Homeಮುಖಪುಟಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

- Advertisement -
- Advertisement -

ಬಹುಶಃ ಇಪ್ಪತ್ತನೇ ಶತಮಾನದಲ್ಲಿ ಸಾರ್ವಜನಿಕ ಜೀವನದಲ್ಲಿದ್ದವರಲ್ಲಿ ಅತ್ಯಂತ ಹೆಚ್ಚು ಶಿಕ್ಷಿತರಾದವರು ಎಂದರೆ ಡಾ. ಬಿ ಆರ್ ಅಂಬೇಡ್ಕರ್ ಎಂಬ ವಾಸ್ತವವನ್ನು ಅನೇಕ ಸಲ ಕಡೆಗಣಿಸಲಾಗಿದೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಜೊತೆಗೆ ಪಿಎಚ್‌ಡಿ ಕೂಡ ಮಾಡಿದ್ದರು, ಅದರೊಂದಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂ.ಎಸ್.ಸಿ ಮತ್ತು ಡಿಎಸ್‌ಸಿ ಪದವೀಧರರು ಹಾಗೂ ಲಂಡನ್‌ನ ಲಾ ಆಫ್ ದಿ ಗ್ರೇ ಇನ್‌ನಲ್ಲಿ ವಕೀಲರಾಗಿ ತರಬೇತಿ ಪಡೆದಿದ್ದರು. ಶೋಷಿತ ಜಾತಿಯಿಂದ ಹುಟ್ಟಿದ ಕಾರಣಕ್ಕೆ ಸಾಮಾಜಿಕ ಅಡೆತಡೆಗಳನ್ನು ಎದುರಿಸಬೇಕಾಗಿದ್ದರಿಂದ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇಪ್ಪತ್ತನೇ ಶತಮಾನದ ಮೊದಲಿನ ಆ ವರ್ಷಗಳಲ್ಲಿ ಜಾತಿ ಮಲಿನತೆಯ ಪರಿಕಲ್ಪನೆ ಎಷ್ಟು ಗಟ್ಟಿಯಾಗಿತ್ತೆಂದರೆ ಅಂಬೇಡ್ಕರ್ ಅವರಂತಹ ಮೇಧಾವಿ ವಿದ್ಯಾರ್ಥಿಗೂ ಅವುಗಳನ್ನು ಸುಲಭವಾಗಿ ಮುರಿಯಲು ಸಾಧ್ಯವಿರಲಿಲ್ಲ.

