“ಶಾಂತಿ ಸೌಹಾರ್ದತೆಯನ್ನು ಎಲ್ಲರೂ ಕಾಯ್ದುಕೊಂಡು ಹೋಗಬೇಕು. ಪ್ರೀತಿಯಿಂದ ವರ್ತಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ದ್ವೇಷದಿಂದಾಗಿ ಮನುಷ್ಯ ಶಾಂತಿ, ಸಮಾಧಾನ ಕಳೆದುಕೊಳ್ಳುತ್ತಾನೆ. ದ್ವೇಷ, ಅಸೂಯೆಯನ್ನು ಬಿಟ್ಟು ಸೌಹಾರ್ದತೆಯಿಂದ, ಭ್ರಾತೃತ್ವ ಭಾವನೆಯಿಂದ ವರ್ತಿಸಿದಾಗ ಶಾಂತಿ ದೊರಕುತ್ತದೆ” ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.
ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುದ್ವೇಷದ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಅವರು, “ದ್ವೇಷ ಸೃಷ್ಟಿಸುವ ಶಕ್ತಿಗಳನ್ನು ತಡೆಯುವ ಕೆಲಸ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಜನಾಂಗೀಯ ತಾರತಮ್ಯವನ್ನು ಅಧಿಕಾರಕ್ಕಾಗಿ ಬಳಸಬಾರದು, ಚುನಾವಣೆಯ ವಿಷಯವಾಗಿಸಬಾರದು” ಎಂದು ಹೇಳಿದರು.
“ಸಂವಿಧಾನಕ್ಕೆ ಎಲ್ಲರೂ ಬೆಲೆ ಕೊಡಬೇಕು. ಸಂವಿಧಾನದ ಪ್ರಕಾರ ಸೇವೆ ಸಲ್ಲಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದವರು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು” ಎಂದರು.
ನಮ್ಮ ಲಿಂಗಾಯತ ಮಠಗಳು ಕೋಮು ಸೌಹಾರ್ದತೆಗೆ ಹೆಸರಾಗಿವೆ ಎಂದ ಅವರು, “ಎಲ್ಲ ಸಮುದಾಯಗಳು, ಸಮಾನ ಭಾವದಿಂದ ನಮ್ಮ ಮಠಗಳಲ್ಲಿ ಪಾಲ್ಗೊಳ್ಳುತ್ತಾರೆ. ದಾಸೋಹಕ್ಕೆ, ಕೋಮುಸೌಹಾರ್ದತೆಗೆ ಲಿಂಗಾಯತ ಮಠಗಳು ಹೆಸರಾಗಿವೆ. ಇವನಾರವ ಎನ್ನದೆ ಇವ ನಮ್ಮವ ಎನ್ನುವ ಪರಂಪರೆ ನಮ್ಮದು” ಎಂದು ತಿಳಿಸಿದರು.
“ಬೇರೆ ದೇಶಗಳಲ್ಲಿರುವ ಹಿಂದೂಗಳಿಗೆ ಇದೇ ರೀತಿಯ ಧಕ್ಕೆಯಾದರೆ ಇವರು ಏನು ಮಾಡುತ್ತಾರೆ? ಬೆಳಗಾವಿಯಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆಂದು ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಅಡ್ಡಿಪಡಿಸಿದ್ದನ್ನು ನೋಡಿದ್ದೇವೆ. ಹೀಗಾಗಿ ಸಮಾಜದಲ್ಲಿ ಸಂಘರ್ಷ ಇರಬಾರದು” ಎಂದು ಎಚ್ಚರಿಸಿದರು.
ಕಾವಿ ವೇಷದಲ್ಲಿರುವ, ಸ್ವಾಮೀಜಿಗಳೆನಿಸಿಕೊಂಡಿರುವ ಕೆಲವರು ದ್ವೇಷ ಭಾಷಣ ಮಾಡುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮ ಸ್ವಾಮೀಜಿಯವರು, “ಅಂಥವರನ್ನು ಸ್ವಾಮೀಜಿಗಳು ಎಂದು ಹೇಗೆ ಅನ್ನುತ್ತೀರಿ? ಸಮಾಜದಲ್ಲಿ ಕಲಹ ಉಂಟು ಮಾಡೋರು ಸ್ವಾಮೀಜಿಗಳು ಹೇಗಾಗುತ್ತಾರೆ? ಎಲ್ಲರನ್ನು ಸಮಾನವಾಗಿ ಕಾಣುವವರು, ಎಲ್ಲರಿಗೂ ಪ್ರೀತಿಯನ್ನು ಹಂಚುವವರು ಸ್ವಾಮೀಜಿಗಳು. ಕೆಲವರಿಗೆ ಪ್ರೀತಿ, ಕೆಲವರಿಗೆ ದ್ವೇಷ ನೀಡೋರು ಸ್ವಾಮೀಜಿಗಳೇ ಅಲ್ಲ” ಎಂದು ಸ್ಪಷ್ಟಪಡಿಸಿದರು.
“ಸರ್ಕಾರ, ಸಮಾಜ ವಿರೋಧಿ ಕೃತ್ಯಗಳಿಗೆ ಪ್ರತಿಬಂಧ ಹೇರಬೇಕು. ಜನರಿಗೆ ಉದ್ಯೋಗ ನೀಡಬೇಕು. ಕೆಲಸಗಳು ಇಲ್ಲದಿದ್ದಾಗ ಮನಸ್ಸು ಇಂತಹ ಕೃತ್ಯಗಳಲ್ಲಿ ತೊಡಗುತ್ತದೆ” ಎಂದು ಅಭಿಪ್ರಾಯಪಟ್ಟರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮತ್ತೆ ಮತೀಯ ಗೂಂಡಾಗಿರಿ: ಭಿನ್ನ ಧರ್ಮದ ಜೋಡಿಗೆ ಕಿರುಕುಳ, ಹಲ್ಲೆ ಆರೋಪ