ಜೂನ್ ಎಂದರೆ ತುರ್ತು ಪರಿಸ್ಥಿತಿಯ ಕರಾಳ ನೆನಪು. 1975 ಜೂನ್ 25 ರಂದು ಭಾರತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ವಾಶಿಂಗ್ಟನ್ ನಲ್ಲಿ ಅಂದು ನೆಲೆಸಿದ್ದ ಸಾಮಾಜಿಕ ಹೋರಾಟಗಾರ, ಸೆಂಟರ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್ ಆರ್ ಹಿರೇಮಠ್ ಅವರು ಪ್ರತಿಭಟಿಸಿದ್ದರು. ಈ ಪ್ರತಿಭಟನೆ ನಡೆಸಿದ್ದಕ್ಕೆ ಅಂದಿನ ಭಾರತ ಸರ್ಕಾರ ಹಿರೇಮಠ್ ಅವರ ಪಾಸ್ ಪೋರ್ಟ್ ಅನ್ನು ರದ್ದು ಮಾಡಿತ್ತು.
1975 ರ ಅಧಿಕೃತ ತುರ್ತು ಪರಿಸ್ಥಿತಿಯಲ್ಲಿ ಇದ್ದ ದಿನಗಳಿಗೆ ಹೋಲಿಸಿದರೆ ಇವತ್ತಿನ ದಿನಗಳು ಅದರ 20 ಪಟ್ಟು ಭೀಕರವಾಗಿವೆ ಎನ್ನುವ ಹಿರೇಮಠರ ಮಾತುಗಳು ಎಚ್ಚರಿಕೆ ಘಂಟೆಯಾಗಿವೆ. ಬುದ್ಧ ಬಸವ ಅಂಬೇಡ್ಕರ್ ಅವರ ಕಲ್ಪನೆಯ ಸಮಾನತೆಯ ಸಮಾಜವನ್ನು ನಾವು ಕಟ್ಟಲು ಮತ್ತೆ ಹೋರಾಟಕ್ಕೆ ಸಜ್ಜಾಗಬೇಕು ಅನ್ನುವ ಹಿರೇಮಠ್ ಅವರನ್ನು ಹಿರಿಯ ಲೇಖಕ- ಪ್ರಕಾಶಕ ಬಸವರಾಜ್ ಸೂಳಿಬಾವಿ ಸಂದರ್ಶನ ನಡೆಸಿದ್ದಾರೆ.
ಜಯಪ್ರಕಾಶ್ ನಾರಾಯಣ್ ಅವರು ಕನಸು ಕಂಡಿದ್ದ ಸಂಪೂರ್ಣ ಕ್ರಾಂತಿಗೆ ಮತ್ತೆ ಏನು ಮಾಡಬೇಕು? ಈ ದೇಶವನ್ನು ಹಿಂದಕ್ಕೆ ಒಯ್ಯುತ್ತಿರುವ ಸಂಗತಿಗಳು ಯಾವುವು? ಆರ್ಥಿಕ ಅಸಮಾನತೆಯ ಜನಕರು ಯಾರು? ಇದನ್ನು ಮುಂದುವರೆಸುತ್ತಿರುವವರು ಯಾರು? ಸಿಎಎ, ಭೂಸುಧಾರಣೆ ತಿದ್ದುಪಡಿ ಕಾಯ್ದೆ ಇವುಗಳ ಅಪಾಯಗಳು ಏನು? ಶೂಮಾಕರ್ ಮತ್ತು ಗಾಂಧಿ ಆರ್ಥಿಕ ವ್ಯವಸ್ಥೆ – ಅಂಬೇಡ್ಕರ್ – ಜ್ಯೋತಿಭಾ ಫುಲೆ ಇವರ ಸಮಾನತೆಯ ಆಂದೋಲನಗಳನ್ನು ಹೇಗೆ ಮರುಕಟ್ಟಬೇಕು? ಇವೆಲ್ಲವನ್ನೂ ಹಿರೇಮಠ್ ಅವರು ತಮ್ಮ ಅಪಾರ ಹೋರಾಟದ ಅನುಭವ ಮತ್ತು ಚಿಂತನೆಯ ನೆಲೆಯಲ್ಲಿ ಚರ್ಚಿಸಿದ್ದಾರೆ.
ರಾಜಕೀಯ ಪಕ್ಷಗಳು ಜನರ ಭರವಸೆಯನ್ನು ಕಳೆದುಕೊಂಡಿರುವುದದರ ಬಗ್ಗೆ ಕಳವಳ ವ್ಯಕ್ತಪಡಿಸುವ ಹಿರೇಮಠ್ ಅವರು, ಎಲ್ಲ ಪಕ್ಷಗಳೂ ಒಗ್ಗೂಡಿ ಹೋರಾಟ ನಡೆಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ನಾಗರಿಕ ಸಮುದಾಯ ಹೋರಾಟ ಮಾಡುವುದು ಮುಖ್ಯ ಎಂದು ವಿವರಿಸುತ್ತಾರೆ. ಇದಕ್ಕೆ ಸಂವಿಧಾನದ ಪೀಠಿಕೆಯನ್ನು ಉದಾಹರಣೆ ಕೊಡುವ ಹಿರೇಮಠ್ ಅವರು ಮಧ್ಯಮ ವರ್ಗ ತಮ್ಮ ಸೌಲಭ್ಯ ಸೌಕರ್ಯಗಳನ್ನು ಕಡೆಗೆ ಮಾತ್ರ ಗಮನಿಸುವುದನ್ನು ಬಿಟ್ಟು ನಾಗರಿಕ ಸಮಾಜವಾಗಿ ಒಟ್ಟಾಗಿ ಹೋರಾಡಬೇಕು ಅನ್ನುತ್ತಾರೆ.
ಥಾಮಸ್ ಪಿಕೆಟ್ಟಿ ಉದಾಹರಣೆ ಕೊಟ್ಟು ಹೆಚ್ಚು ಜನಕ್ಕೆ ಸಂಪನ್ಮೂಲಗಳ ಹಂಚಿಕೆಯಾಗುವುದರ ಬಗ್ಗೆ ಮಾತಾಡುವ ಹಿರೇಮಠ್ ಇನ್ನೂ ಹತ್ತು ಹಲವು ಸಂಗತಿಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಪೂರ್ಣ ವಿಡಿಯೋವನ್ನು ಇಲ್ಲಿ ನೋಡಿ.