Homeಮುಖಪುಟನ್ಯಾಯಾಧೀಶರ ವರ್ಗಾವಣೆಯಿಂದಾಗಿ ದೆಹಲಿ ಗಲಭೆ ಪ್ರಕರಣದ 17,000 ಪುಟಗಳ ಆರೋಪಪಟ್ಟಿ ಮರುಮಂಡನೆ; ಸಂತ್ರಸ್ತರಿಗೆ ಹತಾಶೆ

ನ್ಯಾಯಾಧೀಶರ ವರ್ಗಾವಣೆಯಿಂದಾಗಿ ದೆಹಲಿ ಗಲಭೆ ಪ್ರಕರಣದ 17,000 ಪುಟಗಳ ಆರೋಪಪಟ್ಟಿ ಮರುಮಂಡನೆ; ಸಂತ್ರಸ್ತರಿಗೆ ಹತಾಶೆ

- Advertisement -
- Advertisement -

ನವದೆಹಲಿ: ನ್ಯಾಯಾಧೀಶರ ವರ್ಗಾವಣೆಯಿಂದಾಗಿ 2020ರ ದೆಹಲಿ ಗಲಭೆ ಪ್ರಕರಣದ ತೀರ್ಪು ಮತ್ತೊಮ್ಮೆ ನಿಧಾನಗತಿಗೆ ಕಾರಣವಾಗಿದೆ. ಈ ಬೆಳವಣಿಗೆ ಪ್ರಕರಣದ ಮುಸ್ಲಿಂ ಸಂತ್ರಸ್ತ ಕುಟುಂಬಗಳು ಮತ್ತು ಆರೋಪಿಗಳಲ್ಲಿ ಹತಾಶೆಯನ್ನು ಮೂಡಿಸಿದೆ.

ಈ ಪ್ರಕರಣವನ್ನು ಹೊಸ ನ್ಯಾಯಾಧೀಶರಿಗೆ ವರ್ಗಾಯಿಸಿದ ನಂತರ ದೆಹಲಿ ಪೊಲೀಸರು ಈಗ 17,000 ಪುಟಗಳ ಆರೋಪಪಟ್ಟಿಯನ್ನು ಹೊಸದಾಗಿ ಮಂಡಿಸಬೇಕಾಗುತ್ತದೆ. ಇದು ಕಾನೂನು ತಜ್ಞರು ಮತ್ತು ಸಮುದಾಯದ ಮುಖಂಡರು ಸೇರಿದಂತೆ ಹಲವಾರು ಕಡೆಗಳಿಂದ ಟೀಕೆಗೆ ಕಾರಣವಾಗಿದೆ. ನ್ಯಾಯಾಧೀಶರ ವರ್ಗಾವಣೆಯ ಕಾರಣದಿಂದಾಗುವ ಈ ವಿಳಂಬವನ್ನು ನಮಗೆ ನ್ಯಾಯ ನಿರಾಕರಿಸುವ ವಿಶಾಲ ಮಾದರಿಯ ಭಾಗವೆಂದು ಸಂತ್ರಸ್ತರು  ಪರಿಗಣಿಸುತ್ತಾರೆ.

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಅತ್ಯಂತ ಗಂಬೀರ ಕೋಮುಗಲಭೆ ಉಂಟಾಗಿತ್ತು.  ಈ ಹಿಂಸಾಚಾರದಲ್ಲಿ 53 ಜನರು ಜೀವ ಕಳೆದುಕೊಂಡಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ನಡೆದು 4 ವರ್ಷಗಳು ಕಳೆದಿವೆ, ಆದರೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಎಳೆದಾಡಲಾಗುತ್ತಿದೆ.

ಸೋಮವಾರದಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಲಲಿತ್ ಕುಮಾರ್ ನಿರ್ದೇಶನ ನೀಡಿ, ಗಲಭೆಯ ಆರೋಪಗಳ ಕುರಿತು ವಾದಗಳನ್ನು ಪೂರ್ಣಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿ ವಕೀಲರು ಸ್ಪಷ್ಟಪಡಿಸುವಂತೆ ಕೇಳಿದರು. “ನಾವು ವಾದಗಳನ್ನು ಮತ್ತು ಆರೋಪಗಳ ರಚನೆಯನ್ನು ವೇಗಗೊಳಿಸಬೇಕು. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಬಿಡಬಾರದು” ಎಂದು ಅವರು ಹೇಳಿದರು. ಮುಂದಿನ ವಿಚಾರಣೆಯನ್ನು ನಾಳೆಗೆ (ಜೂನ್ 6) ಮುಂದೂಡಲಾಗಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಸಮೀರ್ ಬಾಜ್‌ಪೈ ಅವರ ವರ್ಗಾವಣೆಯ ನಂತರ ಈ ಪ್ರಕರಣವು ನ್ಯಾಯಾಧೀಶ ಲಲಿತ್ ಕುಮಾರ್ ಮುಂದೆ ಬಂದಿದೆ. ಎಎಸ್‌ಜೆ ಲಲಿತ್ ಕುಮಾರ್ ಈಗ ಅಧಿಕಾರ ವಹಿಸಿಕೊಂಡಿದ್ದಾರೆ. ಡಿಸೆಂಬರ್ 2023ರಲ್ಲಿ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ತಾವು  ವರ್ಗಾವಣೆಯಾಗುವ ಮೊದಲು ಈ ಪ್ರಕರಣದ ದೈನಂದಿನ ವಿಚಾರಣೆಗೆ ಆದೇಶಿಸಿದ್ದರು.  ಅವರ ಈ ಆದೇಶವನ್ನು ನಂತರ ಬಂದ  ನ್ಯಾಯಾಧೀಶ ಬಾಜ್‌ಪೈ ಬದಲಾಯಿಸಿದ್ದರು. ನ್ಯಾಯಾಂಗ ಪುನರ್ರಚನೆಯಿಂದಾಗಿ ಪ್ರಕರಣಕ್ಕೆ ಅಡ್ಡಿಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಮತ್ತೊಂದು ವಿಳಂಬದ ಸುದ್ದಿ ಮುಸ್ಲಿಂ ಸಮುದಾಯದ ಅನೇಕರನ್ನು ಕೆರಳಿಸಿದೆ.

ಈ ಗಲಭೆಯಲ್ಲಿ ಸಹೋದರನನ್ನು ಕಳೆದುಕೊಂಡಿರುವ ಮೊಹಮ್ಮದ್ ರಿಜ್ವಾನ್ ಅವರು, “ನಾವು ನ್ಯಾಯಕ್ಕಾಗಿ ಕಳೆದ 4 ವರ್ಷಗಳಿಂದಲೂ ಕಾಯುತ್ತಿದ್ದೇವೆ. ನಾವು ಪ್ರತಿ ಬಾರಿ ತೀರ್ಪಿಗಾಗಿ ಕಾಯುತ್ತಿರುವಾಗ ಅವರು ನ್ಯಾಯಾಧೀಶರನ್ನು ಬದಲಾಯಿಸುತ್ತಾರೆ. ಸತ್ಯ ಹೊರಬರುವುದನ್ನು ಅವರು ಬಯಸುತ್ತಿಲ್ಲ ಎಂದು ಕಾಣುತ್ತಿದೆ” ಎಂದರು.

