ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಧಿಕಾರಿ ವಿರುದ್ಧ ದೂರುಗಳಿದ್ದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯಲ್ಲಿ ಕೆಲಸ ಮಾಡಲು ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿ ದೆಹಲಿ ಸಂಪುಟ ಸಚಿವೆ ಅತಿಶಿ ಶನಿವಾರ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಡಬ್ಲ್ಯುಸಿಡಿ ಅಧಿಕಾರಿಯ ವಿರುದ್ಧ ಲೈಂಗಿಕ ಕಿರುಕುಳದ ದೂರುಗಳ ವರದಿಯನ್ನು ಪತ್ರದಲ್ಲಿ ಅತಿಶಿ ಉಲ್ಲೇಖಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಪದೇ ಪದೇ ಲೈಂಗಿಕ ಕಿರುಕುಳದ ದೂರುಗಳು ಬಂದರೆ, ಏಕೆ ಕ್ರಮ ಕೈಗೊಂಡಿಲ್ಲ ಎಂದು ಅತಿಶಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಇದು ಅಧಿಕಾರಿಗಳ ವಿರುದ್ಧದ ದೂರುಗಳ ನಿರ್ವಹಣೆ ಮತ್ತು ಶಿಸ್ತು ಕ್ರಮದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ ಪ್ರಕರಣದ ತನಿಖೆಯ ಹಾದಿ, ದೂರುಗಳನ್ನು ನಿರ್ವಹಿಸಿದ ಅಧಿಕಾರಿ ಮತ್ತು ಆರೋಪಿತ ಅಧಿಕಾರಿಯ ವಿರುದ್ಧ ತೆಗೆದುಕೊಂಡ ಶಿಸ್ತು ಕ್ರಮಗಳ ಬಗ್ಗೆ ಉತ್ತರಸುವಂತೆ ಸಚಿವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯನ್ನು 2020 ರಿಂದ 2021 ರ ನಡುವೆ ಹಲವಾರು ಬಾರಿ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಮತ್ತು ಬಾಲಕಿಗೆ ಗರ್ಭಪಾತದ ಮಾತ್ರೆಗಳನ್ನು ನೀಡಿ ಬಲವಂತದ ಗರ್ಭಪಾತ ಮಾಡಿದ್ದಕ್ಕೆ ಅಧಿಕಾರಿಯ ಪತ್ನಿಯನ್ನು ಕೂಡ ಬಂಧಿಸಲಾಗಿದೆ.
ಸಂತ್ರಸ್ತೆ ತನ್ನ ತಂದೆಯ ನಿಧನದ ಬಳಿಕ ಆರೋಪಿತ ಅಧಿಕಾರಿಯ ನಿವಾಸದಲ್ಲಿ ವಾಸಿಸುತ್ತಿದ್ದರು. ಬಾಲಕಿ ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ಮತ್ತು ಪೊಲೀಸರ ಜೊತೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಹೇಳಿಕೊಂಡಿದ್ದರು. ಪ್ರಕರಣ ದೇಶದಲ್ಲಿ ಭಾರೀ ಸಂಚಲನವನ್ನು ಹುಟ್ಟು ಹಾಕಿತ್ತು.