ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಸಂಬಂಧಿಸಿ, ಹಿಂಸಾಚಾರ ಪ್ರಕರಣದ ಆರೋಪಿಯೊಬ್ಬನ ‘ತಪ್ಪೊಪ್ಪಿಗೆ ಹೇಳಿಕೆ’ ಎಂದು ಪ್ರಸಾರ ಮಾಡಿದ ವರದಿಯ ಆಧಾರ ಯಾವುದೆಂದು ತಿಳಿಸುವಂತೆ ದೆಹಲಿ ಹೈಕೋರ್ಟ್ ‘ಝೀ ನ್ಯೂಸ್’ಗೆ ಸೂಚನೆ ನೀಡಿದೆ.
ಪೊಲೀಸರು ಈ ಕುರಿತು ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ಇದರ ನಂತರ ನ್ಯಾಯಾಲಯ ಝೀ ನ್ಯೂಸ್ನಿಂದ ಮಾಹಿತಿ ಕೇಳಿದೆ.
ಇದನ್ನೂ ಓದಿ: ದೆಹಲಿಯಿಂದ ಮಂಗಳೂರಿನವರೆಗೆ CAA-NRC ವಿರೋಧಿಗಳನ್ನು ಹಣಿಯಲು ಹಿಂಬಾಗಿಲ ಸಂಚು
ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ಎಂಬವರು, ಪೊಲೀಸರಿಂದ ಟಿವಿ ವಾಹಿನಿಗಳಿಗೆ ಸೋರಿಕೆಯಾಗಿದೆಯೆನ್ನಲಾದ ತನಿಖೆಗೆ ಸಂಬಂಧಿಸಿದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತೆಗೆದು ಹಾಕುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಜಾಮೀನುಯ ಅರ್ಜಿ ವಿಚಾರಣೆಗೆ ಬಾಕಿಯಿರುವ ಸಂದರ್ಭ ಈ ಪ್ರಕರಣದ ನ್ಯಾಯಸಮ್ಮತ ವಿಚಾರಣೆಗೆ ಅಡ್ಡಿ ತರುವ ಉದ್ದೇಶದಿಂದ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತೆಂದು ಆಸಿಫ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದ್ದು, ಪೊಲೀಸರು ಮಾಹಿತಿಯನ್ನು ತಾವು ಸೋರಿಕೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ವರದಿ ಯಾವ ಆಧಾರದಲ್ಲಿ ಪ್ರಸಾರ ಮಾಡಲಾಗಿದೆ ಎಂಬ ಮಾಹಿತಿ ನೀಡುವಂತೆ ನ್ಯಾಯಾಲಯ ‘ಝೀ ನ್ಯೂಸ್’ ವಕೀಲರಿಗೆ ಸೂಚಿಸಿದೆ.
ಹಿಂಸಾಚಾರದಲ್ಲಿ 53 ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು. ಸಾವಿರಾರು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಹೆಸರಲ್ಲಿ ಕೇಂದ್ರ ಸರ್ಕಾರವು ಹಲವಾರು ಸಾಮಾಜಿಕ ಹೋರಾಟಗಾರರನ್ನು ಬಂಧಿಸುತ್ತಿವೆ.
ಇದನ್ನೂ ಓದಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶ ಎಸ್.ಮುರಳೀಧರ್ ವರ್ಗಾವಣೆ