ಅಸಂಘಟಿತ ವಲಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ (ಎಪಿವೈ) ಯ ಪ್ರತಿ ಮೂವರು ಚಂದಾದಾರಲ್ಲಿ ಒಬ್ಬರು ಯೋಜನೆಯಿಂದ ಹೊರಗುಳಿದಿದ್ದಾರೆ. ಚಂದಾದಾರ ಅನುಮತಿ ಪಡೆಯದೆ ಖಾತೆಗಳನ್ನು ತೆರೆದಿರುವುದೇ ಇದಕ್ಕೆ ಕಾರಣ ಎಂಬುವುದು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ಐಸಿಎಸ್ಎಸ್ಆರ್) ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಬ್ಯಾಂಕ್ ಉದ್ಯೋಗಿಗಳು ತಮಗೆ ನಿಗದಿಪಡಿಸಿದ ದಾಖಲಾತಿ ಗುರಿ ಸಾಧಿಸಲು ಹೀಗೆ ಮಾಡಿದ್ದಾರೆ ಎಂದು business-standard.com ವರದಿ ಮಾಡಿದೆ.
ಶೇ.32ರಷ್ಟು ಚಂದಾದಾರರು ಬ್ಯಾಂಕ್ ತಮ್ಮ ಅನುಮತಿಯಿಲ್ಲದೆ ಖಾತೆಗಳನ್ನು ತೆರೆದಿದ್ದಕ್ಕಾಗಿ ಯೋಜನೆಯಿಂದ ಹೊರನಡೆದಿದ್ದರೆ, ಶೇ.38ರಷ್ಟು ಚಂದಾದಾರರು ಹಣದ ಅಗತ್ಯಕ್ಕಾಗಿ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಶೇ.15ರಷ್ಟು ಚಂದಾದಾರರ ಬಳಿ ಖಾತೆಗಳನ್ನು ನಿರ್ವಹಿಸಲು ಹಣವಿರಲಿಲ್ಲ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಸರ್ಕಾರದ ಚಿಂತಕರ ಚಾವಡಿ ಐಸಿಎಸ್ಎಸ್ಆರ್ನ ಅಧ್ಯಯನವು ಪಿಎಂ ಉಜ್ವಲಾ, ಪಿಎಂ ಆವಾಸ್, ದೀನ್ದಯಾಳ್ ಅಂತ್ಯೋದಯ ಮತ್ತು ಪಿಎಂ ಕೃಷಿ ಸಿಂಚಾಯಿ ಯೋಜನೆಗಳಂತಹ ಸರ್ಕಾರ 31 ಕಾರ್ಯಕ್ರಮಗಳು ಮತ್ತು ನೀತಿ ಉಪಕ್ರಮಗಳ ಅಧ್ಯಯನಕ್ಕಾಗಿ ದೇಶವ್ಯಾಪಿ ಪ್ರಕ್ರಿಯೆಯ ಭಾಗವಾಗಿದೆ.
ಅಧ್ಯಯನವು ಯೋಜನೆ ಕುರಿತು ಜಾಗೃತಿ ಮಟ್ಟವನ್ನು ತಿಳಿದುಕೊಳ್ಳಲು, ಎಪಿವೈ ಖಾತೆಗಳ ಲಭ್ಯತೆ ಮತ್ತು ನಿರ್ವಹಣೆಯಲ್ಲಿ ಚಂದಾದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಮತ್ತು ಯೋಜನೆಯಿಂದ ಅವರು ಹೊರಗುಳಿಯಲು ಕಾರಣಗಳ ಮೌಲ್ಯಮಾಪನಕ್ಕಾಗಿ ಉತ್ತರ ಪ್ರದೇಶದ ಪ್ರಯಾಗರಾಜ್ ವಿಭಾಗದಲ್ಲಿ 2,461 ಜನರನ್ನು ಸಮೀಕ್ಷೆಗೊಳಪಡಿಸಿತ್ತು. ಈ ವೇಳೆ 342 ಚಂದಾದಾರರ ಪೈಕಿ 119 ಜನರು ಯೋಜನೆಯಿಂದ ಹೊರನಡೆದಿರುವುದು ಬೆಳಕಿಗೆ ಬಂದಿದೆ.
