ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರ 104ನೇ ಹುಟ್ಟುಹಬ್ಬದ ಪ್ರಯುಕ್ತ ಎಚ್.ಎಸ್.ದೊರೆಸ್ವಾಮಿ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ `75 ರಾಷ್ಟ್ರಧ್ವಜಗಳೊಂದಿಗೆ ನಡಿಗೆ’ ಕಾರ್ಯಕ್ರಮ ನಡೆಯಿತು.
ದೇಶದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ 75 ರಾಷ್ಟ್ರಧ್ವಜಗಳೊಂದಿಗೆ ನಡಿಗೆ ಕಾರ್ಯಕ್ರಮವನ್ನು ದೊರೆಸ್ವಾಮಿಯವರ ಜನ್ಮದಿನವಾದ ಇಂದು (ಏ.10) ಹಮ್ಮಿಕೊಳ್ಳಲಾಗಿತ್ತು. ವಿಧಾನಸೌಧದ ಬಳಿಯ ಶಾಂತವೇರಿ ಗೋಪಾಲಗೌಡ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡಿಗೆ ನಡೆಯಿತು. ʼಸ್ವಾತಂತ್ರ್ಯ ರಕ್ಷಣೆಗಾಗಿ, ಸ್ವಸ್ಥ ಸೌಹಾರ್ದಯುತ ಸಮಾಜಕ್ಕಾಗಿʼ ಆಗ್ರಹಿಸಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಡೆಗೆಯುದ್ಧಕ್ಕೂ ಕೋಮುವಾದಿ ಸರ್ಕಾರಕ್ಕೆ, ಮನುವಾದಕ್ಕೆ ಧಿಕ್ಕಾರ ಕೂಗಲಾಯಿತು. ದೊರೆಸ್ವಾಮಿಯವರ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜಗಳನ್ನು ಹಿಡಿದು, ʼರಘುಪತಿ ರಾಘವ ರಾಜಾ ರಾಮ್…ʼ ಭಜನೆ ಮಾಡುತ್ತ ಹೋರಾಟಗಾರರು ಹೆಜ್ಜೆಹಾಕಿದರು. ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿರುವುದನ್ನು ಖಂಡಿಸಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, “ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಲು ದೊರೆಸ್ವಾಮಿ ಅವರು ನಮಗೆಲ್ಲ ದೊಡ್ಡ ಪ್ರೇರಣಾ ಶಕ್ತಿಯಾಗಿದ್ದರು” ಎಂದು ಹೇಳಿದರು.
“ಸಮಾಜದ ಪ್ರತಿ ಪಿಡುಗಿಗೂ ದೊರೆಸ್ವಾಮಿ ಅವರು ಹೋರಾಟ ನಡೆಸುತ್ತ ಬಂದರು. ಅವರ ಆದರ್ಶಮಯ ಜೀವನ ನಮ್ಮ ಮುಂದಿದೆ. ಅವರ ಬದುಕೇ ನಮಗೆಲ್ಲ ಮಾದರಿ. ಅವರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಸೋಮಶೇಖರ್ ಮಾತನಾಡಿ, “ದೊರೆಸ್ವಾಮಿ ಅವರು ನಿಸ್ವಾರ್ಥ ಜೀವಿಯಾಗಿದ್ದರು. ಅವರ ಅಣ್ಣ ಮೇಯರ್ ಆಗಿದ್ದರೂ ಜೀವನದ ಕೊನೆವರೆಗೂ ಅವರು ಬಾಡಿಗೆ ಮನೆಯಲ್ಲೇ ವಾಸವಿದ್ದರು. ಇದು ದೊರೆಸ್ವಾಮಿ ಅವರ ಸರಳತೆಗೆ ಸಾಕ್ಷಿ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತೆ ವಿಜಯಮ್ಮ ಮಾತನಾಡಿ, “ಜೆ ಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ʼಸೌಂದರ್ಯ ಸ್ಪರ್ಧೆʼ ನಡೆದಿತ್ತು. ಆ ಸ್ಪರ್ಧೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಆದರೆ ಮುಖ್ಯಮಂತ್ರಿಗಳು ಸೌಂದರ್ಯ ಸ್ಪರ್ಧೆಯನ್ನು ನಡೆಸುವ ಪಟ್ಟು ಹಿಡಿದಿದ್ದರು. ಆ ವೇಳೆ ದೊರೆಸ್ವಾಮಿ ಅವರು ಪಟೇಲರ ಧೋರಣೆ ವಿರೋಧಿಸಿ, ʼನೀವು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಬೇಕಾದರೆ ಸ್ಪರ್ಧೆಗೆ ಕಳುಹಿಸಿ, ಆದರೆ ನಾವು ಇಂತಹದ್ದನ್ನು ಒಪ್ಪುವುದಿಲ್ಲʼ ಎಂದು ನೇರವಾಗಿ ಹೇಳಿದ್ದರು. ಅದು ದೊರೆಸ್ವಾಮಿ ಅವರ ನೇರ- ನಿಷ್ಠುರತೆ” ಎಂದು ಸ್ಮರಿಸಿದರು.
