ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ಬಗ್ಗೆ ಪ್ರಚಾರ ಮಾಡುವ ಸಲುವಾಗಿ 2020ರ ಸೆಪ್ಟಂಬರ್ನಿಂದ 2021ರ ಜನವರಿಯವರೆಗೆ ಸುಮಾರು 8 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಒಕ್ಕೂಟ ಸರ್ಕಾರದ ಕೃಷಿ ಸಚಿವ ಶುಕ್ರವಾರ ಸಂಸತ್ತಿನಲ್ಲಿ ಸಲ್ಲಿಸಿದ ವಿವರಣೆಯ ಪ್ರಕಾರ, “ಮಂತ್ರಿಗಳು ಮತ್ತು ಇತರರ ಪತ್ರಿಕಾಗೋಷ್ಠಿಗಳು ಮತ್ತು ಮಾಹಿತಿ ಪ್ರಸಾರವನ್ನು ಹೊರತುಪಡಿಸಿ, ವಿವಿಧ ಸರ್ಕಾರಿ ಇಲಾಖೆಗಳು ಕಳೆದ 4-5 ತಿಂಗಳಿನಲ್ಲಿ ಜಾಹೀರಾತು ನೀಡುವ ಸಲುವಾಗಿ ಬಹುಪಾಲು ಮೊತ್ತವನ್ನು ಖರ್ಚು ಮಾಡಿದೆ. ಐಬಿ ಸಚಿವಾಲಯದ ಅಡಿಯಲ್ಲಿ ಗರಿಷ್ಟ 7.25 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ” ಎಂದು ತಿಳಿದುಬಂದಿದೆ.
ರೈತರು ಮತ್ತು ಇತರ ಭಾಗೀದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಸ್ಪಷ್ಟೀಕರಣಗಳಿಗಾಗಿ ಮುದ್ರಣ ಮಾಧ್ಯಮಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಐಬಿ ಸಚಿವಾಲಯದ ಮೂಲಕ ಪ್ರಕಟಿಸಲಾಗಿದೆ ಎಂದು ಒಕ್ಕೂಟ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ‘ವಕೀಲರ ನಡಿಗೆ ರೈತರ ಕಡೆಗೆ’ – ರೈತ ಹೋರಾಟಕ್ಕೆ ಬೆಂಬಲ ನೀಡಿದ ಬೆಂಗಳೂರಿನ ವಕೀಲರು
‘ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ’ಯು ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾ ಹಾಗೂ ವೆಬಿನಾರ್ಗಳ ಮೂಲಕ ಕೃಷಿ ಕಾನೂನುಗಳ ಕುರಿತು ಪ್ರಚಾರ ಮಾಡಲು ಮತ್ತು ಎರಡು ಶೈಕ್ಷಣಿಕ ಚಲನಚಿತ್ರಗಳನ್ನು ನಿರ್ಮಿಸಲು ಸುಮಾರು 68 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೃಷಿ ಕಾನೂನುಗಳ ಕುರಿತ ‘ಮಿಥ್ ಬಸ್ಟಿಂಗ್’ ಅಭಿಯಾನಕ್ಕಾಗಿ ಒಕ್ಕೂಟ ಸರ್ಕಾರವು ಸುಮಾರು 8 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರೂ ಸಹ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಕೊನೆಗೊಂಡಿಲ್ಲ. ಸುಮಾರು 80 ದಿನಗಳಿಂದ ಲಕ್ಷಾಂತರ ರೈತರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮತ್ತು ಕನಿಷ್ಟ ಬೆಂಬಲ ಬೆಲೆಯ ಕಾನೂನು ಭರವಸೆ ನೀಡುವಂತೆ ಒತ್ತಾಯಿಸಿ ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಒಕ್ಕೂಟ ಸರ್ಕಾರ ಮತ್ತು ರೈತರ ನಡುವೆ ಇದುವರೆಗೂ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಅವುಗಳೆಲ್ಲಾ ವಿಫಲವಾಗಿವೆ.
ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