Homeಮುಖಪುಟ’ಇವ ನಮ್ಮವ’ ಪರಂಪರೆ ನಮ್ಮದು: ನಿಜ ಆಧ್ಯಾತ್ಮಿಕ ಮಠಾಧೀಶರ ಮನದಾಳದ ಮಾತು

’ಇವ ನಮ್ಮವ’ ಪರಂಪರೆ ನಮ್ಮದು: ನಿಜ ಆಧ್ಯಾತ್ಮಿಕ ಮಠಾಧೀಶರ ಮನದಾಳದ ಮಾತು

- Advertisement -
- Advertisement -

ಧರ್ಮದ ಹೆಸರಿನಲ್ಲಿ ನಿತ್ಯವೂ ಜನರನ್ನು ಒಡೆಯುತ್ತಿರುವ ಘಟನೆಗಳು ಸಾಲುಸಾಲಾಗಿ ನಡೆಯುತ್ತಿವೆ. ಸಂವಿಧಾನ ವಿರೋಧಿ ಶಕ್ತಿಗಳು ಬಹುತ್ವ ಭಾರತವನ್ನು ನಿರ್ನಾಮ ಮಾಡುವತ್ತ ಹೆಜ್ಜೆ ಇರಿಸಿರುವುದು ಸ್ಪಷ್ಟವಾಗತೊಡಗಿದೆ. ದ್ವೇಷ ಬಿತ್ತುವುದು, ಒಂದು ಜನಾಂಗಕ್ಕೆ ವ್ಯಾಪಾರವನ್ನು ನಿರ್ಬಂಧಿಸುವುದು ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ ಲಕ್ಷಣಗಳು. ಇಂತಹ ಪ್ರವೃತ್ತಿಗಳಿಗೆ ಆರಂಭದಲ್ಲೇ ಕಡಿವಾಣ ಹಾಕದಿದ್ದರೆ ನಿಜದ ಭಾರತ ಕಣ್ಮರೆಯಾಗುವ ಆತಂಕ ಎದುರಾಗಿದೆ. ನಿಜ ಆಧ್ಯಾತ್ಮಿಕ ಪರಂಪರೆ ಕಣ್ಮರೆಯಾಗಿ, ಮತ ದ್ವೇಷದಿಂದ ಅಪಾರ ಸಾವು, ನೋವಿನ ಮುನ್ಸೂಚನೆಗಳು ಕಾಣತೊಡಗಿವೆ.

