣವಾಗಿದ್ದು. ನಾನು ಈ ಅವತಾರದಲ್ಲಿ ಜನ್ಮ ತಳೆಯುವುದಕ್ಕೂ ಒಂದು ವರ್ಷ ಮೊದಲು, ಅಂದರೆ ಸೆಪ್ಟಂಬರ್ 5 2017, ಅವರನ್ನು ಹಿಂದುತ್ವ ಶಕ್ತಿಗಳು ಕೊಲೆಮಾಡಿದ್ದು. ನನ್ನ ಮಿತಿಗಳು ಏನೇ ಇರಲಿ, ನಾನು ಅವರಷ್ಟು ದಿಟ್ಟವಾದ ಪತ್ರಿಕೋದ್ಯಮ ನಡೆಸಲು ಸಾಧ್ಯವಾಗುತ್ತಿದೆಯೇ ಎಂಬ ಪ್ರಶ್ನೆಯ ಜೊತೆಗೇ, ಪತ್ರಿಕೋದ್ಯಮ ಮಾಡಬೇಕಾದ ಪ್ರಾಮಾಣಿಕ ಕೆಲಸವನ್ನು ಮಾಡಿಕೊಂಡು ಬರಲು ಸಾಧ್ಯವಾಗಿದೆ ಎಂಬ ತೃಪ್ತಿ ಮಾತ್ರ ಉಳಿದಿದೆ. ಗೌರಿಯವರ ಸಾವಿನೊಂದಿಗೆ ಅವರ ಪತ್ರಿಕೋದ್ಯಮ ನಶಿಸಿಹೋಗುತ್ತದೆ ಎಂದು ನಂಬಿದ್ದ ದುರುಳರಿಗೆ ಅವರ ನಂಬಿಕೆ ಸುಳ್ಳು ಎಂಬ ನಿಟ್ಟಿನಲ್ಲಿ ನಾನು ಮುಂದುವರೆದಿದ್ದೇನೆ ಎಂಬುದು ಕೂಡ ನನಗೆ ಸಂತಸ ನೀಡಿದೆ.

ಗೌರಿಯವರ ದಿಟ್ಟ ಪತ್ರಿಕೋದ್ಯಮ ವಿಶ್ವದಾದ್ಯಂತ ಸ್ಫೂರ್ತಿ ನೀಡಿದೆ ಎಂಬುದಕ್ಕೆ ಸಾಕ್ಷಿಯಾಗಿ, ಸೆಪ್ಟಂಬಂರ್ 5, 2021ನ್ನು ಗೌರಿ ಲಂಕೇಶ್ ದಿನವಾಗಿ ಆಚರಿಸಲು ಕೆನಡಾದ ಬರ್ನಾಬಿ ನಗರದಲ್ಲಿ ಕರೆ ನೀಡಲಾಗಿದೆ. ನಗರದ ಮೇಯರ್ ಮೈಕ್ ಹರ್ಲಿ ಅವರು ಹೊರಡಿಸಿರುವ ಘೋಷಣಾ ಪತ್ರದಲ್ಲಿ, “ಧೈರ್ಯಶಾಲಿ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ ಸತ್ಯ ಮತ್ತು ನ್ಯಾಯದ ಪರವಾಗಿ ನಿಂತರು. ದಮನದ ವಿರುದ್ಧ ಮತ್ತು ಮಾನವ ಹಕ್ಕುಗಳ ಹೋರಾಟದಲ್ಲಿ ಅವರು ತಮ್ಮ ಜೀವವನ್ನೆ ಅರ್ಪಿಸಿದರು” ಎಂದು ಹೇಳಿದ್ದಾರೆ.

