Homeಕರ್ನಾಟಕಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

- Advertisement -
- Advertisement -

ದಕ್ಷಿಣ ಕನ್ನಡ ಹೇಗೆ ಹಿಂದುತ್ವದ ಪ್ರಯೋಗ ಶಾಲೆಯೋ ಹಾಗೆಯೇ ಉತ್ತರಕನ್ನಡವೆಂದರೆ ಪ್ರಳಯಾಂತಕ ಸರ್ಕಾರಿ ಯೋಜನೆಗಳ ಪ್ರಯೋಗ ಪಶು! ಉತ್ತರಕನ್ನಡದ ಜೀವನದಿಗಳಾದ ಕಾಳಿ, ಶರಾವತಿ, ಬೇಡ್ತಿ, ಗಂಗಾವಳಿಮೇಲೆ ಆಗಾಗ ಪೊಕ್ಕು ಪರ್ಯಾವರ್ಣ ಪಂಡಿತರ ಕೆಟ್ಟ ಕಣ್ಣು ಬೀಳುತ್ತಲೇ ಇರುತ್ತದೆ. ಕೆಲವು ದಿನಗಳಿಂದ ಬೇಡ್ತಿ ವರಾದ ನದಿ ಜೋಡಣೆ ತಿರುವು ಯೋಜನೆ ಪ್ರಸ್ತಾಪದಿಂದ ಕಂಗಾಲಾಗಿರುವ ಜಿಲ್ಲೆಯ ಜನರೀಗ ಅಘನಾಶಿನಿ ನದಿ ನೀರನ್ನು ಬಳ್ಳಾರಿ ಕಡೆ ಹರಿಸುವ ಪ್ಲಾನ್ ವರದಿ ನೋಡಿ ಬೆಚ್ಚಿಬಿದ್ದಿದ್ದಾರೆ.

ಅಘನಾಶಿನಿ ನದಿ ಕೊಳ್ಳದಲ್ಲಿ ಜಲವಿದ್ಯುತ್ ಮತ್ತು ಏತ ನೀರಾವರಿ ಯೋಜನೆ ನಡೆಸುವ ಹುನ್ನಾರ ಕಳೆದ 50 ವರ್ಷದಿಂದ ನಾನಾ ನಮೂನೆಯಲ್ಲಿ ನಡೆಯುತ್ತಲೇ ಇದೆ. ಕಳೆದ ವರ್ಷ ಸಿಲಿಕಾನ್ ಸಿಟಿ (ಬೆಂಗಳೂರು) ದಾಹ ಇಂಗಿಸಲು ಅಘನಾಶಿನಿ ನದಿ ಅತ್ತ ತಿರುಗಿಸುವ ಯೋಜನೆಯೊಂದರ ಪ್ರಸ್ತಾಪವಾಗಿತ್ತು. ತಮ್ಮನ್ನು ಬೀದಿ ಪಾಲಾಗಿಸುವ ಈ ಎಡವಟ್ಟು ಯೋಜನೆಯಿಂದ ಸಿಟ್ಟಿಗೆದ್ದ ಅಘನಾಶಿನಿ ಕೊಳ್ಳದ ಮಂದಿ ಪ್ರತಿಭಟನೆಗೆ ಇಳಿದಿದ್ದರು. ಆ ಪ್ರಾಜೆಕ್ಟ್ ಸರ್ಕಾರಿ ಕಡತದಲ್ಲಿ ಅಡಗಿ ಕುಳಿತು ಸಮಯಸಾಧಿಸುತ್ತಲೇ ಇದೆ. ಇದೀಗ ಅದೇ ಅಘನಾಶಿನಿ ನದಿಯನ್ನು ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳತ್ತ ತಿರುಗಿಸುವ ಕೆಲಸ ರಹಸ್ಯವಾಗಿ ಶುರುವಾಗಿದೆ!