ಚುನಾವಣೆಗಳು ಬರುತ್ತವೆ, ಚುನಾವಣೆಗಳು ಹೋಗುತ್ತವೆ. ಆದರೆ ಇಂತಹ ಮತೀಯ ಶಕ್ತಿಗಳಿಗೆ ಸರ್ಕಾರ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬೆಂಬಲ ನೀಡುವುದು ಅಕ್ಷಮ್ಯ. ಒಂದು ಜನಾಂಗದ ಮೇಲೆ ದ್ವೇಷ ಸಾಧಿಸು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಕಾಲಧರ್ಮದ ಕಾರಣಕ್ಕೆ ಅಂತಹದ್ದು ಎಲ್ಲಾದರೂ ದಾಖಲೆಯಾಗಿದ್ದರೂ ಅದನ್ನು ಮೀರಿ ಭ್ರಾತೃತ್ವವನ್ನು, ಪ್ರೀತಿಯನ್ನು ಹಂಚುವತ್ತ ಧರ್ಮ ಬೆಳೆಯಬೇಕು. ಆ ನಿಟ್ಟಿನಲ್ಲಿ ಎಷ್ಟೋ ಧರ್ಮ ಸುಧಾರಕರು ಬಂದುಹೋಗಿದ್ದಾರೆ. ಮತ್ತು ಯಾವುದೇ ಮತಧರ್ಮಗಳ ಚೌಕಟ್ಟಿನಲ್ಲಿ ಅಂತಹ ಸುಧಾರಣೆಗಳನ್ನು-ಸುಧಾರಕರನ್ನು ಗುರುತಿಸಬಹುದಾಗಿದೆ. ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರು ದೇಶಪ್ರೇಮಿಗಳೂ ಅಲ್ಲ, ಧರ್ಮ ಪಾಲಕರೂ ಅಲ್ಲ. ರಾಜಕೀಯ ಅಜೆಂಡಾಗಳಷ್ಟೇ ಅವರಿಗೆ ಮುಖ್ಯ. ಯಥಾಸ್ಥಿತಿವಾದವೇ ಅವರ ಸಿದ್ಧಾಂತ. ಆದರೆ ಈ ಜಾತ್ಯತೀತ ಭಾರತವನ್ನು ಒಡೆದು ಹಾಕುವುದು ಅಷ್ಟು ಸುಲಭವಲ್ಲ ಎಂದು ನಂಬಿರುವ ಧರ್ಮಗಳ ಸಾರವನ್ನು ತಿಳಿದಿರುವ, ಧರ್ಮಗಳ ಉದಾತ್ತತೆಯನ್ನು ಪ್ರತಿಪಾದಿಸುವ ಮನಸ್ಸುಗಳು, ಇಂದಿನ ದ್ವೇಷದ ವಾತಾವರಣವನ್ನು ವಿರೋಧಿಸಿ ಪ್ರತಿಕ್ರಿಯೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿರುವ ನಿಜ ಆಧ್ಯಾತ್ಮಿಕ ಪರಂಪರೆಯ ವಿವಿಧ ಮಠಗಳ ಸ್ವಾಮೀಜಿಗಳು ಸಾಂವಿಧಾನಿಕತೆ, ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಜಾತ್ಯತೀತತೆಯ ಕುರಿತು ಜಾಗೃತಿ ಮೂಡಿಸುವ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿಚ್ಛಿದ್ರಕಾರಿ ಬೆಳವಣಿಗೆಗಳನ್ನು ಮಟ್ಟಹಾಕುವಂತೆ ಜನಸಮುದಾಯಕ್ಕೆ ಕರೆ ನೀಡಿದ್ದಾರೆ. ಯಾವ ದಿಕ್ಕಿನಲ್ಲಿ ಸಮಾಜ ಸಾಗಬೇಕೆಂಬ ಮಾರ್ಗದರ್ಶನವನ್ನು ನೀಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ, ಕುವೆಂಪು ರೀತಿಯ ಮಹನೀಯರು ಕಟ್ಟಿದ ’ಸರ್ವಜನಾಂಗದ ಶಾಂತಿಯ ತೋಟ’ದ ಉಳಿವಿಗಾಗಿ ದನಿ ಎತ್ತಿದ್ದಾರೆ.

******

ಸ್ವಾಮೀಜಿಗಳಾದವರು ಸಮಾಜದಲ್ಲಿ ತಾರತಮ್ಯ ಮಾಡುವುದಿಲ್ಲ: ಸಿದ್ಧರಾಮ ಸ್ವಾಮೀಜಿ

“ಶಾಂತಿ ಸೌಹಾರ್ದತೆಯನ್ನು ಎಲ್ಲರೂ ಕಾಯ್ದುಕೊಂಡು ಹೋಗಬೇಕು. ಪ್ರೀತಿಯಿಂದ ವರ್ತಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ದ್ವೇಷದಿಂದಾಗಿ ಮನುಷ್ಯ ಶಾಂತಿ, ಸಮಾಧಾನ ಕಳೆದುಕೊಳ್ಳುತ್ತಾನೆ. ದ್ವೇಷ, ಅಸೂಯೆಯನ್ನು ಬಿಟ್ಟು ಸೌಹಾರ್ದತೆಯಿಂದ, ಭ್ರಾತೃತ್ವ ಭಾವನೆಯಿಂದ ವರ್ತಿಸಿದಾಗ ಶಾಂತಿ ದೊರಕುತ್ತದೆ” ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಎಂದು ತಿಳಿಸಿದರು.

“ದ್ವೇಷ ಸೃಷ್ಟಿಸುವ ಶಕ್ತಿಗಳನ್ನು ತಡೆಯುವ ಕೆಲಸ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಜನಾಂಗೀಯ ತಾರತಮ್ಯವನ್ನು ಅಧಿಕಾರಕ್ಕಾಗಿ ಬಳಸಬಾರದು, ಚುನಾವಣೆಯ ವಿಷಯವಾಗಿಸಬಾರದು” ಎಂದು ಅವರು ಹೇಳಿದರು.