ಈ ದೇಶದ ಬೆನ್ನೆಲುಬು ಎಂದು ಕರೆಯಲಾಗುವ ರೈತರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದಾಗ, ಬಹುತೇಕ ಕಾರ್ಪೊರೆಟ್ ಒಡೆತನದ ಮಾಧ್ಯಮಗಳು ರೈತರನ್ನು ಖಳನಾಯಕರು ಎಂದು ಬಿಂಬಿಸಲು ಅವಿರತ ಪ್ರಯತ್ನಪಟ್ಟವು. ಆದರೆ ಗೌರಿ ಮೀಡಿಯಾ ದೆಹಲಿಯ ಪ್ರತಿಭಟನಾ ಸ್ಥಳಕ್ಕೆ ವರದಿಗಾರ್ತಿ ಮಮತಾ ಆವರನ್ನು ಕಳುಹಿಸಿದ್ದಲ್ಲದೆ, ನಿರಂತರವಾಗಿ ನಿಖರ ಮಾಹಿತಿಯನ್ನು ನೀಡಲು ಪ್ರಯತ್ನ ಮಾಡಿತು. ಪತ್ರಿಕೆಯಲ್ಲಿ ಕರಾಳ ಕಾಯ್ದೆಯನ್ನು ವಿಶ್ಲೇಷಿಸಿದ ಹಲವು ಲೇಖನಗಳು ಮೂಡಿಬಂದವು. ಸಿಎಎ-ಎನ್‌ಆರ್‌ಸಿ ಸಮಯದಲ್ಲಾಗಲೀ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವ ವಿಷಯದಲ್ಲಿ ಆಗಲೀ, ಕೊರೊನಾ ಮತ್ತು ಲಾಕ್‌ಡೌನ್ ಆಗಲಿ, ಕರ್ನಾಟಕ ಸರ್ಕಾರ ಅಸ್ಥಿರಗೊಂಡು ನಡೆದ ನಾಟಕದ ವಿದ್ಯಮಾನ ಆಗಿರಲಿ, ಜನಪರವಾದ, ’ಪಬ್ಲಿಕ್ ಗುಡ್’ ಎನ್ನಲಾಗುವ ಮಾದರಿಯಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಲು ಪ್ರಯತ್ನಿಸಿದ್ದೇವೆ.

ಈ ಎಲ್ಲದರ ಸಲುವಾಗಿ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಡಾ, ಎಚ್ ವಿ ವಾಸು ಸಂಪಾದಕರಾಗಿ ಮಾಡಿದ ಕೆಲಸವನ್ನು ಗುರುಪ್ರಸಾದ್ ಮುಂದುವರೆಸಿದ್ದಾರೆ. ಡಿ ಉಮಾಪತಿಯವರು ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರಸಕ್ತ ಮುತ್ತುರಾಜು, ಮಮತ, ಬಾಪು ತಂಡದ ಸದಸ್ಯರಾಗಿ ಆನ್‌ಲೈನ್ ಮತ್ತು ಪತ್ರಿಕೆಯ ವರದಿಗಾರಿಕೆಯ ಕೆಲಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಗೌರಿಯವರ ಸಹೋದ್ಯೋಗಿಯಾಗಿದ್ದ ರಾಜು ಅವರು ಪತ್ರಿಕೆ ವಿತರಣೆ ಜೊತೆಗೆ ಮೀಡಿಯಾ ಟ್ರಸ್ಟ್ ನಿರ್ವಹಣೆಯನ್ನೂ ನಿಭಾಯಿಸುತ್ತಿದ್ದಾರೆ. ಕೃಷ್ಣ ಬಾದರ್ಲಿ ವಿನ್ಯಾಸ ಕೆಲಸದಲ್ಲಿ, ಅನಿಲ್, ಲಕ್ಷ್ಮಣ ವಿತರಣೆ ಮತ್ತು ಇತರ ಮುಖ್ಯ ಕೆಲಸಗಳನ್ನು ವಹಿಸಿಕೊಂಡಿದ್ದಾರೆ. ಈ ಪುಟ್ಟ ತಂಡವಾಗಿ ಉತ್ತಮ ಕಂಟೆಂಟ್‌ಅನ್ನು ನೀಡಲು ನಾವೆಲ್ಲಾ ಪ್ರಯತ್ನಿಸುತ್ತಿರುವುದನ್ನ ನೀವು ಗಮನಿಸಿದ್ದೀರಿ.

ಆದರೆ, ಸ್ವತಂತ್ರ ಮಾಧ್ಯಮಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಭುತ್ವದ ಶಕ್ತಿಗಳು ಮತ್ತು ಕಾರ್ಪೊರೆಟ್ ಶಕ್ತಿಗಳು ಸುಲಭವಾಗಿ ಬಿಡಗೊಡುವುದಿಲ್ಲ ಎಂಬುದು ನಿಮಗೆಲ್ಲ ತಿಳಿದಿರುವ ಸಂಗತಿಯೇ. ಅಂತರ್ಜಾಲ ತಿಳಿವಳಿಕೆಯನ್ನು ಪ್ರಜಾಸತ್ತೀಯಗೊಳಿಸುತ್ತದೆ ಎನ್ನಲಾಗುತ್ತದಾದರೂ, ಮೇಲೆ ತಿಳಿಸಿದ ಕಾರಣಕ್ಕಾಗಿಯೇ ಇಂದು ನಾವು ನೀಡುತ್ತಿರುವ ’ಜನರ ಒಳಿತಿನ’ ಕಂಟೆಂಟ್‌ಅನ್ನು ಜನರಿಗೆ ಸುಲಭವಾಗಿ ತಲುಪುವ ಮಾರ್ಗಗಳನ್ನು ಕಾರ್ಪೊರೆಟ್ ಹಿತಾಸಕ್ತಿಗಳು ಮುಚ್ಚಲು ಪ್ರಯತ್ನಿಸುತ್ತವೆ. ಇಂತಹ ಸುದ್ದಿಗಳ ವಿತರಣೆ ಅಷ್ಟು ಸುಲಭವಲ್ಲ ಎನ್ನುವುದನ್ನು ಪ್ರಿಯ ಓದುಗರೆಲ್ಲರೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್‌ಬುಕ್ ನಮ್ಮ ಕಂಟೆಂಟ್‌ಅನ್ನು ಕಳೆದ ವರ್ಷದ ಕೆಲ ಸಮಯ ನಿರ್ಬಂಧಿಸಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

