Homeಮುಖಪುಟಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

- Advertisement -
- Advertisement -

ಬಹುಶಃ ಇಪ್ಪತ್ತನೇ ಶತಮಾನದಲ್ಲಿ ಸಾರ್ವಜನಿಕ ಜೀವನದಲ್ಲಿದ್ದವರಲ್ಲಿ ಅತ್ಯಂತ ಹೆಚ್ಚು ಶಿಕ್ಷಿತರಾದವರು ಎಂದರೆ ಡಾ. ಬಿ ಆರ್ ಅಂಬೇಡ್ಕರ್ ಎಂಬ ವಾಸ್ತವವನ್ನು ಅನೇಕ ಸಲ ಕಡೆಗಣಿಸಲಾಗಿದೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಜೊತೆಗೆ ಪಿಎಚ್‌ಡಿ ಕೂಡ ಮಾಡಿದ್ದರು, ಅದರೊಂದಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂ.ಎಸ್.ಸಿ ಮತ್ತು ಡಿಎಸ್‌ಸಿ ಪದವೀಧರರು ಹಾಗೂ ಲಂಡನ್‌ನ ಲಾ ಆಫ್ ದಿ ಗ್ರೇ ಇನ್‌ನಲ್ಲಿ ವಕೀಲರಾಗಿ ತರಬೇತಿ ಪಡೆದಿದ್ದರು. ಶೋಷಿತ ಜಾತಿಯಿಂದ ಹುಟ್ಟಿದ ಕಾರಣಕ್ಕೆ ಸಾಮಾಜಿಕ ಅಡೆತಡೆಗಳನ್ನು ಎದುರಿಸಬೇಕಾಗಿದ್ದರಿಂದ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇಪ್ಪತ್ತನೇ ಶತಮಾನದ ಮೊದಲಿನ ಆ ವರ್ಷಗಳಲ್ಲಿ ಜಾತಿ ಮಲಿನತೆಯ ಪರಿಕಲ್ಪನೆ ಎಷ್ಟು ಗಟ್ಟಿಯಾಗಿತ್ತೆಂದರೆ ಅಂಬೇಡ್ಕರ್ ಅವರಂತಹ ಮೇಧಾವಿ ವಿದ್ಯಾರ್ಥಿಗೂ ಅವುಗಳನ್ನು ಸುಲಭವಾಗಿ ಮುರಿಯಲು ಸಾಧ್ಯವಿರಲಿಲ್ಲ.

