Homeಮುಖಪುಟಪಾದ್ರಿಯಿಂದ ಮುಸ್ಲಿಂ ವಿರೋಧಿ ಭಾಷಣ - ಪ್ರಾರ್ಥನಾ ಸಭೆಯಿಂದ ಹೊರನಡೆದ ಕ್ರೈಸ್ತ ಸನ್ಯಾಸಿನಿಯರು!

ಪಾದ್ರಿಯಿಂದ ಮುಸ್ಲಿಂ ವಿರೋಧಿ ಭಾಷಣ – ಪ್ರಾರ್ಥನಾ ಸಭೆಯಿಂದ ಹೊರನಡೆದ ಕ್ರೈಸ್ತ ಸನ್ಯಾಸಿನಿಯರು!

- Advertisement -
- Advertisement -

ಕೇರಳದ ಪಾಲಾ ಬಿಷಪ್‌ ಜೋಸೆಫ್‌‌‌ ಕಲ್ಲರಂಗಟ್ ಅವರ ಮುಸ್ಲಿಂ ವಿರೋಧಿ ಹೇಳಿಕೆ ರಾಜ್ಯದಾದ್ಯಂತ ಚರ್ಚೆಯಾಗುತ್ತಿರುವ ಸಮಯದಲ್ಲೆ, ಕೊಟ್ಟಾಯಂನ ಕುರವಿಲಂಗಾಡ್‌‌ನ ಮತ್ತೊಬ್ಬ ಕ್ರಿಶ್ಚಿಯನ್ ಧರ್ಮಗುರುವೊಬ್ಬರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆಂದು ಅಲ್ಲಿನ ನಾಲ್ವರು ಕ್ರೈಸ್ತ ಸನ್ಯಾಸಿನಿಯರು ಆರೋಪಿಸಿದ್ದಾರೆ. ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸನ್ಯಾಸಿನಿಯರು ಪಾರ್ಥನಾ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.

ಸೆಪ್ಟೆಂಬರ್ 13 ರ ಭಾನುವಾರದಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸನ್ಯಾಸಿನಿಯರು, “ಸೈಂಟ್‌ ಪ್ರಾನ್ಸಿಸ್‌‌ ಚರ್ಚಿನ ಪ್ರಾರ್ಥನಾ ಸಭೆಯಲ್ಲಿ ಅಲ್ಲಿನ ಪಾದ್ರಿಯಾದ ರಾಜೀವ್, ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಮುದ್ವೇಷ ಬಿತ್ತುವ ವರದಿಗಳಿಂದ ದೇಶಕ್ಕೆ ಕೆಟ್ಟ ಹೆಸರು: ಸುಪ್ರೀಂ ಆತಂಕ

