ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಪ್ರಯಕ್ತ ದೇಣಿಗೆ ಸಂಗ್ರಹಿಸುವ ವಿಚಾರ ರಾಜಸ್ಥಾನದ ಜಲಾವರ್ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಇಲ್ಲಿ ದಲಿತ ಸಮುದಾಯದ ಜನರು ನೀಡಿರುವ ದೇಣಿಗೆಯನ್ನು ‘ಅಶುದ್ಧ’ ಎಂದು ಹಿಂದಿರುಗಿಸಿರುವ ಆರೋಪ ಕೇಳಿ ಬಂದಿದೆ.
‘ದಿ ಮೂಕನಾಯಕ’ ಸುದ್ದಿ ವೆಬ್ಸೈಟ್ನ ವರದಿ ಪ್ರಕಾರ, ಜಲಾವರ್ನ ಖಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡ್ಲಾ ಗ್ರಾಮದಲ್ಲಿ ದಲಿತ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಗ್ರಾಮದ ಜನರೊಂದಿಗೆ ರಾಮ ಮಂದಿರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಉತ್ಸವ, ಯಾತ್ರೆ, ಪ್ರಸಾದ ವಿತರಣೆಯಂತಹ ಕಾರ್ಯಕ್ಕಾಗಿ ಹಣವನ್ನು ದೇಣಿಗೆ ನೀಡುವಂತೆ ಕೋರಲಾಗಿತ್ತು. ಆದರೆ, ಬಳಿಕ ದಲಿತರು ನೀಡಿರುವ ದೇಣಿಗೆಯನ್ನು ‘ಅಶುದ್ದ’ ಎಂದು ಪ್ರಬಲ ಜಾತಿಯ ಕೆಲವರು ಹಿಂದಿರುಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ದಲಿತರಿಂದ ಬಂದ ಹಣವನ್ನು ದೇವಾಲಯದ ಆಚರಣೆಗಳಿಗೆ ಸ್ವೀಕರಿಸುವುದಿಲ್ಲ. ಅವರ ದೇಣಿಗೆಯಿಂದ ಮಾಡಿದ ಪ್ರಸಾದವನ್ನು ‘ಅಶುದ್ಧ’ವೆಂದು ಪರಿಗಣಿಸಲಾಗುವುದು” ಎಂದು ಬಲಿಷ್ಠ ಜಾತಿಯವರು ಹೇಳಿದ್ದಾರೆ ಎನ್ನಲಾಗಿದ್ದು, ಇದು ಪಕ್ಷಪಾತ ಮತ್ತು ತಾರತಮ್ಯ ಎಂದು ಆರೋಪಿಸಿ ದಲಿತರು ಜನವರಿ 11ರಂದು ಜಲಾವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ದಲಿತರಿಂದ ದೇಣಿಗೆಯಾಗಿ ಹಣ ಮತ್ತು ವಸ್ತುಗಳನ್ನು ಪಡೆದಿದ್ದರು. ಆದರೆ, ಬಳಿಕ ಅದನ್ನು ಹಿಂದಿರುಗಿಸಿದ್ದಾರೆ ಎಂದು ಮುಂಡ್ಲಾ ಗ್ರಾಮದ ನಿವಾಸಿ ಮುಖೇಶ್ ಮೇಘವಾಲ್ ಹೇಳಿದ್ದಾಗಿ ಮೂಕನಾಯಕ ವರದಿ ತಿಳಿಸಿದೆ.
“ಪೊಲೀಸರು ದೂರು ಹಿಂಪಡೆಯಲು ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿ, ಕೆಲವು ಅಧಿಕಾರಿಗಳು ಗ್ರಾಮಕ್ಕೆ ಪದೇ-ಪದೇ ಬರುತ್ತಿದ್ದಾರೆ. ನಮ್ಮ ದೂರು ಆಧರಿಸಿ ಪ್ರಕರಣ ದಾಖಲಿಸುತ್ತಿಲ್ಲ” ಎಂದು ಮುಖೇಶ್ ಮೇಘವಾಲ್ ಆರೋಪಿಸಿದ್ದಾರೆ.
ದೂರು ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಖಾನ್ಪುರ ಪೊಲೀಸ್ ಠಾಣೆಯ ಮುಖ್ಯಸ್ಥ ರಾಮ್ಕಿಶನ್ ಗೋಡಾರಾ, “ದೂರು ಹಿಂಪಡೆಯಲು ಒತ್ತಾಯಿಸುವ ಆರೋಪಗಳು ಆಧಾರ ರಹಿತವಾಗಿವೆ. ನಿಷ್ಪಕ್ಷಪಾತವಾಗಿ ಸಾಕ್ಷಿಗಳೊಂದಿಗೆ ಮಾತನಾಡಲು ಸ್ವತಃ ಡಿವೈಎಸ್ಪಿ ಅವರೇ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಡಳಿತವು ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ. ಪ್ರಕರಣದ ಬಗ್ಗೆ ಪೊಲೀಸರು ನ್ಯಾಯಯುತ ತನಿಖೆ ನಡೆಸುತ್ತಾರೆ” ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಬಾಬ್ರಿ ಮಸೀದಿಯನ್ನು ವ್ಯವಸ್ಥಿತವಾಗಿ ಮುಸ್ಲಿಮರಿಂದ ಕಿತ್ತುಕೊಳ್ಳಲಾಗಿದೆ: ಓವೈಸಿ