“ಬಿಜೆಪಿಗೆ ಸೇರಿದರೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಕಳುಹಿಸುವುದನ್ನು ನಿಲ್ಲಿಸುತ್ತದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿರುವ ಅವರು, ವಿಪಕ್ಷ ನಾಯಕರಿಗೆ ಬಿಜೆಪಿ ಸೇರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ, ಇದುವರೆಗೆ ಇಡಿ ಕಳುಹಿಸಿದ 8 ಸಮನ್ಸ್ಗಳನ್ನು ಕೇಜ್ರಿವಾಲ್ ತಿರಸ್ಕರಿಸಿದ್ದಾರೆ. ಈ ಹಿನ್ನೆಲೆ ಕೇಜ್ರಿವಾಲ್ ವಿರುದ್ದ ಇಡಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.
“ನೀವು ಎಲ್ಲಿಗೆ ಹೋಗುತ್ತೀರಿ? ಬಿಜೆಪಿಗಾ ಇಲ್ಲಾ ಜೈಲಿಗಾ? ಎಂದು ಕೇಳಲು ಇಡಿ ದಾಳಿ ಮಾಡುತ್ತಿದೆ. ಬಿಜೆಪಿಗೆ ಸೇರಲು ನಿರಾಕರಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ” ಎಂದು ಹಿಂದಿ ಭಾಷೆಯಲ್ಲಿ ಹಾಕಿರುವ ಪೋಸ್ಟ್ನಲ್ಲಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ED और मोदी सरकार की ये सच्चाई है। कैसे लोगों को ED से परेशान करवा के बीजेपी में शामिल किया जाता है। ED की रेड करवा के पूछा जाता है – कहाँ जाओगे – बीजेपी या जेल? जो बीजेपी जाने से मना कर देते हैं, उन्हें जेल भेज देते हैं। आज अगर सत्येंद्र जैन, मनीष सिसोदिया और संजय सिंह अगर बीजेपी… https://t.co/Xe1frCexDs
— Arvind Kejriwal (@ArvindKejriwal) March 6, 2024
“ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಇಂದು ಬಿಜೆಪಿ ಸೇರಿದರೆ ನಾಳೆ ಜಾಮೀನು ಪಡೆಯುತ್ತಾರೆ. ನಾನು ಈಗ ಬಿಜೆಪಿಗೆ ಸೇರಿದರೆ ಇಡಿ ಸಮನ್ಸ್ ನೀಡುವುದನ್ನು ನಿಲ್ಲಿಸುತ್ತದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಹಣ ವರ್ಗಾವಣೆ ಪ್ರಕರಣ ಸಂಬಂಧ ಕೇಜ್ರಿವಾಲ್ಗೆ ಆರಂಭಿಕ ಸಮನ್ಸ್ ಜಾರಿ ಮಾಡಿದ್ದ ಇಡಿ, ಅವರು ವಿಚಾರಣೆಗೆ ಹಾಜರಾಗದ ಕಾರಣ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ 8ನೇ ಸಮನ್ಸ್ ಬಳಿಕ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿರುವ ಇಡಿ, ಕೇಜ್ರಿವಾಲ್ ಸಮನ್ಸ್ಗೆ ಗೌರವ ಕೊಟ್ಟಿಲ್ಲ ಎಂದು ಆರೋಪಿಸಿದೆ.
ಇಡಿ ಇದುವರೆಗೆ ಕಳುಹಿಸಿರುವ ಎಲ್ಲಾ ಸಮನ್ಸ್ಗಳು ರಾಜಕೀಯ ಪ್ರೇರಿತ ಮತ್ತು ಕಾನೂನು ಬಾಹಿರ ಎಂದಿರುವ ಕೇಜ್ರಿವಾಲ್ 7 ಸಮನ್ಸ್ ಅನ್ನು ಪರಿಗಣನೆಗೆ ತೆಗದುಕೊಂಡಿರಲಿಲ್ಲ. ಏಳು ಬಾರಿಯೂ ಅವರು ವಿಚಾರಣೆಗೆ ಗೈರಾಗಿದ್ದರು. ಆದರೆ, 8ನೇ ಸಮನ್ಸ್ ಬಳಿಕ ಮಾರ್ಚ್ 12ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಇಡಿ ವಿಚಾರಣೆಗೆ ಹಾಜರಾಗಲು ಸಿದ್ದ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅದರೆ, ಇದು ಸಾಧ್ಯವಿಲ್ಲ, ಖುದ್ದಾಗಿ ನಮ್ಮ ಕಚೇರಿ ಆಗಮಿಸಿ ಎಂದು ಇಡಿ ಹೇಳಿದೆ.
ಇದನ್ನೂ ಓದಿ : ಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರಿದ ಟಿಎಂಸಿಯ ಹಿರಿಯ ಶಾಸಕ