ನವರಾತ್ರಿಯ ಸಮಯದಲ್ಲಿ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ದಕ್ಷಿಣ ದೆಹಲಿ ಬಿಜೆಪಿ ಮೇಯರ್ ಕರೆಗೆ ರಾಜಕೀಯ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೆಹಲಿಯ ಕೆಲವು ಮಾಂಸದ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರೆ, ಇನ್ನು ಕೆಲವು ಅಂಗಡಿಗಳನ್ನು ಭಯದಿಂದ ಮುಚ್ಚಲಾಗಿತ್ತು. ಇನ್ನೂ ಕೆಲವು ಅಂಗಡಿಗಳು ಮೇಯರ್ ಕರೆಗೆ ಗಮನ ಕೊಡಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಎಂಸಿಡಿ ಮೇಯರ್ ಮುಕೇಶ್ ಸೂರ್ಯನ್ ಅವರು ತಮ್ಮ ಆಯುಕ್ತರಿಗೆ ಪತ್ರ ಬರೆದು ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ನವರಾತ್ರಿ ಉತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೇಯರ್ ಸೂರ್ಯನ್ ಅವರು ನವರಾತ್ರಿಯ ಒಂಬತ್ತು ದಿನಗಳಲ್ಲಿ ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಯನ್ನು ಸಹ ತ್ಯಜಿಸುತ್ತಾರೆ. ಆದ್ದರಿಂದ ಮಾಂಸವನ್ನು ತೆರೆದು ಮಾರಾಟ ಮಾಡುವ ದೃಶ್ಯವು ಹಿಂದೂಗಳಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದರು.
ಅವರ ಈ ಬೇಡಿಕೆಯು ಬಹುಸಂಖ್ಯಾತವಾದ ಸಿದ್ಧಾಂತವನ್ನು ಆಧರಿಸಿದ್ದು, ಬಹುಸಂಖ್ಯಾತ ಜನರ ಸಲುವಾಗಿ ಅಲ್ಪಸಂಖ್ಯಾತರು ತಮ್ಮ ಅಭ್ಯಾಸದಿಂದ ದೂರವಿಡುವಂತೆ ಒತ್ತಾಯಿಸಲಾಗಿದೆ.
ತಮ್ಮ ಪಕ್ಷದ ಸಹೋದ್ಯೋಗಿಯ ಬೇಡಿಕೆಯನ್ನು ಬೆಂಬಲಿಸಿ, ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಅಸಾದುದ್ದೀನ್ ಓವೈಸಿಯಂತಹ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಗೆ ಬಲಿ ಬೀಳದೆ ಹಿಂದೂಗಳ ಹಬ್ಬವನ್ನು ಗೌರವಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ್ದರು.
ದೆಹಲಿಯ ದಕ್ಷಿಣ, ಪೂರ್ವ ಮತ್ತು ಉತ್ತರ ಕಾರ್ಪೋರೇಷನ್ ಅನ್ನು ಬಿಜೆಪಿ ಆಳುತ್ತಿದೆ. ಬಿಜೆಪಿ ಆಡಳಿತದ ಪಾಲಿಕೆಯ ಈ ತೀರ್ಮಾನಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದ ಆಡಳಿತ ಪಕ್ಷವಾದ ಎಎಪಿ, ಕಾಂಗ್ರೆಸ್ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಬಿಜೆಪಿ ಮೇಯರ್ ಅವರ ಸರ್ವಾಧಿಕಾರಿ ನೀತಿಗೆ ಕಿಡಿ ಕಾರಿದ್ದಾರೆ.
ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರ ಬಹುಸಂಖ್ಯಾತವಾದದ ಬೇಡಿಕೆಗೆ ಕಾಶ್ಮೀರದ ಮಾಜಿ ಸಿಎಂ ಅಬ್ದುಲ್ಲಾ ಉತ್ತರಿಸಿದ್ದು, “ಮುಸ್ಲಿಮರು ಪ್ರಾಬಲ್ಯವಿರುವ ಕಾಶ್ಮೀರದಲ್ಲಿ ರಂಜಾನ್ ಸಮಯ ತೆರೆದ ಸ್ಥಳದಲ್ಲಿ ಆಹಾರ ನೀಡುವುದನ್ನು ನಿಷೇಧಿಸುವುದು ಸೂಕ್ತವೇ?” ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.
ಇದನ್ನೂ ಓದಿ: ’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು
“ರಂಜಾನ್ ಸಮಯದಲ್ಲಿ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಊಟ ಮಾಡುವುದಿಲ್ಲ. ಪ್ರತಿಯೊಬ್ಬ ಮುಸ್ಲಿಮೇತರ ನಿವಾಸಿಗಳು ಅಥವಾ ಪ್ರವಾಸಿಗರು ಸಾರ್ವಜನಿಕವಾಗಿ, ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತಿನ್ನುವುದನ್ನು ನಾವು ನಿಷೇಧಿಸಿದರೆ ಅದು ಸರಿ ಎಂದು ನಾನು ಭಾವಿಸುತ್ತೇನೆ. ದಕ್ಷಿಣ ದೆಹಲಿಗೆ ಬಹುಸಂಖ್ಯಾತವಾದ ಸರಿಯಾಗಿದ್ದರೆ, ಜಮ್ಮು ಕಾಶ್ಮೀರಕ್ಕೂ ಅದು ಸರಿಯಾಗಿರುತ್ತದೆ” ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
During Ramzan we don’t eat between sunrise & sunset. I suppose it’s OK if we ban every non-Muslim resident or tourist from eating in public, especially in the Muslim dominated areas. If majoritarianism is right for South Delhi, it has to be right for J&K. https://t.co/G5VQylmMvB
— Omar Abdullah (@OmarAbdullah) April 5, 2022
ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ದತ್ ಅವರು ಬಿಜೆಪಿ ಮೇಯರ್ ಬೇಡಿಕೆಯನ್ನು ಅಗ್ಗದ ಪ್ರಚಾರದ ಸ್ಟಂಟ್ ಎಂದು ಬಣ್ಣಿಸಿದ್ದಾರೆ. ಇಂತಹ ನಿಷೇಧವನ್ನು ವಿಧಿಸಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಎಎಪಿ ನಾಯಕ ದುರ್ಗೇಶ್ ಪಾಠಕ್ ಅವರು, ಇಂತಹ ನಿಷೇಧವನ್ನು ಬಿಜೆಪಿ ಆಡಳಿತದ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ವಿಧಿಸಲಿ ಎಂದು ಸವಾಲು ಹಾಕಿದ್ದಾರೆ.
ದಕ್ಷಿಣ ಎಂಸಿಡಿ ವ್ಯಾಪ್ತಿಯಲ್ಲಿ ಸುಮಾರು 1,500 ನೋಂದಾಯಿತ ಮಾಂಸದ ಅಂಗಡಿಗಳಿವೆ. ನವರಾತ್ರಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಪಾಲಿಕೆಯು ಇದೇ ಮೊದಲ ಬಾರಿಗೆ ಕೋರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಪೊಲೀಸರು ಜನರ ಮೊಬೈಲ್ ಪರಿಶೀಲಿಸುವಂತಿಲ್ಲ : ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
Next time