ಪಕ್ಷ ಬಿಟ್ಟವರ ವಿರುದ್ಧ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಶಿವಸೇನಾದ (ಯುಟಿಬಿ) ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಮ್ಮ ಪಕ್ಷವೂ ರಣರಂಗದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆ” ಎಂದಿದ್ದಾರೆ.
”ಪಕ್ಷ ಬಿಟ್ಟವರ ವಿರುದ್ಧ ಶರದ್ ಪವಾರ್ ಹಾಗೂ ಅವರ ಸಂಗಡಿಗರು ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ. ಶರದ್ ಪವಾರ್ ಯಾವತ್ತೂ ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ. ಅವರು ಮಹಾ ವಿಕಾಸ್ ಅಘಾಡಿ ಹಾಗೂ INDIA ಮೈತ್ರಿಕೂಟದ ಪುಮುಖ ನಾಯಕರು, ಅವರು ಎರಡು ಕಲ್ಲಿನ ಮೇಲೆ ಕಾಲಿಟ್ಟಿಲ್ಲ. ಶರದ್ ಪವಾರ್ ಬಗ್ಗೆ ಯಾರಿಗೂ ಅನುಮಾನ ಇಲ್ಲ” ಎಂದು ರಾವುತ್ ಹೇಳಿದ್ದಾರೆ.
ಶಿವಸೇನೆ ಹಾಗೂ ಎನ್ಸಿಪಿ ಎರಡೂ ಪಕ್ಷಗಳು ಒಡೆದುಹೋಗಿದ್ದರಿಂದ ನಷ್ಟವಾಗಿದೆ ಎನ್ನುವ ವಾದವನ್ನು ಸಂಜಯ್ ರಾವುತ್ ಅವರು ತಳ್ಳಿಹಾಕಿದ್ದಾರೆ.
ನಮ್ಮ ಪಕ್ಷ ವಿಭಜನೆಯಾಗಿಲ್ಲ: ಶರದ್ ಪವಾರ್
ಮತ್ತೊಂದೆಡೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೂಡ ತಮ್ಮ ಪಕ್ಷ ವಿಭಜನೆಯಾಗಿದೆ ಎನ್ನುವುದನ್ನು ನಿರಾಕರಿಸಿದ್ದಾರೆ. ”ಕೆಲವು ಶಾಸಕರು ಬಿಟ್ಟು ಹೋಗಿದ್ದು ನಿಜವಷ್ಟೇ, ಶಾಸಕರೆಂದರೆ ಇಡೀ ರಾಜಕೀಯ ಪಕ್ಷ ಅಲ್ಲ” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜಯಂತ್ ಪಾಟೀಲ್ ಅವರೇ ರಾಜ್ಯ ಘಟಕವನ್ನೂ ಮುನ್ನಡೆಸುತ್ತಿದ್ದಾರೆ. ಎನ್ಸಿಪಿಯಲ್ಲಿ ವಿಭಜನೆ ಉಂಟಾಗಿಲ್ಲ. ಕೆಲವು ಶಾಸಕರು ಪಕ್ಷ ಬಿಟ್ಟಿದ್ದಾರೆ ಎನ್ನುವುದು ನಿಜವಷ್ಟೇ.. ಆದರೆ ಶಾಸಕರೆಂದರೆ ಇಡೀ ರಾಜಕೀಯ ಪಕ್ಷ ಅಲ್ಲ, ಬಂಡಾಯಗಾರರ ಹೆಸರು ಹೇಳಿ ಅವರಿಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು?” ಎಂದು ಪವಾರ್ ಅವರು ಪ್ರಶ್ನೆ ಮಾಡಿದ್ದಾರೆ.
ಶಿಂದೆ ನೇತೃತ್ವದ ಸರ್ಕಾರಕ್ಕೆ ಸೇರುವ ಬಗ್ಗೆ ಕೆಲವು ಶಾಸಕರು ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾವು ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ವಿರೋಧಿಸುತ್ತೇವೆ. ಕೇಂದ್ರ ತನಿಖಾ ತಂಡಗಳ ದುರ್ಬಳಕೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಅಜಿತ್ ಪವಾರ್ ಹಾಗೂ 8 ಶಾಸಕರು ಜುಲೈ 2ರಂದು ಏಕನಾಥ ಶಿಂದನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು. ಅಜಿತ್ ಉಪ ಮುಖ್ಯಮಂತ್ರಿಯಾಗಿಯೂ ಕೆಲ ಶಾಸಕರು ಸಚಿವರಾಗಿಯೂ ಪ್ರಮಾಣವಚನ ಸ್ವೀಕಾರ ಮಾಡಿದ್ದರು.