ಕಾಲೇಶ್ವರಮ್ ಮಾದರಿ ಪ್ಲಾನ್

ತೆಲಂಗಾಣದ ಕಾಲೇಶ್ವರಮ್‌ನಲ್ಲಿ 1.25 ಲಕ್ಷ ಕೋಟಿ ಖರ್ಚು ಮಾಡಿ ಪರಿಸರ ಅರಣ್ಯಕ್ಕೆ ದೊಡ್ಡ ಅನಾಹುತವಾಗುವಂಥ ಏತ ನೀರಾವರಿ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಮಾದರಿಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ನೀರಾವರಿ ಯೋಜನೆ ಆರಂಭಿಸಿದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಜಗಳೂರು, ಕೂಡ್ಲಿಗಿ, ಹರಪನಹಳ್ಳಿ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಚಿತ್ರದುರ್ಗ ಜಿಲ್ಲೆಯ ದುರ್ಗ ಮತ್ತು ಹೆಡೆಕೋಟೆ ಪ್ರದೇಶದ 6 ಲಕ್ಷ ಎಕರೆ ಭೂಮಿ ಹಸಿರಾಗಿಸಬಹುದೆಂಬ ವರದಿಯೊಂದನ್ನು ನಿವೃತ್ತ ಉಪಮುಖ್ಯ ಇಂಜಿನಿಯರ್ ಪ್ರಕಾಶ್ ಕುದರಿ ಸಿದ್ಧಪಡಿಸಿದ್ದಾರೆ. ಈ ವರದಿ ಪ್ರಕಾರ ಯಾವುದೇ ಗ್ರಾಮ ಮುಳುಗಡೆಯಾಗದು, ಅರಣ್ಯ ನಾಶವಾಗದು, ಪರಿಸರಕ್ಕೆ ಧಕ್ಕೆಯಿಲ್ಲ.

ಅಘನಾಶಿನಿ ನದಿ 117 ಕಿ.ಮೀ ಪಯಣದಲ್ಲಿ ಬಕುರಹೊಳೆ, ದೋಣಿಹಳ್ಳ, ಚಂಡಿಕಾ ಹೊಳೆ, ಮಾಸ್ತಿಮನೆ ಹಳ್ಳ, ಬೆಣ್ಣೆ ಹೊಳೆಯೇ ಮುಂತಾದ ಹೊಳೆ ಹಳ್ಳ ಸೇರಿಸಿಕೊಂಡು 120 ಟಿಎಂಸಿ ನೀರನ್ನು ಅರಬ್ಬೀ ಸಮುದ್ರಕ್ಕೆ ಸೇರಿಸುತ್ತದೆ ಎಂದು ಕುದರಿ ಸಾಹೇಬರು ಹೇಳಿರುತ್ತಾರೆ. ಅವರ ಪ್ರಕಾರ ಈ ವ್ಯರ್ಥವಾಗುವ 120 ಟಿಎಂಸಿ ನೀರಿನಲ್ಲಿ, ಪ್ರತಿ ಸೆಕೆಂಡಿಗೆ 5 ಸಾವಿರ ಲೀಟರ್ ನೀರೆತ್ತುವ ಸಾಮರ್ಥ್ಯದ 24 ಬೃಹತ್ ಪಂಪ್‌ಗಳಿಂದ ಬಯಲುಸೀಮೆಯ ಮೂರು ಜಿಲ್ಲೆಗಳಿಗೆ ಕಾಲುವೆಗಳ ಮೂಲಕ 60 ಟಿಎಂಸಿ ನೀರನ್ನು ಹರಿಸಬಹುದು. ಇದರಿಂದ ವರ್ಷಕ್ಕೆ 40 ಸಾವಿರ ಕೋಟಿರೂಗಳ ಕೃಷಿ ಉತ್ಪನ್ನ ಪಡೆಯಬಹುದು ಎಂದಿದ್ದಾರೆ. 40 ಸಾವಿರ ಕೋಟಿ ಬಜೆಟ್‌ನ ಸದರಿ ಪ್ರಾಜೆಕ್ಟ್ ಕೇವಲ 9 ತಿಂಗಳಲ್ಲಿ ಮುಗಿಸಬಹುದೆನ್ನುತ್ತಾರೆ ಕುದರಿ.

ವರದಿಯಷ್ಟು ಸುಲಭವಲ್ಲ!