1 ಸಾವಿರ ರೂ.ಗಳ ಕನಿಷ್ಠ ಮಟ್ಟದಲ್ಲಿ ಚಂದಾದಾರರ ಸಂಖ್ಯೆ ಅಧಿಕವಾಗಿದೆ ಎನ್ನುವುದನ್ನು ಗಮನಿಸಿರುವ ಅಧ್ಯಯನವು, ಮಾಸಿಕ ದೇಣಿಗೆ ಕಡಿಮೆಯಿರುವುದರಿಂದ ಚಂದಾದಾರರು ಆ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ ಎನ್ನುವುದು ಇದಕ್ಕೆ ಕಾರಣ ಎಂದು ಬೆಟ್ಟು ಮಾಡಿದೆ.
ಮೋತಿಲಾಲ್ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಿಸುವ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ತನುಜ್ ನಂದನ್ ಅವರು, “ಕಡಿಮೆ ಪಿಂಚಣಿ ಸ್ಲ್ಯಾಬ್ಗಳಲ್ಲಿ ಚಂದಾದಾರ ಸಂಖ್ಯೆ ವರ್ಷಗಳಿಂದ ಸತತವಾಗಿ ಹೆಚ್ಚಳವಾಗ್ತಿದೆ. ಹೀಗಾಗಿ ಇತರ ಪಿಂಚಣಿ ಸ್ಲ್ಯಾಬ್ಗಳು ಹೆಚ್ಚಾಗಿ ಅಸಮಂಜಸವಾಗಿದೆ ಎಂದಿದ್ದಾರೆ.
ಬ್ಯಾಂಕಿಂಗ್ ಏಜೆಂಟ್ಗಳು ಗುರಿ ಸಾಧನೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಅನುಮತಿಯಿಲ್ಲದೆ ವ್ಯಕ್ತಿಗಳ ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಚಂದಾದಾರರ ಖಾತೆಗಳಿಂದ ಸ್ವಲ್ಪ ಮೊತ್ತದ ಹಣ ಕಡಿತವಾಗುವುದರಿಂದ ಅದರ ಬಗ್ಗೆ ಅವರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅದು ಅವರ ಗಮನಕ್ಕೂ ಬರುವುದಿಲ್ಲ. ಇದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡದೆ ಖಾತೆ ತೆರೆಯಲು ಸಹಕಾರಿಯಾಗಿದೆ.
ಯೋಜನೆಯಡಿಯಲ್ಲಿ, ಚಂದಾದಾರರು 19 ವರ್ಷ ವಯಸ್ಸಿನಲ್ಲಿ ರೂ 1,000 ಪಿಂಚಣಿ ಸ್ಲ್ಯಾಬ್ಗೆ ರೂ 46 ರ ಮಾಸಿಕ ಕೊಡುಗೆಯನ್ನು ನೀಡಬೇಕು. ರೂ 5,000 ಪಿಂಚಣಿಗೆ ರೂ 228 ಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಹಾಗಾಗಿ, 46 ರೂ. ಖಾತೆಯಿಂದ ಕಡಿತಗೊಳ್ಳುವುದು ಚಂದಾದಾರರಿಗೆ ಗೊತ್ತಾಗುವುದಿಲ್ಲ.
ರಾಷ್ಟ್ರೀಯ ಮಟ್ಟದಲ್ಲಿ ಎಪಿವೈ ಖಾತೆಗಳ ಬಗ್ಗೆ ಅಧ್ಯಯನವು ಗಮನಿಸಿದೆ, ತಿಂಗಳಿಗೆ ರೂ 1,000 ಪಿಂಚಣಿ ಸ್ಲ್ಯಾಬ್ನಲ್ಲಿನ ಖಾತೆಗಳ ಪಾಲು ಹಣಕಾಸು ವರ್ಷ 16 ರ ಶೇಕಡಾ 38.6 ರಿಂದ ಹಣಕಾಸು ವರ್ಷ 23ಕ್ಕೆ ಶೇಕಡಾ 82.6 ಕ್ಕೆ ಹೆಚ್ಚಾಗಿದೆ. ಇದೇ ವೇಳೆ 5,000 ರೂ. ಪಿಂಚಣಿ ಸ್ಲ್ಯಾಬ್ ಖಾತೆಗಳ ಪಾಲು ಶೇ. 46 ರಿಂದ 11ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ : ಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್ಗಳು: ವರದಿ