14ನೇ ಏಪ್ರಿಲ್ 1891 ರಂದು ಮಧ್ಯಪ್ರದೇಶದ ಮಹುವಿನಲ್ಲಿ ಅಂಬೇಡ್ಕರ್ ಹುಟ್ಟಿದ್ದು, ಅವರ ತಂದೆ ರಾಮಜಿ ಸಕ್‌ಪಾಲ್ ಅವರು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದರು. ಅಂಬೇಡ್ಕರ್ ರಾಮಜಿ ಸಕ್‌ಪಾಲ್ ಅವರ ಹದಿನಾಲ್ಕು ಮಕ್ಕಳಲ್ಲಿ ಕೊನೆಯವರಾಗಿದ್ದರು. ಇವರ ಮೂಲ ಊರು ಅಂಬಾವಡೆ ಆಗಿದ್ದರಿಂದ ಶಾಲೆಯಲ್ಲಿಯ ಶಿಕ್ಷಕರೊಬ್ಬರು ಭೀಮರಾವ್ ಅವರ ಹೆಸರನ್ನು ಅಂಬೇಡ್ಕರ್ ಎಂದು ಬದಲಿಸಿದರು. ಶಾಲಾದಿನಗಳು ಅತ್ಯಂತ ಕಷ್ಟಕರವಾಗಿದ್ದರೂ ಬಾಬಾಸಾಹೇಬ್ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ1908ರಲ್ಲಿ ಉತ್ತೀರ್ಣರಾದರು. ನಂತರ ಬಾಂಬೆಯ ಎಲ್ಫಿನ್ಸ್ಟೋನ್ ಕಾಲೇಜಿನಿಂದ 1912ರಲ್ಲಿ ಪದವಿ ಪಡೆದರು. ಅದೇ ವರ್ಷ ಅವರ ತಂದೆ ತೀರಿಕೊಂಡರು. ಹಾಗೂ ಅದೇ ವರ್ಷ ಸರ್ ಸಯಾಜಿರಾವ್ ಗಾಯಕವಾಡ್ ಅವರು ನೀಡುವ ವಿದ್ಯಾರ್ಥಿವೇತನಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ತಿಂಗಳಿಗೆ 11 ಪೌಂಡ್ 6 ಶಿಲಿಂಗ್ಸ್‌ನ ಆ ವಿದ್ಯಾರ್ಥಿವೇತನದಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ನ್ಯೂಯಾರ್ಕ್‌ನಲ್ಲಿಯ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋಗಲು ಅನುವು ಮಾಡಿಕೊಟ್ಟಂತಾಯಿತು. ಅಲ್ಲಿ ಅವರು ಎಂ.ಎ. ಪದವಿ ಮಾತ್ರವಲ್ಲದೆ, ’ನ್ಯಾಷನಲ್ ಡಿವಿಡೆಂಡ್ ಫಾರ್ ಇಂಡಿಯಾ: ಅ ಹಿಸ್ಟಾರಿಕಲ್ ಆಂಡ್ ಅನಾಲಿಟಿಕಲ್ ಸ್ಟಡಿ’ ಎಂಬ ಪ್ರಬಂಧವನ್ನು ಬರೆದು ಡಾಕ್ಟರೇಟ್ ಕೂಡ ಪಡೆದರು.

ಕೊಲಂಬಿಯಾದ ಅವರ ಅಧ್ಯಯನದ ಸಮಯದಲ್ಲಿಯೇ ಯುರೋಪಿನ ಹಲವಾರು ದೇಶಗಳಲ್ಲಿ ಭೀಕರ ಯುದ್ಧ ಶುರುವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ನಂತರ ಮೊದಲ ವಿಶ್ವಯುದ್ಧ ಎಂದು ಕರೆಯಲಾದ ಈ ಯುದ್ಧವು ವಿಶ್ವದೆಲ್ಲೆಡೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರಿತು. ಬಹುತೇಕ ದೇಶಗಳ ಆರ್ಥಿಕತೆ ನರಳುವಂತೆ ಮಾಡಿತ್ತು. ಅದರ ಪರಿಣಾಮವಾಗಿ, ಅಂಬೇಡ್ಕರ್ ಅವರ ವೈಯುಕ್ತಿಕ ಜೀವನದಲ್ಲೂ ಬದಲಾವಣೆಗಳಾದವು. ಅವರ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿ, ಅವರು ಭಾರತಕ್ಕೆ ಮರಳುವಂತಾಯಿತು. ಸಯ್ಯಾಜಿರಾವ್ ಅವರ ಬಗ್ಗೆ ಹೊಂದಿದ್ದ ಕೃತಜ್ಞತಾಭಾವದಿಂದ ಅಂಬೇಡ್ಕರ್ ಅವರು ಬರೋಡಾ ಸ್ಟೇಟ್ ಸರ್ವೀಸ್‌ನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಹಾಗೂ ಅವರಿಗೆ ಮಹಾರಾಜರ ರಾಜಕೀಯ ಕಾರ್ಯದರ್ಶಿಯ ಹುದ್ದೆಯನ್ನು ನೀಡಲಾಯಿತು.