ಕಲ್ಪನಾಲೋಕದಲ್ಲಿ ಬಯಲುಸೀಮೆಯನ್ನು ಹಸಿರು ಮಾಡುವಷ್ಟು ಸರಳ ಸುಲಭವಲ್ಲ ಅಘನಾಶಿನಿ ನೀರನ್ನು ಹಿಮ್ಮುಖವಾಗಿ ಹರಿಸುವುದು ಎನ್ನುತ್ತಾರೆ ಪರಿಸರ ತಜ್ಞರು. ಶಿರಸಿ ತಾಲ್ಲೂಕಿನ ಶಂಕರ ಹೊಂಡದಲ್ಲಿ ಹುಟ್ಟುವ ಅಘನಾಶಿನಿ ನದಿ ಪಕ್ಕದ ಸಿದ್ಧಾಪುರ ತಾಲ್ಲೂಕಿನಲ್ಲಿ ಹರಿದು ಸರ್ವಋತುರಮಣೀಯ ಉಂಚುಳ್ಳಿ ಜಲಪಾತ ಸೃಷ್ಟಿಸಿ ಸಹ್ಯಾದ್ರಿ ನಿತ್ಯಹರಿದ್ವರ್ಣ ಕಾಡು ಮೇಡು ಬೇಧಿಸಿ ಕುಮಟಾ ತಾಲ್ಲೂಕಿನ ಅಘನಾಶಿನಿ ತದಡಿ ಗ್ರಾಮಗಳ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ದೇಶದಲ್ಲೇ ಸ್ವಚ್ಛವಾದ ಮಾಲಿನ್ಯ ರಹಿತ ನದಿ ಎಂಬ ಹೆಗ್ಗಳಿಕೆಯ ಈ ಪುಟ್ಟ ಅಘನಾಶಿನಿಯ ಒಟ್ಟ್ಟು ಜಲಾನಯನ ಪ್ರದೇಶ 1350 ಚ.ಕಿ.ಮೀ.

ಅಘನಾಶಿನಿಯ 120 ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಕುದುರಿಯವರ ವರದಿಯ ದೊಡ್ಡ ಲೋಪವೇ ಇದು. ಹೀಗಾಗಿ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆಗೆ 60 ಟಿಎಂಸಿ ಅಡಿ ನೀರು ಒಯ್ಯುಲು ಸಾಧ್ಯವೇ ಇಲ್ಲ. ಕೇಂದ್ರಿಯ ಜಲ ಮಂಡಳಿ ಕುಮಟಾ ತಾಲ್ಲೂಕಿನ ಸಂತೆಗುಳಿಯಲ್ಲಿ ಅಘನಾಶಿನಿಯ ಹರಿವಿನ ಪ್ರಮಾಣ ನಿಖರವಾಗಿ ಲೆಕ್ಕ ಹಾಕಿದೆ. ಕಳೆದ 10 ವರ್ಷದ ನೀರಿನ ಹರಿವಿನ ದಾಖಲೆಯಂತೆ ನದಿಯ ಒಟ್ಟು ನೀರಿನ ಇಳುವರಿ ಬರೀ 85 ಟಿಎಂಸಿ ಮಾತ್ರ! ಈ ಅಂದಾಜಿನಂತೆ ತದಡಿಯಲ್ಲಿ ಅಘನಾಶಿ ನೀರು ಸಮುದ್ರಕ್ಕೆ ಸೇರುವ 100 ಟಿಎಂಸಿಗಿಂತ ಹೆಚ್ಚಿರಬಾರದು. ಈ ಲೆಕ್ಕಾಚಾರದಂತೆ ಇಂಜಿನಿಯರ್ ಕುದರಿ ಬಳಕೆಯಾಗದೇ ಇರುವ (Surplus Water) ಎಂದು ಹೇಳುವುದೇ ಅಸಮಂಜಸ ಎಂಬುದು ಭೂಜಲ ಶಾಸ್ತ್ರಜ್ಞರ ತರ್ಕ.

ಕುದರಿ ವರದಿಯಲ್ಲಿ ಹೇಳಿರುವ ಹೊಳೆ, ಹಳ್ಳಿಗಳೆಲ್ಲ ಸಿದ್ಧಾಪುರದ ಉಂಚಳ್ಳಿ ಜಲಪಾತದ ನಂತರ ಅಘನಾಶಿನಿ ಪಾತ್ರವನ್ನು ಸೇರಿಕೊಳ್ಳವಂಥವುಗಳು. ಆದರೆ ಅವರ ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿ ಉಂಚಳ್ಳಿ ಜಲಪಾತಕ್ಕೂ ಮೊದಲೇ ಸಿದ್ಧಾಪುರ ತಾಲ್ಲೂಕಿನ ಹಾವಿನಬೀಳು ಗ್ರಾಮದ ಹತ್ತಿರ ಅಣೆಕಟ್ಟು ಕಟ್ಟಿ ನೀರೆತ್ತಲಾಗುತ್ತದೆ. ಮಾವಿನ ಮನೆ ಹೊಳೆಗೆ ಒಡ್ಡು ಹಾಕಿದಾಗ ಹಿಮ್ಮುಖವಾಗಿ ನೀರು ಕಳಿಸಲು ಕಮ್ಮಿಯೆಂದರೂ 20 ಅಡಿ ನೀರು ನಿಲ್ಲುವಂತೆ ಮಾಡಬೇಕಾಗುತ್ತದೆ. ಆಗ ನದಿಯಾಚೆಯ ಹಲವು ಹಳ್ಳಿಗಳು ಜಲಸಮಾಧಿ ಆಗುವುದು ಗ್ಯಾರಂಟಿ!

