Homeಅಂಕಣಗಳು’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

- Advertisement -
- Advertisement -

ಕಥಾ ರಚನೆಗೆ ಬೇಕಾದ ಸರಕು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೂಡ, ಅದನ್ನು ಕಥೆಯಾಗಿಸುವ ನಿರೂಪಣಾ ಕೌಶಲ್ಯಕ್ಕೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿದೆ. ಅನಿಲ್ ಗುನ್ನಾಪುರ ಅವರ ’ಕಲ್ಲು ಹೂವಿನ ನೆರಳು’ ಸಂಕಲನದಲ್ಲಿ ಅಂತಹ ಕೌಶಲ್ಯದ ಛಾಯೆ ನಮಗೆ ಕಥೆಗಳ ಒಳಗಿಳಿದಂತೆ ಕಾಣತೊಡಗುತ್ತದೆ. ಕಥೆಗಾರನ ತನ್ಮಯತೆ ಮತ್ತು ಅಂತರಾಳದ ತುಡಿತಗಳಿಗೆ ಅಕ್ಷರದ ಬಣ್ಣ ಬಳಿದಾಗ, ಅದು ಕಲ್ಲು ಹೂವಿನ ನೆರಳಾಗಿ ವಿಶಿಷ್ಟವಾದ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ. ತನ್ನ ಸುತ್ತಲಿನವರು ತಮ್ಮ ಬದುಕನ್ನು ಹೆಣೆದುಕೊಳ್ಳುವಂತೆಯೇ, ಕಥೆಗಾರ ಕಥೆಗಳ ಹೆಣೆಯುತ್ತ, ತನ್ನೊಳಗಿನ ಭಾವ ಪ್ರಪಂಚವನ್ನು ಲೋಕದೃಷ್ಟಿಯಿಂದ ಕಾಣಬಯಸುತ್ತಾನೆ. ಇಲ್ಲಿನ ಬಹುತೇಕ ಕಥೆಗಳು ಕೆಂಡದಂತೆ ಕಂಡರೂ ಕೂಡ ಮಂಜಿನ ಹಾಗೆ ತಣ್ಣನೆಯ ನೋವು, ಹತಾಶೆ, ಮೌನ ಮತ್ತು ಕ್ರೌರ್ಯದ ನಿಲುಗನ್ನಡಿಯೇ ಆಗಿವೆ. ಸುತ್ತಲಿನ ಲೋಕ ಮೀಮಾಂಸೆ ಒಂದೆಡೆಯಾದರೆ, ಬದುಕಿನ ಸಣ್ಣಸಣ್ಣ ತಿರುವುಗಳು ಕೂಡ ನೋವಿನ ನಗಾರಿ ಬಾರಿಸಲು ನಿಂತಿರುವಂತೆ ಕಾಣುವುದು ಇಲ್ಲಿನ ಕಥೆಗಳ ವಿಶೇಷ!

ಪ್ರತಿ ಕಥೆಯ ಸ್ಥಾಯಿಭಾವ, ಮೌನ ಮತ್ತು ಮುಗ್ಧತೆಯೇ ಆಗಿದ್ದರೂ, ಅದಕ್ಕಿರುವ ಸಂಚಾರಿ ಭಾವ ಮನೋಸಂಬಂಧವೆ ಆಗಿಬಿಡುತ್ತದೆ. ಕೊಳದೊಳಗೆ ಸಣ್ಣ ಕಲ್ಲು ಬಿದ್ದು ತರಂಗ ಎಬ್ಬಿಸುವ ಹಾಗೆ, ಸಣ್ಣದೊಂದು ಮಾತು, ಘಟನೆ, ಸ್ವಕಲ್ಪಿತ ವಿಚಾರಗಳಿಂದ ಮನಸ್ಸಿನಲ್ಲಿ ಏಳಬಹುದಾದ ತರಂಗಗಳ ಒಟ್ಟು ಮೊತ್ತವೇ ಈ ಕಥಾಗುಚ್ಚ ಎನ್ನಬಹುದು!

ಇಲ್ಲಿನ ಪ್ರತಿ ಕಥೆಗೂ ಅಂತರ್ ಸಂಬಂಧೀಯ ಗುಣ ಇದ್ದಂತೆ ಕಾಣುತ್ತಿದ್ದಂತೆಯೇ, ಇಲ್ಲವೆನಿಸಿಯೂಬಿಡುತ್ತದೆ. ’ಪರಿಮಳ’ ಕಥೆಯ ಪಮ್ಮಿಯೂ, ’ಗುಲ್ ಮೊಹರ್ ಹುಡುಗ’ನಾದ ಅಪ್ಪುವಿಗೂ ಸಾಮ್ಯತೆಯ ಕಲ್ಪಿಸಬಹುದು. ಇಬ್ಬರಲ್ಲೂ ಮುಗ್ಧತೆ ಸಾಮಾನ್ಯವೆನಿಸಿದರೂ, ಪಮ್ಮಿಗೆ ಸಂಬಂಧದ ಕುರಿತಿರುವ ಗೊಂದಲ ಅಪ್ಪುವಿಗಿಲ್ಲ.

