Homeಮುಖಪುಟಲಕ್ಷದ್ವೀಪ ಸಂಸದರ ಅನರ್ಹತೆ ರದ್ದು; ಮತ್ತೆ ಲೋಕಸಭಾ ಸದಸ್ಯತ್ವ ಪಡೆದ ಫೈಝಲ್

ಲಕ್ಷದ್ವೀಪ ಸಂಸದರ ಅನರ್ಹತೆ ರದ್ದು; ಮತ್ತೆ ಲೋಕಸಭಾ ಸದಸ್ಯತ್ವ ಪಡೆದ ಫೈಝಲ್

- Advertisement -
- Advertisement -

ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್ ಅವರ ಲೋಕಸಭೆ ಸದಸ್ಯತ್ವವನ್ನು ಸಂಸತ್ತಿನ ಕೆಳಮನೆ ಬುಧವಾರ ಮರುಸ್ಥಾಪಿಸಿದೆ. ಮೊಹಮ್ಮದ್ ಫೈಝಲ್ ಅವರನ್ನು ಕಳೆದ ಜನವರಿಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಫೈಜಲ್‌ ಅವರು ಕ್ರಿಮಿನಲ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಲಕ್ಷದ್ವೀಪವನ್ನು ಪ್ರತಿನಿಧಿಸುವ ಫೈಝಲ್ ಅವರು ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಫೈಝಲ್ ಅವರ ಅಪರಾಧ ಮತ್ತು ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿತ್ತು.

“ಕೇರಳದ ಹೈಕೋರ್ಟಿನ 25.01.2023ರ ಆದೇಶದ ದೃಷ್ಟಿಯಿಂದ, ಮೊಹಮ್ಮದ್ ಫೈಜಲ್ ಅವರ ಅನರ್ಹತೆಯನ್ನು ತಡೆಯಲಾಗಿದೆ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8ರೊಂದಿಗೆ ಓದಲಾದ ಭಾರತದ ಸಂವಿಧಾನದ 102 (1) (ಇ) ವಿಧಿಗಳ ನಿಬಂಧನೆಗಳು ಮುಂದಿನ ನ್ಯಾಯಾಂಗ ತೀರ್ಪುಗಳಿಗೆ ಒಳಪಟ್ಟಿವೆ. ಹೀಗಾಗಿ ಅನರ್ಹತೆಯನ್ನು ತಡೆಯಲಾಗಿದೆ” ಎಂದು ಲೋಕಸಭೆಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸರ್ವೋಚ್ಚ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮುಂಚಿತವಾಗಿ ಫೈಝಲ್ ಅವರ ಅನರ್ಹತೆಯನ್ನು ತಡೆಹಿಡಿಯಲಾಗಿದೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ ಎಂದು ವಾದಿಸಿರುವ ಫೈಝಲ್‌, ಲೋಕಸಭೆಯಿಂದ ಮಾಡಲಾಗಿರುವ ಅನರ್ಹತೆಯನ್ನು ಹಿಂಪಡೆಯಲು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

“ಕೇರಳ ಹೈಕೋರ್ಟ್ ಜನವರಿ 25 ರಂದು ಫೈಝಲ್‌ ಅವರ ಅಪರಾಧ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶವನ್ನು ಜಾರಿಗೊಳಿಸಿದೆ. ತಕ್ಷಣ ಅನರ್ಹತೆಯನ್ನು ಹಿಂತೆಗೆದುಕೊಳ್ಳಬೇಕಿತ್ತು, ತಡವಾಗಿಯಾದರೂ ಇದು ಸ್ವಾಗತಾರ್ಹ ಕ್ರಮವಾಗಿದೆ” ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಪ್ರತಿಕ್ರಿಯಿಸಿದ್ದಾರೆ.

ಜನವರಿ 13 ರಂದು ಫೈಝಲ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು, ಅವರು ಮತ್ತು ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ನೀಡಿತ್ತು.

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದಾರೆಂದು ತೀರ್ಪು ನೀಡಿದ್ದ ಕವರಟ್ಟಿ ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಅಪರಾಧಿಗಳೆಲ್ಲರೂ ಸಂಬಂಧಿಕರಾಗಿದ್ದಾರೆ.

ಮೊಹಮ್ಮದ್ ಫೈಜಲ್ ಅವರು ಕೊಲೆ ಯತ್ನ ಪ್ರಕರಣದಲ್ಲಿ ತನಗೆ ಮತ್ತು ಇತರ ಮೂವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೆಷನ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಫೈಝಲ್ ಮತ್ತು ಇತರ ಮೂವರು ಆರೋಪಿಗಳನ್ನು ಐಪಿಸಿ ಸೆಕ್ಷನ್ 143, 147, 148, 448, 427, 324, 342, 307, 506 ಆರ್/ಡಬ್ಲ್ಯು 149 ರ ಅಡಿಯಲ್ಲಿ ಶಿಕ್ಷಾರ್ಹ ದೋಷಿಗಳೆಂದು ಕವರಟ್ಟಿ ನ್ಯಾಯಾಲಯ ಘೋಷಿಸಿತ್ತು.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಜನವರಿ 30ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದರು. “ಲಕ್ಷದ್ವೀಪದಿಂದ ಎರಡು ಅವಧಿಗೆ ಸದಸ್ಯರಾಗಿರುವ ಫೈಝಲ್ ಅವರ ಅಮಾನತು ರದ್ದುಗೊಳಿಸಬೇಕು” ಎಂದು ಮನವಿ ಮಾಡಿದ್ದರು.

ಅನರ್ಹತೆಯ ನಂತರ, ಚುನಾವಣಾ ಆಯೋಗವು ಜನವರಿ 18 ರಂದು ಲಕ್ಷದ್ವೀಪ ಸಂಸದೀಯ ಸ್ಥಾನಕ್ಕೆ ಉಪಚುನಾವಣೆ ಘೋಷಿಸಿತ್ತು. ಆದರೆ ಕೇರಳ ಹೈಕೋರ್ಟ್ ತಡೆಯಾಜ್ಞೆಯ ನಂತರ ಉಪಚುನಾವಣೆಯನ್ನು ಹಿಂಪಡೆಯಲು ಜನವರಿ 30ರಂದು ಆಯೋಗ ನಿರ್ಧರಿಸಿತು.

ರಾಹುಲ್ ಗಾಂಧಿಯವರು ‘ಮೋದಿ ಸರ್‌ನೇಮ್‌’ ಬಳಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ಜೈಲು ಶಿಕ್ಷೆಯನ್ನು ಸೂರತ್‌ ನ್ಯಾಯಾಲಯ ವಿಧಿಸಿದೆ. ಆದರೆ ಮೇಲ್ಮನವಿಯ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವಾಗಲೇ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಲಾಯಿತು ಎಂಬ ಆರೋಪಗಳು ಬಂದಿವೆ. ರಾಹುಲ್ ಗಾಂಧಿಯವರು ಏಪ್ರಿಲ್ 22 ರೊಳಗೆ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಸೋಮವಾರ ನೋಟೀಸ್‌ ನೀಡಲಾಗಿದೆ.

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ದನಿ ಎತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...