14ನೇ ಏಪ್ರಿಲ್ 1891 ರಂದು ಮಧ್ಯಪ್ರದೇಶದ ಮಹುವಿನಲ್ಲಿ ಅಂಬೇಡ್ಕರ್ ಹುಟ್ಟಿದ್ದು, ಅವರ ತಂದೆ ರಾಮಜಿ ಸಕ್‌ಪಾಲ್ ಅವರು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದರು. ಅಂಬೇಡ್ಕರ್ ರಾಮಜಿ ಸಕ್‌ಪಾಲ್ ಅವರ ಹದಿನಾಲ್ಕು ಮಕ್ಕಳಲ್ಲಿ ಕೊನೆಯವರಾಗಿದ್ದರು. ಇವರ ಮೂಲ ಊರು ಅಂಬಾವಡೆ ಆಗಿದ್ದರಿಂದ ಶಾಲೆಯಲ್ಲಿಯ ಶಿಕ್ಷಕರೊಬ್ಬರು ಭೀಮರಾವ್ ಅವರ ಹೆಸರನ್ನು ಅಂಬೇಡ್ಕರ್ ಎಂದು ಬದಲಿಸಿದರು. ಶಾಲಾದಿನಗಳು ಅತ್ಯಂತ ಕಷ್ಟಕರವಾಗಿದ್ದರೂ ಬಾಬಾಸಾಹೇಬ್ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ1908ರಲ್ಲಿ ಉತ್ತೀರ್ಣರಾದರು. ನಂತರ ಬಾಂಬೆಯ ಎಲ್ಫಿನ್ಸ್ಟೋನ್ ಕಾಲೇಜಿನಿಂದ 1912ರಲ್ಲಿ ಪದವಿ ಪಡೆದರು. ಅದೇ ವರ್ಷ ಅವರ ತಂದೆ ತೀರಿಕೊಂಡರು. ಹಾಗೂ ಅದೇ ವರ್ಷ ಸರ್ ಸಯಾಜಿರಾವ್ ಗಾಯಕವಾಡ್ ಅವರು ನೀಡುವ ವಿದ್ಯಾರ್ಥಿವೇತನಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ತಿಂಗಳಿಗೆ 11 ಪೌಂಡ್ 6 ಶಿಲಿಂಗ್ಸ್‌ನ ಆ ವಿದ್ಯಾರ್ಥಿವೇತನದಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ನ್ಯೂಯಾರ್ಕ್‌ನಲ್ಲಿಯ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋಗಲು ಅನುವು ಮಾಡಿಕೊಟ್ಟಂತಾಯಿತು. ಅಲ್ಲಿ ಅವರು ಎಂ.ಎ. ಪದವಿ ಮಾತ್ರವಲ್ಲದೆ, ’ನ್ಯಾಷನಲ್ ಡಿವಿಡೆಂಡ್ ಫಾರ್ ಇಂಡಿಯಾ: ಅ ಹಿಸ್ಟಾರಿಕಲ್ ಆಂಡ್ ಅನಾಲಿಟಿಕಲ್ ಸ್ಟಡಿ’ ಎಂಬ ಪ್ರಬಂಧವನ್ನು ಬರೆದು ಡಾಕ್ಟರೇಟ್ ಕೂಡ ಪಡೆದರು.

ಕೊಲಂಬಿಯಾದ ಅವರ ಅಧ್ಯಯನದ ಸಮಯದಲ್ಲಿಯೇ ಯುರೋಪಿನ ಹಲವಾರು ದೇಶಗಳಲ್ಲಿ ಭೀಕರ ಯುದ್ಧ ಶುರುವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ನಂತರ ಮೊದಲ ವಿಶ್ವಯುದ್ಧ ಎಂದು ಕರೆಯಲಾದ ಈ ಯುದ್ಧವು ವಿಶ್ವದೆಲ್ಲೆಡೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರಿತು. ಬಹುತೇಕ ದೇಶಗಳ ಆರ್ಥಿಕತೆ ನರಳುವಂತೆ ಮಾಡಿತ್ತು. ಅದರ ಪರಿಣಾಮವಾಗಿ, ಅಂಬೇಡ್ಕರ್ ಅವರ ವೈಯುಕ್ತಿಕ ಜೀವನದಲ್ಲೂ ಬದಲಾವಣೆಗಳಾದವು. ಅವರ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿ, ಅವರು ಭಾರತಕ್ಕೆ ಮರಳುವಂತಾಯಿತು. ಸಯ್ಯಾಜಿರಾವ್ ಅವರ ಬಗ್ಗೆ ಹೊಂದಿದ್ದ ಕೃತಜ್ಞತಾಭಾವದಿಂದ ಅಂಬೇಡ್ಕರ್ ಅವರು ಬರೋಡಾ ಸ್ಟೇಟ್ ಸರ್ವೀಸ್‌ನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಹಾಗೂ ಅವರಿಗೆ ಮಹಾರಾಜರ ರಾಜಕೀಯ ಕಾರ್ಯದರ್ಶಿಯ ಹುದ್ದೆಯನ್ನು ನೀಡಲಾಯಿತು.

