ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ರೈತರು ನಡೆಸುತ್ತಿರುವ ದೆಹಲಿ ಚಲೋ ಆಂದೋಲನವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ರಾಜ್ಯಗಳ ರೈತರು ಪಂಜಾಬ್-ಹರಿಯಾಣದ ಶಂಭೂ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. ಭಾನುವಾರದವರೆಗೆ ರೈತರು ದೆಹಲಿಯತ್ತ ಕದಲುವುದಿಲ್ಲ ಎನ್ನಲಾಗಿದ್ದು, ಧರಣಿ ನಿರತ ರೈತರೊಬ್ಬರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮಾಹಿತಿಯ ಪ್ರಕಾರ, 65 ವರ್ಷದ ಜ್ಞಾನ್ ಸಿಂಗ್ ಅವರು ರೈತರ ಚಳವಳಿಯಲ್ಲಿ ಸೇರಲು ಆಗಮಿಸಿದ್ದರು. ಇಲ್ಲಿ ಅವರು ಅಂಬಾಲಾದ ಶಂಭು ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲೊ ಭಾಗವಹಿಸಿದ್ದರು. ಅವರು ಗುರುದಾಸ್ಪುರ ಜಿಲ್ಲೆಯ ನಿವಾಸಿಯಾಗಿದ್ದು, ಗುರುವಾರ ಸಂಜೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸದ್ಯ ಅವರ ಮೃತದೇಹವನ್ನು ಶುಕ್ರವಾರ ಶಂಭು ಗಡಿಗೆ ತಂದು ರೈತರು ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದರೊಂದಿಗೆ ಚಂಡೀಗಢದಲ್ಲಿ ತಡರಾತ್ರಿ ಕೇಂದ್ರ ಸಚಿವರ ಜತೆ ಸಭೆ ನಡೆಸಿದ ಬಳಿಕ ರೈತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭವಿಷ್ಯದ ಕಾರ್ಯತಂತ್ರ ವಿವರಿಸಲಿದ್ದಾರೆ. ಆದರೆ, ರೈತರು ಭಾನುವಾರದವರೆಗೆ ಗಡಿಯಲ್ಲಿ ನಿಲ್ಲುತ್ತಾರೆ ಮತ್ತು ದೆಹಲಿಯತ್ತ ಪ್ರಯಾಣ ಬೆಳೆಸುವುದಿಲ್ಲ ಎಂದು ನಂಬಲಾಗಿದೆ. ಏಕೆಂದರೆ, ಭಾನುವಾರ ಚಂಡೀಗಢದಲ್ಲಿ ಸರ್ಕಾರ ಮತ್ತು ರೈತರ ನಡುವೆ ಮತ್ತೊಂದು ಸಭೆ ನಡೆಯಲಿದೆ.
ಕಿಸಾನ್ ಚಳವಳಿಯ ಮೊದಲ ಎರಡು ದಿನಗಳಲ್ಲಿ ಪೊಲೀಸರೊಂದಿಗಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ರೈತರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಒಟ್ಟು 25 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಂಬಾಲಾ ಪೊಲೀಸ್ ಎಎಸ್ಪಿ ಪೂಜಾ ದಬ್ಲಾ ತಿಳಿಸಿದ್ದಾರೆ. ಇದರಲ್ಲಿ 18 ಹರಿಯಾಣ ಪೊಲೀಸರು ಮತ್ತು 7 ಅರೆಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯ ಗಡಿಯಲ್ಲಿ ಶಾಂತಿ ಕಾಪಾಡಲಾಗಿದೆ.
ಇದನ್ನೂ ಓದಿ; ಮರಾಠ ಮೀಸಲಾತಿ: ಸಿಎಂಗೆ ವರದಿ ಸಲ್ಲಿಸಿದ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