ಆದರೆ ನ್ಯೂಯಾರ್ಕ್‌ನಲ್ಲಿ ಸೆಲಿಗ್ಮಾನ್, ಕ್ಲಾರ್ಕ್, ಸೀಗರ್, ಮೂರ್, ಮಿಶೆಲ್, ಚಾಡ್‌ವಿಕ್, ಸಿಮ್‌ಕೋವಿಚ್, ಗಿಡಿಂಗ್ಸ್ ಮತ್ತು ಡ್ಯೂ ಅವರಂತಹ ಗಣ್ಯ ಚಿಂತಕರ ಅಡಿಯಲ್ಲಿ ಅಧ್ಯಯನ ಮಾಡಿ, ಅವರೊಂದಿಗೆ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದ ಅಂಬೇಡ್ಕರ್ ಅವರಿಗೆ ಬರೋಡಾದಲ್ಲಿ ತಾರತಮ್ಯ ಮತ್ತು ಅವಮಾನ ಅನುಭವಿಸಬೇಕಾಗಿ ಬಂತು. ಮೊದಲನೆಯದಾಗಿ, ಬರೋಡಾದಲ್ಲಿ ಅವರನ್ನು ಬರಮಾಡಿಕೊಳ್ಳಲು ಯಾರೂ ಬರಲಿಲ್ಲ ಹಾಗೂ ಅವರ ಸಹಾಯಕರು ಅವರ ಆದೇಶಗಳನ್ನು ಪಾಲಿಸುವಲ್ಲಿ ಹಿಂಜರಿಕೆ ತೋರುತ್ತಿದ್ದರು. ಅದಕ್ಕಿಂತ ಮುಖ್ಯವಾಗಿ, ಅವರಿಗೆ ಕೊಡಬೇಕಾಗಿದ್ದ ಸರಕಾರಿ ಬಂಗಲೆಯ ಸಲುವಾಗಿ ಕಾಯಬೇಕಾದಾಗ ಅವರಿಗೆ ಬರೋಡಾದಲ್ಲಿ ಒಂದು ಸರಳ ವಸತಿಯನ್ನು ಹುಡುಕುವುದು ಅಸಾಧ್ಯವಾಯಿತು.

ಬರೋಡಾ ತಲುಪಿದ ನಂತರ ತಮಗೆ ಯಾರು ವಸತಿ ನೀಡಬಲ್ಲರು ಎಂದು ಚಿಂತಿಸುತ್ತಾ ಹೋಟೆಲ್‌ಗಳನ್ನು ಹುಡುಕತೊಡಗಿದರು. ಹಿಂದೂ ಹೋಟೆಲ್‌ಗಳು ಅವರನ್ನು ನಿರಾಕರಿಸುತ್ತವೆ ಎಂದು ಅವರಿಗೆ ತಿಳಿದಿತ್ತು. ಹಾಗಾಗಿ ಅವರು ಕೆಲವು ಪಾರ್ಸಿ ಹೋಟೆಲ್‌ಗಳಿಗೆ ಹೋಗಿ ಪ್ರಯತ್ನಿಸಿದರು ಆದರೆ ಅವೆಲ್ಲವುಗಳು ಕೇವಲ ಪಾರ್ಸಿ ವ್ಯಕ್ತಿಗಳಿಗೆ ಮಾತ್ರ ಮೀಸಲಿರುವುದು ಅವರಿಗೆ ಶೀಘ್ರವೇ ತಿಳಿಯಿತು. ಬೇರೆ ದಾರಿ ಕಾಣದೇ, ಒಂದು ಪಾರ್ಸಿ ಹೋಟೆಲ್‌ನ ಮಾಲೀಕರಿಗೆ ಮನವಿ ಮಾಡಿಕೊಂಡಾಗ, ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಅಲ್ಲಿರಬೇಕೆಂಬ ಷರತ್ತಿನೊಂದಿಗೆ ಅಲ್ಲಿ ವಾಸಿಸಲಾರಂಭಿಸಿದರು. ಇತರ ಪಾರ್ಸಿಗಳಿಗೆ ಗೊತ್ತಾದರೆ ಈ ಹೊಟೆಲ್‌ಗೆ ಬಹಿಷ್ಕಾರ ಹಾಕಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಬೇಕಾಯಿತು. ಇದು ತಾತ್ಕಾಲಿತ ಸಮಸ್ಯೆ ಎಂದು, ಸರಕಾರಿ ಬಂಗಲೆ ತಮಗೆ ಸಿಗುವುದೆಂದು ಅವರು ತಮ್ಮ ವಾಸ್ತವ್ಯ ಶುರು ಮಾಡಿದರು ಆದರೆ, ಅಲ್ಲಿನ ವಾಸ್ತವ್ಯ ಶೀಘ್ರವೇ ದುರಂತದಲ್ಲಿ ಕೊನೆಗೊಳ್ಳುವುದೆಂದು ಅವರಿಗೆ ಗೊತ್ತಿರಲಿಲ್ಲ. ಅವರ ಅಧಿಕೃತ ಸ್ಥಾನಕ್ಕೆ ಆ ಜಾಗ ತಕ್ಕುದಾಗಿರಲಿಲ್ಲ. ಎರಡು ದಶಕಗಳ ನಂತರ ಅಂಬೇಡ್ಕರ್ ಅವರು ಈ ತಮ್ಮ ಅನುಭವದ ಬಗ್ಗೆ ಹೀಗೆ ಬರೆದರು.

