Homeಮುಖಪುಟಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ಗ್ರಾಹಕರ ಅನುಮತಿ ಪಡೆಯದೆ ವಿಮಾ ಯೋಜನೆಗಳಿಗೆ ಸೇರ್ಪಡೆ, ಖಾತೆಯಿಂದ ಹಣ ಕಡಿತ!

- Advertisement -
- Advertisement -

ಮೋದಿ ಸರ್ಕಾರದ ಪ್ರಧಾನ ಮಂತ್ರಿ ‘ಜೀವನ ಜ್ಯೋತಿ ಭೀಮಾ ಯೋಜನೆ’ ಸೇರಿದಂತೆ ಇನ್ನಿತರ ಹಲವು ವಿಮಾ ಯೋಜನೆಗಳಿಗೆ ಜನರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್‌ಗಳು ಅವರನ್ನು ಸೇರಿಸಿ ಖಾತೆಗಳಿಂದ ಪ್ರೀಮಿಯಂ ಮೊತ್ತ ಕಡಿತ ಮಾಡುತ್ತಿರುವುದು ಬಯಲಾಗಿದೆ. ಯೋಜನೆಗಳಿಗೆ ಜನರನ್ನು ಸೇರಿಸುವಾಗ ಬೇಕಿರುವ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಬ್ಯಾಂಕ್‌ಗಳೇ ಸೃಷ್ಟಿಸುತ್ತಿವೆ ಎಂದು artical-14.com ನ ತನಿಖಾ ವರದಿ ತಿಳಿಸಿದೆ.

ಮಾಧ್ಯಮ ವರದಿಗಳು ಮತ್ತು ಸಾರ್ವಜನಿಕರ ದೂರುಗಳ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಕಡಿಮೆ ವೆಚ್ಚದ ಜೀವ ವಿಮೆ ಮತ್ತು ಅಪಘಾತ ವಿಮೆ ಯೋಜನೆಗಳಿಗೆ ಗ್ರಾಹಕರನ್ನು ನೋಂದಾಯಿಸಲು ಬ್ಯಾಂಕ್‌ಗಳು ಅವರ ಖಾತೆಗಳಿಂದ ಅನುಮತಿಯಿಲ್ಲದೆ ಹಣ ಕಡಿತ ಮಾಡುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಗುರಿ ಪೂರೈಸಲು ಬ್ಯಾಂಕ್‌ಗಳು ಗ್ರಾಹಕರ ಖಾತೆಗಳಿಂದ ಸಾಮೂಹಿಕವಾಗಿ ಹಣ ಕಡಿತ ಮಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಗ್ರಾಹಕರ ಒಪ್ಪಿಗೆಯನ್ನು ನಕಲಿಸುವುದು ಮತ್ತು ಅದನ್ನು ಮರೆಮಾಚಲು ಸ್ಥಳೀಯ ಕಚೇರಿಗಳಿಗೆ ಸೂಚಿಸುವುದು ಮಾಡುತ್ತಿದೆ ಎಂದು ತನಿಖಾ ವರದಿ ಹೇಳಿದೆ.

ಬ್ಯಾಂಕ್‌ಗಳು ಮೋದಿ ಸರ್ಕಾರದ ವಿಮಾ ಯೋಜನೆಗಳಿಗಾಗಿ ತಮ್ಮ ಖಾತೆಗಳಿಂದ ಹಣ ಕಡಿತಗೊಳಿಸುವುದರ ವಿರುದ್ಧ ಹೆಚ್ಚಿನ ಗ್ರಾಹಕರು ಆಕ್ರೋಶಗೊಂಡಿದ್ದಾರೆ. ಬ್ಯಾಂಕ್ ಶಾಖೆಗಳಿಗೆ ತೆರಳಿ ದಬಾಯಿಸಿದ್ದಾರೆ. ಇಂತಹ ಕೆಲವು ಗ್ರಾಹಕರಿಂದ ಕಡಿತ ಮಾಡಿದ್ದ ಹಣವನ್ನು ಬ್ಯಾಂಕ್‌ಗಳು ಹಿಂದಿರುಗಿಸಿವೆ. ಇನ್ನೂ ಕೆಲವರು ನ್ಯಾಯಾಲಯಗಳ ಮೆಟ್ಟಿಲೇರಿದ್ದಾರೆ. ಅವರೊಂದಿಗೆ ರಾಜಿ ಸಂಧಾನಕ್ಕಾಗಿ ಬ್ಯಾಂಕ್‌ಗಳು ಅಲವತ್ತುಕೊಂಡಿವೆ. ಇದಕ್ಕೆ ಕ್ಯಾರೇ ಎನ್ನದ ಗ್ರಾಹಕರು. “ಇದು ಕೇವಲ ಹಣದ ಪ್ರಶ್ನೆಯಲ್ಲ, ಇದು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಮಾಡುತ್ತಿರುವ ವಂಚನೆಯಾಗಿದೆ. ಇದನ್ನು ನಿಲ್ಲಿಸಲೇಬೇಕಿದೆ” ಎಂದು ಕಾನೂನು ಸಮರ ಮುಂದುರೆಸಿದ್ದಾರೆ.