ಆದರೆ ನ್ಯೂಯಾರ್ಕ್‌ನಲ್ಲಿ ಸೆಲಿಗ್ಮಾನ್, ಕ್ಲಾರ್ಕ್, ಸೀಗರ್, ಮೂರ್, ಮಿಶೆಲ್, ಚಾಡ್‌ವಿಕ್, ಸಿಮ್‌ಕೋವಿಚ್, ಗಿಡಿಂಗ್ಸ್ ಮತ್ತು ಡ್ಯೂ ಅವರಂತಹ ಗಣ್ಯ ಚಿಂತಕರ ಅಡಿಯಲ್ಲಿ ಅಧ್ಯಯನ ಮಾಡಿ, ಅವರೊಂದಿಗೆ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದ ಅಂಬೇಡ್ಕರ್ ಅವರಿಗೆ ಬರೋಡಾದಲ್ಲಿ ತಾರತಮ್ಯ ಮತ್ತು ಅವಮಾನ ಅನುಭವಿಸಬೇಕಾಗಿ ಬಂತು. ಮೊದಲನೆಯದಾಗಿ, ಬರೋಡಾದಲ್ಲಿ ಅವರನ್ನು ಬರಮಾಡಿಕೊಳ್ಳಲು ಯಾರೂ ಬರಲಿಲ್ಲ ಹಾಗೂ ಅವರ ಸಹಾಯಕರು ಅವರ ಆದೇಶಗಳನ್ನು ಪಾಲಿಸುವಲ್ಲಿ ಹಿಂಜರಿಕೆ ತೋರುತ್ತಿದ್ದರು. ಅದಕ್ಕಿಂತ ಮುಖ್ಯವಾಗಿ, ಅವರಿಗೆ ಕೊಡಬೇಕಾಗಿದ್ದ ಸರಕಾರಿ ಬಂಗಲೆಯ ಸಲುವಾಗಿ ಕಾಯಬೇಕಾದಾಗ ಅವರಿಗೆ ಬರೋಡಾದಲ್ಲಿ ಒಂದು ಸರಳ ವಸತಿಯನ್ನು ಹುಡುಕುವುದು ಅಸಾಧ್ಯವಾಯಿತು.

ಬರೋಡಾ ತಲುಪಿದ ನಂತರ ತಮಗೆ ಯಾರು ವಸತಿ ನೀಡಬಲ್ಲರು ಎಂದು ಚಿಂತಿಸುತ್ತಾ ಹೋಟೆಲ್‌ಗಳನ್ನು ಹುಡುಕತೊಡಗಿದರು. ಹಿಂದೂ ಹೋಟೆಲ್‌ಗಳು ಅವರನ್ನು ನಿರಾಕರಿಸುತ್ತವೆ ಎಂದು ಅವರಿಗೆ ತಿಳಿದಿತ್ತು. ಹಾಗಾಗಿ ಅವರು ಕೆಲವು ಪಾರ್ಸಿ ಹೋಟೆಲ್‌ಗಳಿಗೆ ಹೋಗಿ ಪ್ರಯತ್ನಿಸಿದರು ಆದರೆ ಅವೆಲ್ಲವುಗಳು ಕೇವಲ ಪಾರ್ಸಿ ವ್ಯಕ್ತಿಗಳಿಗೆ ಮಾತ್ರ ಮೀಸಲಿರುವುದು ಅವರಿಗೆ ಶೀಘ್ರವೇ ತಿಳಿಯಿತು. ಬೇರೆ ದಾರಿ ಕಾಣದೇ, ಒಂದು ಪಾರ್ಸಿ ಹೋಟೆಲ್‌ನ ಮಾಲೀಕರಿಗೆ ಮನವಿ ಮಾಡಿಕೊಂಡಾಗ, ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಅಲ್ಲಿರಬೇಕೆಂಬ ಷರತ್ತಿನೊಂದಿಗೆ ಅಲ್ಲಿ ವಾಸಿಸಲಾರಂಭಿಸಿದರು. ಇತರ ಪಾರ್ಸಿಗಳಿಗೆ ಗೊತ್ತಾದರೆ ಈ ಹೊಟೆಲ್‌ಗೆ ಬಹಿಷ್ಕಾರ ಹಾಕಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಬೇಕಾಯಿತು. ಇದು ತಾತ್ಕಾಲಿತ ಸಮಸ್ಯೆ ಎಂದು, ಸರಕಾರಿ ಬಂಗಲೆ ತಮಗೆ ಸಿಗುವುದೆಂದು ಅವರು ತಮ್ಮ ವಾಸ್ತವ್ಯ ಶುರು ಮಾಡಿದರು ಆದರೆ, ಅಲ್ಲಿನ ವಾಸ್ತವ್ಯ ಶೀಘ್ರವೇ ದುರಂತದಲ್ಲಿ ಕೊನೆಗೊಳ್ಳುವುದೆಂದು ಅವರಿಗೆ ಗೊತ್ತಿರಲಿಲ್ಲ. ಅವರ ಅಧಿಕೃತ ಸ್ಥಾನಕ್ಕೆ ಆ ಜಾಗ ತಕ್ಕುದಾಗಿರಲಿಲ್ಲ. ಎರಡು ದಶಕಗಳ ನಂತರ ಅಂಬೇಡ್ಕರ್ ಅವರು ಈ ತಮ್ಮ ಅನುಭವದ ಬಗ್ಗೆ ಹೀಗೆ ಬರೆದರು.