“ಆ ಹೋಟೆಲ್‌ನ ಮೊದಲ ಮಹಡಿಯಲ್ಲಿ ಒಂದು ಪುಟ್ಟ ಬೆಡ್‌ರೂಮ್ ಇತ್ತು, ಅದಕ್ಕೆ ಹೊಂದಿಕೊಂಡು ಒಂದು ಬಚ್ಚಲು, ಅದರಲ್ಲಿ ನೀರಿಗಾಗಿ ಒಂದು ನಳ. ಆ ಮಹಡಿಯಲ್ಲಿ ಮಿಕ್ಕದ್ದೆಲ್ಲಾ ಒಂದು ದೊಡ್ಡ ಹಾಲ್. ಆಗ ಆ ಹಾಲ್‌ನಲ್ಲಿ ಎಲ್ಲಾ ರೀತಿಯ ಕಸ ತುಂಬಿತ್ತು, ಮುರುಕು ಕುರ್ಚಿಗಳು, ಬೆಂಚ್‌ಗಳು, ಹಲಗೆಗಳು ಇತ್ಯಾದಿ. ಇಂತಹ ವಾತಾವರಣದ ನಡುವೆ ನಾನೊಬ್ಬನೇ ಏಕಾಂಗಿಯಾಗಿ ಇರುತ್ತಿದ್ದೆ. ಅಲ್ಲಿಯ ಸಹಾಯಕ ಬೆಳಗ್ಗೆ ಒಂದು ಕಪ್ ಚಹಾದೊಂದಿಗೆ ಬರುತ್ತಿದ್ದ. 9.30ಗೆ ಮತ್ತೆ ತಿಂಡಿಯೊಂದಿಗೆ ಅಥವಾ ಬೆಳಗ್ಗಿನ ಊಟದೊಂದಿಗೆ ಬರುತ್ತಿದ್ದ. ಆತ ಮೂರನೇ ಬಾರಿ ಸಂಜೆ 8.30ಕ್ಕೆ ರಾತ್ರಿಯ ಊಟದೊಂದಿಗೆ ಬರುತ್ತಿದ್ದ. ಆತ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಮೇಲೆ ಬರುತ್ತಿದ್ದ ಹಾಗೂ ಬಂದಾಗಲೆಲ್ಲ ಒಂದೂ ಮಾತನಾಡದೇ ಹೋಗುತ್ತಿದ್ದ. ಹೇಗೋ ದಿನ ಕಳೆಯುತ್ತಿತ್ತು.

