ಬಜೆಟ್ ಅಧಿವೇಶನದ ಸಮಯದಲ್ಲಿ ಸಂಸದರ ನಡವಳಿಕೆಯಿಂದ ಅಸ್ತವ್ಯಸ್ತತೆ ಉಂಟಾಗಿದ್ದು, ಅದು ಸವಲತ್ತುಗಳ ಉಲ್ಲಂಘನೆಯಾಗಿದೆ ಎಂದು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಅವರು ಹೇಳಿದ್ದಾರೆ. ಈ ವಿಚಾರವಾಗಿ 12 ಪ್ರತಿಪಕ್ಷಗಳ ಸಂಸದರ ಹೆಸರನ್ನು ಉಲ್ಲೇಖಿಸಿ ಅವರ ಮೇಲೆ ತನಿಖೆ ನಡೆಸಲು ವಿಶೇಷಾಧಿಕಾರಗಳ ಸಮಿತಿಗೆ ಅವರು ತಿಳಿಸಿದ್ದಾರೆ.
ಸಂಸದರು ಪದೇ ಪದೇ ಸದನದ ಬಾವಿಗೆ ನುಗ್ಗಿ, ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ರಾಜ್ಯಸಭೆಯ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಫೆಬ್ರವರಿ 18 ರಂದು ಹೊರಡಿಸಲಾದ ರಾಜ್ಯಸಭೆಯ ಬುಲೆಟಿನ್ ಪ್ರಕಾರ, 12 ಸಂಸದರಲ್ಲಿ ಒಂಬತ್ತು ಕಾಂಗ್ರೆಸ್ ಮತ್ತು ಮೂವರು ಆಮ್ ಆದ್ಮಿ ಪಕ್ಷದವರಾಗಿದ್ದಾರೆ. ಶಕ್ತಿಸಿನ್ಹ್ ಗೋಹಿಲ್, ನರನ್ಭಾಯ್ ಜೆ ರಥ್ವಾ, ಸೈಯದ್ ನಾಸಿರ್ ಹುಸೇನ್, ಕುಮಾರ್ ಕೇತ್ಕರ್, ಇಮ್ರಾನ್ ಪ್ರತಾಪ್ಗರ್ಹಿ, ಎಲ್ ಹನುಮಂತಯ್ಯ, ಫುಲೋ ದೇವಿ ನೇತಮ್, ಜೆಬಿ ಮಾಥರ್ ಹಿಶಾಮ್ ಮತ್ತು ರಂಜೀತ್ ರಂಜನ್ ಅವರನ್ನು ಧನ್ಖರ್ ಹೆಸರಿಸಿದ ಕಾಂಗ್ರೆಸ್ ನಾಯಕರು. ಇನ್ನು ಆಮ್ ಆದ್ಮಿ ಪಕ್ಷದಿಂದ ಸಂಜಯ್ ಸಿಂಗ್, ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್ ಹೆಸರು ಹೇಳಲಾಗಿದೆ.
ಅದಾನಿ ಗ್ರೂಪ್ನ ಹಗರಣದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಬಜೆಟ್ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿದವು. ಇದು ಪುನರಾವರ್ತಿತ ಮುಂದೂಡಿಕೆ ಮತ್ತು ಗದ್ದಲಕ್ಕೆ ಸಾಕ್ಷಿಯಾಯಿತು. ಈಗ ಮಾರ್ಚ್ 13ರಂದು ಸಂಸತ್ತು ಮತ್ತೆ ಸೇರಲಿದೆ.
ಇದನ್ನೂ ಓದಿ: ಹಿಂಡೆನ್ಬರ್ಗ್ ವರದಿ ಎಫೆಕ್ಟ್: $48 ಶತಕೋಟಿಗೆ ಕುಸಿದ ಅದಾನಿ ಆಸ್ತಿ
ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳು ಅದಾನಿ ಸಂಸ್ಥೆಯ ಜೊತೆಯಲ್ಲಿ ಹೂಡಿಕೆ ಮಾಡಿರುವುದರಿಂದ ಸಾಮಾನ್ಯ ನಾಗರಿಕರ ಹಣ ಕಳೆದುಹೋಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ಸಂಪೂರ್ಣ ತನಿಖೆಯಾಗಬೇಕೆಂದು ವಿರೋಧ ಪಕ್ಷಗಳ ಒಕ್ಕೂಟವು ಅಧಿವೇಶನದ ಸಮಯದಲ್ಲಿ ಒತ್ತಾಯಿಸಿದ್ದವು.
ದಶಕಗಳ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ಅದಾನಿ ಗ್ರೂಪ್ ತೊಡಗಿದೆ ಎಂದು ಅಮೆರಿಕ ಮೂಲದ ಕಂಪನಿ ಹಿಂಡೆನ್ಬರ್ಗ್ ರಿಸರ್ಚ್ ಆರೋಪ ಮಾಡಿದೆ. ಈ ಕುರಿತು ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದವು. ಇದರಿಂದ ಸದನವನ್ನು ಪದೇ ಪದೇ ಮುಂದೂಡುತ್ತ ಹೋಗಿದ್ದರಿಂದ ಸರಿಯಾದ ರೀತಿಯಲ್ಲಿ ಸದನ ನಡೆಸಲು ಸಾಧ್ಯವಾಗಲಿಲ್ಲ.