ಬಿಹಾರದ ಸರನ್ ಜಿಲ್ಲೆಯ ಇಂಜಿನಿಯರಿಂಗ್ ಪದವೀಧರ ಕುಂದನ್ ಕುಮಾರ್ ಕಳೆದೊಂದು ವರ್ಷದಿಂದಲೂ ತಾನು ಖರೀದಿಸದ ವಿಮಾ ಪಾಲಿಸಿಯಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು artical-14.com ತಿಳಿಸಿದೆ.

ಕುಮಾರ್ ಅವರ ಅನುಮತಿಯಿಲ್ಲದೇ ಅವರ ಖಾತೆಯಿಂದ ಬ್ಯಾಂಕ್‌ ಹಣವನ್ನು ಕಡಿತಗೊಳಿಸಿದೆ. ಅವರ ಹೆಸರನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ)ಗೆ ಸೇರಿಸಿದೆ.

ಕುಮಾರ್ ಅವರು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ನಲ್ಲಿ ಖಾತೆ ಹೊಂದಿದ್ದು, 2022 ಡಿಸೆಂಬರ್‌ 29ರಂದು ಬ್ಯಾಂಕ್‌ ಅವರ ಖಾತೆಯಿಂದ ಹಣ ಕಡಿತಗೊಳಿಸಿದೆ. ದಿನಗಳ ಬಳಿಕ ಈ ಕುರಿತು ಅರಿವಾದಾಗ, ಕುಮಾರ್ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಬ್ಯಾಂಕ್‌ನಿಂದ ವಿಮಾ ಪಾಲಿಸಿಗೆ ತನ್ನ ಅರ್ಜಿಯ ಪ್ರತಿಯನ್ನು ಕೋರಿದ್ದರು. ಸದ್ರಿ ವಿಮೆಗಾಗಿ ಯಾವುದೇ ಅರ್ಜಿಯು ಕಂಡು ಬಂದಿಲ್ಲ ಎಂದು ಬ್ಯಾಂಕ್‌ 2023, ಫೆ.2ರಂದು ನೀಡಿದ್ದ ಉತ್ತರದಲ್ಲಿ ತಿಳಿಸಿತ್ತು.

ಬ್ಯಾಂಕ್‌ಗಳು ಇತರ ವಿಮಾ ಯೋಜನೆಗಳಿಗೂ ಗ್ರಾಹಕರ ಅನುಮತಿ ಇಲ್ಲದೆ ಸೇರಿಸುತ್ತಿದೆ. “ನನ್ನ ಖಾತೆಯಿಂದ ಕಡಿತಗೊಳಿಸಿರುವ ಹಣವನ್ನು ಬ್ಯಾಂಕ್ ವಾಪಸ್ ಕೊಟ್ಟಿಲ್ಲ. ಈ ಕೊಳಕು ವ್ಯವಸ್ಥೆಯಿಂದ ಹೊರ ಬರಲು ನಾನು ಮಾರ್ಗ ಹುಡುಕುತ್ತಿದ್ದೇನೆ” ಎಂದು artical-14.com ಗೆ ಕುಮಾರ್ ಹೇಳಿದ್ದಾರೆ.

ಜೀವ ವಿಮೆಯಲ್ಲದೆ ಬ್ಯಾಂಕ್‌ಗಳು ಗ್ರಾಹಕರ ಅನುಮತಿಯಿಲ್ಲದೆ ಅವರನ್ನು ಅಪಘಾತ ವಿಮೆಯಾಗಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ)ಗೂ ಸೇರಿಸಿ ಖಾತೆಗಳಿಂದ ಹಣ ಕಡಿತಗೊಳಿಸುತ್ತಿವೆ.