ಆದರೆ, ’ಗುಲ್ ಮೊಹರ್ ಹುಡುಗ’ ಕಥೆಯಲ್ಲಿರುವ ಅರವಿಂದನಿಗೆ ಇರುವ ಲೈಂಗಿಕ ಆಸಕ್ತಿ ಹೆಂಡತಿಯಾದ ನಳಿನಿಯಲ್ಲಿ ಹೆಚ್ಚು ಕಾಣಿಸದು, ಅಂತೆಯೇ ’ಶ್ಯಾರಿಯ ಗಲ್ಲಾ ಡೆಬ್ಬಿ’ಯ ಬಾಯಕ್ಕನಿಗೆ ಇರುವ ಲೈಂಗಿಕ ಆಸಕ್ತಿ ಗಂಡ ಹುಚ್ಚಯ್ಯನಿಗೆ ಇಲ್ಲದಿರುವುದು ಒಂದು ರೀತಿಯ ವೈರುಧ್ಯವನ್ನು ಎದುರಿಟ್ಟ ಹಾಗಿದೆ. ಇದರಿಂದ ಪರಸ್ಪರ ಸಂಬಂಧಗಳ ನಡುವೆ ಬಿಟ್ಟಿರಬಹುದಾದ ಬಿರುಕು ಕೂಡ ಪ್ರಮುಖ ಪಾತ್ರವಹಿಸಿದೆ ಎನಿಸಬಹುದು. ’ಹುಚ್ಚಯ್ಯನ ಲೀಲೆ’ ಕಥೆಯಲ್ಲಿ ಬರುವ ಚೆನ್ನಪ್ಪನಿಗೂ ’ಕಮಲಜ್ಜಿ’ಗೂ ಇರಬಹುದಾದ ಉದಾರತೆಯ ಗುಣವು ಒಂದೇ ಅನ್ನಿಸಿದರೂ, ಚೆನ್ನಪ್ಪನದು ಊರ ಜನರ ಕುರಿತ ತನಗರಿವಿಲ್ಲದೆಯೇ ಬಂದಿರುವ ಅಘೋಷಿತ ಕಾಳಜಿಯಾದರೆ, ಕಮಲಜ್ಜಿಯದ್ದು ಮಗನ, ಮೊಮ್ಮಕ್ಕಳ ಕುರಿತ ಕೌಟುಂಬಿಕ ಕಾಳಜಿ, ಚೆನ್ನಪ್ಪ ಹುಚ್ಚಯ್ಯನಂತೆಯೇ ಆಧ್ಯಾತ್ಮದಲ್ಲಿ ಐಕ್ಯವಾದರೆ, ಕಮಲಜ್ಜಿ ಸಂಬಂಧಗಳ ಸೆಳೆತದಲ್ಲೆ ಮುಳುಗುತ್ತಾಳೆ.