“ಆ ಹೋಟೆಲ್‌ನ ಮೊದಲ ಮಹಡಿಯಲ್ಲಿ ಒಂದು ಪುಟ್ಟ ಬೆಡ್‌ರೂಮ್ ಇತ್ತು, ಅದಕ್ಕೆ ಹೊಂದಿಕೊಂಡು ಒಂದು ಬಚ್ಚಲು, ಅದರಲ್ಲಿ ನೀರಿಗಾಗಿ ಒಂದು ನಳ. ಆ ಮಹಡಿಯಲ್ಲಿ ಮಿಕ್ಕದ್ದೆಲ್ಲಾ ಒಂದು ದೊಡ್ಡ ಹಾಲ್. ಆಗ ಆ ಹಾಲ್‌ನಲ್ಲಿ ಎಲ್ಲಾ ರೀತಿಯ ಕಸ ತುಂಬಿತ್ತು, ಮುರುಕು ಕುರ್ಚಿಗಳು, ಬೆಂಚ್‌ಗಳು, ಹಲಗೆಗಳು ಇತ್ಯಾದಿ. ಇಂತಹ ವಾತಾವರಣದ ನಡುವೆ ನಾನೊಬ್ಬನೇ ಏಕಾಂಗಿಯಾಗಿ ಇರುತ್ತಿದ್ದೆ. ಅಲ್ಲಿಯ ಸಹಾಯಕ ಬೆಳಗ್ಗೆ ಒಂದು ಕಪ್ ಚಹಾದೊಂದಿಗೆ ಬರುತ್ತಿದ್ದ. 9.30ಗೆ ಮತ್ತೆ ತಿಂಡಿಯೊಂದಿಗೆ ಅಥವಾ ಬೆಳಗ್ಗಿನ ಊಟದೊಂದಿಗೆ ಬರುತ್ತಿದ್ದ. ಆತ ಮೂರನೇ ಬಾರಿ ಸಂಜೆ 8.30ಕ್ಕೆ ರಾತ್ರಿಯ ಊಟದೊಂದಿಗೆ ಬರುತ್ತಿದ್ದ. ಆತ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಮೇಲೆ ಬರುತ್ತಿದ್ದ ಹಾಗೂ ಬಂದಾಗಲೆಲ್ಲ ಒಂದೂ ಮಾತನಾಡದೇ ಹೋಗುತ್ತಿದ್ದ. ಹೇಗೋ ದಿನ ಕಳೆಯುತ್ತಿತ್ತು.

