ಕೇಂದ್ರ ಸರ್ಕಾರ ಹಾಗೂ ದೆಹಲಿ ಎಎಪಿ ಸರ್ಕಾರದ ನಡುವಿನ ಮುಸಕಿನ ಗುದ್ದಾಟ ಸೋಮವಾರ ಸ್ಪೋಟಗೊಂಡಿದೆ. ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಬಜೆಟ್ನ್ನು ತಡೆದಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ”ಬಜೆಟ್ ನಿಲ್ಲಿಸಬೇಡಿ” ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
“ದೇಶದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಬಜೆಟ್ನ್ನು ನಿಲ್ಲಿಸಲಾಗಿದೆ, ನೀವು ದೆಹಲಿ ಜನರ ಮೇಲೆ ಏಕೆ ಕೋಪಗೊಂಡಿದ್ದೀರಿ?” ಎಂದು ದೆಹಲಿ ಸಿಎಂ ಕೇಜ್ರಿವಾಲ್ ಅವರು ಪ್ರಧಾನಿಗೆ ಪ್ರಶ್ನೆ ಮಾಡಿದ್ದಾರೆ.
”ದೆಹಲಿಯ ಜನರು ಬಜೆಟ್ನ್ನು ಅಂಗೀಕರಿಸಬೇಕು ಎಂದು ಕೈ ಜೋಡಿಸಿ ನಿಮ್ಮನ್ನು ಒತ್ತಾಯಿಸುತ್ತಾರೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಇಂದು (ಮಾ.21) ದೆಹಲಿ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ನ್ನು ಘೋಷಿಸಬೇಕಿತ್ತು. ಆದರೆ ಅದನ್ನು ಕೇಂದ್ರವು ನಿರ್ಬಂಧಿಸಿದೆ ಎಂದು ಹೇಳಿದ ಅರವಿಂದ್ ಕೇಜ್ರಿವಾಲ್ ಇದನ್ನು ಕೇಂದ್ರದ ”ಗೂಂಡಾಗಿರಿ” ಎಂದು ಕರೆದಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ: ಎಎಪಿಯಿಂದ ದೆಹಲಿಯಾದ್ಯಂತ 2,500 ಸಭೆ
ಎಎಪಿ ಸರ್ಕಾರದ ಬಜೆಟ್ನ್ನು ಕೇಂದ್ರ ಸರ್ಕಾರ ತಡೆದಿದೆ ಹಾಗಾಗಿ ಕೇಂದ್ರವನ್ನು ಪ್ರತಿನಿಧಿಸುವ ದೆಹಲಿಯ ರಾಜ್ಯಪಾಲ ವಿಕೆ ಸಕ್ಸೇನಾ ಅವರು, ಬಜೆಟ್ನ್ನು ಮರುಪರಿಶೀಲಿಸುವಂತೆ ಕೇಳಿದೆ ಎಂದು ಆರೋಪಿಸಲಾಗಿದೆ.
ಎಎಪಿ ಸರ್ಕಾರ ಜಾಹೀರಾತುಗಳಿಗೆ ಹೆಚ್ಚಿನ ಹಣ ಹಂಚಿಕೆ ಮಾಡಿದ್ದು, ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಕಡಿಮೆ ಹಣವನ್ನು ನಿಗದಿಪಡಿಸಿದೆ ಅದರ ವಿವರಣೆಯನ್ನು ಕೇಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿದೆ.
ಈ ಬಗ್ಗೆ ಆಡಳಿತ ಪಕ್ಷ ಪ್ರತಿಕ್ರಿಯಿಸಿದ್ದು, ”ಜಾಹೀರಾತುಗಳ ಮೇಲಿನ ಹಂಚಿಕೆಯನ್ನು ಹೆಚ್ಚಿಸಲಾಗಿಲ್ಲ ಮತ್ತು ಕಳೆದ ವರ್ಷದಂತೆಯೇ ಇದೆ ಎಂದು ಹೇಳಿದೆ. 78,800 ಕೋಟಿ ರೂ. ಮೊತ್ತದ ಬಜೆಟ್ನಲ್ಲಿ ಮೂಲಸೌಕರ್ಯ ವೆಚ್ಚಕ್ಕೆ 22,000 ಕೋಟಿ ರೂ. ಮತ್ತು ಜಾಹೀರಾತುಗಳಿಗಾಗಿ 550 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಎಎಪಿ ವಿವರಿಸಿದೆ.
”ದೆಹಲಿಯ ಬಜೆಟ್ ಮಂಗಳವಾರ ಬೆಳಿಗ್ಗೆ ಬರಬೇಕಿತ್ತು, ಆದರೆ ಕೇಂದ್ರ ಸರ್ಕಾರ ನಮ್ಮ ಬಜೆಟ್ಗೆ ತಡೆ ನೀಡಿದೆ. ದೆಹಲಿಯ ಬಜೆಟ್ ಮಂಗಳವಾರ ಬರುವುದಿಲ್ಲ. ದೇಶದ ಇತಿಹಾಸದಲ್ಲೆ ರಾಜ್ಯವೊಂದರ ಬಜೆಟ್ನ್ನು ಕೇಂದ್ರ ತಡೆದಿದೆ” ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
”ಇಂದಿನಿಂದ ದೆಹಲಿ ಸರ್ಕಾರಿ ನೌಕರರು, ವೈದ್ಯರು ಮತ್ತು ಶಿಕ್ಷಕರು ತಮ್ಮ ಸಂಬಳವನ್ನು ಪಡೆಯುವುದಿಲ್ಲ… ಇದು ಕೇಂದ್ರದ ಬಹಿರಂವಾಗಿಯೇ ಗೂಂಡಾಗಿರಿ ನಡೆಸುವ ಕ್ರಮವಾಗಿದೆ” ಎಂದು ಕೇಜ್ರೀವಾಲ್ ಆರೋಪಿಸಿದ್ದಾರೆ.