ಪ್ರೊ. ನಗರಗೆರೆ ರಮೇಶ್ ಮಾತನಾಡಿ, “ರಾಜ್ಯದಲ್ಲಿ ಕೋಮುವಾದ ವಿಜೃಂಭಿಸುತ್ತಿದೆ. ಜಾನಪದ ಜಾತ್ರೆ ಈಗ ಸಂಘಪರಿವಾರದ ಜಾತ್ರೆಯಾಗಿ ಮಾರ್ಪಟ್ಟಿದೆ. ಬಿಜೆಪಿಯಂಥ ಕೆಟ್ಟ ಸರ್ಕಾರ ಕಿತ್ತೆಸೆಯುವುದೇ ದೊರೆಸ್ವಾಮಿ ಅವರ ಆಶಯವಾಗಿತ್ತು” ಎಂದರು.
ಕರ್ನಾಟಕ ಜನಶಕ್ತಿ ವೇದಿಕೆ ಪದಾಧಿಕಾರಿ ಕುಮಾರ ಸಮತಳ ಮಾತನಾಡಿ, “ದೊರೆಸ್ವಾಮಿ ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಅನುಭವವೇ ನಮಗೆ ದೊಡ್ಡ ಪಾಠ. ಭೂಮಿ ಮತ್ತು ವಸತಿರಹಿತರ ಹಕ್ಕಿಗಾಗಿ ದೊರೆಸ್ವಾಮಿ ಸದಾಕಾಲ ಹೋರಾಡುತ್ತ ಬಂದಿದ್ದಾರೆ. ಅವರ ಹೋರಾಟವನ್ನು ನಾವು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ಗೌರವ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಹೋರಾಟಗಾರ್ತಿ ಬಿ ಟಿ ಲಲಿತಾ ನಾಯಕ್ ಮಾತನಾಡಿ, “ರಾಜ್ಯದಲ್ಲಿ ಮನುವಾದಿ ಸಂಸ್ಕೃತಿ ಹೆಚ್ಚುತ್ತಿದೆ. ದೊರೆಸ್ವಾಮಿ ಬದುಕಿದ್ದರೆ ಆರ್ಎಸ್ಎಸ್ ನಡೆಗಳನ್ನು ನಿತ್ಯ ಖಂಡಿಸುತ್ತಿದ್ದರು. ರೈತರು ಮತ್ತು ಬಡವರ ಬಗ್ಗೆ ಸದಾಕಾಲ ಪ್ರೀತಿ ಇಟ್ಟುಕೊಂಡು, ಅವರ ಹಕ್ಕಿಗಾಗಿ ಧ್ವನಿ ಎತ್ತುತ್ತಲೇ ಬಂದವರು. ಯಾವ ಮುಲಾಜಿಲ್ಲದೇ ಎಂಥ ದೊಡ್ಡ ನಾಯಕಾದರೂ ಸರಿ, ನೀ ಮಾಡಿದ್ದು ತಪ್ಪು ಅಂತ ಹೇಳುವ ಧೈರ್ಯ ದೊರೆಸ್ವಾಮಿ ಅವರಿಗಿತ್ತು” ಎಂದು ಮೆಲುಕುಹಾಕಿದರು.
ಕರ್ನಾಟಕ ಜನಶಕ್ತಿ ವೇದಿಕೆ ಪದಾಧಿಕಾರಿಗಳಾದ ಸಿರಿಮನೆ ನಾಗರಾಜ್, ಗೌರಿ, ಜಗನ್, ಗಜೇಂದ್ರ, ಎಚ್ ಎಂ ವೆಂಕಟೇಶ, ಪ್ರಭಾ ಬೆಳವಂಗಲ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಮೈಕೆಲ್ ಫರ್ನಾಂಡೀಸ್ ಮೊದಲಾದವರು ಹಾಜರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