1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಶಿಕ್ಷೆಯನ್ನು ಪ್ರಕಟಿಸಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಮುಂಬರುವ ಚುನಾವಣೆಗೆ ಕೋನಸೀಮಾ ಜಿಲ್ಲೆಯ ಮಂದಪೇಟಾ ಕ್ಷೇತ್ರದ ವೈಎಸ್ಆರ್ಸಿಪಿ ಅಭ್ಯರ್ಥಿಯಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಆರೋಪಿತ ಓರ್ವ ವ್ಯಕ್ತಿ ಈಗಾಗಲೇ ಮೃತಪಟ್ಟಿದ್ದಾರೆ. ಇತರ ಎಲ್ಲಾ ಆರೋಪಿಗಳಿಗೆ ತಲಾ 42 ಸಾವಿರ ರೂ. ದಂಡ ಮತ್ತು 18 ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ತ್ರಿಮೂರ್ತಿಲು ಅವರು 1996ರಲ್ಲಿ ಅವಿಭಜಿತ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ಸ್ವತಂತ್ರ ಶಾಸಕರಾಗಿದ್ದಾಗ ಬೆಂಬಲಿಗರೊಂದಿಗೆ ಸೇರಿ, ಕೋಟಿ ಚಿನ್ನರಾಜು, ದಡಾಲ ವೆಂಕಟ ರತ್ನಂ, ಚಳ್ಳಪುಡಿ ಪಟ್ಟಾಭಿರಾಮಯ್ಯ, ಕಣಿಕೆಲ್ಲ ಗಣಪತಿ ಮತ್ತು ಪುವ್ವಳ ವೆಂಕಟ ರಮಣ ಅವರನ್ನು 1994ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ಥಳಿಸಿದ್ದಾರೆ. ಸಂತ್ರಸ್ತರು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಪೋಲಿಂಗ್ ಏಜೆಂಟ್ಗಳಾಗಿ ಕೆಲಸ ಮಾಡಿದ್ದರು. ಇದೇ ಹಗೆತನದಿಂದ ಥಳಿಸಲಾಗಿದೆ.
ಹಲ್ಲೆಯನ್ನು ಖಂಡಿಸಿ ಈ ವೇಳೆ ಭಾರೀ ಪ್ರತಿಭಟನೆಗಳು ನಡೆದಿದ್ದವು, ಪೂರ್ವ ಗೋದಾವರಿ ಜಿಲ್ಲೆಯ ದ್ರಾಕ್ಷಾರಾಮಂ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡು ಆರೋಪಪಟ್ಟಿ ಸಲ್ಲಿಸಿದ್ದರು. ಜನವರಿ 7, 1996ರಂದು ತ್ರಿಮೂರ್ತಿಲು ಸೇರಿದಂತೆ ಆರೋಪಿಗಳನ್ನು ಬಂಧಿಸಲಾಯಿತು, ಆ ಬಳಿಕ ಆಂಧ್ರಪ್ರದೇಶದ ಹೈಕೋರ್ಟ್ ಬಂಧನಕ್ಕೆ ತಡೆ ನೀಡಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್ಗಳಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 1996ರಿಂದ ಪ್ರಕರಣವು ಕೋರ್ಟ್ ಅಂಗಳದಲ್ಲಿತ್ತು. 2021ರಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ದೂರುದಾರರ ಎಸ್ಸಿ ಗುರುತಿನ ಪುರಾವೆಯಾಗಿ ಜಾತಿ ಪ್ರಮಾಣಪತ್ರಗಳನ್ನು ನೀಡಿದಾಗ ವಿಶಾಖಪಟ್ಟಣಂ ವಿಶೇಷ ನ್ಯಾಯಾಲಯವು ಅದನ್ನು ಪುರಾವೆಯಾಗಿ ಪರಿಗಣಿಸಲು ನಿರಾಕರಿಸಿತ್ತು. ಇದುವರೆಗೂ ಪೊಲೀಸರು ಜಾತಿ ಪ್ರಮಾಣ ಪತ್ರಗಳನ್ನು ದೋಷಾರೋಪ ಪಟ್ಟಿಗೆ ಲಗತ್ತಿಸಿರಲಿಲ್ಲ ಎಂದು ಕೋರ್ಟ್ ಗಮನಿಸಿತ್ತು. ಫೆಬ್ರವರಿ 2024ರಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದಕ್ಕಾಗಿ ಮತ್ತು ಪ್ರಕರಣದಲ್ಲಿ ಅವರ ಸಾಕ್ಷ್ಯವನ್ನು ಕೆಳ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು. ಇದನ್ನು ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿತ್ತು.
ಇದನ್ನು ಓದಿ: ಚುನಾವಣಾ ಬಾಂಡ್ ಯೋಜನೆಗೆ ಜನಸಾಮಾನ್ಯರ ತೆರಿಗೆಯ ’14 ಕೋಟಿ ರೂ.’ ವ್ಯಯಿಸಿದ್ದ ಮೋದಿ ಸರಕಾರ!