ಇದೊಂದು ಅಲ್ಲಸಲ್ಲದ ಯೋಜನೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅಘನಾಶಿನಿ ನದಿ ಮೂರು ತಾಲೂಕುಗಳಲ್ಲಿ ಮಳೆಗಾಲದಲ್ಲಷ್ಟೇ ಮೈದುಂಬಿ ಹರಿದು, ಬೇಸಿಗೆಯಲ್ಲಿ ಬಸವಳಿಯುತ್ತದೆ. ಶಿರಸಿ, ಕುಮಟಾ ಮತ್ತು ಹೊನ್ನಾವರಕ್ಕೆಲ್ಲ ಕುಡಿಯುವ ನೀರಿನ ಸರಬರಾಜಾಗುವುದು ಅಘನಾಶಿನಿಂದಲೇ! ಬೇಸಿಗೆಯಲ್ಲಿ ನದಿ ಬತ್ತುವುದರಿಂದ ಶಿರಸಿಯಲ್ಲಿ ನೀರಿನ ಹಾಹಾಕಾರ ಏಳುತ್ತದೆ. ನದಿಗುಂಟದ ಕೆರೆ ಬಾವಿ ತೋಟ ಗದ್ದೆಗಳು ನೀರಿನ ಸೆಲೆಯಿಲ್ಲದೆ ಒಣಗುವುದು ಸಾಮಾನ್ಯ ಸಂಗತಿ. ನದಿ ಪಾತ್ರದಲ್ಲೇ ನೀರಿನ ಬರ ಬರುವಾಗ ಬಯಲುಸೀಮೆಯ ಫಲಾನುಭವಿ ಹಳ್ಳಿಗಳಿಗೆ ನೀರೊದಗಿಸುವುದಾದರೂ ಹೇಗೆ? ಇದರ ಪರಿಕಲ್ಪನೆ ಸಹ್ಯಾದ್ರಿ ಪರಿಸರದ ಪರಿಜ್ಞಾನ ಕುದರಿಯವರಿಗೆ ಇದ್ದಂತಿಲ್ಲ ಎಂಬ ಕೂಗೆದ್ದಿದೆ.

ಕುದರಿಯವರಿಗೆ ’ಸ್ಫೂರ್ತಿ’ಯಾಗಿರುವುದು ತೆಲಂಗಾಣದ ಕಾಲೇಶ್ವರಮ್ ಏತ ನೀರಾವರಿ ಯೋಜನೆ. ಈ ಯೋಜನೆ ಅನೇಕ ಅನಾಹುತ ಮಾಡದ್ದಿದೆ. ಅದು ಆಪೋಷನ ಪಡೆದಿರುವ ಕಾಡಿನ ವಿವರ, ಕೆನಾಲ್ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಭೂ ಅಗೆತ ಮಾಡಿರುವುದರಿಂದ ಆಗಿರುವ ಅನಾಹುತಗಳ ’ಕತೆ’ ಈಗಾಗಲೇ ಸಾಕಷ್ಟು ವರದಿಯಾಗಿದೆ. ಅಘನಾಶಿನಿಯ ಹಾವಿನ ಬೀಳು ಏತ ನೀರಾವರಿ ಯೋಜನೆಗೂ ಸಾವಿರಾರು ಕಿ.ಮೀಟರ್‌ಗಟ್ಟಲೆ ಉದ್ದದ ಕಾಲುವೆಗಳು ಬೇಕು. ಆಗೆಲ್ಲ ಅರಣ್ಯ ಕಡಿತ, ಭೂ ಅಗೆತ ಆಗುವುದರಿಂದ ಅಪಾರ ಹಾನಿ ಆಗುವುದು ನಿಸ್ಸಂಶಯ. ಇದೆಲ್ಲ ಗಮನಿಸಿದಾಗ ಇಂಜಿನಿಯರ್ ಕುದರಿ ಕೊಟ್ಟಿರುವ ವರದಿ ಸುಂದರವಾಗಿ ಕಂಡರೂ ಗಂಡಾಂತರಕಾರಿ ಎನ್ನಲಾಗುತ್ತಿದೆ.

