ಬೆಂಗಳೂರು ವಿಶ್ವವಿದ್ಯಾನಿಲಯವು ಪರೀಕ್ಷಾ ಶುಲ್ಕ ಭರಿಸಲು ಆಗಸ್ಟ್ 15ರಂದು ಕೊನೆಯ ದಿನಾಂಕ ಎಂದು ಘೋಷಿಸಿದೆ. ಅಲ್ಲದೇ ಹೊಸ ಶೈಕ್ಷಣಿಕ ವರ್ಷದ ಕಾಲೇಜು ದಾಖಲಾತಿ ಶುಲ್ಕವನ್ನು ಭರಿಸಲು ಹೇಳಿದೆ.
ವಿವಿಯ ಈ ನಿಲುವನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಖಂಡಿಸಿದೆ. ಕೂಡಲೇ ವಿವಿಯು ಈ ಆದೇಶವನ್ನು ಹಿಂಪಡೆಯಬೇಕು, ಇಲ್ಲಿದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದೆ.
ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಭಯಾನಕವಾಗಿ ಕಾಡಿಸುತ್ತಿದೆ. ಭಾರತ ಕರೋನಾದಲ್ಲಿ ಸೋಂಕಿತರ ಪಟ್ಟಿಯಲ್ಲಿ ವಿಶ್ವಗುರು ಆಗುವತ್ತ ಸಾಗಿದೆ. ಇನ್ನು ಯಾವುದೇ ತಯಾರಿ ಇಲ್ಲದೆ ಮೇಲಿಂದ ಮೇಲೆ ಹೇರಿದ ಲಾಕ್ಡೌನ್ನಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ರೈತರು, ಬೀದಿ ವ್ಯಾಪಾರಿಗಳ ಕುಟುಂಬಗಳು ಆರ್ಥಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭವನ್ನು ಅವಕಾಶ ಎಂಬಂತೆ ಖಾಸಗೀ ಸಂಸ್ಥೆಗಳು ಬಳಸಿಕೊಳ್ಳುತ್ತಿರುವುದು ವಿಷಾಧನೀಯ. ಇದೇ ದಾರಿಯನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅನುಸರಿಸುವುದು ಎಂದರೆ ಏನರ್ಥ? ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಈ ಸಮಯದಲ್ಲಿ ಶುಲ್ಕ ಸಂಗ್ರಹಿಸಬಾರದು ಎಂದು ಎಂದು ಕೆವಿಎಸ್ ರಾಜ್ಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ಆಗ್ರಹಿಸಿದ್ದಾರೆ.
ಮೊದಲ ಸುತ್ತಿನ ಲಾಕ್ ಡೌನ್ ಘೋಷಣೆ ಆದಾಗಲೇ ‘ಪರೀಕ್ಷಾ ಶುಲ್ಕ ಮತ್ತು ಈ ಶೈಕ್ಷಣಿಕ ವರ್ಷದ ಶುಲ್ಕಗಳನ್ನು ವಿದ್ಯಾರ್ಥಿ/ಪೋಷಕರಿಂದ ಪಡೆಯದೇ ಸರ್ಕಾರವೇ ಭರಿಸಬೇಕು ಅಥವಾ ಶುಲ್ಕ ಕಡಿಮೆಗೊಳಿಸಿ ಹೆಚ್ಚಿನ ಕಲಾವಾಕಾಶ ನೀಡಿ ಕಂತುಗಳಲ್ಲಿ ಶುಲ್ಕ ಪಡೆಯಬೇಕು ಎಂದು’ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಒತ್ತಾಯಿಸಿದ್ದೆವು. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ-ಪೋಷಕರ ಸುಲಿಗೆಗೆ ನಿಂತಿದೆ! ಇದರಿಂದಾಗಿ ಪೋಷಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಾಗಾಗಿ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದೆ ಸರಿಯಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಯ ಈ ನಿಲುವಿನಿಂದ ತಳಸಮುದಾಯದ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತರಾಗುವ ಎಲ್ಲಾ ಸಾಧ್ಯತೆಗಳು ಇದೆ. ಇದಕ್ಕೆ ನೇರ ಹೊಣೆ ನಮ್ಮ ರಾಜ್ಯ ಸರ್ಕಾರವೇ ಆಗಲಿದೆ ಎಂದು ಅವರು ಆರೋಪಿಸಿದ್ದಾರೆ.
ಪಿಮ್ ಕೇರ್ಸ್ ಗೆ ದೇಶದ ಜನರು ನೀಡಿದ ಕೋಟ್ಯಾಂತರ ರೂಪಾಯಿಗಳು ಏನಾದವು? ಕೊರೊನಾ ವಿಶೇಷ ಪ್ಯಾಕೇಜ್ ಎಂದು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ವಿದ್ಯಾರ್ಥಿಗಳಿಗೆ ಏನು ಇಲ್ಲವೆ?, ವಿದ್ಯಾರ್ಥಿಗಳಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲಿ ಮಾಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.