ಕೊರೊನ ಸೋಂಕಿತರನ್ನು ವಿಲನ್ ಗಳಂತೆ ನೋಡಬೇಡಿ. ಅವರೂ ನಮ್ಮ ನಿಮ್ಮಂತೆ ಮನುಷ್ಯರೇ ಎಂಬುದನ್ನು ಬೆಂಗಳೂರು ಸೇರಿದಂತೆ ರಾಜ್ಯದ ಜನತೆ ಅರ್ಥಮಾಡಿಕೊಂಡು ಹೋಗಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಸರ್ವಪಕ್ಷಗಳ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನ ಸೋಂಕು ಒಂದ ರೋಗ. ಸೋಂಕಿಗೆ ಒಳಗಾದವರನ್ನು ಬೇರೆ ರೀತಿಯಲ್ಲಿ ನೋಡಿ ಅವರಿಗೆ ಕಿರುಕುಳ ಕೊಡಬೇಡಿ ಎಂದು ಮನವಿ ಮಾಡಿದರು.
ಸರ್ವಪಕ್ಷ ಸಭೆಯಲ್ಲಿ ಶಾಸಕರು ಸಾಕಷ್ಟು ಸಲಹೆ ನೀಡಿದ್ದಾರೆ ಲಾಕ್ ಡೌನ್ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಲಾಕ್ ಡೌನ್ ಬಗ್ಗೆ ಅನಗತ್ಯವಾಗಿ ಸುದ್ದಿ ಮಾಡಬೇಡಿ. ಲಾಕ್ ಡೌನ್ ಯಾವುದೇ ಕಾರಣಕ್ಕು ಇರುವುದಿಲ್ಲ ಎಂಬುದನ್ನು ಮೂರು ಬಾರಿ ಉಚ್ಛರಿಸಿ ಹೇಳಿದರು.
ಕೊರೊನ ಸಂದರ್ಭದಲ್ಲಿ ಬಡವರು ಸಂಕಷ್ಟಕ್ಕೆ ಈಡಾಗಿದ್ದಾರೆ. ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಂಕು ಕಂಡುಬರುವ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ, ಲಾಕ್ ಡೌನ್ ಬೇಡ ಎಂದು ಕಾಂಗ್ರೆಸ್ ಶಾಸಕರು ಸೇರಿದಂತೆ ಎಲ್ಲರೂ ಸಲಹೆ ನೀಡಿರುವುದರಿಂದ ಲಾಕ್ ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೀವ ಮತ್ತು ಜೀವನ ಎರಡೂ ಇರಬೇಕು. ಜೀವವೂ ಇರಬೇಕು ಜೀವನವೂ ನಡೆಯಬೇಕು ಎಂಬ ಆಧಾರದ ಮೇಲೆ ಕೊರೊನ ಜೊತೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕೆಂಬುದು ಸರ್ಕಾರ ತೀರ್ಮಾನವಾಗಿದೆ ಎಂದರು.
ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು. ಮುಂದಿನ ದಿನಗಳಲ್ಲಿ 5 ಸಾವಿರದಿಂದ 7 ಸಾವಿರಕ್ಕೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಓದಿ: ಕೊರೊನಾ ಭಯ: ಬೆಂಗಳೂರಿನ ಆಸ್ಪತ್ರೆಯಲ್ಲಿ ಮಹಿಳಾ ರೋಗಿ ಅಸಹಜ ಸಾವು