ಸಿದ್ಧರಾಮ ಸ್ವಾಮೀಜಿ

ಮುಂದುವರೆದು “ಸಂವಿಧಾನಕ್ಕೆ ಎಲ್ಲರೂ ಬೆಲೆ ಕೊಡಬೇಕು. ಸಂವಿಧಾನದ ಪ್ರಕಾರ ಸೇವೆ ಸಲ್ಲಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದವರು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು” ಎನ್ನುತ್ತಾರೆ.

“ನಮ್ಮ ಲಿಂಗಾಯತ ಮಠಗಳು ಕೋಮು ಸೌಹಾರ್ದತೆಗೆ ಹೆಸರಾಗಿವೆ” ಎಂದ ಸಿದ್ಧರಾಮ ಸ್ವಾಮಿಗಳು, “ಎಲ್ಲ ಸಮುದಾಯಗಳು, ಸಮಾನ ಭಾವದಿಂದ ನಮ್ಮ ಮಠಗಳಲ್ಲಿ ಪಾಲ್ಗೊಳ್ಳುತ್ತಾರೆ. ದಾಸೋಹಕ್ಕೆ, ಕೋಮುಸೌಹಾರ್ದತೆಗೆ ಲಿಂಗಾಯತ ಮಠಗಳು ಹೆಸರಾಗಿವೆ. ’ಇವನಾರವ ಎನ್ನದೆ ಇವ ನಮ್ಮವ ಎನ್ನುವ’ ಪರಂಪರೆ ನಮ್ಮದು” ಎಂದು ತಿಳಿಸಿದರು.

“ಬೇರೆ ದೇಶಗಳಲ್ಲಿರುವ ಹಿಂದೂಗಳಿಗೆ ಇದೇ ರೀತಿಯಲ್ಲಿ ಧಕ್ಕೆಯಾದರೆ ಇವರು ಏನು ಮಾಡುತ್ತಾರೆ? ಬೆಳಗಾವಿಯಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆಂದು ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಅಡ್ಡಿಪಡಿಸಿದ್ದನ್ನು ನೋಡಿದ್ದೇವೆ. ಹೀಗಾಗಿ ಸಮಾಜದಲ್ಲಿ ಸಂಘರ್ಷ ಇರಬಾರದು” ಎಂದು ಎಚ್ಚರಿಸಿದರು.

ಕಾವಿ ವೇಷದಲ್ಲಿರುವ, ಸ್ವಾಮೀಜಿಗಳೆನಿಸಿಕೊಂಡಿರುವ ಕೆಲವರು ದ್ವೇಷ ಭಾಷಣ ಮಾಡುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮ ಸ್ವಾಮೀಜಿಯವರು, “ಅಂಥವರನ್ನು ಸ್ವಾಮೀಜಿಗಳು ಎಂದು ಹೇಗೆ ಅನ್ನುತ್ತೀರಿ? ಸಮಾಜದಲ್ಲಿ ಕಲಹ ಉಂಟುಮಾಡೋರು ಸ್ವಾಮೀಜಿಗಳು ಹೇಗಾಗುತ್ತಾರೆ? ಎಲ್ಲರನ್ನು ಸಮಾನವಾಗಿ ಕಾಣುವವರು, ಎಲ್ಲರಿಗೂ ಪ್ರೀತಿಯನ್ನು ಹಂಚುವವರು ಸ್ವಾಮೀಜಿಗಳು. ಕೆಲವರಿಗೆ ಪ್ರೀತಿ, ಕೆಲವರಿಗೆ ದ್ವೇಷ ನೀಡೋರು ಸ್ವಾಮೀಜಿಗಳೇ ಅಲ್ಲ ಎಂದು ಸ್ಪಷ್ಟಪಡಿಸಿದರು.

“ಸರ್ಕಾರ, ಸಮಾಜ ವಿರೋಧಿ ಕೃತ್ಯಗಳಿಗೆ ಪ್ರತಿಬಂಧ ಹೇರಬೇಕು. ಜನರಿಗೆ ಉದ್ಯೋಗ ನೀಡಬೇಕು. ಕೆಲಸಗಳು ಇಲ್ಲದಿದ್ದಾಗ ಮನಸ್ಸು ಇಂತಹ ಕೃತ್ಯಗಳಲ್ಲಿ ತೊಡಗುತ್ತದೆ” ಎಂದು ಅಭಿಪ್ರಾಯಪಟ್ಟರು.