ಜೀವ ಜೀವನದ ನದಿ

ಅಘನಾಶಿನಿ ಹುಟ್ಟಿನಿಂದ ಮುಖಜ ಪ್ರದೇಶದವರೆಗೂ ಅಡೆತಡೆಯಿಲ್ಲದೆ ಮುಕ್ತವಾಗಿ ಸ್ವತಂತ್ರವಾಗಿ ಹರಿಯುವ ದೇಶದ ಕೆಲವೇ ಕೆಲವು ನದಿಗಳಲ್ಲಿ ಒಂದು. ಕಲ್ಮಷ ಸೇರಿಸಿಕೊಳ್ಳದೆ ನಿಶ್ಚಲವಾಗಿ ಹರಿಯುವ ಜೀವ ನದಿ ಎಂಬ ಹೆಗ್ಗಳಿಕೆಯೂ ಅಘನಾಶಿನಿಯದು. ಅಘನಾಶಿನಿ ತಪ್ಪಲಿನಲ್ಲಿ ಪರಿಸರ ಸ್ನೇಹಿ ಬದುಕು ಕಟ್ಟಿಕೊಂಡ ಹತ್ತಾರು ಸಾವಿರ ಮುಗ್ಧ ಕೃಷಿಕ ಹಾಗೂ ವನವಾಸಿ ಬುಡಕಟ್ಟು ಕುಟುಂಬಗಳಿವೆ. ವೈವಿಧ್ಯ ವನ್ಯಜೀವಿ ಸಂಕುಲ, ವಿಶಿಷ್ಟ ಕೃಷಿತಳಿ, ಗಿಡಮೂಲಿಕೆ ಅಘನಾಶಿನಿ ಕೊಳ್ಳದಲ್ಲಿದೆ. ನದಿಯು ಎರಡೂ ದಂಡೆ ಗುಂಟ ಜೀವನ ಸಾಗಿಸುತ್ತಿರುವ ನೂರಾರು ಹಳ್ಳಿಗಳ ಲಕ್ಷಾಂತರ ಮಂದಿಗೆ ಅವರ ಕೆರೆ, ಬಾವಿ, ತೋಟ, ಕಾಡು ಮೇಡಿಗೆ ಅಪಾರ ಪಶು, ಪಕ್ಷಿ, ಪ್ರಾಣಿ, ಕೀಟ ಜೀವ ಜಂತುಗಳ ಜೀವ ಜಾಲಕ್ಕೆ ಅಘನಾಶಿನಿ ಜೀವ ಜೀವನದ ನದಿ

ನಿರಾತಂಕವಾಗಿ ಹರಿಯುವ ಅಘನಾಶಿನಿ ಅಪಾರ ಪೋಷಕಾಂಶವಿರುವ ಸಾವಯವ ಪದಾರ್ಥ, ಹೂಳು, ಮಣ್ಣು ಸಾಗಿಸುತ್ತ ಮುಖಜ ಭೂಮಿಯ ಅಸಂಖ್ಯ ಜಲಚರ ವಂಶಾಭಿವೃದ್ಧಿಗೆ ನೆರವಾಗುತ್ತಿದೆ; ಮೀನು, ಬೆಳಚು, ಚಿಪ್ಪಿಕಲ್ಲು, ಮರಳು, ಉಪ್ಪು ಉದ್ಯಮ ಉಳಿಸಿ ಬೆಳೆಸಿ ಸಹಸ್ರಾರು ಕುಟುಂಬ ಜೀವನೋಪಾಯದ ಮೂಲವಾಗಿದೆ. ಕೋಟ್ಯಂತರ ರೂಪಾಯಿ ಆದಾಯಕ್ಕೆ ಮೂಲವಾಗಿರುವ ಅಘನಾಶಿನಿ ನೀರು ಯಾವುದೇ ಬಳಕೆಯಿಲ್ಲದೆ ಸಮುದ್ರಕ್ಕೆ ಸೇರಿ ಪೋಲಾಗುತ್ತಿದೆ ಎಂಬ ’ಪಂಡಿತರ’ ಪ್ರವರವೇ ಹಾಸ್ಯಸ್ಪದ.