ನನ್ನನ್ನು ಬರೋಡಾದ ಮಹಾರಾಜರು ಅಕೌಂಟೆಂಟ್ ಜೆನರಲ್ ಆಫೀಸಿನಲ್ಲಿ ಪ್ರೊಬೇಷನರ್ ಆಗಿ ನೇಮಿಸಿದ್ದರು. ನಾನು ಬೆಳಗ್ಗೆ ಹತ್ತು ಗಂಟೆಗೆ ಹೋಟೆಲ್ ಬಿಡುತ್ತಿದ್ದೆ ಹಾಗೂ ಸಂಜೆ ತಡವಾಗಿ ಸುಮಾರು 8 ಗಂಟೆಗೆ ಮರಳುತ್ತಿದ್ದೆ. ಗೆಳೆಯರೊಂದಿಗೆ ಆ ಹೋಟೆಲ್‌ನ ಹೊರಗೇ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೆ. ಆ ಹೋಟೆಲ್‌ಗೆ ಹೋಗಿ, ಅಲ್ಲಿ ರಾತ್ರಿ ಕಳೆಯುವ ಕಲ್ಪನೆಯೇ ನನಗೆ ಭೀಕರವಾಗಿತ್ತು. ನನಗೆ ವಿಶ್ರಾಂತಿ ಪಡೆಯಲು ಬೇರೆಲ್ಲೂ ಅವಕಾಶವಿಲ್ಲದ ಕಾರಣಕ್ಕಾಗಿ ನಾನು ಹೋಟೆಲ್‌ಗೆ ಮರಳುತ್ತಿದ್ದೆ.

ಮೊದಲ ಮಹಡಿಯ ದೊಡ್ಡ ಹಾಲ್‌ನಲ್ಲಿ ಮಾತನಾಡಿಸಲು ಯಾವ ಮನುಷ್ಯರೂ ಇರುತ್ತಿರಲಿಲ್ಲ. ನಾನು ತುಂಬಾ ಏಕಾಂಗಿಯಾಗಿದ್ದೆ. ಇಡೀ ಹಾಲ್ ಕತ್ತಲೆಯಿಂದ ಆವರಿಸಿಕೊಂಡಿತ್ತು. ಅಲ್ಲಿ ವಿದ್ಯುತ್ ದೀಪಗಳನ್ನು ಬಿಡಿ, ಕತ್ತಲೆಯನ್ನು ಹೊಡೆದೋಡಿಸಲು ಎಣ್ಣೆದೀಪಗಳೂ ಇದ್ದಿಲ್ಲ. ಅಲ್ಲಿಯ ಸಹಾಯಕ ಗಾಜು ಹೊಂದಿದ್ದ ಒಂದು ಚಿಕ್ಕ ಬುಡ್ಡಿ ದೀಪವನ್ನು ನನ್ನ ಸಲುವಾಗಿ ತರುತ್ತಿದ್ದ. ಅದರ ಬೆಳಕು ಒಂದೆರಡು ಇಂಚಿನ ಮುಂದೆ ಬೀಳುತ್ತಿರಲಿಲ್ಲ. ನಾನೊಂದು, ಕತ್ತಲಕೋಣೆಯಲ್ಲಿದ್ದೇನೆ ಎಂದು ಭಾಸವಾಗುತ್ತಿತ್ತು. ನಾನು ಮಾತನಾಡಿಸಲು ಮನುಷ್ಯರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದೆ. ಆದರೆ ಅಲ್ಲಿ ಯಾರೂ ಇದ್ದಿಲ್ಲ. ಮನುಷ್ಯಜೀವಿಗಳ ಅನುಪಸ್ಥಿತಿಯಲ್ಲಿ ನಾನು ಪುಸ್ತಕಗಳ ಮೊರೆ ಹೋದೆ ಹಾಗೂ ನಿರಂತರವಾಗಿ ಓದಿದೆ”.