******

’ಇವ ನಮ್ಮವ, ಇವ ನಮ್ಮವ’ ಪರಂಪರೆ ನಮ್ಮದು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

“ಕರ್ನಾಟಕ ಶಾಂತಿಯ ತವರೂರು. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. 12ನೇ ಶತಮಾನದ ಶರಣರು ಸಾಮರಸ್ಯ ಮೂಡಿಸುವ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜನರನ್ನು ಒಂದು ಕಡೆ ಸೇರಿಸಿದರು. ’ಇವನಾರವ, ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ’ ಎನ್ನುತ್ತಾ ಸಂಘಟನೆ ಮಾಡಿದರು” ಎನ್ನುತ್ತಾರೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

“ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಥರದ ದೊಡ್ಡ ಪರಂಪರೆಯೇ ನಮ್ಮ ಹಿಂದೆ ಇದೆ. ಆದರೆ ಇತ್ತೀಚಿನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು ಜನಾಂಗ ಜನಾಂಗಗಳಲ್ಲಿ ವಿಷ ಬೀಜ ಬಿತ್ತಿವೆ. ಇದರಲ್ಲಿ ಎರಡೂ ಕಡೆಯ ಪಟ್ಟಭದ್ರರ ಸಂಚು ಇರುವುದನ್ನು ನಾವು ಮರೆಯುವಂತಿಲ್ಲ. ಯಾರೇ ತಪ್ಪು ಮಾಡಿದರೂ ಆಯಾ ಜನಾಂಗದವರು ನಿಷ್ಠುರವಾಗಿ, ನೇರವಾಗಿ ಹೇಳುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನೆತನದವನು, ನಮ್ಮ ಜನಾಂಗದವನು, ನಮ್ಮ ಬಂಧು, ಅವನು ಏನೇ ತಪ್ಪು ಮಾಡಿದರೂ ನಡೆಯುತ್ತದೆ, ಅವನಿಗೆ ಬೆಂಬಲಿಸಬೇಕು ಎಂಬ ಮನಸ್ಥಿತಿಯಿಂದ ಮೊದಲು ಹೊರಬರಬೇಕು. ಅಂಥವರಿಗೆ ಸರಿಯಾದ ತಿಳಿವಳಿಕೆ ನೀಡಿ ಪರಿವರ್ತನೆ ಮಾಡುವ ಕೆಲಸ ಎರಡು ವರ್ಗಗಳಲ್ಲೂ ನಡೆಯಬೇಕು” ಎನ್ನುತ್ತಾರೆ ಶಿವಾಚಾರ್ಯರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

“ಈ ನಾಡಿನಲ್ಲಿ ಎಲ್ಲಾ ವರ್ಗದ ಜನರೂ ಇದ್ದಾರೆ. ಒಬ್ಬೊಬ್ಬರು ಒಂದೊಂದು ಉದ್ಯೋಗವನ್ನು ಮಾಡುತ್ತಾ ಬಂದಿದ್ದಾರೆ. ಬಟ್ಟೆ ಹೊಲೆಯೋನೇ ಬೇರೆ, ಕ್ಷೌರ ಮಾಡೋರೋ ಬೇರೆ, ವ್ಯವಸಾಯ ಮಾಡೋರೇ ಬೇರೆ… ವೃತ್ತಿಯನ್ನು ಜಾತಿಯ ದೃಷ್ಟಿಯಲ್ಲಿ ನೋಡಲು ಸಾಧ್ಯವಿಲ್ಲ. ಆದರೆ ಈಗ ಆ ವೃತ್ತಿಗೂ ಜಾತಿಗೂ ಸಂಪರ್ಕವನ್ನು ಕಲ್ಪಿಸಿ ಸಮಾಜದಲ್ಲಿ ಕೋಲಾಹಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಜನರ ಮನಸ್ಸನ್ನು ಪರಿವರ್ತನೆ ಮಾಡಿ, ಒಗ್ಗಟ್ಟಾಗಿ ಹೋಗಬೇಕಾದ ತುರ್ತು ಅಗತ್ಯವಿದೆ” ಎನ್ನುತ್ತಾರೆ.