ನನ್ನನ್ನು ಬರೋಡಾದ ಮಹಾರಾಜರು ಅಕೌಂಟೆಂಟ್ ಜೆನರಲ್ ಆಫೀಸಿನಲ್ಲಿ ಪ್ರೊಬೇಷನರ್ ಆಗಿ ನೇಮಿಸಿದ್ದರು. ನಾನು ಬೆಳಗ್ಗೆ ಹತ್ತು ಗಂಟೆಗೆ ಹೋಟೆಲ್ ಬಿಡುತ್ತಿದ್ದೆ ಹಾಗೂ ಸಂಜೆ ತಡವಾಗಿ ಸುಮಾರು 8 ಗಂಟೆಗೆ ಮರಳುತ್ತಿದ್ದೆ. ಗೆಳೆಯರೊಂದಿಗೆ ಆ ಹೋಟೆಲ್‌ನ ಹೊರಗೇ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೆ. ಆ ಹೋಟೆಲ್‌ಗೆ ಹೋಗಿ, ಅಲ್ಲಿ ರಾತ್ರಿ ಕಳೆಯುವ ಕಲ್ಪನೆಯೇ ನನಗೆ ಭೀಕರವಾಗಿತ್ತು. ನನಗೆ ವಿಶ್ರಾಂತಿ ಪಡೆಯಲು ಬೇರೆಲ್ಲೂ ಅವಕಾಶವಿಲ್ಲದ ಕಾರಣಕ್ಕಾಗಿ ನಾನು ಹೋಟೆಲ್‌ಗೆ ಮರಳುತ್ತಿದ್ದೆ.

ಮೊದಲ ಮಹಡಿಯ ದೊಡ್ಡ ಹಾಲ್‌ನಲ್ಲಿ ಮಾತನಾಡಿಸಲು ಯಾವ ಮನುಷ್ಯರೂ ಇರುತ್ತಿರಲಿಲ್ಲ. ನಾನು ತುಂಬಾ ಏಕಾಂಗಿಯಾಗಿದ್ದೆ. ಇಡೀ ಹಾಲ್ ಕತ್ತಲೆಯಿಂದ ಆವರಿಸಿಕೊಂಡಿತ್ತು. ಅಲ್ಲಿ ವಿದ್ಯುತ್ ದೀಪಗಳನ್ನು ಬಿಡಿ, ಕತ್ತಲೆಯನ್ನು ಹೊಡೆದೋಡಿಸಲು ಎಣ್ಣೆದೀಪಗಳೂ ಇದ್ದಿಲ್ಲ. ಅಲ್ಲಿಯ ಸಹಾಯಕ ಗಾಜು ಹೊಂದಿದ್ದ ಒಂದು ಚಿಕ್ಕ ಬುಡ್ಡಿ ದೀಪವನ್ನು ನನ್ನ ಸಲುವಾಗಿ ತರುತ್ತಿದ್ದ. ಅದರ ಬೆಳಕು ಒಂದೆರಡು ಇಂಚಿನ ಮುಂದೆ ಬೀಳುತ್ತಿರಲಿಲ್ಲ. ನಾನೊಂದು, ಕತ್ತಲಕೋಣೆಯಲ್ಲಿದ್ದೇನೆ ಎಂದು ಭಾಸವಾಗುತ್ತಿತ್ತು. ನಾನು ಮಾತನಾಡಿಸಲು ಮನುಷ್ಯರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದೆ. ಆದರೆ ಅಲ್ಲಿ ಯಾರೂ ಇದ್ದಿಲ್ಲ. ಮನುಷ್ಯಜೀವಿಗಳ ಅನುಪಸ್ಥಿತಿಯಲ್ಲಿ ನಾನು ಪುಸ್ತಕಗಳ ಮೊರೆ ಹೋದೆ ಹಾಗೂ ನಿರಂತರವಾಗಿ ಓದಿದೆ”.