ಅಘನಾಶಿನಿಯ ನೀರು ವ್ಯರ್ಥವಾಗುವುದಿರಲಿ ಎಷ್ಟೋ ನದಿ ಪಾತ್ರದ ಜನ, ಜಾನುವಾರು, ಸಸ್ಯ, ಜಲಚರಗಳಿಗೆ ಕೆಲವೊಮ್ಮೆ ನೀರಿನ ಅಭಾವ ಆಗುತ್ತಿದೆ. ಪ್ರಸ್ತಾವಿತ ಏತ ನೀರಾವರಿ ಅಥವಾ ಇನ್ಯಾವುದೇ ಜಲ ವಿದ್ಯುತ್, ಕುಡಿಯುವ ನೀರಿನ ಯೋಜನೆ ಕೈಗೊಂಡರೆ ನದಿಯ ನೀರಿನ ಹರಿಯುವಿಕೆ ಪ್ರಮಾಣ ನಿಯಂತ್ರಣಗೊಂಡು ಸಮುದ್ರದ ಉಪ್ಪು ನೀರು ನದಿ ಪಾತ್ರವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ.

ನದಿಗಳ ನೀರು ನಿಸರ್ಗ ವ್ಯವಸ್ಥೆಯಲ್ಲಿ ಸೀಮಿತ ಪ್ರದೇಶದ ಹಕ್ಕಲ್ಲವೆಂಬ ವಾದ ಸರಿ. ಆದರೆ ಕಾರ್ಯಸಾಧುವಲ್ಲದ ಮತ್ತು ಸ್ಥಳೀಯರಿಗೇ ಅವಶ್ಯವಿರುವಾಗ ನೀರಿನ ಆಮದು ಯೋಜನೆ ಹಾಕಿಕೊಳ್ಳುವುದು ಸರಿಯಾದ ನಡೆಯಲ್ಲ. ಇದರಿಂದ ಎರಡೂ ಕಡೆಯವರಿಗೆ ಸಂಕಷ್ಟ ಎದುರಾಗಿ ಸರ್ಕಾರಿ ಹಣ, ರಾಜಕಾರಣಿ – ಸರ್ಕಾರಿ ಪರ್ಯವರ್ಣ ಪಂಡಿತರು – ಗುತ್ತಿಗೆದಾರರ ಒಕ್ಕೂಟದ ಪಾಲಾಗುತ್ತದೆಯಷ್ಟೇ! ಅಭಿವೃದ್ಧಿ ಭ್ರಮೆಯ ಇಂಥ ಲೂಟಿ ಯೋಜನೆಗಳಿಗೆ ಆಳುವವರು ಇನ್ನಾದರೂ ತಡೆಹಾಕಬೇಕು. ಇದರ ಫಲಾನುಭವಿಗಳು ಎಂದು ನಂಬಿಸಲಾಗುತ್ತಿರುವವರೂ ಕೂಡ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಡಬೇಕಿದೆ.

ಅಘನಾಶಿನಿ ಏತ ನೀರಾವರಿ ಯೋಜನೆ ಬಜೆಟ್ಟಿನ (ರೂ 40 ಸಾವಿರ ಕೋಟಿ- ಇದು ಆಮೇಲೆ ಹೆಚ್ಚುತ್ತಾ ಹೋಗುವುದು ಸರ್ಕಾರಿ ಯೋಜನೆಗಳ ವಾಡಿಕೆ) ಕಾಲು ಭಾಗ ವೆಚ್ಚ ಮಾಡಿದರೂ ಸಾಕು, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಕಡೆಯ ಜಲಾನಯನ ಅಭಿವೃದ್ಧಿ ಆಧಾರಿತ ನೀರಾವರಿ ಯೋಜನೆಗಳನ್ನು ಕೈಗೊಳ್ಳಬಹುದು. ಇವುಗಳತ್ತ ಗಮನ ಹರಿಸುವಂತಾಗಲಿ ಎನ್ನುತ್ತಾರೆ ಪರಿಸರ ಮತ್ತು ಭೂಜಲ ಶಾಸ್ತ್ರಜ್ಞರು.


ಇದನ್ನೂ ಓದಿ: ಮತ್ತೆ ಕಾಡುತ್ತಿದೆ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಗುಮ್ಮ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...