HomeLive Updatesರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

- Advertisement -
- Advertisement -

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು ಸದಾ ಭಯದಲ್ಲೇ ಬದುಕುವಂತಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಕೇವಲ ‘ಮೂಕ ಪ್ರೇಕ್ಷಕ’ನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಕಡಕ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ಪ್ರಕಟಿಸಿದೆ. ದೇಶದಲ್ಲಿ ಬೀದಿ ನಾಯಿಗಳ ಸಮಸ್ಯೆ ಇಷ್ಟೊಂದು ಭೀಕರ ರೂಪ ಪಡೆದುಕೊಳ್ಳಲು ಕಳೆದ ಹಲವು ವರ್ಷಗಳಿಂದ ‘ಪ್ರಾಣಿ ಜನನ ನಿಯಂತ್ರಣ’ (ABC) ನಿಯಮಾವಳಿಗಳನ್ನು ಸರಿಯಾಗಿ ಜಾರಿಗೊಳಿಸದಿರುವುದೇ ಕಾರಣ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

2001 ರಲ್ಲೇ ಈ ನಿಯಮಾವಳಿಗಳನ್ನು ತರಲಾಗಿದ್ದರೂ, ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ “ಸ್ಪಷ್ಟ ನಿರ್ಲಕ್ಷ್ಯ” ಎದ್ದು ಕಾಣುತ್ತಿದೆ ಎಂದು ಕೋರ್ಟ್ ಹೇಳಿದೆ. ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ (Sterilisation) ಮತ್ತು ಲಸಿಕೆ ಹಾಕುವ ಅಭಿಯಾನಗಳು ಕೇವಲ ಹೆಸರಿಗಷ್ಟೇ ಎಂಬಂತೆ ಅಲ್ಲೊಂದು ಇಲ್ಲೊಂದು ನಡೆದಿವೆಯೇ ವಿನಃ, ಅದಕ್ಕೊಂದು ಸಾಂಸ್ಥಿಕ ಗಾಂಭೀರ್ಯವೇ ಇರಲಿಲ್ಲ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಬದುಕುವ ಹಕ್ಕು ಮತ್ತು ಸಂವಿಧಾನದ ಆಶಯ

ಈ ಗಂಭೀರ ಸಮಸ್ಯೆಯನ್ನು ಸಂವಿಧಾನದ 21ನೇ ವಿಧಿಗೆ (ಜೀವಿಸುವ ಹಕ್ಕು) ನೇರವಾಗಿ ಲಿಂಕ್ ಮಾಡಿದ ಸುಪ್ರೀಂ ಕೋರ್ಟ್, “ಯಾವುದೇ ಭಯವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡುವುದು ಪ್ರತಿಯೊಬ್ಬ ನಾಗರಿಕನ ಬದುಕುವ ಹಕ್ಕಿನ ಭಾಗವಾಗಿದೆ” ಎಂದು ಸ್ಪಷ್ಟಪಡಿಸಿದೆ. “ಮಕ್ಕಳು ಮತ್ತು ವೃದ್ಧರು ತಮ್ಮ ದೈಹಿಕ ಶಕ್ತಿ ಅಥವಾ ಅದೃಷ್ಟದ ಮೇಲೆ ಬೀದಿಗಳಲ್ಲಿ ಬದುಕುಳಿಯಬೇಕಾದ ಸಮಾಜವನ್ನು ನಮ್ಮ ಸಂವಿಧಾನ ಖಂಡಿತವಾಗಿಯೂ ಆಶಿಸಿಲ್ಲ” ಎಂದು ಕೋರ್ಟ್ ಮಾರ್ಮಿಕವಾಗಿ ಹೇಳಿದೆ.

ಅಧಿಕಾರಿಗಳ ನಿರಂತರ ಉದಾಸೀನತೆಯ ವಿರುದ್ಧ ಎಚ್ಚರಿಕೆ ನೀಡಿರುವ ಕೋರ್ಟ್, ನ್ಯಾಯಾಲಯದ ನಿರ್ದೇಶನಗಳನ್ನು ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ನಿಯಮಾವಳಿಗಳನ್ನು ಪಾಲಿಸದಿದ್ದರೆ ಅದನ್ನು ‘ಕೋರ್ಟ್ ನಿಂದನೆ’ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಅಸಲಿಗೆ ಈ ಪ್ರಕರಣ ಶುರುವಾಗಿದ್ದು ಹೇಗೆ?

