ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಕೇಂದ್ರದಿಂದ ಹಲವು ಯೋಜನೆಗಳಿಂದ ಪಶ್ಚಿಮ ಬಂಗಾಳಕ್ಕೆ ಸುಮಾರು 15,000 ಕೋಟಿ ಬಂದಿಲ್ಲ ಎಂದು ಆರೋಪಿಸಿ ಟಿಎಂಸಿ ನಾಯಕರು ಕೃಷಿಭವನದಲ್ಲೇ ಧರಣಿ ಕುಳಿತಿದ್ದು, ಈ ವೇಳೆ ದೆಹಲಿ ಪೊಲೀಸರು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಹಾಗೂ ಟಿಎಂಸಿ ಸಂಸದ ಡೇರೆಕ್ ಓಬ್ರೇಯಾನ್, ಸಂಸದೆ ಮಹುವಾ ಮೊಯಿತ್ರಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಪಶ್ಚಿಮ ಬಂಗಾಳದ ಸಾವಿರಾರು ಕೋಟಿ ಮನ್ರೇಗಾದ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸುವಂತೆ ಆಗ್ರಹಿಸಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಗೆ ಟಿಎಂಸಿ ನಾಯಕರ ನಿಯೋಗವು ದೆಹಲಿಗೆ ತೆರಳಿತ್ತು. 6 ಗಂಟೆಗೆ ಭೇಟಿಗೆ ಸಮಯ ನಿಗದಿಯಾಗಿದ್ದರೂ ಸಂಜೆ 7.30ರವರೆಗೂ ಭೇಟಿಗೆ ಅವಕಾಶ ಕೊಡಲಿಲ್ಲ. ಇದರಿಂದ ಟಿಎಂಸಿ ನಿಯೋಗ ಪ್ರತಿಭಟನೆಯನ್ನು ನಡೆಸಿದೆ. ಈ ವೇಳೆ ಸಂಸದೆ ಮಹುವಾ ಮೊಯಿತ್ರಾ ಅವರನ್ನು ದೆಹಲಿ ಪೊಲೀಸರು ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಮಹುವಾ ಮೊಯಿತ್ರಾ, ಪ್ರಧಾನಮಂತ್ರಿಯವರೇ ನೀವು ನಮ್ಮನ್ನು ಎಳೆದು ಹೊರಗೆ ಹಾಕಬಹುದು, ಆದರೆ ಸತ್ಯ ದೂರವಾಗುವುದಿಲ್ಲ. ಪಶ್ಚಿಮ ಬಂಗಾಳಕ್ಕೆ ಸೇರಿದ 15 ಸಾವಿರ ಕೋಟಿ ರೂ.ಮನರೇಗಾ ಅನುದಾನವನ್ನು ನೀವು ಕಾನೂನುಬಾಹಿರವಾಗಿ ತಡೆಹಿಡಿದಿದ್ದೀರಿ. ನಿಮ್ಮನ್ನು 2024ರಲ್ಲಿ ಇಂಡಿಯಾವೇ ಹೊರಹಾಕಲಿದೆ ಎಂದು ಹೇಳಿದ್ದಾರೆ.
ಕೇಂದ್ರದ ಸಚಿವರ ಸಂದರ್ಶನಕ್ಕೆ ಸಮಯ ನಿಗದಿ ಬಳಿಕವೂ ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸಂಸದರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಮೂರು ಗಂಟೆವರೆಗೆ ಕಾಯುವಂತೆ ಮಾಡಿ ಸಂದರ್ಶನಕ್ಕೆ ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರ ಬಗ್ಗೆ ಟ್ವೀಟ್ ಮಾಡಿದ ಸಂಸದೆ ಮಹುವಾ ಮೊಯಿತ್ರಾ, ನಮ್ಮ ನಿಯೋಗಕ್ಕೆ ಭೇಟಿಗೆ ಸಮಯ ನೀಡಿದ್ದೀರಿ. ನಮ್ಮ ಹೆಸರುಗಳನ್ನು ಸೇರಿ ಎಲ್ಲವನ್ನೂ ಪರಿಶೀಲಿಸಿದ್ದೀರಿ. ನಮ್ಮನ್ನು 3 ಗಂಟೆಗಳ ಕಾಲ ಕಾಯುವಂತೆ ಮಾಡಿ ಆ ನಂತರ ಹಿಂಬಾಗಿಲಿನ ಮೂಲಕ ಓಡಿಹೋಗಿದ್ದೀರಿ ಎಂದು ಟೀಕಿಸಿದ್ದಾರೆ.
ಇದನ್ನು ಓದಿ: NDAಯಿಂದ ಮೈತ್ರಿ ಪಕ್ಷಗಳೆಲ್ಲ ಹೊರಬಂದಿದೆ, ಈಗ ಇರುವುದು ಕೇವಲ ಸಿಬಿಐ, ಇಡಿ, ಐಟಿ ಮಾತ್ರ: ಕೆಟಿ ರಾಮರಾವ್