‘ಮುಸ್ಲಿಂ ವಿರೋಧಿ ಭಾಷಣ ಈ ಹಿಂದೆಯು ಮಾಡಿದ್ದರು’- ಸನ್ಯಾಸಿನಿಯರ ಆರೋಪ

ಪಾದ್ರಿ ರಾಜೀವ್ ಅವರು ಈ ಹಿಂದೆ ಕೂಡಾ ಮುಸ್ಲಿಂ ವಿರೋಧಿ ಬಾಷಣ ಮಾಡಿದ್ದರು ಎಂದು ಸನ್ಯಾಸಿನಿಯರು ಹೇಳಿದ್ದಾರೆ. ಜೊತೆಗೆ, ‘ಲವ್ ಜಿಹಾದ್’ ಮತ್ತು ‘ಮಾದಕದ್ರವ್ಯ ಜಿಹಾದ್’ ಕುರಿತ ಮಾರ್ ಜೋಸೆಫ್ ಕಲ್ಲರಂಗಟ್ ಅವರ ಹೇಳಿಕೆಗಳನ್ನು ಬೆಂಬಲಿಸದಂತೆ ಜನರನ್ನು ಅವರು ಕೇಳಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸನ್ಯಾಸಿನಿ ಅನುಪಮಾ, “ಇಂದಿನ (ಸೆಪ್ಟೆಂಬರ್ 12) ಪ್ರಾರ್ಥನೆಯ ಸಮಯದಲ್ಲಿ ಕೋಮುವಾದದ ಬೀಜ ಬಿತ್ತಿದ್ದ ಪಾಲ ಬಿಷಪ್ ಅವರನ್ನು ಬೆಂಬಲಿಸಿ ರಾಜೀವ್‌ ಭಾಷಣ ಮಾಡಿದ್ದಾರೆ. ರಾಜೀವ್ ತಮ್ಮ ಭಾಷಣದಲ್ಲಿ ಮುಸ್ಲಿಮರು ಓಡಿಸುವ ಆಟೋಗಳಲ್ಲಿ ಓಡಾಡದಂತೆ ಮತ್ತು ಅವರಿಂದ ತರಕಾರಿಗಳಂತಹ ವಸ್ತುಗಳನ್ನು ಕೊಳ್ಳದಂತೆ ಹೇಳಿದರು. ಅವರು ಇಂತಹ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಮುಸ್ಲಿಮರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಆದರೆ ಇಂದು, ನಾವು ಪ್ರತಿಕ್ರಿಯಿಸದೇ ಇರಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಅಲ್ಲಿಂದ ಹೊರಬಂದೆವು” ಎಂದು ಹೇಳಿದ್ದಾರೆ.

“ಕ್ರಿಸ್ತ ನಮಗೆ ಕಲಿಸಿದ ವಿಷಯವೇನೆಂದರೆ ಎಲ್ಲರನ್ನೂ ಪ್ರೀತಿಸುವುದಾಗಿದೆಯೆ ಹೊರತು ಕೋಮುವಾದವನ್ನು ಬಿತ್ತುವುದಲ್ಲ. ಕ್ರಿಸ್ತ ನಮಗೆ ಏನನ್ನು ಬೋಧಿಸಿದ್ದಾರೋ ಅದಕ್ಕೆ ವಿರುದ್ಧವಾದ ವಿಷಯಗಳನ್ನು ಪಾದ್ರಿ ಹೇಳುತ್ತಿದ್ದಾಗ ನಮಗೆ ಅದನ್ನು ನೋಡಿ ಸುಮ್ಮನಿರಲಾಗಿಲ್ಲ, ಅದಕ್ಕಾಗಿ ನಾವು ಪ್ರತಿಕ್ರಿಯಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ಮುಸ್ಲಿಂ ವಿರೋಧಿ ಮತ್ತು ಕೋಮುವಾದಿ ಹೇಳಿಕೆ ನೀಡಿದ್ದಕ್ಕಾಗಿ ಪಾದ್ರಿ ರಾಜೀವ್ ಅವರ ವಿರುದ್ದ ಪ್ರಕರಣ ದಾಖಲಾಗಿರುವುದು ಇನ್ನೂ ವರದಿಯಾಗಿಲ್ಲ.

ವಿಶೇಷವೇನೆಂದರೆ, ಇದೇ ಸನ್ಯಾಸಿನಿಯರು ಈ ಹಿಂದೆ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಬಂಧಿಸುವಂತೆ ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದರು.

2018 ರಲ್ಲಿ ಕೊಚ್ಚಿಯಲ್ಲಿ ಬಿಷಪ್ ಫ್ರಾಂಕೊ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸನ್ಯಾಸಿನಿಯರು ಬಹಿರಂಗ ಪ್ರತಿಭಟನೆ ನಡೆಸಿದ್ದರು. ಅತ್ಯಾಚಾರ ಸಂತ್ರಸ್ತೆಯ ಬೆಂಬಲಕ್ಕೆ ನಿಂತಿದ್ದ ಇವರು ಐತಿಹಾಸಿಕ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮವಾಗಿ, ಮೂರು ದಿನಗಳ ವಿಚಾರಣೆಯ ನಂತರ 2018 ರ ಸೆಪ್ಟೆಂಬರ್‌ನಲ್ಲಿ ಬಿಷಪ್‌ ಫ್ರಾಂಕೊ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ದ್ವೇಷ ಭಾಷಣ ಆರೋಪ: ಜಾಮಿಯಾ ಶೂಟರ್ ಬಂಧನ