ಕಳೆದ ವರ್ಷ ಜುಲೈನಲ್ಲಿ ನವದೆಹಲಿಯಲ್ಲಿ 6 ವರ್ಷದ ಹೆಣ್ಣು ಮಗುವೊಂದು ಬೀದಿ ನಾಯಿ ಕಡಿತ ಮತ್ತು ರೇಬೀಸ್ ಸೋಂಕಿನಿಂದಾಗಿ ಸಾವನ್ನಪ್ಪಿದ ಘಟನೆಯನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ಕೈಗೆತ್ತಿಕೊಂಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ನಾಯಿ ದಾಳಿಗಳು ಮತ್ತು ರೇಬೀಸ್ ಸಾವುಗಳು ತೀವ್ರ ಆತಂಕಕಾರಿಯಾಗಿದ್ದು, ಇದು ಸಾರ್ವಜನಿಕ ಸುರಕ್ಷತೆಗೆ ಎದುರಾಗಿರುವ ದೊಡ್ಡ ಸವಾಲು ಎಂದು ಕೋರ್ಟ್ ಹೇಳಿತ್ತು.

ಮೊದಲಿಗೆ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು, ಆಗಸ್ಟ್ 2025 ರಲ್ಲಿ ದೆಹಲಿ-ಎನ್‌ಸಿಆರ್‌ನ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ (Shelters) ಸ್ಥಳಾಂತರಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿತ್ತು. ಜನಸಾಮಾನ್ಯರು ಭಯವಿಲ್ಲದೆ ತಿರುಗಾಡಲು ಅನುವಾಗುವಂತೆ, ಹಿಡಿದ ನಾಯಿಗಳನ್ನು ಮತ್ತೆ ರಸ್ತೆಗೆ ಬಿಡಬಾರದು ಎಂದೂ ಹೇಳಿತ್ತು.

ಪ್ರಾಣಿ ಪ್ರೇಮಿಗಳ ಪ್ರತಿಭಟನೆ ಮತ್ತು ಹಗ್ಗಜಗ್ಗಾಟ

ಆದರೆ, ಈ ಆದೇಶ ಹೊರಬೀಳುತ್ತಿದ್ದಂತೆಯೇ ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ನಾಯಿಗಳಿಗೆ ಆಹಾರ ಹಾಕುವವರು (Dog Feeders) ತೀವ್ರ ಪ್ರತಿಭಟನೆ ನಡೆಸಿದರು. ಇದು ‘ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು 2023’ ಕ್ಕೆ ವಿರುದ್ಧವಾಗಿದೆ ಎಂದು ಅವರು ವಾದಿಸಿದರು. ನಿಯಮಗಳ ಪ್ರಕಾರ, ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ನೀಡಿದ ಬಳಿಕ ಅವುಗಳನ್ನು ಎಲ್ಲಿಂದ ಹಿಡಿಯಲಾಗಿತ್ತೋ ಅದೇ ಜಾಗಕ್ಕೆ ತಂದು ಬಿಡಬೇಕು.

ಹೀಗಾಗಿ ಈ ಆದೇಶವನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾದವು. ಅಂತಿಮವಾಗಿ ಈ ಪ್ರಕರಣ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ವಿಸ್ತೃತ ಪೀಠದ ಮುಂದೆ ಬಂದಿತು. ಆಗ ಕೋರ್ಟ್ ತನ್ನ ಹಿಂದಿನ ಕಠಿಣ ಆದೇಶವನ್ನು ಕೊಂಚ ಸಡಿಲಗೊಳಿಸಿ, ಹಳೆಯ ಸಂತಾನಹರಣ ಚಿಕಿತ್ಸೆ ಮತ್ತು ಅದೇ ಜಾಗಕ್ಕೆ ಬಿಡುವ (ABC) ನಿಯಮವನ್ನು ಮರುಸ್ಥಾಪಿಸಿತು. ಆದರೆ, ರೇಬೀಸ್ ಪೀಡಿತ ಅಥವಾ ಅತಿಯಾದ ಆಕ್ರಮಣಕಾರಿ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇರಿಸಲು ಅನುಮತಿ ನೀಡಿತು. ಇದೇ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ನಿಗದಿಪಡಿಸಿದ ವಲಯಗಳನ್ನು ಹೊರತುಪಡಿಸಿ ಬೇರೆಡೆ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಕೋರ್ಟ್ ನಿಷೇಧಿಸಿತು.