ಈ ಹೇಯ ಮತ್ತು ವಿಚಿತ್ರ ವ್ಯವಸ್ಥೆಯ ಹನ್ನೊಂದನೆಯ ದಿನದಂದು ಪಾರ್ಸಿ ಸಮುದಾಯದ ಇತರ ಸದಸ್ಯರು ಅಂಬೇಡ್ಕರ್ ಅವರ ವಾಸ್ತವ್ಯದ ಬಗ್ಗೆ ತಿಳಿದುಕೊಂಡರು ಹಾಗೂ ಯಾವುದೇ ಮುಲಾಜು ತೋರದೆ, ಜಾಗವನ್ನು ಖಾಲಿ ಮಾಡಬೇಕೆಂದು ಆದೇಶಿಸಿದರು. ಆ ಅವಮಾನ ಮತ್ತು ನೋವು ಡಾ. ಅಂಬೇಡ್ಕರ್ ಅವರಿಗೆ ಸಹಿಸಲಾಗಲಿಲ್ಲ ಹಾಗೂ ಅದೇ ದಿನ ರಾತ್ರಿ ಬಾಂಬೆಗೆ ಹೋಗುವ 9 ಗಂಟೆಯ ರೈಲನ್ನು ಹಿಡದರು. ಬಾಂಬೆಗೆ ಮರಳಿದ ನಂತರ ಅವರು ಕೋಲ್ಹಾಪುರದ ಶಾಹು ಮಹಾರಾಜರ ಸಂಪರ್ಕಕ್ಕೆ ಬಂದರು ಹಾಗೂ ಒಂದು ಜಾತಿರಹಿತ ಸಮಾಜವನ್ನು ಸೃಷ್ಟಿಸುವ ಕೆಲಸದಲ್ಲಿ ಸಕ್ರಿಯರಾದರು ಹಾಗೂ ಅದೇ ಮುಂದೆ ಅವರ ಜೀವನದ ಗುರಿಯಾಯಿತು. ಮತ್ತೆ ಯುದ್ಧ ಮುಗಿದ ನಂತರ ಲಂಡನ್‌ಗೆ ಹೋಗಿ ಕಾನೂನು ಪದವಿ ಒಳಗೊಂಡು ಉನ್ನತ ಶಿಕ್ಷಣ ಮುಂದುವರೆಸಬೇಕೆಂದು ನಿರ್ಧರಿಸಿದರು. ಮುಂದೆ ಅವರು ಸಮಾಜದ ಅಂಚಿನಲ್ಲಿರುವ ಶೋಷಿತ ಮತ್ತು ವಂಚಿತ ಸಮುದಾಯಕ್ಕೆ ಭಾರತದ ಇತಿಹಾಸ ಕಂಡ ಶ್ರೇಷ್ಠ ವಕ್ತಾರರಾದರು. ಆದರೆ, ನಂತರದ ಯಾವ ಘಟನೆಗಳೂ ಅವರನ್ನು ಬರೋಡಾಗೆ ಮರಳುವಂತೆ ಮಾಡಲಿಲ್ಲ. ಆದಾಗ್ಯೂ, ಬರೋಡಾದಲ್ಲಿ ಕೆಲಸ ಮಾಡಿದ ದಿನಗಳ ಸಮಯದಲ್ಲಿ ಅಸಮಾನತೆ ಮತ್ತು ತಾರತಮ್ಯದ ಕಹಿ ಅನುಭವಗಳು ಅವರ ಸಾಮಾಜಿಕ ಕಾರ್ಯಕ್ಕೆ ಒಂದು ರೀತಿಯ ತುರ್ತಿನಲ್ಲಿ ಪ್ರಚೋದನೆಯನ್ನು ನೀಡಿದವು ಎಂದು ಹೇಳಬಹುದಾಗಿದೆ. ಸಯ್ಯಾಜಿರಾವ್ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ನೀತಿಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಅರಿವಿತ್ತು. ಹಾಗೂ ಸ್ವಾಭಾವಿಕವಾಗಿಯೇ ಎಲ್ಲಾ ಜಾತಿ, ವರ್ಗ, ಧರ್ಮ, ಭಾಷೆ, ಸಂಸ್ಕೃತಿ, ಲಿಂಗ ಹಾಗೂ ಆರ್ಥಿಕ ಹಿನ್ನೆಲೆಯ ನಾಗರಿಕರಿಗೆ ಸಮಾನತೆ ಮತ್ತು ಘನತೆಯನ್ನು ನೀಡಿದ ನಮ್ಮ ಸಂವಿಧಾನವನ್ನು ರಚಿಸಿದಾಗ ಈ ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಂಡಿದ್ದರು.

(ಬರೋಡಾ ಆಲ್ ಇಂಡಿಯಾ ರೇಡಿಯೋಗೆ ಜಿ ಎನ್ ದೇವಿಯವರು ನೀಡಿದ ಉಪನ್ಯಾಸವಿದು)

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...