ರೈತ ಬಂಧು ಯೋಜನೆಯಡಿ ಆರ್ಥಿಕ ನೆರವು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಇಂದು (ನ.27) ಭಾರತೀಯ ಚುನಾವಣಾ ಆಯೋಗ ಹಿಂಪಡೆದಿದೆ. ಯೋಜನೆಯಡಿ ಹಣ ವಿತರಣೆ ಕುರಿತು ಸಚಿವ ಟಿ.ಹರೀಶ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಚುನಾವಣಾ ಪ್ರಚಾರದ ವೇಳೆ ರೈತ ಬಂಧು ಯೋಜನೆಯಡಿ ವಿತರಿಸುತ್ತಿರುವ ಹಣದ ಕುರಿತು ಯಾವುದೇ ಹೇಳಿಕೆ ನೀಡದಂತೆ ಬಿಆರ್ಎಸ್ ಪಕ್ಷದ ಮುಖಂಡರಿಗೆ ನಿರ್ಬಂಧ ಹೇರುವಂತೆ ಕಾಂಗ್ರೆಸ್ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿತ್ತು.
ಬಿಆರ್ಎಸ್ ನಾಯಕರು ರೈತಬಂಧು ಯೋಜನೆಯ ಹಣವನ್ನು ತಮ್ಮ ಜೇಬಿನಿಂದ ಕೊಡುತ್ತಿರುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಯೋಜನೆಯನ್ನು ಜನರನ್ನು ತಮ್ಮತ್ತ ಸೆಳೆಯುವ ಸಾಧನವಾಗಿನ ಉಪಯೋಗಿಸುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ದೂರಿತ್ತು.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶವಿಲ್ಲ. ಆದರೂ, ರೈತರ ಹಿತದೃಷ್ಟಿಯಿಂದ ಹಿಂಗಾರು ಬೆಳೆಗಳಿಗೆ ರೈತರಿಗೆ ಆರ್ಥಿಕ ನೆರವು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ನವೆಂಬರ್ 24ರಂದು ಚುನಾವಣಾ ಆಯೋಗ ಅನುಮತಿ ನೀಡಿತ್ತು.
ಇದನ್ನೂ ಓದಿ: ಗುಜರಾತ್: ಬುಡಕಟ್ಟು ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