“ನಾವೆಲ್ಲ ವಿಜ್ಞಾನ, ವೈಚಾರಿಕ, ತಂತ್ರಜ್ಞಾನ ಯುಗದಲ್ಲಿ ಇದ್ದೇವೆ. ಬಹಿಷ್ಕಾರ ಹಾಕೋದು, ದೂರ ಇಡುವುದು ಅಮಾನವೀಯ. ಈ ರೀತಿ ಕೃತ್ಯಗಳು ಯಾವ ಜನಾಂಗದಲ್ಲೂ ನಡೆಯಬಾರದು ಎಂದು ಎರಡೂ ವರ್ಗದ ಜನರಿಗೆ ತಿಳಿಸಬೇಕು. ನಮಗೆ ಬೇಕಾಗಿರುವುದು ಘರ್ಷಣೆಯಲ್ಲ. ಶಾಂತಿ, ಸಮಾಧಾನ, ಸಂಘಟನೆ” ಎಂದು ತಿಳಿಹೇಳಿದರು.

******

ಚುನಾವಣೆಯೇ ಪ್ರಜಾಪ್ರಭುತ್ವದ ನಿರ್ಣಾಯಕ ಯುದ್ಧ: ಜ್ಞಾನಪ್ರಕಾಶ ಸ್ವಾಮೀಜಿ

“ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆದರ್ಶಗಳನ್ನು ಧೂಳಿಪಟ ಮಾಡಿ ವಸ್ತ್ರದ ಹೆಸರಲ್ಲಿ, ಆಹಾರದ ಹೆಸರಲ್ಲಿ, ಧರ್ಮದ ಹೆಸರಲ್ಲಿ ದೇಶವನ್ನು ನುಚ್ಚುನೂರು ಮಾಡುವ ಕೋಮುಶಕ್ತಿಗಳು ದೇಶದಾದ್ಯಂತ ಬೀಡುಬಿಟ್ಟಿವೆ. ಇಂತಹ ಪ್ರಕ್ಷುಬ್ಧತೆಯಲ್ಲಿ ಭಾರತದ ಅಖಂಡತೆ ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ” ಎನ್ನುತ್ತಾರೆ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ.

“ಧರ್ಮಕ್ಕಿಂತ ದೇಶ ಮುಖ್ಯ. ದೇಶವಿಲ್ಲದಿದ್ದರೆ ಯಾವುದೇ ಜಾತಿ, ಧರ್ಮಗಳಿಂದ ಪ್ರಯೋಜನವಾಗದು ಎಂಬ ಜಾಗೃತಿಯನ್ನು ಮೂಡಿಸುವ ಕೆಲಸ ಜರೂರಾಗಿ ಆಗಬೇಕಿದೆ. ಅಡುಗೆ ಮನೆಯಲ್ಲಿರಬೇಕಾದ ಮಾಂಸ, ಇಂದು ಬೀದಿಗೆ ಬಂದಿದೆ. ವಸ್ತ್ರದ ಹೆಸರಲ್ಲಿ ಇಡೀ ದೇಶವನ್ನೇ ನಾಶ ಮಾಡುತ್ತಿದ್ದಾರೆ. ಮತಬ್ಯಾಂಕ್ ರಾಜಕಾರಣದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ನಿಷ್ಕ್ರಿಯವಾಗಿವೆ. ಭಾರತದ ಬಹುತ್ವವನ್ನು ಕಾಪಾಡಬೇಕು; ತಮಟೆ ಭಾರಿಸಿದರೆ, ಕರಪತ್ರ ಹಂಚಿದರೆ, ಮನವಿಗಳನ್ನು ಕೊಟ್ಟರೆ ಸಾಲದು. ಪ್ರಜಾಪ್ರಭುತ್ವದ ಮೂರು ಅಂಗಗಳನ್ನೂ ಅವರ ಕೈಗೆ ಕೊಟ್ಟುಬಿಟ್ಟಿದ್ದೇವೆ. ಈಗ ಅವರು ಒದೆಯುತ್ತಿದ್ದಾರೆ ಎಂದರೆ ನಗೆಪಾಟಲಿನ ವಿಷಯ. ನಾವು ಇಡೀ ಮೈದಾನವನ್ನೇ ಖಾಲಿ ಮಾಡಿರುವುದರಿಂದ ಅವರು ಗೇಮ್ ಶುರುಮಾಡಿದ್ದಾರೆ” ಎಂದು ವಿಶ್ಲೇಷಿಸಿದರು.

