ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವುದನ್ನು ಟೀಕಿಸಿದ ಪ್ರಧಾನಿ ಮೋದಿ, ‘ಭ್ರಷ್ಟರು ಒಂದೇ ವೇದಿಕೆಯಲ್ಲಿ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಜೆಡಿಯು ಮತ್ತು ಶಿವಸೇನೆಯಂತಹ (ಉದ್ಧವ್ ಠಾಕ್ರೆ ಬಣ) ಪಕ್ಷಗಳು ಒಂದು ಸಮಯದಲ್ಲಿ ಮೋದಿಯವರ ಮಿತ್ರರಾಗಿದ್ದರು, ಈಗ ಭ್ರಷ್ಟರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾರ್ಚ್ 28ರಂದು ಬಿಜೆಪಿ ಪ್ರಧಾನ ಕಚೇರಿಯ ವಿಸ್ತರಣೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ”ಭ್ರಷ್ಟಚಾರದ ವಿರುದ್ಧ ತಮ್ಮ ಸರ್ಕಾರ ಅಭಿಯಾನವನ್ನು ಕೈಗೊಂಡಿವುದರಿಂದ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ, ದೇಶದ ಬೆಳವಣಿಗೆಯನ್ನು ತಡೆಯಲು ‘ಭಾರತ ವಿರೋಧಿ’ ಶಕ್ತಿಗಳು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಭ್ರಷ್ಟಾಚಾರದ ವಿರುದ್ಧ ಇಂತಹ ದೊಡ್ಡ ಅಭಿಯಾನ ನಡೆದು ಭ್ರಷ್ಟರನ್ನು ಬೆಚ್ಚಿ ಬೀಳಿಸಿರಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವವರೆಲ್ಲರೂ ಒಂದೇ ವೇದಿಕೆಗೆ ಬಂದಿದ್ದಾರೆ” ಎಂದು ಮೋದಿ ಹೇಳಿದ್ದರು.
ನರೇಂದ್ರ ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಸಿಬಲ್, ”ಪ್ರಧಾನಿಯವರೇ, ಪ್ರತಿಪಕ್ಷಗಳು ಈಗ ಒಂದಾಗಿರುವುದನ್ನು ನೀವು ಭ್ರಷ್ಟರೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿದ್ದಾರೆ ಎಂದು ಹೇಳುತ್ತಿದ್ದೀರಿ, ಆದರೆ ಶಿವಸೇನೆ, ಅಕಾಲಿ ದಳ, ಜೆಡಿಯು, ಪಿಡಿಪಿ, ಬಿಎಸ್ಪಿ, ಒಂದು ಕಾಲದಲ್ಲಿ ನಿಮ್ಮ ಮಿತ್ರಪಕ್ಷಗಳಾಗಿದ್ದವು ಮತ್ತು ನೀವು ಅವರೊಂದಿಗೆ ಸರ್ಕಾರವನ್ನು ರಚಿಸಿದ್ದೀರಿ! ಈಗ ಅವರು ಭ್ರಷ್ಟರಾಗಿದ್ದಾರೆ, ಆಗ ಅವರು ಭ್ರಷ್ಟರಾಗಿರಲಿಲ್ಲವೇ? ಎಂದು ಮಾಜಿ ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
P M :
Opposition afraid…all corrupt now on one platformBut Modiji :
Shiv Sena
Akali Dal
JDU
PDP
BSP
were all your allies at one time and you formed government with them !Now they are corrupt ! Then they were not ?
— Kapil Sibal (@KapilSibal) March 29, 2023
ರಾಹುಲ್ ಗಾಂಧಿಗೆ 19 ಪಕ್ಷಗಳ ಬೆಂಬಲ:
ಕಾಂಗ್ರೆಸ್ ನೇತೃತ್ವದಲ್ಲಿ ದೇಶಾದ್ಯಂತ ”ಪ್ರಜಾತಂತ್ರ ಉಳಿಸಿ ಆಂದೋಲನ” ಆರಂಭಿಸುತ್ತಿದ್ದು, ಇದಕ್ಕೆ 19 ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಸಾವರ್ಕರ್ ವಿಷಯದಲ್ಲಿ ಉದ್ಧವ್ ಠಾಕ್ರೆಯವರಿಗೆ ಭಿನ್ನಾಭಿಪ್ರಾಯವಿದ್ದರೂ ಸಹ ಅವರು ಬೆಂಬಲ ನೀಡಿದ್ದಾರೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಭ್ರಷ್ಟ ಶಕ್ತಿಗಳು ಒಂದೇ ವೇದಿಕೆಗೆ ಬರುತ್ತಿವೆ’: ವಿಪಕ್ಷಗಳ ಒಗ್ಗಟ್ಟಿಗೆ ಮೋದಿ ಕುಹಕ
ಈ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು, ”ನಮ್ಮ ಹೋರಾಟವಿರುವುದು ರಾಹುಲ್ ಗಾಂಧಿಯನ್ನು ಉಳಿಸುವುದಕ್ಕಾಗಿ ಅಲ್ಲ. ಬದಲಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ. ಅದಾನಿ ಮತ್ತು ನರೇಂದ್ರ ಮೋದಿ ನಡುವೆ ಏನು ಸಂಬಂಧ ಎಂಬುದು ನಮ್ಮ ಪ್ರಶ್ನೆಯಾಗಿದೆ. ಜಂಟಿ ಸಂಸದೀಯ ತನಿಖೆಗೆ ಸರ್ಕಾರ ಏಕೆ ಹೆದರುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
”ರಾಹುಲ್ ವಿರುದ್ಧ ಬಂದಿರುವ ತೀರ್ಪಿನ ಬಗ್ಗೆ ನಮ್ಮ ಕಾನೂನು ತಂಡವು ಕೆಲಸ ಮಾಡುತ್ತಿದ್ದು, ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ. ಒಂದು ತಿಂಗಳ ಕಾಲಾವಕಾಶವಿರುವುದರಿಂದ ಅಷ್ಟರಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಜೈರಾಂ ರಮೇಶ್ ಹೇಳಿದ್ದಾರೆ.