ಚುನಾವಣಾ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಪ್ರಕಟಿಸದೇ ಇರುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಚುನಾವಣಾ ಆಯೋಗಕ್ಕೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಸೋಮವಾರ ಪತ್ರ ಬರೆದಿದೆ.
2018ರ ಸೆಪ್ಟೆಂಬರ್ನಲ್ಲಿ ನೀಡಿದ ತೀರ್ಪಿನಲ್ಲಿ, ಕ್ರಿಮಿನಲ್ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಅಂತಹ ನಾಯಕರನ್ನು ಅಭ್ಯರ್ಥಿಗಳಾಗಿ ನಾಮನಿರ್ದೇಶನ ಮಾಡುವ ಹಿಂದಿನ ಕಾರಣವನ್ನು ಸೂಚಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಫೆಬ್ರವರಿ 2020ರಲ್ಲಿ, ತನ್ನ ಆದೇಶವನ್ನು ಕಾರ್ಯಗತಗೊಳಿಸದ ಕುರಿತು ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಅಂತಹ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದ 72 ಗಂಟೆಗಳ ಒಳಗೆ ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಿಂದಿನ ಕಾರಣಗಳನ್ನು ತಿಳಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಎಲ್ಲ ಪಕ್ಷಗಳು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
ಹಲವು ಪಕ್ಷಗಳು ತಮ್ಮ ರಾಜಕೀಯ ಜನಪ್ರಿಯತೆಯ ಹೊರತಾಗಿ ವಿವರಗಳನ್ನು ಪ್ರಕಟಿಸಲು ಸರಿಯಾದ ವೆಬ್ಸೈಟ್ಗಳನ್ನು ಹೊಂದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ.
2021 ಮತ್ತು 2023ರ ನಡುವಿನ 16 ವಿಧಾನಸಭಾ ಚುನಾವಣೆಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಒತ್ತಾಯಿಸಿದೆ.
”ಕೆಲವು ರಾಜಕೀಯ ಪಕ್ಷಗಳ ವೆಬ್ಸೈಟ್ ಲಿಂಕ್ಗಳು ಓಪನ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ಪಕ್ಷಗಳ ವೆಬ್ಸೈನ್ನಲ್ಲಿ ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರಣಗಳನ್ನು ನೀಡುವಾಗ, ರಾಜಕೀಯ ಪಕ್ಷಗಳು ವಿಭಿನ್ನ ಅಭ್ಯರ್ಥಿಗಳಿಗೆ ಒಂದೇ ಕಾರಣವನ್ನು ಕಾಪಿ-ಪೇಸ್ಟ್ ಮಾಡಿವೆ” ಎಂದು ಪತ್ರದಲ್ಲಿ ತಿಳಿಸಿದೆ.
ನಿಯಮಗಳನ್ನು ಪಾಲಿಸದ ತಪ್ಪಿತಸ್ಥ ಪಕ್ಷಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು, ಅವುಗಳ ನೋಂದಣಿ ರದ್ದುಪಡಿಸಲು ಮತ್ತು ನ್ಯಾಯಾಂಗ ನಿಂದನೆ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ಗೆ ಹೋಗುವಂತೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್ನಿಂದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಣಕ್ಕೆ