Homeಮುಖಪುಟಮೋದಿ ಆಡಳಿತದ 10 ವರ್ಷಗಳಲ್ಲಿ 'ED' ದಾಳಿಗಳಲ್ಲಿ ಹೆಚ್ಚಳ: ವರದಿ

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

- Advertisement -
- Advertisement -

ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ ‘ಇಡಿ’ ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಲು, ಮಟ್ಟಹಾಕಲು ಬಳಸುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿರುವ ಹೊಸ್ತಿಲಲ್ಲೇ ಈ ವರದಿ ಬಹಿರಂಗವಾಗಿದೆ.

2014ರಿಂದ ಕಳೆದ 10 ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಗಳ ಪ್ರಮಾಣದಲ್ಲಿ 86 ಪಟ್ಟು ಹೆಚ್ಚಾಗಿದೆ, ಆಸ್ತಿ ಮುಟ್ಟುಗೋಲು ಪ್ರಮಾಣದಲ್ಲಿ 25 ಪಟ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಜುಲೈ 2005ರಿಂದ ಮಾರ್ಚ್ 2014 ರವರೆಗಿನ ಒಂಬತ್ತು ವರ್ಷಗಳ ಅವಧಿ ಮತ್ತು ಏಪ್ರಿಲ್ 2014ರಿಂದ  ಮಾರ್ಚ್ 2024ರ ನಡುವೆ ಕಳೆದ 10 ವರ್ಷಗಳಲ್ಲಿನ ದಾಖಲೆಯನ್ನು ವಿಶ್ಲೇಷಿಸಿ ಪಿಟಿಐ ಈ ಕುರಿತ ವರದಿಯನ್ನು ಸಿದ್ಧಪಡಿಸಿದೆ.

PMLAಅನ್ನು 2002ರಲ್ಲಿ ಜಾರಿಗೊಳಿಸಲಾಗಿದೆ ಮತ್ತು ತೆರಿಗೆ ವಂಚನೆ, ಕಪ್ಪು ಹಣ ಮತ್ತು ಅಕ್ರಮ ಹಣ ವರ್ಗಾವಣೆ ಕುರಿತ ಗಂಭೀರ ಅಪರಾಧಗಳ ಬಗ್ಗೆ ಕ್ರಮಕ್ಕೆ ಜುಲೈ 1, 2005ರಿಂದ PMLA ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಕಳೆದ 1 ದಶಕದಲ್ಲಿ ಇಡಿ ಕ್ರಮವು ಪ್ರತಿಪಕ್ಷಗಳು ಮತ್ತು ಬಿಜೆಪಿ ವಿರುದ್ಧ ಮಾತನಾಡುವವರ ವಿರುದ್ಧದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ದಬ್ಬಾಳಿಕೆಯ” ತಂತ್ರಗಳ ಭಾಗವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವು, ಜಾರಿ ನಿರ್ದೇಶನಾಲಯವು ಸ್ವತಂತ್ರವಾಗಿದೆ ಮತ್ತು ಅದರ ತನಿಖೆಗಳು ಸಂಪೂರ್ಣವಾಗಿ ಅಕ್ರಮ ಮತ್ತು ಭ್ರಷ್ಟರ ವಿರುದ್ಧದ ಕಾರ್ಯಚರಣೆಯ ಭಾಗವಾಗಿದೆ ಎಂದು ‘ಇಡಿ’ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ.

2005-14ರ ಅವಧಿಯಲ್ಲಿ ಒಟ್ಟು 1,797 ದೂರುಗಳು ಮಾತ್ರ ಜಾರಿ ನಿರ್ದೇಶನಾಲಯ ದಾಖಲಿಸಿದ್ದವು, ಆದರೆ  2014ರಿಂದ 2024ರ ಅವಧಿಯಲ್ಲಿ ಕಳೆದ 10 ವರ್ಷಗಳಲ್ಲಿ 5,155 PMLA ಪ್ರಕರಣಗಳನ್ನು ದಾಖಲಿಸಿದೆ, ಇದು 2005-14ರ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳ ಎಂದು ವಿಶ್ಲೇಷಣೆಯು ಉಲ್ಲೇಖಿಸಿದೆ.