ಕುಮಾರ್ ಒಪ್ಪಿಗೆಯಿಲ್ಲದೆ ಅವರನ್ನು ಪಿಎಂಜೆಜೆಬಿವೈಗೆ ಸೇರಿಸಿದ್ದರೆ, ಅವರ ತಾಯಿಯ ಹೆಸರನ್ನು ಒಪ್ಪಿಗೆ ಪಡೆಯದೇ ಎಪಿವೈಗೆ ಸೇರಿಸಲಾಗಿದೆ. ಪಿಎಂಜೆಜೆಬಿವೈಗೆ ವಾರ್ಷಿಕ ಪ್ರೀಮಿಯಂ 436 ರೂ.ಗಳಾಗಿದ್ದರೆ ಪಿಎಂಎಸ್‌ಬಿವೈಗೆ 20 ರೂ.ಗಳಾಗಿವೆ. ಗ್ರಾಹಕರು ಒಮ್ಮೆ ಈ ಯೋಜನೆಗಳಿಗೆ ಚಂದಾದಾರರಾದರೆ ಪ್ರತಿ ವರ್ಷ ಅವರ ಖಾತೆಯಿಂದ ಹಣ ಕಡಿತವಾಗುತ್ತಲೇ ಇರುತ್ತದೆ.

ಪಿಎಂಜೆಜೆಬಿವೈ ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ ಪಾಲಿಸಿದಾರನ ನಾಮಿನಿಗೆ 2 ಲಕ್ಷ ರೂ.ಗಳ ವಿಮೆ ಹಣವನ್ನು ನೀಡುತ್ತದೆ. ಪಿಎಂಎಸ್‌ಬಿವೈ ಅಪಘಾತದಿಂದ ಸಾವು ಸಂಭವಿಸಿದರೆ 2 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡರೆ 1 ಲಕ್ಷ ರೂ.ಗಳ ಪರಿಹಾರವನ್ನು ಒದಗಿಸುತ್ತದೆ. ಎಪಿವೈ 60 ವರ್ಷ ವಯಸ್ಸಿನ ಬಳಿಕ 5,000 ರೂ.ವರೆಗೂ ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಇದು ಮಾಸಿಕ ಶುಲ್ಕವು ಆಯ್ಕೆ ಮಾಡಿದ ಪಿಂಚಣಿ ಪ್ಲಾನ್ ಅನ್ನು ಅವಲಂಬಿಸಿರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಅನುಮತಿಯಿಲ್ಲದೆ ಯೋಜನೆಗಳಿಗೆ ನೋಂದಾಯಿತರಾದವರಿಗೆ ತಾವು ವಿಮಾ ರಕ್ಷಣೆಗಾಗಿ ಪ್ರೀಮಿಯಂ ನೀಡುತ್ತಿದ್ದೇವೆ ಎನ್ನುವುದೂ ಗೊತ್ತಿರುವುದಿಲ್ಲ. ಇದು ದುರಂತ ಸಂಭವಿಸಿದ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಯೋಜನೆಯ ಲಾಭಗಳನ್ನು ಪಡೆಯುವುದನ್ನು ತಡೆಯುತ್ತದೆ ಮತ್ತು ಅನುಮತಿಯಿಲ್ಲದೆ ಕಡಿತಗೊಂಡ ಪ್ರೀಮಿಯಂ ಹಣವೂ ವ್ಯರ್ಥವಾಗುತ್ತದೆ.

ಪಾಲಿಸಿದಾರರ/ಖಾತೆದಾರರ ಒಪ್ಪಿಗೆಯಿಲ್ಲದೆ ವಿಮೆ ಯೋಜನೆಗಳನ್ನು ಸಕ್ರಿಯಗೊಳಿಸುವಾಗ ಸುಳ್ಳು ಮಾಹಿತಿಗಳನ್ನು ನಮೂದಿಸಲಾಗುತ್ತದೆ ಎಂದು ಬ್ಯಾಂಕ್ ಉದ್ಯೋಗಿಗಳೇ ಒಪ್ಪಿಕೊಂಡಿದ್ದಾರೆ.

artical-14.comಗೆ ಲಭ್ಯವಾಗಿರುವ ಇಂತಹ ಗ್ರಾಹಕರ ಪಾಲಿಸಿಗಳು ಬೋಗಸ್ ನಾಮಿನಿಗಳನ್ನು ತೋರಿಸಿವೆ. ಇದು ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಪಾಲಿಸಿದಾರನ ಕುಟುಂಬಕ್ಕೆ ನಿರ್ಬಂಧವನ್ನೂ ಒಡ್ಡುತ್ತದೆ.

ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಘಗಳು ಈ ಯೋಜನೆಗಳಿಗಾಗಿ ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಹಣವನ್ನು ಕಡಿತಗೊಳಿಸುವ ಅವ್ಯವಹಾರವನ್ನು ವಿರೋಧಿಸಿವೆ. ಆದರೆ, ಬ್ಯಾಂಕ್‌ಗಳು ಇದಕ್ಕೆ ಸೊಪ್ಪು ಹಾಕುತ್ತಿಲ್ಲ.

ಈ ಅವ್ಯವಹಾರವನ್ನು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಬ್ಯಾಂಕ್‌ಗಳ ಪ್ರಾದೇಶಿಕ, ವಲಯ ಮತ್ತು ಮುಖ್ಯ ಕಚೇರಿಗಳು ಸಹ ಈ ವಂಚನೆಗಳನ್ನು ಕಾರ್ಯಗತಗೊಳಿಸುತ್ತಿವೆ. ಅದನ್ನು ಮರೆಮಾಚುವಂತೆ ಶಾಖೆಗಳನ್ನು ಒತ್ತಾಯಿಸುತ್ತವೆ ಎನ್ನುವುದನ್ನು ಹೊಸ ಸಾಕ್ಷ್ಯಾಧಾರಗಳು ಬಹಿರಂಗಗೊಳಿಸಿವೆ ಎಂದು artical-14 ವರದಿಯಲ್ಲಿ ತಿಳಿಸಿದೆ.

ಬಡವರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಡಿಮೆ ವೆಚ್ಚದ ಕಲ್ಯಾಣ ಯೋಜನೆಗಳನ್ನು ಮೇ 2015 ರಲ್ಲಿ ಪ್ರಾರಂಭಿಸಿದರು. ಸರ್ಕಾರದ ಒತ್ತಡದ ಕಾರಣ ಮೊದಲಿನಿಂದಲೂ, ಬ್ಯಾಂಕ್‌ಗಳು ಈ ಯೋಜನೆಗಳಿಗೆ ಗ್ರಾಹಕರನ್ನು ಮೋಸದ ಮಾರ್ಗಗಳ ಮೂಲಕ ಸೇರಿಸುತ್ತಿರುವ ಆರೋಪ ಕೇಳಿ ಬಂದಿದೆ.

ಈ ವರದಿಯಲ್ಲಿ artical-14 ಉಲ್ಲೇಖಿಸಿದ ಬಿಹಾರದ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ಮಾತ್ರ ವಿವರಿಸಿದ್ದೇವೆ. artical-14 ವರದಿಯಲ್ಲಿ ವಂಚನೆಗೊಳಗಾದ ಇನ್ನಷ್ಟು ಗ್ರಾಹಕ ಸಮಸ್ಯೆಗಳನ್ನು ವಿಸ್ಕೃತವಾಗಿ ಬಿಚ್ಚಿಡಲಾಗಿದೆ.

ಬ್ಯಾಂಕ್‌ಗಳು ಮಾಹಿತಿ ನೀಡದೆ ವಿಮಾ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸಿ, ಅವರ ಖಾತೆಗಳಿಂದ ಹಣ ಕಡಿತಗೊಳಿಸಿರುವ ಕುರಿತು ಅನೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. artical-14 ಪ್ರಕಾರ, ಬ್ಯಾಂಕ್‌ ಹೇಳದೆ ಕೇಳದೆ ಯುವ ಜನರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಖಾತೆಗಳಿಂದ ಹಣ ಕಡಿತ ಮಾಡುತ್ತಿದೆ. ಕೆಲವರಿಗೆ ಕಡಿತವಾಗುವ ಹಣ ಬಹಳ ಕಡಿಮೆ ಇದೆಯಲ್ಲವೇ ಎಂದನಿಸಿದರೂ, ಬಡ-ಮಧ್ಯಮ ವರ್ಗದವರಿಗೆ ಅದೊಂದು ದೊಡ್ಡ ಮೊತ್ತವಾಗಿದೆ. ಒಂದೊಂದು ರೂಪಾಯಿಯೂ ಅವರಿಗೆ ಅಮೂಲ್ಯವಾದ್ದದ್ದು. ಹಣ ಕಡಿತದ ಹೊರತಾಗಿಯೂ ಬ್ಯಾಂಕ್‌ಗಳು ಮಾಹಿತಿ ನೀಡದೆ ವಿಮಾ ಯೋಜನೆಗೆ ನೋಂದಣಿ ಮಾಡುವುದು ದೊಡ್ಡ ವಂಚನೆ.

ಕೃಪೆ : artical-14.com

ಇದನ್ನೂ ಓದಿ : ಬ್ಲೂಮ್‌ಬರ್ಗ್ ವರದಿಗೆ ತಡೆ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಎಂದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...