ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಸಚಿವ ಕೆ.ಎಚ್. ಮುನಿಯಪ್ಪ ಕುಟುಂಬಕ್ಕೆ ಕೊಡಬಾರದು ಎಂದು ಜಿಲ್ಲೆಯ ಕಾಂಗ್ರೆಸ್ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಹಾಗೂ ಮುಖಂಡರು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಮುನಿಯಪ್ಪ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ ಎಂದು ಬ್ಲಾಕ್ಮೇಲ್ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ಒಳಜಗಳವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಕೋಲಾರದ ಕಾಂಗ್ರೆಸ್ ಮುಖಂಡರ ಬಹಿರಂಗ ಜಗಳ ದೊಡ್ಡ ಹೊಡೆತವಾಗಿದೆ. ಪಕ್ಷದ ಐವರು ಶಾಸಕರು (ವಿಧಾನಸಭೆ ಸದಸ್ಯರು) ಮತ್ತು ಇಬ್ಬರು ಎಂಎಲ್ಸಿಗಳು (ವಿಧಾನ ಪರಿಷತ್ ಸದಸ್ಯರು) ತಾವು ಸೂಚಿಸಿದವರಿಗೆ ಟಿಕೆಟ್ ಕೈ ತಪ್ಪಿದ ಕಾರಣ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಈಗಾಗಲೇ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಸಂಪರ್ಕಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಕ್ಷೇತ್ರದಿಂದ ಪಕ್ಷ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎಂಬುದು ಖಚಿತವಾಗುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್, “ನಾವು (ಮುನಿಯಪ್ಪ) ಕುಟುಂಬದ ಗುಲಾಮರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಪಕ್ಷವು ಕುಟುಂಬದೊಳಗೆ ಟಿಕೆಟ್ ಹಂಚುತ್ತದೆ ಎಂದು ಶಾಸಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವುದಾಗಿ ಪಕ್ಷದ ಹೈಕಮಾಂಡ್ಗೆ ಬೆದರಿಕೆ ಹಾಕಿದ್ದಾರೆ. ಪಕ್ಷದ ಹೈಕಮಾಂಡ್ ತಮ್ಮ ಅಭಿಪ್ರಾಯಗಳನ್ನು ಆಲಿಸಿದೆ. ಆದರೆ, ತಮ್ಮ ಬೇಡಿಕೆಗಳಿಗೆ ಕಿವಿಗೊಡಲಿಲ್ಲ ಎಂದು ಆರೋಪಿಸಿದರು.
ಕೋಲಾರ ಲೋಕಸಭಾ ಚುನಾವಣಾ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಜಂಗೀಕುಸ್ತಿ ಚುನಾವಣೆ ಮುಕ್ತಾಯವಾದರೂ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಸಚಿವ ಕೆ.ಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಕೋಲಾರ ಜಿಲ್ಲೆಯ ಮೂವರು ಶಾಸಕರು ಹಾಗು ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆ ಪ್ರಹಸನಕ್ಕೆ ಮುಂದಾಗಿದ್ದಾರೆ.
ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡೋಣ, ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ ಅವರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಗೆಲ್ಲಿಸಿಕೊಂಡು ಬರೋಣ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದರು. ರಮೇಶ್ ಕುಮಾರ್ ಹಾಗು ಕೆ.ಹೆಚ್ ಮುನಿಯಪ್ಪರನ್ನು ಮುಖಾಮುಖಿ ಕೂರಿಸಿಕೊಂಡು ನಡೆಸಿದ ಸಂಧಾನ ಸಭೆಯಲ್ಲಿ ಒಂದು ಸಾಲಿನ ಅಜೆಂಡಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದರು. ಆದರೆ, ಹೈಕಮಾಂಡ್ ಆಯ್ಕೆ ಚಿಕ್ಕಪೆದ್ದಣ್ಣ ಅನ್ನೋದು ಖಚಿತ ಆಗುತ್ತಿದ್ದಂತೆ ರಮೇಶ್ ಕುಮಾರ್ ಬಣದ ನಾಯಕರು ಹೈಡ್ರಾಮಾ ಶುರು ಮಾಡಿದ್ದಾರೆ. ಕಳೆದ ವಾರ ಎರಡೂ ಬಣದ ನಾಯಕರು ದೆಹಲಿಯ ಖರ್ಗೆ ನಿವಾಸದಲ್ಲಿ ಮಾತುಕತೆ ನಡೆಸಿದ್ದರು.
ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಪರಿಷತ್ ಸದ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ಸೇರಿ ಐವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಮಾಲೂರು ಶಾಸಕ ಕೆ.ವೈ ನಂಜೇಗೌಡ, “ಇಂದು ಕೋಲಾರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್ಸಿಗಳು ರಾಜಿನಾಮೆ ನೀಡುತ್ತೇವೆ” ಎಂದು ಹೇಳಿದ್ದಾರೆ. ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿ ಹಾಗು ಸಂಜೆ ವೇಳೆಗೆ ಮಂಗಳೂರಿಗೆ ತೆರಳಿ ಸ್ಪೀಕರ್ ಖಾದರ್ಗೆ ರಾಜೀನಾಮೆ ಪತ್ರ ನೀಡುತ್ತೇವೆ ಎಂದಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನಾಯಕರ ಕಿತ್ತಾಟದ ಬಗ್ಗೆ ಮಾತನಾಡಿರುವ ಸಚಿವ ಕೆ ಎಚ್ ಮುನಿಯಪ್ಪ, “ಇವತ್ತು ಸಾಯಂಕಾಲ ಟಿಕೆಟ್ ಯಾರಿಗೆ ಎಂಬುದು ಖಚಿತವಾಗಲಿದೆ. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೂ ಚರ್ಚೆ ಆಗಿದೆ. ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಅವಕಾಶ ಮಾಡಿಕೊಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದೇನೆ.ಟಿಕೆಟ್ ಸಿಗಬಹುದು ಎಂಬ ಆಶಾಭಾವನೆ ಇದೆ” ಎಂದರು.
“ಕೋಲಾರ-ಚಿಕ್ಕಬಳ್ಳಾಪುರ ತಡವಾದರೂ ಕೂಡ ಒಗ್ಗಟ್ಟಾಗಿದ್ದೇವೆ” ಎಂದರು. ಕೆಲ ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿ, “ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ ಅಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್” ಎಂದು ಹೇಳುವ ಮೂಲಕ ಟಿಕೆಟ್ ತಮ್ಮ ಕುಟುಂಬಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗಾಗಿ ಚೆನ್ನೈನಾದ್ಯಂತ ತೀವ್ರ ಶೋಧ