“ಚುನಾವಣೆಗಳೇ ಪ್ರಜಾಪ್ರಭುತ್ವದ ನಿರ್ಣಾಯಕ ಯುದ್ಧ. ಇದನ್ನು ಎದುರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಮತೀಯ ಶಕ್ತಿಗಳು ಇಡೀ ಸಂಪತ್ತನ್ನು, ಸಂಪನ್ಮೂಲವನ್ನು ವೃದ್ಧಿ ಮಾಡಿಕೊಂಡು ಉಳ್ಳವರಿಗೆ ದೇಶವನ್ನು ಮಾರಾಟ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಹಿಜಾಬ್, ಹಲಾಲ್ ಎಂದು ವಿಷಬೀಜ ಬಿತ್ತಲಾಗುತ್ತಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಕುವೆಂಪು, ಬುದ್ಧ, ಬಸವಣ್ಣ, ಬಾಬಾ ಸಾಹೇಬರ ಆಶಯಗಳನ್ನು ಉಳಿಸುವುದಕ್ಕಾಗಿ ಹಳ್ಳಿಹಳ್ಳಿಗಳಲ್ಲಿ ಮತಜಾಗೃತಿ ಅಭಿಯಾನವನ್ನು ಶುರುಮಾಡಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ಜ್ಞಾನಪ್ರಕಾಶ ಸ್ವಾಮೀಜಿ

“ಈ ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಒಬ್ಬರ ಕೈಗೆ ಸಿಲುಕಿಕೊಂಡರೆ ಇಡೀ ದೇಶ ಸರ್ವನಾಶವಾಗುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಅದು ನಿಜವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷಣ, ವಿಚಾರಸಂಕಿರಣ ಮಾಡಿದರೆ ಪ್ರಯೋಜನವಿಲ್ಲ. ಹಳ್ಳಿಹಳ್ಳಿಗಳಲ್ಲಿ ಬೀಡುಬಿಡಬೇಕಾಗಿದೆ” ಎಂದು ಸಲಹೆ ನೀಡುತ್ತಾರೆ ಜ್ಞಾನಪ್ರಕಾಶ ಸ್ವಾಮೀಜಿ.

“ಇಡೀ ದೇಶದ ಹಿತವನ್ನು ನಿಮ್ಮ ಮತ ಕಾಪಾಡುತ್ತದೆಯೇ ಹೊರತು ಗುಡಿ, ಚರ್ಚು, ಮಸೀದಿ, ಆಹಾರ, ವಸ್ತ್ರವಲ್ಲ. ನಮ್ಮ ಮತವನ್ನು ಮಾರಿಕೊಂಡರೆ ಈ ದೇಶದ ಹಿತವನ್ನು ಯಾರು ಕಾಪಾಡಿಕೊಳ್ಳುತ್ತಾರೆ? ನಾವು ಬದ್ಧತೆಯಿಂದ ಕೆಲಸ ಮಾಡದಿದ್ದರೆ ದೇಶಕ್ಕೆ ಭದ್ರತೆ ಇರುವುದಿಲ್ಲ” ಎಂದು ಎಚ್ಚರಿಸಿದರು.

******

ಧಾರ್ಮಿಕ ಅಶಾಂತಿ ಸೃಷ್ಟಿಸಲು ದುರುಳರು ಪ್ರಯತ್ನಿಸುತ್ತಿರುವಾಗ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಧಾರ್ಮಿಕ ಪರಂಪರೆಯನ್ನು ಮುಂದುವರೆಸುತ್ತಿರುವ ಮಠಮಾನ್ಯಗಳು ಮತ್ತು ಅವುಗಳ ವಾರಸುದಾರರು ಮಾಡುವ ಅಗತ್ಯವಿರುತ್ತದೆ. ಆದರೆ ಅಂತಹ ದ್ವೇಷಕ್ಕೆ ತುಪ್ಪ ಸುರಿಯುವ ಕೆಲಸವನ್ನು ಕೆಲವು ಮಠಾಧೀಶರು ಮಾಡುತ್ತಿದ್ದರೆ, ಇನ್ನೂ ಕೆಲವರು ಮೈಮರೆತು ಕೂತಿದ್ದಾರೆ. ಇಂತಹ ಸಮಯದಲ್ಲಿ ಸಿದ್ಧರಾಮ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಂತಹ ಪ್ರಗತಿಪರ ಸ್ವಾಮಿಗಳು ದ್ವೇಷದ ವಿದ್ಯಮಾನಗಳಿಗೆ ಪ್ರತಿರೋಧ ತೋರಿಸಿ ವಿವೇಕ ತರಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯವಾದದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...