ಅನಿಲ್ ಗುನ್ನಾಪುರ

ಇನ್ನೂ ’ಶ್ಯಾರಿಯ ಗಲ್ಲಾ ಡೆಬ್ಬಿ’ ಕಥೆಯಂತು ಓದುಗರ ಕಣ್ಣಂಚಿನಲ್ಲಿ ನೀರು ಚಿಮ್ಮಿಸಬಲ್ಲ ಅನಿರೀಕ್ಷಿತ ದುರಂತದ ಕಥೆ. ಬದುಕ ಕಟ್ಟಿಕೊಳ್ಳಲು ಊರಿಂದ ಊರಿಗೆ ಅಲೆಯುವ ಬದುಕಿನ ಬವಣೆ ಇಲ್ಲಿನ ಕೇಂದ್ರ ವಸ್ತು. ಬಾಯಕ್ಕನ ಬದುಕಿನ ಹಸಿವಿನೊಂದಿಗೆ, ಮಿಲನದ ಹಸಿವು, ಗಂಡ ಹುಚ್ಚಪ್ಪನ ಕುಡಿತದ ಹಸಿವು, ಮಗಳು ಶ್ಯಾರಿಯ ಅಕ್ಷರದ ಹಸಿವು ಅಲ್ಲದೇ ಕೊನೆಯಲ್ಲಿ ಅಪರಿಚಿತ ಆಸಾಮಿಯ ಅತ್ಯಾಚಾರದ ಹಸಿವಿನಿಂದಾಗಿ ಇಡೀ ಕುಟುಂಬವೇ ನರಳುವ ಮತ್ತು ಓದುಗರನ್ನು ವಿಚಿತ್ರ ಯಾತನೆಗೆ ಒಳಗು ಮಾಡುವ ಕಥೆಯಿದು.
ಇಲ್ಲಿನ ಎಂಟು ಕಥೆಗಳ ಪೈಕಿ ’ಚಿನ್ಮಯ ನಿಲಯ’ ಕಥೆಯ ವಸ್ತು ಕನ್ನಡ ಕಥಾ ಲೋಕಕ್ಕೆ ತೀರ ಹೊಸತು ಅನ್ನಿಸಿತು. ಬುದ್ಧಿಮಾಂದ್ಯರ ಲೈಂಗಿಕತೆಯ ಕುರಿತು ಮಿಶಲ್ ಫುಕೋ ಹೇಳಿದ ನಿಯಮವನ್ನು, ಕಥೆಗಾರ ಅರಿವಿದ್ದೋ, ಅರಿವಿಲ್ಲದೆಯೋ ಬಳಸಿಕೊಂಡಿದ್ದಾನೆ ಮತ್ತು ಯಶಸ್ವಿ ಕೂಡ ಆಗಿದ್ದಾನೆ. ಆ ಕಥೆಯ ನಿರೂಪಣೆ
ಕುತೂಹಲ ಅನಿಸುತ್ತದೆ, ಚಂಪಾ ಆಂಟಿ ಮತ್ತು ಸುಭಾಷ್ ಅಂಕಲ್‌ನ ಮನೆಯ ಕಥೆಯನ್ನು ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಕಥೆಯಲ್ಲಿ ಬರುವ ಸಂಬಂಧಗಳ ಬಂಧ ಕೆಲವು ಸಲ ಬಿಗಿಯಾಗಿ, ಮತ್ತೂ ಗಟ್ಟಿಯಾಗಿ ಏಕತಾನತೆಯನ್ನು ಇಲ್ಲವಾಗಿಸುತ್ತದೆ. ಮೂವತ್ತೊಂದು ವರ್ಷದ ಚಿನ್ಮಯನ ಅಂಗಾಂಗವು ಚಂದ್ರವ್ವನ ಸ್ಪರ್ಷದಿಂದ ಜಾಗೃತವಾಗುವ ಮತ್ತು ಪರಸ್ಪರರು ಬೆರೆಯುವುದು ಅವನ ಬದುಕಿನ ಚೈತನ್ಯಕ್ಕೆ ಕಾರಣವಾಯಿತೇ? ಅಥವಾ ಅವನಲ್ಲಾದ ಬದಲಾವಣೆ ಮನುಷ್ಯ ಸಹಜವಾದದ್ದೆ? ಎಂಬ ಹಲವು ವಿಚಾರವನ್ನು ವಿವೇಚಿಸುವಂತೆ ಮಾಡುತ್ತ ನಿರೂಪಕ ನಿರ್ಗಮಿಸುತ್ತಾನೆ.

’ಚುಕ್ಕಿ ಕೇಳಿದ ಕತೆ’ ವಿಶೇಷವಾಗಿ ನಿರೂಪಿಸಿದ ಒಂದು ಕಥಾವಸ್ತು. ಕಥೆಯೊಳಗೊಂದು ಕಥೆ ಹೆಣೆಯುವ ಕುಸುರಿ ಕೆಲಸದಲ್ಲಿ ಕಥೆಗಾರ ಗೆದ್ದಿದ್ದಾನೆ. ’ಅವನಿ’ ಕಥೆಯೂ ಕೂಡ ಸಹಜ ಕುತೂಹಲದಿಂದ ಏನನ್ನೋ ಹೇಳಲುಹೋಗಿ, ಕೊನೆಗೆ ಏನೂ ಹೇಳದೆ ದೃಶ್ಯಗಳನ್ನಷ್ಟೆ ಎದುರಿಟ್ಟು ಸುಂದರ ಚಿತ್ರಾಕೃತಿಯಾಗಿ ನಿಂತುಬಿಡುತ್ತದೆ.

ಹೀಗೆ ಕಥೆಗಳ ಚೌಕಟ್ಟಿನಲ್ಲಿ ತುಂಬಬಹುದಾದ ಚಿತ್ರಗಳನ್ನು ಕಥೆಗಾರ ತನ್ನ ಅನುಭವದ ಕುಂಚದಿಂದ ಚಿತ್ರಿಸಲು ಪ್ರಯತ್ನಪಟ್ಟಿದ್ದಾನೆ. ಕುತೂಹಲದ ನಿರೂಪಣೆ ಮತ್ತು ಭಾಷಾ ಸೊಗಡಿನ ವೈಶಿಷ್ಟ್ಯತೆ ಆಕರ್ಷಕವಾಗಿದೆ. ಕಥೆಯ ಕೊನೆಯನ್ನು ಕೊನೆಯಾಗುವಂತೆಯೂ ಮತ್ತು ಕೊನೆಗಾಣದಂತೆಯೂ ಎಲ್ಲವನ್ನೂ ತಾನೆ ಹೇಳಿ ಮುಗಿಸಬೇಕೆಂಬ ವಾಚಾಳಿತನ ಕಥೆಗಾರನಿಗಿಲ್ಲ. ಒಟ್ಟಿನಲ್ಲಿ ಹೊಸ ತಲೆಮಾರಿನ ಕಥೆಗಳಿಗೆ ವಿಶೇಷ ಆಯಾಮ ಇರುವುದಂತೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...