ಆದುದರಿಂದ, ನನ್ನಂತಹ ಜನಪರ ಮಾಧ್ಯಮಗಳನ್ನು ಜನಪ್ರಿಯಗೊಳಿಸುವ ಕೆಲಸವನ್ನು ಓದುಗರು ಮಾಡಿದರೆ, ಈಗ ಅವರ ತೆಕ್ಕೆಗೆ ಬಿದ್ದಿದೆ ಎನ್ನಲಾಗುತ್ತಿರುವ ಮಾಧ್ಯಮವನ್ನು ಮರಳಿ ನಮ್ಮ ಅಂದರೆ ಜನರ ತೆಕ್ಕೆಗೆ ತೆಗೆದುಕೊಳ್ಳುವುದು ಸುಲಭವಾದೀತು. ಅದಕ್ಕಾಗಿ, ನಮ್ಮ ಕಂಟೆಂಟ್‌ಅನ್ನು ಉತ್ತಮಪಡಿಸಲು ನಿಮ್ಮ ಚಿಂತನೆಗಳನ್ನು ಧಾರೆಯೆರೆಯುವ, ಬರಹಗಳನ್ನು ನೀಡುವ, ನಮ್ಮ ಬರಹಗಳನ್ನು ನಿಮ್ಮ ಗೆಳೆಯರ ಬಳಗದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುವ, ನಾವು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ನಿಮ್ಮ ಕೈಲಾದ ನೆರವು ನೀಡುವುದನ್ನು ಇನ್ನಷ್ಟು ತೀವ್ರವಾಗಿ ಮಾಡಬೇಕಿದೆ. ಪ್ರಿಯ ಓದುಗರೆಲ್ಲರೂ ಮೀಡಿಯಾ ಆಕ್ಟಿವಿಸ್ಟ್‌ಗಳಾಗುವ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ.

ಮೇಲಿನ ಎಲ್ಲದಕ್ಕೂ ನಮ್ಮ ಓದುಗರು ನೆರವು ನೀಡುತ್ತಲೇ ಬಂದಿದ್ದೀರಿ. ನಾವು ಇಷ್ಟು ವರ್ಷಗಳ ಕಾಲ ಉಳಿದಿರುವುದಕ್ಕೆ ಓದುಗ ಮಿತ್ರರೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಾನೇ ನಿಮಗೆಲ್ಲಾ ಥ್ಯಾಂಕ್ಸ್ ಹೇಳುವುದನ್ನು ಸಮರ್ಪಕವಾಗಿ ಮಾಡಿಲ್ಲವಷ್ಟೇ. ಇದರ ಭಾಗವಾಗಿಯೇ ಈ ಸಂಚಿಕೆಯಲ್ಲಿ ಕಳೆದ ವರ್ಷ (5 ಸೆಪ್ಟಂಬರ್ 2020 ರಿಂದ 21 ಆಗಸ್ಟ್ 2021ರವರೆಗಿನ ಸಂಚಿಕೆಗಳಲ್ಲಿ) ಬರಹ-ಸಂದರ್ಶನ-ಕಥೆ-ಕವನ-ಚಿತ್ರ-ಕಾರ್ಟೂನ್‌ಗಳನ್ನು ಒದಗಿಸಿದ ಬಹುತೇಕ ಎಲ್ಲರಿಗೂ ಥ್ಯಾಂಕ್ಸ್ ಹೇಳುವ ಪ್ರಯತ್ನ ಮಾಡಿದ್ದೀನಿ. ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ನನ್ನ ಕಣ್‌ತಪ್ಪನ್ನು ಮನ್ನಿಸುತ್ತೀರಿ ಎಂದು ನಂಬಿದ್ದೇನೆ. ಹಿಂದಿನ ಪುಟದಲ್ಲಿ ಇರುವ ಹೆಸರುಗಳನ್ನು ನೋಡಿದಾಗ ನಿಜಕ್ಕೂ ಭಾವುಕನಾದೆ. ನಿಮ್ಮ ಬಿಡುವಿಲ್ಲದ ಸಮಯದಲ್ಲಿಯೂ, ಯಾವುದಾದರು ವಿಷಯದ ಬಗ್ಗೆ ಬರೆಯಲು ಹೇಳಿ ಅತಿ ಕಡಿಮೆ ಸಮಯ ನೀಡಿದರೂ ಪ್ರೀತಿಯಿಂದ ಬರೆದುಕೊಟ್ಟಿದ್ದೀರಿ. ಈ ಪ್ರೀತಿ-ಕಾಳಜಿ ಇನ್ನೂ ಬೃಹತ್ತಾಗಿ ಬೆಳೆಯುವುದರ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಇದು ಕಳೆದ ವರ್ಷದ ಕಾಂಟ್ರಿಬ್ಯೂಟರ್ಸ್ ಪಟ್ಟಿ ಮಾತ್ರ ಆಗಿದ್ದು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ನನಗೆ ಕಾಂಟ್ರಿಬ್ಯೂಟ್ ಮಾಡಿದವರನ್ನು ಪಟ್ಟಿ ಮಾಡದಿದ್ದರೂ ಪ್ರೀತಿಯಿಂದ ನೆನೆಯುತ್ತೇನೆ.