ಸಾರ್ವಜನಿಕರು ಮತ್ತು ಸಂತ್ರಸ್ತರ ವಾದ:

ಶಾಲೆಗಳು, ಆಸ್ಪತ್ರೆಗಳು ಮತ್ತು ವಸತಿ ಬಡಾವಣೆಗಳ ಬಳಿ ನಾಯಿಗಳ ದಾಳಿ ಮಿತಿಮೀರಿದೆ. ಮಕ್ಕಳು ಮತ್ತು ವೃದ್ಧರು ನಿರಂತರವಾಗಿ ದಾಳಿಗೆ ಒಳಗಾಗುತ್ತಿರುವಾಗ, ಇದನ್ನು ಕೇವಲ ‘ಪ್ರಾಣಿ ಕಲ್ಯಾಣ’ದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಇದು ಜನರ ಪ್ರಾಣದ ಪ್ರಶ್ನೆ ಎಂದು ಸಂತ್ರಸ್ತರ ಕುಟುಂಬಗಳು ವಾದಿಸಿದವು.

ಪ್ರಾಣಿ ಕಲ್ಯಾಣ ಸಂಸ್ಥೆಗಳ ವಾದ:

ನಾಯಿಗಳನ್ನು ಸಾಮೂಹಿಕವಾಗಿ ರಸ್ತೆಗಳಿಂದ ಒಕ್ಕಲೆಬ್ಬಿಸುವುದು ಶಾಶ್ವತ ಪರಿಹಾರವಲ್ಲ. ನಾಯಿಗಳು ತಮ್ಮದೇ ಆದ ಪ್ರಾದೇಶಿಕ ವಲಯವನ್ನು (Territory) ಹೊಂದಿರುತ್ತವೆ. ಒಂದು ಪ್ರದೇಶದಿಂದ ನಾಯಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದರೆ, ಲಸಿಕೆ ಪಡೆಯದ ಬೇರೆ ನಾಯಿಗಳು ಆ ಜಾಗಕ್ಕೆ ಬಂದು ಸೇರುತ್ತವೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂಬುದು ಇವರ ವಾದವಾಗಿತ್ತು.

ಬಳಿಕ ಈ ವಿಚಾರಣೆ ಮತ್ತಷ್ಟು ವಿಸ್ತಾರಗೊಂಡು, ದೇಶಾದ್ಯಂತ ಪಾಲಿಕೆಗಳು ಮತ್ತು ರಾಜ್ಯ ಸರ್ಕಾರಗಳು ಲಸಿಕೆ ಮತ್ತು ಆಶ್ರಯ ತಾಣಗಳ ನೀತಿಯನ್ನು ಹೇಗೆ ಜಾರಿಗೊಳಿಸುತ್ತಿವೆ ಎಂಬ ಪರಾಮರ್ಶೆಗೆ ತಿರುಗಿತು. ನವೆಂಬರ್ 2025 ರಲ್ಲಿ ಮಧ್ಯಂತರ ಆದೇಶ ನೀಡಿದ್ದ ಕೋರ್ಟ್, ಹೆದ್ದಾರಿಗಳು, ಶಾಲೆ ಮತ್ತು ಆಸ್ಪತ್ರೆಗಳ ಆವರಣದಿಂದ ಬೀದಿ ಪ್ರಾಣಿಗಳನ್ನು ತೆರವುಗೊಳಿಸಲು ಮತ್ತು ಅಂತಹ ಜಾಗಗಳಿಗೆ ಬೇಲಿ ಹಾಕಲು ಆದೇಶಿಸಿತ್ತು.