ಆರೋಪಿಗಳಲ್ಲಿ ಒಬ್ಬರನ್ನು ಪ್ರತಿನಿಧಿಸುತ್ತಿರುವ ವಕೀಲೆ ಫರಾನಾಜ್ ಅವರು, ‘ನ್ಯಾಯಾಧೀಶರ ನಿರಂತರ ಬದಲಾವಣೆ ಸಾಮಾನ್ಯವಲ್ಲ. ನ್ಯಾಯ ನೀಡುವುದಕ್ಕಿಂತ ಪ್ರಕರಣವನ್ನು ವಿಳಂಬ ಮಾಡುವುದರಲ್ಲಿ ರಾಜ್ಯವು ಹೆಚ್ಚು ಆಸಕ್ತಿ ತೋರುತ್ತಿದೆ. ಏತನ್ಮಧ್ಯೆ, ಮುಗ್ಧ ಜನರು ಕಠಿಣ ಕಾನೂನುಗಳ ಅಡಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ” ಎಂದರು.

ಪ್ರಕರಣದ ಆರೋಪಿಗಳಲ್ಲಿ ತಾಹಿರ್ ಹುಸೇನ್, ಉಮರ್ ಖಾಲಿದ್, ಖಾಲಿದ್ ಸೈಫಿ, ಇಶ್ರತ್ ಜಹಾನ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್ ಮತ್ತು ಶಾರ್ಜೀಲ್ ಇಮಾಮ್ ಸೇರಿದ್ದಾರೆ. ಇವರೆಲ್ಲರೂ ಮುಸ್ಲಿಮರು ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಅವರಲ್ಲಿ ಹಲವರು ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ.

ಸಹ ಆರೋಪಿಗಳಲ್ಲಿ ಒಬ್ಬರಾದ ಶಿಫಾ-ಉರ್-ರೆಹಮಾನ್ ಈಗಾಗಲೇ ಮೂರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ರಾಜ್ಯವು ಯಾವುದೇ ನಿಜವಾದ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ ಎಂದು ಅವರ ಕುಟುಂಬ ಹೇಳಿಕೊಂಡಿದೆ. ಅವರ ಪತ್ನಿ ಸಬಿಹಾ ಅವರು, “ನಮ್ಮ ಮಕ್ಕಳು ತಮ್ಮ ತಂದೆಯಿಲ್ಲದೆ ಬೆಳೆಯುತ್ತಿದ್ದಾರೆ. ಪ್ರತಿ ಕೆಲವು ತಿಂಗಳಿಗೊಮ್ಮೆ ನ್ಯಾಯಾಲಯವು ಈ ಬಾರಿ ಅಂತಿಮವಾಗಿ ತೀರ್ಪು ನೀಡುತ್ತದೆ ಎಂದು ನಮಗೆ ಹೇಳಲಾಗುತ್ತದೆ. ಆದರೆ ಈಗ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ನಮಗೆ ಈಗ ಏನೂ ದೋಚದಾಗಿದೆ” ಎಂದರು.

ನ್ಯಾಯಾಧೀಶರು ಬದಲಾಗಿರುವುದರಿಂದ ದೆಹಲಿ ಪೊಲೀಸರು 17,000 ಪುಟಗಳ ಚಾರ್ಜ್‌ಶೀಟ್ ಸೇರಿದಂತೆ ಎಲ್ಲಾ ಪುರಾವೆಗಳನ್ನು ಮತ್ತೊಮ್ಮೆ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗುತ್ತದೆ. ಈ ಹಿಂದೆಯೇ ವಾದಗಳನ್ನು ಪೂರ್ಣಗೊಳಿಸಿದ್ದ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಅಮಿತ್ ಪ್ರಸಾದ್ ಮತ್ತು ಮಧುಕರ್ ಪಾಂಡೆ ಕೂಡ ತಮ್ಮ ಸಲ್ಲಿಕೆಗಳನ್ನು ಪುನರಾರಂಭಿಸಬೇಕಾಗುತ್ತದೆ.

