ಮಹಿಳೆಯೊಬ್ಬಳನ್ನು ಆಕೆಯ 5 ತಿಂಗಳು ಪ್ರಾಯದ ಮಗುವಿಗೆ ಹಾಲುಣಿಸಲು ಚಹಾ ಅಂಗಡಿಯಿಂದ ಹಾಲು ತೆಗೆದುಕೊಂಡು ಹಣ ಕೊಡದೇ ಬಂದಿದ್ದಕ್ಕೆ ಅಂಗಡಿ ಮಾಲಿಕ ಬರ್ಬರವಾಗಿ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಸಾಗರ್ ನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆದಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡು ಮೂವರನ್ನು ಬಂಧಿಸಿದ್ದಾರೆ.
ಈ ಘಟನೆಯ ವೀಡಿಯೋ ವೈರಲ್ ಆದ ಬಳಿಕ ಸಾಗರ್ನ ಗೋಪಾಲಗಂಜ್ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರವೀಣ್ ರಾಯ್ಕರ್ (26), ವಿಕ್ಕಿ ಯಾದವ್ (20) ಮತ್ತು ರಾಕೇಶ್ ಪ್ರಜಾಪತಿ (40) ಎಂದು ಗುರುತಿಸಲಾಗಿದೆ. ಬಂಧಿತರನ್ನು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಹಿಳೆಯೊಬ್ಬಳನ್ನು ಆಕೆಯ 5 ತಿಂಗಳು ಪ್ರಾಯದ ಮಗು ಮಲಗಿರುವಾಗಲೇ ಅಲ್ಲಿನ ಬಸ್ ನಿಲ್ದಾಣ ಪ್ರದೇಶದಲ್ಲಿ ಬರ್ಬರವಾಗಿ ಥಳಿಸಿ ಎಳೆದೊಯ್ಯುತ್ತಿರುವ ವೀಡಿಯೋ ಒಂದು ವೈರಲ್ ಆದ ಬೆನ್ನಿಗೇ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಈ ಮಹಿಳೆ ಮಾನಸಿಕ ಅಸ್ವಸ್ಥತೆ ಹೊಂದಿದ್ದಾಳೆ ಎಂದು ತಿಳಿದುಬಂದಿದೆ. ಆಕೆಗೆ ಕೋಲಿನಿಂದ ಹೊಡೆದು ಆಕೆಯ ಮುಖಕ್ಕೆ ಒದೆಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಈ ಘಟನೆ ಆಗಸ್ಟ್ 12-13ರ ರಾತ್ರಿ ನಡೆದಿತ್ತು. ಮಧ್ಯವಯಸ್ಕ ಮಹಿಳೆ ಬಸ್ ನಿಲ್ದಾಣದ ಕ್ಯಾಂಟೀನಿಗೆ ಹಾಲು ಖರೀದಿಸಲೆಂದು ಹೋದಾಗ ಈ ವ್ಯಕ್ತಿಗಳು ಆಕೆಯನ್ನು ಥಳಿಸಿದ್ದರು. ಆಗ ಆಕೆ ಅವರ ಬಳಿ ”ಭೈಯ್ಯಾ, ಭೈಯ್ಯಾ” ಎನ್ನುತ್ತಾ ಹೊಡೆಯದಂತೆ ಗೋಗರೆಯುತ್ತಿರುವುದು ಹಾಗೂ ಆಕೆಯ ಮಗು ನೆಲದಲ್ಲಿ ಮಲಗಿರುವುದು ಕಾಣಿಸುತ್ತದೆ. ಸುತ್ತಲಿದ್ದ ಜನರು ಆಕೆಗೆ ಹೊಡೆಯದಂತೆ ಆರೋಪಿಗಳಿಗೆ ಸೂಚಿಸುತ್ತಿರುವುದೂ ಕಾಣಿಸುತ್ತದೆ.
ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.