ಪ್ರತಿಪಕ್ಷದ ಇಂಡಿಯಾ ಬ್ಲಾಕ್ ನಾಯಕರು ಭಾನುವಾರ ತಮ್ಮ ‘ಲೋಕತಂತ್ರ ಬಚಾವೋ’ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಗಾಗಿ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಂಡಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿರುವುದನ್ನು ಖಂಡಿಸಿ ಈ ರ್ಯಾಲಿ ಎಂದು ಮೈತ್ರಿಕೂಟದ ಸದಸ್ಯ ಎಎಪಿ ಹೇಳಿದರೆ, ಇಂಡಿಯಾ ಮೈತ್ರಿಕೂಟದ ಅತಿದೊಡ್ಡ ಪಕ್ಷ ಕಾಂಗ್ರೆಸ್, ಇದು ನಿರ್ದಿಷ್ಟ ವ್ಯಕ್ತಿ ಅಥವಾ ವಿಚಾರಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರದ ವಿರುದ್ಧ ಪ್ರತಿಪಕ್ಷಗಳು ಧ್ವನಿ ಎತ್ತಲಿವೆ ಎಂದು ಹೇಳಿದೆ.
ಕೆಲವು ಷರತ್ತುಗಳೊಂದಿಗೆ ದೆಹಲಿ ಪೊಲೀಸರು ರ್ಯಾಲಿಗೆ ಅನುಮತಿ ನೀಡಿದ್ದಾರೆ. ಸ್ಥಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡಬಹುದಾದರೂ, 20,000 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ. 30,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಪೊಲೀಸರು ಇಟ್ಟುಕೊಂಡಿದ್ದಾರೆ. ಆದರೆ AAP ಪಕ್ಷವು ಮೈದಾನವು ಸಂಪೂರ್ಣವಾಗಿ ತುಂಬಲಿದೆ ಎಂದು ಹೇಳಿಕೊಂಡಿದೆ.
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಸೇರಿದಂತೆ ಇಂಡಿಯಾ ಬ್ಲಾಕ್ನ ಬಹುತೇಕ ಎಲ್ಲಾ ಉನ್ನತ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಿಎಂ ಅವರನ್ನು ಜನವರಿಯಲ್ಲಿ ಇಡಿ ಬಂಧಿಸಿತ್ತು.
ಈ ಸರ್ವಾಧಿಕಾರಿ ಮತ್ತು ಕೋಮುವಾದಿ ಸರ್ಕಾರದ ವಿರುದ್ಧ ದೇಶಾದ್ಯಂತ ಜನರು ಒಟ್ಟುಗೂಡಿದ್ದಾರೆ ಎಂಬ ಸಂದೇಶವನ್ನು ನೀಡುವುದಾಗಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೋರೆನ್ ಅವರ ಬಂಧನ, ಯುಎಪಿಎ ನಿರಂತರ ಬಳಕೆ ಮತ್ತು ಇಡಿ-ಸಿಬಿಐ ದುರ್ಬಳಕೆ ವಿರುದ್ಧ ದೆಹಲಿಯ ಈ ಮಹಾ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಇದು ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ ಎಂದು ಕೂಡ ಹೇಳಲಾಗುತ್ತಿದೆ.
#LIVE | The INDIA bloc is gathering for “Loktantra Bachao (Save Democracy)” rally at Delhi’s Ramlila Maidan. (Video by Jatin Anand)
Catch live here: https://t.co/y2SVjqnCg1 pic.twitter.com/v48skhXREz
— The Indian Express (@IndianExpress) March 31, 2024
ಇದನ್ನು ಓದಿ: ಸುಪ್ರೀಂ ಕೋರ್ಟ್ ತೀರ್ಪಿನ 12 ದಿನಗಳ ಬಳಿಕ ಬಾಂಡ್ಗಳ ಮುದ್ರಣ ನಿಲ್ಲಿಸಲು ಎಸ್ಬಿಐಗೆ ಸೂಚಿಸಿದ್ದ ಹಣಕಾಸು ಸಚಿವಾಲಯ: ವರದಿ