ನ್ಯಾಯಾಲಯದಲ್ಲಿ ನ್ಯಾಯಾಧೀಶ ಲಲಿತ್ ಕುಮಾರ್ ಎಲ್ಲಾ ವಕೀಲರನ್ನು ವಾದಗಳನ್ನು ಪೂರ್ಣಗೊಳಿಸಲು ತಮ್ಮ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಕೇಳಿಕೊಂಡರು. “ಇದು ಅಂತ್ಯವಿಲ್ಲದ ಪ್ರಕ್ರಿಯೆಯಲ್ಲ. ಎರಡೂ ಕಡೆಯವರು ಸಹಕರಿಸಬೇಕು” ಎಂದು ಅವರು ಈ ವಾರ ಕಿಕ್ಕಿರಿದ ನ್ಯಾಯಾಲಯದಲ್ಲಿ ಹೇಳಿದರು.

ಆದಾಗ್ಯೂ ನ್ಯಾಯವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲು ಇಂತಹ ಪುನರಾರಂಭಗಳನ್ನು ಬಳಸಲಾಗುತ್ತಿದೆ ಎಂದು ವಿಮರ್ಶಕರು ವಾದಿಸುತ್ತಾರೆ. ಮಾನವ ಹಕ್ಕುಗಳ ವಕೀಲ ಫೈಸಲ್ ಖಾನ್ ಅವರು, “ರಾಜ್ಯವು ಗಂಭೀರವಾಗಿದ್ದರೆ ಈ ರೀತಿ ಮತ್ತೆ ಮತ್ತೆ ಸಂಭವಿಸಲು ಬಿಡುತ್ತಿರಲಿಲ್ಲ. ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದರು.

ದೆಹಲಿ ಪೊಲೀಸರ ಆರೋಪಪಟ್ಟಿಯಲ್ಲಿ ಗಲಭೆಗಳು ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ನಡೆದ ಪೂರ್ವಯೋಜಿತ ಪಿತೂರಿ ಎಂದು ಆರೋಪಿಸಲಾಗಿದೆ. ಇದು ಮುಸ್ಲಿಂ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹಿಂಸಾಚಾರಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಆದರೆ ವಕೀಲರು ಮತ್ತು  ಕಾರ್ಯಕರ್ತರು ಇದನ್ನು ತಿರಸ್ಕರಿಸಿದ್ದಾರೆ. ಹಿಂದೂ ಗುಂಪುಗಳು ಮುಸ್ಲಿಂ ನೆರೆಹೊರೆಗಳು, ಮಸೀದಿಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊಗಳು ಮತ್ತು ಸಾಕ್ಷಿಗಳ ಸಾಕ್ಷ್ಯಗಳನ್ನು ಇವರು ತೋರಿಸಿದ್ದಾರೆ.

ಹಿರಿಯ ಕಾರ್ಯಕರ್ತೆ ಕವಿತಾ ಕೃಷ್ಣನ್ ಅವರು, “ನಿಜವಾದ ಗಲಭೆಕೋರರ ವಿರುದ್ಧ ಸಾಕಷ್ಟು ಪುರಾವೆಗಳಿವೆ. ಅವರಲ್ಲಿ ಹೆಚ್ಚಿನವರು ಬಹುಸಂಖ್ಯಾತ ಸಮುದಾಯದವರಾಗಿದ್ದಾರೆ. ಮುಸ್ಲಿಮರನ್ನು ಮಾತ್ರ ಬಂಧಿಸಿರುವುದು ಆಘಾತಕಾರಿ. ಇದು ಕೇವಲ ಅನ್ಯಾಯವಲ್ಲ, ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನಗೊಳಿಸುವ ಪಿತೂರಿಯಾಗಿದೆ” ಎಂದಿದ್ದಾರೆ.