ವಿವಾದಕ್ಕೆ ಕಾರಣವಾದ ಪಾಲಾ ಬಿಷಪ್‌ ಜೋಸೆಫ್‌‌‌ ಕಲ್ಲರಂಗಟ್ ಹೇಳಿಕೆ

ಸೆಪ್ಟೆಂಬರ್ 9 ರ ಬುಧವಾರದಂದು ಪಾಲಾ ಬಿಷಪ್‌ ಜೋಸೆಫ್‌‌‌ ಕಲ್ಲರಂಗಟ್ ಅವರು ಚರ್ಚ್‌ನಲ್ಲಿನ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, “ಕೇರಳದಲ್ಲಿ ಮುಸ್ಲಿಮೇತರರು ರಾಜ್ಯದಲ್ಲಿ ‘ಮಾದಕ ದ್ರವ್ಯ ಜಿಹಾದ್‌‌’ಗೆ ಒಳಗಾಗುತ್ತಿದ್ದಾರೆ. ‘ಮಾದಕದ್ರವ್ಯ ಜಿಹಾದ್’ ಮಾಡುವ ಮೂಲಕ ಮುಸ್ಲಿಮರಲ್ಲದವರ, ವಿಶೇಷವಾಗಿ ಯುವಜನರನ್ನು ಮಾದಕ ವ್ಯಸನಕ್ಕೆ ತುತ್ತಾಗುವಂತೆ ಮಾಡಿ ಅವರ ಜೀವನವನ್ನು ಹಾಳುಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದರು.

ಆದರೆ ಈ ಹೇಳಿಕೆಗೆ ಅವರು ಯಾವುದೇ ಪುರಾವೆಗಳನ್ನು ನೀಡಿರಲಿಲ್ಲ. ಇವರ ಹೇಳಿಕೆ ವರದಿಯಾಗುತ್ತಿದ್ದಂತೆ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕೇರಳದ ಅನೇಕ ಗಣ್ಯರು ಬಿಷಪ್ ಅವರ ಹೇಳಿಕೆಯನ್ನು ವಿರೋಧಿಸಿದ್ದರು ಮತ್ತು ಅವರ ವಿರುದ್ದ ಪ್ರಕರಣವು ದಾಖಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಮಾದಕದ್ರವ್ಯಕ್ಕೆ ಧಾರ್ಮಿಕ ಬಣ್ಣ ನೀಡುವ ಅಗತ್ಯವಿಲ್ಲ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರು ಧಾರ್ಮಿಕ ವಿಭಜನೆಯನ್ನು ಮಾಡಬಾರದು” ಎಂದು ಹೇಳಿದ್ದರು.

ಪ್ರತಿಪಕ್ಷದ ನಾಯಕ ವಿಡಿ ಸತೀಶನ್ ಅವರು ಕೂಡಾ ಬಿಷಪ್ ಅವರ ಈ ಹೇಳಿಕೆಯನ್ನು ಖಂಡಿಸಿದ್ದರು. “ಅಪರಾಧಗಳಿಗೆ ಧರ್ಮ, ಜಾತಿ ಅಥವಾ ಲಿಂಗವಿಲ್ಲ ಮತ್ತು ಇದಕ್ಕಾಗಿ ಒಂದು ನಿರ್ದಿಷ್ಟ ಧರ್ಮವನ್ನು ಆರೋಪಿಸುವುದು ತಪ್ಪು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...