ಈ ಹೇಯ ಮತ್ತು ವಿಚಿತ್ರ ವ್ಯವಸ್ಥೆಯ ಹನ್ನೊಂದನೆಯ ದಿನದಂದು ಪಾರ್ಸಿ ಸಮುದಾಯದ ಇತರ ಸದಸ್ಯರು ಅಂಬೇಡ್ಕರ್ ಅವರ ವಾಸ್ತವ್ಯದ ಬಗ್ಗೆ ತಿಳಿದುಕೊಂಡರು ಹಾಗೂ ಯಾವುದೇ ಮುಲಾಜು ತೋರದೆ, ಜಾಗವನ್ನು ಖಾಲಿ ಮಾಡಬೇಕೆಂದು ಆದೇಶಿಸಿದರು. ಆ ಅವಮಾನ ಮತ್ತು ನೋವು ಡಾ. ಅಂಬೇಡ್ಕರ್ ಅವರಿಗೆ ಸಹಿಸಲಾಗಲಿಲ್ಲ ಹಾಗೂ ಅದೇ ದಿನ ರಾತ್ರಿ ಬಾಂಬೆಗೆ ಹೋಗುವ 9 ಗಂಟೆಯ ರೈಲನ್ನು ಹಿಡದರು. ಬಾಂಬೆಗೆ ಮರಳಿದ ನಂತರ ಅವರು ಕೋಲ್ಹಾಪುರದ ಶಾಹು ಮಹಾರಾಜರ ಸಂಪರ್ಕಕ್ಕೆ ಬಂದರು ಹಾಗೂ ಒಂದು ಜಾತಿರಹಿತ ಸಮಾಜವನ್ನು ಸೃಷ್ಟಿಸುವ ಕೆಲಸದಲ್ಲಿ ಸಕ್ರಿಯರಾದರು ಹಾಗೂ ಅದೇ ಮುಂದೆ ಅವರ ಜೀವನದ ಗುರಿಯಾಯಿತು. ಮತ್ತೆ ಯುದ್ಧ ಮುಗಿದ ನಂತರ ಲಂಡನ್‌ಗೆ ಹೋಗಿ ಕಾನೂನು ಪದವಿ ಒಳಗೊಂಡು ಉನ್ನತ ಶಿಕ್ಷಣ ಮುಂದುವರೆಸಬೇಕೆಂದು ನಿರ್ಧರಿಸಿದರು. ಮುಂದೆ ಅವರು ಸಮಾಜದ ಅಂಚಿನಲ್ಲಿರುವ ಶೋಷಿತ ಮತ್ತು ವಂಚಿತ ಸಮುದಾಯಕ್ಕೆ ಭಾರತದ ಇತಿಹಾಸ ಕಂಡ ಶ್ರೇಷ್ಠ ವಕ್ತಾರರಾದರು. ಆದರೆ, ನಂತರದ ಯಾವ ಘಟನೆಗಳೂ ಅವರನ್ನು ಬರೋಡಾಗೆ ಮರಳುವಂತೆ ಮಾಡಲಿಲ್ಲ. ಆದಾಗ್ಯೂ, ಬರೋಡಾದಲ್ಲಿ ಕೆಲಸ ಮಾಡಿದ ದಿನಗಳ ಸಮಯದಲ್ಲಿ ಅಸಮಾನತೆ ಮತ್ತು ತಾರತಮ್ಯದ ಕಹಿ ಅನುಭವಗಳು ಅವರ ಸಾಮಾಜಿಕ ಕಾರ್ಯಕ್ಕೆ ಒಂದು ರೀತಿಯ ತುರ್ತಿನಲ್ಲಿ ಪ್ರಚೋದನೆಯನ್ನು ನೀಡಿದವು ಎಂದು ಹೇಳಬಹುದಾಗಿದೆ. ಸಯ್ಯಾಜಿರಾವ್ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ನೀತಿಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಅರಿವಿತ್ತು. ಹಾಗೂ ಸ್ವಾಭಾವಿಕವಾಗಿಯೇ ಎಲ್ಲಾ ಜಾತಿ, ವರ್ಗ, ಧರ್ಮ, ಭಾಷೆ, ಸಂಸ್ಕೃತಿ, ಲಿಂಗ ಹಾಗೂ ಆರ್ಥಿಕ ಹಿನ್ನೆಲೆಯ ನಾಗರಿಕರಿಗೆ ಸಮಾನತೆ ಮತ್ತು ಘನತೆಯನ್ನು ನೀಡಿದ ನಮ್ಮ ಸಂವಿಧಾನವನ್ನು ರಚಿಸಿದಾಗ ಈ ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಂಡಿದ್ದರು.

(ಬರೋಡಾ ಆಲ್ ಇಂಡಿಯಾ ರೇಡಿಯೋಗೆ ಜಿ ಎನ್ ದೇವಿಯವರು ನೀಡಿದ ಉಪನ್ಯಾಸವಿದು)

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...