ಇವೆಲ್ಲದರ ನಡುವೆ ನನಗೆ ಅತೀವ ದುಃಖವನ್ನುಂಟುಮಾಡಿದ ಘಟನೆ ನನ್ನ ಹುಟ್ಟಿಗೆ ಕಾರಣಕರ್ತರೂ ಆಗಿ, ನನ್ನ ಬೆಳವಣಿಗೆಗೆ ಮಾರ್ಗದರ್ಶಕರಾಗಿ ತಮ್ಮ ಕೊನೆಯ ದಿನದವರೆಗೂ ಅಂಕಣ ಬರೆಯುತ್ತಿದ್ದ ಎಚ್ ಎಸ್ ದೊರೆಸ್ವಾಮಿಯವರು 26 ಮೇ 2021ರಂದು ನಮ್ಮನ್ನಗಲಿದ್ದು. ಆದರೆ ಅವರ ಆದರ್ಶಗಳು ಮಾತ್ರ ನನ್ನಲ್ಲಿ ಅಂತರ್ಗತವಾಗಿವೆ.

ಸ್ವತಂತ್ರ ಮಾಧ್ಯಮಗಳನ್ನು ಬೃಹತ್ತಾಗಿ ಜನರ ಮಧ್ಯೆ ಬೆಳೆಸುವ ಅಗತ್ಯವಿದೆ. ’ಅವರ’ ತೆಕ್ಕೆಗೆ ಹೋಗಿರುವ ಮಾಧ್ಯಮವನ್ನು ’ನಮ್ಮ-ಜನರ’ ತೆಕ್ಕೆಗೆ ತೆಗೆದುಕೊಳ್ಳುವ ಕೆಲಸವಾಗಬೇಕಿದೆ. ಮಾಧ್ಯಮವು ಮೀಡಿಯಾ ಹೌಸ್ ಒಂದರಿಂದ ರೂಪು ತಳೆಯುವ ಸರಕಾಗುವುದರಿಂದ ಹೆಚ್ಚು ಪ್ರಯೋಜನವಿಲ್ಲ. ಅದು ’ಮಾಧ್ಯಮ ಆಂದೋಲನ’ದ ರೂಪ ತಳೆಯಬೇಕು.

ಅಂತಹ ಪ್ರಯತ್ನದ ಭಾಗವಾಗಿ ಬೃಹತ್ತಾದ ಬರಹಗಾರರ ಬಳಗವನ್ನು ಕಟ್ಟುವ ಯೋಜನೆಯನ್ನು ಮಾಡಲಾಗುತ್ತಿದೆ. ನ್ಯಾಯಪಥವು ನಿಮ್ಮೆಲ್ಲರನ್ನು ಅಂತಹ ಬರಹಗಾರರ ಬಳಗದ ಭಾಗವಾಗಲು ಆಹ್ವಾನಿಸುತ್ತದೆ. ನ್ಯಾಯಪಥ ಮತ್ತು ನಾನುಗೌರಿ ತಂಡದ ಪರವಾಗಿ


ಇದನ್ನೂ ಓದಿ: ಸೆಪ್ಟೆಂಬರ್‌ 5 ‘ಗೌರಿ ಲಂಕೇಶ್‌ ದಿನ’ ಎಂದು ಘೋಷಿಸಿದ ಕೆನಡಾದ ಬರ್ನಾಬಿ ನಗರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...