ಸುಪ್ರೀಂ ಕೋರ್ಟ್ ಈಗ ನೀಡಿರುವ ಪ್ರಮುಖ ನಿರ್ದೇಶನಗಳು:
  1. ಪ್ರತಿ ಜಿಲ್ಲೆಯಲ್ಲೂ ಕೇಂದ್ರ: ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಸುಸಜ್ಜಿತ ‘ಪ್ರಾಣಿ ಜನನ ನಿಯಂತ್ರಣ’ (ABC) ಕೇಂದ್ರವನ್ನು ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳು ಈ ಮೂಲಸೌಕರ್ಯವನ್ನು ವಿಸ್ತರಿಸಬೇಕು.
  2. ಲಸಿಕೆ ಮತ್ತು ಔಷಧಿ ಲಭ್ಯತೆ: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ವಿರೋಧಿ ಲಸಿಕೆಗಳು ಮತ್ತು ಔಷಧಿಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು.
  3. ಹೆದ್ದಾರಿಗಳ ನಿರ್ವಹಣೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಜ್ಯಗಳು ಹೆದ್ದಾರಿಗಳಲ್ಲಿ ಅಡ್ಡಬರುವ ಪ್ರಾಣಿಗಳ ನಿಯಂತ್ರಣಕ್ಕೆ ಪ್ರತ್ಯೇಕ ವ್ಯವಸ್ಥೆ, ವಾಹನಗಳು ಮತ್ತು ಶೆಲ್ಟರ್‌ಗಳನ್ನು ಸಿದ್ಧಪಡಿಸಬೇಕು.
  4. ದಯಾಮರಣಕ್ಕೆ ಅನುಮತಿ: ರೇಬೀಸ್ ರೋಗ ಬಂದಿರುವ, ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿರುವ ಅಥವಾ ಮನುಷ್ಯರ ಪ್ರಾಣಕ್ಕೆ ತೀವ್ರ ಅಪಾಯಕಾರಿಯಾಗಿರುವ ಅತಿ ಆಕ್ರಮಣಕಾರಿ ನಾಯಿಗಳಿಗೆ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ABC ನಿಯಮಗಳ ಅಡಿಯಲ್ಲಿ ಕಾನೂನುಬದ್ಧವಾಗಿ ‘ದಯಾಮರಣ’ (Euthanasia) ನೀಡಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.
  5. ಹೈಕೋರ್ಟ್‌ಗಳಿಗೆ ನಿಗಾ ಜವಾಬ್ದಾರಿ: ಸುಪ್ರೀಂ ಕೋರ್ಟ್ ನೀಡಿರುವ ಈ ಎಲ್ಲಾ ನಿರ್ದೇಶನಗಳು ಸರಿಯಾಗಿ ಜಾರಿಯಾಗುತ್ತಿವೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ದೇಶದ ಎಲ್ಲಾ ಹೈಕೋರ್ಟ್‌ಗಳು ಸ್ವಯಂಪ್ರೇರಿತವಾಗಿ ನಿರಂತರ ಪ್ರಕ್ರಿಯೆಯನ್ನು (Suo motu continuing proceedings) ದಾಖಲಿಸಿಕೊಳ್ಳಬೇಕು ಎಂದು ಆದೇಶಿಸಿದೆ.
ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು ಏನು ಹೇಳುತ್ತವೆ?

ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಅಡಿಯಲ್ಲಿ ರೂಪಿಸಲಾದ ‘ABC ನಿಯಮಗಳು 2023’, ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ಮತ್ತು ರೇಬೀಸ್ ವಿರೋಧಿ ಲಸಿಕೆಯನ್ನು ಪ್ರಮುಖ ಅಸ್ತ್ರವೆಂದು ಪರಿಗಣಿಸುತ್ತದೆ. ನಾಯಿಗಳು ತಮ್ಮದೇ ಆದ ಸ್ವಭಾವವನ್ನು ಹೊಂದಿರುವುದರಿಂದ ಚಿಕಿತ್ಸೆಯ ನಂತರ ಅವುಗಳನ್ನು ಅದೇ ಜಾಗಕ್ಕೆ ಬಿಡಬೇಕು ಎಂದು ಈ ನಿಯಮ ಹೇಳುತ್ತದೆ. ನಾಯಿಗಳನ್ನು ಬೇಕಾಬಿಟ್ಟಿ ಕೊಲ್ಲುವುದಕ್ಕೆ ಅಥವಾ ಬೇರೆಡೆಗೆ ಸಾಗಿಸುವುದಕ್ಕೆ ಇದರಲ್ಲಿ ಅವಕಾಶವಿಲ್ಲ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ದಯಾಮರಣಕ್ಕೆ ಅವಕಾಶವಿದೆ.

ಈ ಪ್ರಕರಣದಲ್ಲಿ ಒಂದು ಕಡೆ ಸಂವಿಧಾನದ 51A(g) ವಿಧಿಯ ಪ್ರಕಾರ ಪ್ರಾಣಿಗಳ ಮೇಲಿನ ‘ದಯೆ-ಕರುಣೆ’ಯ ವಾದವಿದ್ದರೆ, ಮತ್ತೊಂದೆಡೆ ನಾಗರಿಕರ ಬದುಕುವ ಮತ್ತು ಮುಕ್ತವಾಗಿ ಸಂಚರಿಸುವ ಹಕ್ಕಿನ (ವಿಧಿ 19 ಮತ್ತು 21) ಪ್ರಶ್ನೆಯಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್, ಪ್ರಾಣಿ ಪ್ರೇಮದ ಹೆಸರಿನಲ್ಲಿ ಜನರ, ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರ ಪ್ರಾಣವನ್ನು ಪಣಕ್ಕಿಡಲು ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪಿನ ಮೂಲಕ ಸ್ಪಷ್ಟಪಡಿಸಿದೆ.

ಸೋರ್ಸ್‌: TIE

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...