ಗಲಭೆಗೆ ಮುನ್ನ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದಕ್ಕಾಗಿ ಮತ್ತು ಪಕ್ಷಪಾತದ ತನಿಖೆಗಾಗಿ ದೆಹಲಿ ಪೊಲೀಸರನ್ನು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 2021ರ ವರದಿಯು ಟೀಕಿಸಿತ್ತು. ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡಿದ ಬಿಜೆಪಿ ನಾಯಕರ ವಿರುದ್ಧ ಯಾವುದೇ ಸರಿಯಾದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಲಭೆಯಲ್ಲಿ ತನ್ನ ಮಗನನ್ನು ಕಳೆದುಕೊಂಡ ಅಸ್ಮಾ ಬೇಗಂ ಅವರು, “ಅವರು ನನ್ನ ಮಗನನ್ನು ಹತ್ಯೆ ಮಾಡಿ, ನಮ್ಮ ಮನೆಯನ್ನು ಸುಟ್ಟುಹಾಕಿದರು. ಈಗ ಅವರು ನ್ಯಾಯಾಲಯದಲ್ಲಿ ನಮ್ಮ ಭರವಸೆಯನ್ನು ಹಿಸುಕುತ್ತಿದ್ದಾರೆ. ನ್ಯಾಯಾಧೀಶರು ಬದಲಾಗುತ್ತಲೇ ಇದ್ದರೆ, ನಮಗೆ ನ್ಯಾಯ ಹೇಗೆ ಸಿಗುತ್ತದೆ?” ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ಪ್ರಸ್ತುತ ಹೀಗೆ ಮುಂದುವರಿದರೆ ಪ್ರಕರಣವು ಇನ್ನೂ ಹಲವಾರು ವರ್ಷಗಳವರೆಗೆ ಎಳೆಯಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ. ವಿಚಾರಣೆ ಪ್ರಾರಂಭವಾಗುವ ಹೊತ್ತಿಗೆ ಹೆಚ್ಚಿನ ಸಾಕ್ಷ್ಯಗಳು ದುರ್ಬಲವಾಗಬಹುದು ಮತ್ತು ಸಾಕ್ಷಿಗಳು ಇನ್ನು ಮುಂದೆ ಪ್ರಮುಖ ವಿವರಗಳನ್ನು ನೆನಪಿಸಿಕೊಳ್ಳದಿರಬಹುದು ಎಂದು ಹಲವರು ಅಭಿಪ್ರಾಯಿಸಿದ್ದಾರೆ.

2020ರ ದೆಹಲಿ ಗಲಭೆ ಪ್ರಕರಣವು ಈಗ ನ್ಯಾಯವ್ಯವಸ್ಥೆಯಲ್ಲಿ ತಮ್ಮ ಸ್ಥಾನದ ಬಗ್ಗೆ ಮುಸ್ಲಿಮರಲ್ಲಿ ಹೆಚ್ಚುತ್ತಿರುವ ಹತಾಶೆಯ ಸಂಕೇತವಾಗಿದೆ. ಪ್ರತಿ ವಿಳಂಬದೊಂದಿಗೆ, ಭರವಸೆಗಳು ಸ್ವಲ್ಪ ಹೆಚ್ಚು ಕುಸಿಯುತ್ತವೆ.
ಈಗ ಬೇಡಿಕೆ ಸ್ಪಷ್ಟವಾಗಿದೆ. ಇಂತಹ ವಿಳಂಬವನ್ನು ನಿಲ್ಲಿಸಿ, ನೆಪಗಳನ್ನು ನಿಲ್ಲಿಸಿ ಮತ್ತು ವಿಚಾರಣೆಯನ್ನು ಪ್ರಾರಂಭಿಸಿ ಎಂದು ಸೀಲಾಂಪುರದ ಸಮಾಜ ಸೇವಕ ಮೊಹಮ್ಮದ್ ಆರಿಫ್ ಹೇಳುತ್ತಾರೆ.

ಮುಂದಿನ ವಿಚಾರಣೆಯನ್ನು ಜೂನ್ 6 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಅನೇಕರು ದೆಹಲಿಯ ಮುಸ್ಲಿಮರಿಗೆ ನ್ಯಾಯ ಎಂದಾದರೂ ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಬೇಷರತ್‌ ಗಾಝಾ ಕದನ ವಿರಾಮ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಮತ್ತೆ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...