2014ರ ಹಣಕಾಸು ವರ್ಷದಿಂದ ಜಾರಿ ನಿರ್ದೇಶನಾಲಯವು ಇದುವರೆಗೆ 63 ವ್ಯಕ್ತಿಗಳನ್ನು ಮನಿ ಲಾಂಡರಿಂಗ್ ವಿರೋಧಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಿದೆ ಎಂದು ಮಾಹಿತಿಯು ತೋರಿಸುತ್ತದೆ. 2014-2024ರ ಅವಧಿಯಲ್ಲಿ ದೇಶಾದ್ಯಂತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ 7,264 ದಾಳಿಗಳನ್ನು ನಡೆಸಿದೆ. ಇದು ಯುಪಿಎ ಸರಕಾರದ 10ವರ್ಷದ ಅವಧಿಗೆ ಹೋಲಿಸಿದೆ 86 ಪಟ್ಟು ಹೆಚ್ಚಳವಾಗಿದೆ ಅಂದರೆ ಯುಪಿಎ ಅವಧಿಯಲ್ಲಿ 84 ದಾಳಿಗಳನ್ನು ನಡೆಸಲಾಗಿತ್ತು.

ಕಳೆದ ಒಂದು ದಶಕದಲ್ಲಿ ಒಟ್ಟು 755 ಜನರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಮತ್ತು 1,21,618 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. 2005-14ರ ಅವಧಿಯಲ್ಲಿ 29 ಮಂದಿಯ ಬಂಧನ ನಡೆದಿತ್ತು ಮತ್ತು  5,086.43 ಕೋಟಿ ರೂ. ಜಪ್ತಿ ಮಾಡಲಾಗಿತ್ತು. ಈ ಅಂಕಿಅಂಶಗಳು ಯುಪಿಎ ಅವಧಿಗೆ ಹೋಲಿಸಿದರೆ ಬಂಧನಗಳು 26 ಪಟ್ಟು ಹೆಚ್ಚಳವಾಗಿರುವುದನ್ನು ತೋರಿಸುತ್ತದೆ. 2014ರಿಂದ 2024ರವರೆಗೆ ಒಂದು ದಶಕದಲ್ಲಿ ದೋಷಾರೋಪ ಪಟ್ಟಿಗಳ ಸಲ್ಲಿಕೆಯು ಅದರ ಹಿಂದಿನ ದಶಕಕ್ಕಿಂತ 12 ಪಟ್ಟು ಹೆಚ್ಚಳವನ್ನು ಕಂಡಿದೆ. 1,281 ಪ್ರಾಸಿಕ್ಯೂಶನ್ ದೂರುಗಳನ್ನು ನ್ಯಾಯಾಲಯಗಳ ಮುಂದೆ ದಾಖಲಿಸಲಾಗಿತ್ತು ಹಾಗೂ ಅದರ ಹಿಂದಿನ ಅವಧಿಯಲ್ಲಿ 102 ಪ್ರಕರಣಗಳು ದಾಖಲಾಗಿದ್ದವು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಸಂಜಯ್ ಭಂಡಾರ ಆರ್ಥಿಕ ವಂಚನೆ ಮಾಡಿ ವಿದೇಶಗಳಲ್ಲಿ ಹೋಗಿ ನೆಲೆಸಿದ್ದಾರೆ, ಆದರೆ ಇಡಿ ಅವರನ್ನು ದೇಶಕ್ಕೆ ತರುವಲ್ಲಿ ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡಿದೆ. ಪ್ರತಿಪಕ್ಷಗಳು ಈ ಮೂವರು ಉದ್ಯಮಿಗಳಿಗೆ ದೇಶ ಬಿಟ್ಟು ಪಲಾಯನ ಮಾಡಲು ಸಹಕಾರಿಯಾದ ವ್ಯವಸ್ಥೆಯ ಬಗ್ಗೆ ಹಲವು ಬಾರಿ ಟೀಕಿಸಿದ್ದವು.

ಇದನ್ನು ಓದಿ: ಚುನಾವಣಾ ಬಾಂಡ್‌ ಯೋಜನೆಗೆ ಜನಸಾಮಾನ್ಯರ ತೆರಿಗೆಯ ’14 ಕೋಟಿ ರೂ.’ ವ್ಯಯಿಸಿದ್ದ ಮೋದಿ ಸರಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...