ಕರ್ನಾಟಕದ ಪ್ರಮುಖ ಚಿಂತಕರು ಮತ್ತು ಪತ್ರಕರ್ತರಾದ ಡಿ.ಉಮಾಪತಿಯವರಿಗೆ ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ‘ಬಿ.ರಾಚಯ್ಯ ರಾಜ್ಯ ಪ್ರಶಸ್ತಿ’ ಯನ್ನು ನೀಡಿ ಇಂದು ಗೌರವಿಸಿತು. ಚಿತ್ರದುರ್ಗದ ಶ್ರೀ ಮುರುಘಾಮಠದ ಅಲ್ಲಮ ಪ್ರಭು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಡಿ.ಉಮಾಪತಿಯವರು ಆಡಿದ ಮಾತುಗಳನ್ನು ಈ ಸಂದರ್ಭದಲ್ಲಿ ಪ್ರಕಟಿಸಲಾಗುತ್ತಿದೆ.
ಅಂಬೇಡ್ಕರ್ ಬಹುತೇಕ ರಾಜಕೀಯ ರೂಪವಾಗಿ ಸಿಕ್ಕಿದ್ದಾರೆ ವಿನಃ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಳುವವರು ಮನಸ್ಸು ಮಾಡುತ್ತಿಲ್ಲ. ಉಣ್ಣದ ವಿಗ್ರಹಕ್ಕೆ ಭೋಜನವಿಡುವ ಡಾಂಭಿಕತನ ಇಂದಿನ ಎಲ್ಲಾ ರಾಜಕೀಯ ಪಕ್ಷಗಳಲ್ಲಿದೆ. ದಲಿತರನ್ನು ಸಮಾನವಾಗಿ ನಡೆಸಿಕೊಳ್ಳಬೇಕೆಂಬ ಅಂಬೇಡ್ಕರ್ ಅವರ ಮಾತಿಗೆ ರಾಜಕೀಯ ಪಕ್ಷಗಳು ಕಿವುಡಾಗಿವೆ. ಮನುಸ್ಮೃತಿಯನ್ನು ಪಾಲಿಸುವವರೆ ಇಂದು ದೇಶವನ್ನು ಆಳುತ್ತಿದ್ದಾರೆ.
ಅಂಬೇಡ್ಕರ್ ರವರು ಸರ್ವಶ್ರೇಷ್ಠರು ಎಂದು ಸಂಘಪರಿವಾರದ ಮುಖವಾಣಿ ಪತ್ರಿಕೆಯಲ್ಲಿ ಸಂಪಾದಕೀಯದಲ್ಲಿ ಬರೆದವರು, ಅವರು ಬರೆದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಹೀಗೆ ಎರಡೂ ಬಗೆಯ ಪಾತ್ರಗಳನ್ನು ಇಂದು ಮಾಡಲಾಗುತ್ತಿದೆ, ದಲಿತರ ಮತಗಳನ್ನು ಸೆಳೆಯಲು ಪಕ್ಷಗಳು ಅಂಬೇಡ್ಕರ್ ಅವರನ್ನು ದೋಚುತ್ತಿದ್ದು, ನಿಜವಾದ ಅಂಬೇಡ್ಕರ್ ಅವರನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ.
ಅಂಬೇಡ್ಕರ್ ಅವರ ಹೆಸರಿನಲ್ಲಿ ದೊಡ್ಡ ದೊಡ್ಡ ವಿಚಾರಗೋಷ್ಟಿ, ಮಹಲುಗಳನ್ನು ಕಟ್ಟುಲಾಗುತ್ತಿದೆ, ಆದರೆ ಅದೇ ಸಂದರ್ಭದಲ್ಲಿ ಅವರು ಕೊಟ್ಟ ಸಂವಿಧಾನವನ್ನು ಕಾಲ ಕೆಳಗೆ ತುಳಿಯುವ ಕೆಲಸವನ್ನೂ ಇಂದು ಮಾಡಲಾಗುತ್ತಿದೆ. ಇವತ್ತು ಬೇಟೆಯ ನಾಯಿಯ ಜೊತೆಗೂ ನಾವಿದ್ದೇವೆ, ಮೊಲದ ಹಿತ ಕಾಯಲು ಅದರ ಜೊತೆಗೂ ನಾವಿದ್ದೇವೆ ಎಂಬ ಆಷಾಡಭೂತಿತನವನ್ನು ನಮ್ಮನ್ನಾಳುವವರಲ್ಲಿ ಕಾಣುತ್ತಿದ್ದೆವೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ. ವಂಚಿತರನ್ನು ಮೇಲೆತ್ತುವ ಅಂಬೇಡ್ಕರ್ ಅವರ ಚಿಂತನೆಗಳು ಇನ್ನು ಈಡೇರಿಲ್ಲ. ಎಲ್ಲೆಡೆ ಅಂಬೇಡ್ಕರ್ ಅವರ ಪ್ರತಿಮೆ, ಭವನಗಳ ನಿರ್ಮಾಣಕ್ಕಿಂತ ಅವರ ಆದರ್ಶಗಳನ್ನು ಎದೆಗಿಳಿಸಿಕೊಂಡು ಮುನ್ನಡೆಯಬೇಕಾದ ಸಂದರ್ಭ ಬಂದಿದೆ.