ಸಮಾರಂಭದ ಮುಖ್ಯ ಪ್ರಾಯೋಜಕರು ಅದಾನಿ ಗ್ರೂಪ್ ಆಗಿರುವುದರಿಂದ, ದಲಿತ ಕವಯಿತ್ರಿ ಮತ್ತು ಸ್ತ್ರೀವಾದಿ ಸುಕೀರ್ತರಾಣಿ ಅವರು ದೇವಿ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಸುಕೀರ್ತರಾಣಿ ಅವರು ಸಮಕಾಲೀನ ತಮಿಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರು ಪ್ರಾಯೋಜಿಸಿದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದು ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಸುಕೀರ್ತರಾಣಿ ಹೇಳಿದ್ದಾರೆ. ಫೆಬ್ರವರಿ 4 ರ ಶನಿವಾರದಂದು ಪ್ರಶಸ್ತಿಯನ್ನು ತ್ಯಜಿಸಿರುವುದಾಗಿ ಅವರು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.
ಈ ಪ್ರಶಸ್ತಿಗೆ ದೇಶದಾದ್ಯಂತದ ಕೇವಲ ಹನ್ನೆರಡು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ನನಗೆ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲು ಮುಂದಾಗಿದ್ದಕ್ಕೆ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಸುಕೀರ್ತರಾಣಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಆದರೆ, “ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರು ಅದಾನಿ ಎಂದು ನನಗೆ ನಿನ್ನೆಯಷ್ಟೇ ತಿಳಿಯಿತು, ಅದಾನಿ ಗ್ರೂಪ್ನಿಂದ ಆರ್ಥಿಕವಾಗಿ ಬೆಂಬಲಿತವಾಗಿರುವ ಸಂಸ್ಥೆಯಿಂದ ಪ್ರಶಸ್ತಿ ಸ್ವೀಕರಿಸಲು ನನಗೆ ಇಷ್ಟವಿಲ್ಲ ಏಕೆಂದರೆ, ನಾನು ಮಾತನಾಡುವ ರಾಜಕೀಯ ವಿಚಾರಗಳು ಮತ್ತು ನಾನು ನಂಬಿರುವ ಸಿದ್ಧಾಂತಗಳು ಬೇರೆ ಹಾಗಾಗಿ ನಾನು ದೇವಿ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಭಾಷಣ ಆರಂಭಿಸುತ್ತಿದ್ದಂತೆ ‘ಮೋದಿ-ಅದಾನಿ ಭಾಯಿ-ಭಾಯಿ’ ಘೋಷಣೆ ಕೂಗಿದ ವಿಪಕ್ಷ ನಾಯಕರು
ತತ್ವಸಿದ್ದಾಂತಗಳ ಮೇಲಿನ ಅವರ ಬದ್ಧತೆಯನ್ನು ಸಾಕಷ್ಟು ಜನರು ಶ್ಲಾಘಿಸಿ, ಸುಕೀರ್ತರಾಣಿಯನ್ನು ಹೊಗಳಿದ್ದಾರೆ.
”ಅದಾನಿ ಪ್ರಾಯೋಜಿತ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಸುಕೀರ್ತರಾಣಿಗೆ ಧನ್ಯವಾದಗಳು. ಈ ರೀತಿ ಮಾಡಲು ಸಾಕಷ್ಟು ಧೈರ್ಯ ಮತ್ತು ದೃಢತೆ ಬೇಕು. ನೀವು ಮುಂದುವರಿಸಿ, ನಿಮ್ಮ ಜೊತೆ ನಾವಿದ್ದೇವೆ” ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನ ರಾಷ್ಟ್ರೀಯ ಕಾರ್ಯದರ್ಶಿ ಕವಿತಾ ಶ್ರೀವಾಸ್ತವ ಹೇಳಿದ್ದಾರೆ.
ಸುಕೀರ್ತರಾಣಿ ಆರು ಕವನ ಸಂಕಲನಗಳನ್ನು ಬರೆದಿದ್ದಾರೆ:- ಕೈಪತ್ರಿ ಯೇನ್ ಕನವು ಕೇಲ್, ಇರವು ಮಿರುಗಂ, ಕಾಮತ್ತಿಪೂ, ತೀಂಡಪದತ ಮುತ್ತಂ, ಅವಳೈ ಮೋಜಿಪೆಯರ್ತಲ್ ಮತ್ತು ಇಪ್ಪಡಿಕ್ಕು ಯೇವಲ್. ಅವರ ಕವನಗಳು ಇಂಗ್ಲಿಷ್, ಮಲಯಾಳಂ, ಕನ್ನಡ, ಹಿಂದಿ ಮತ್ತು ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿವೆ. ಅವರಿಗೆ ತೇವಮಗಲ್ ಕವಿತೂವಿ ಪ್ರಶಸ್ತಿ, ಪುದುಮೈಪಿತ್ತನ್ ಸ್ಮಾರಕ ಪ್ರಶಸ್ತಿ ಮತ್ತು ಪೆಂಗಲ್ ಮುನ್ನಾನಿಯ ಮಹಿಳಾ ಸಾಧಕಿ ಪ್ರಶಸ್ತಿ ನೀಡಲಾಗಿದೆ.
🌹🙏 100% nimma nirdara uttama vadadu 🙏🌹