ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ನಾಯಕ ಅಭಿಮನ್ಯು ಎಂ ಹತ್ಯೆಗೆ ಸಂಬಂಧಿಸಿದ ನಿರ್ಣಾಯಕ ದಾಖಲೆಗಳು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದಿಂದ ನಾಪತ್ತೆಯಾಗಿರುವುದು ಇದೀಗ ಬಹಿರಂಗವಾಗಿದ್ದು, ಈ ಕುರಿತು ತನಿಖೆಗೆ ಎಸ್ಎಫ್ಐ ಆಗ್ರಹಿಸಿದೆ.
ನಾಪತ್ತೆಯಾದ ದಾಖಲೆಗಳಲ್ಲಿ 5,000 ಪುಟಗಳ ಆರೋಪಪಟ್ಟಿ, ಮರಣೋತ್ತರ ಪರೀಕ್ಷೆ ಪ್ರಮಾಣಪತ್ರ, ಗಾಯದ ಪ್ರಮಾಣಪತ್ರ, ಆರೋಪಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿವೆ. ಈ ದಾಖಲೆಗಳನ್ನು ಮತ್ತೊಮ್ಮೆ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಪ್ರಾಸಿಕ್ಯೂಷನ್ಗೆ ಸೂಚಿಸಿದೆ.
ಅಭಿಮನ್ಯು ಪ್ರಕರಣದ ವಿಚಾರಣೆಯನ್ನು ಮಾರ್ಚ್ 18ಕ್ಕೆ ನಿಗದಿಪಡಿಸಲಾಗಿದೆ. ವರದಿಗಳ ಪ್ರಕಾರ, ಡಿಸೆಂಬರ್ನಲ್ಲಿ ದಾಖಲೆಗಳು ಕಾಣೆಯಾಗಿವೆ. 2023ರ ಡಿಸೆಂಬರ್ 1ರಂದು, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ವರ್ಗೀಸ್ ಅವರು ಈ ಬಗ್ಗೆ ಹೈಕೋರ್ಟ್ಗೆ ವರದಿ ಮಾಡಿದ್ದರು.
ಇಡುಕ್ಕಿಯ ವಟ್ಟವಾಡ ಮೂಲದ ಅಭಿಮನ್ಯು ಎರ್ನಾಕುಲಂ ಜಿಲ್ಲೆಯ ಮಹಾರಾಜ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದರು. ಜುಲೈ 2, 2018ರಂದು, ಕೆಲ ವಿದ್ಯಾರ್ಥಿಗಳ ಗುಂಪು ಅಭಿಮನ್ಯು ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಕ್ಯಾಂಪಸ್ನಲ್ಲಿ ಪೋಸ್ಟರ್ ಅಂಟಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಘರ್ಷಣೆಗೆ ಕಾರಣವಾಗಿ ಬಳಿಕ ಕೊಲೆಯಲ್ಲಿ ಅಂತ್ಯವಾಗಿತ್ತು.
ಈ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಮನ್ಯು ಅವರ ಕುಟುಂಬವು ನಾಪತ್ತೆಯಾದ ದಾಖಲೆಗಳ ಬಗ್ಗೆ ವಿವರವಾದ ತನಿಖೆಯನ್ನು ಕೋರಿದೆ. ದಾಖಲೆಗಳನ್ನು ಆದಷ್ಟು ಬೇಗ ವಾಪಸ್ ಪಡೆಯಬೇಕು ಮತ್ತು ಅಭಿಮನ್ಯುವನ್ನು ಕೊಂದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ, ನಾಪತ್ತೆಯಾಗಿರುವ ದಾಖಲೆಗಳ ಹಿಂದಿರುವ ಅಪರಾಧಿಗಳ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇರವಾಗಿ ತನಿಖೆ ನಡೆಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ಇದನ್ನು ಓದಿ: ಭೀಮಾ ಕೋರೆಗಾಂವ್ ಪ್ರಕರಣ; ಗೌತಮ್ ನವ್ಲಾಖಾಗೆ 1 ಕೋಟಿ ಪಾವತಿಗೆ ಸೂಚಿಸಿದ ಎನ್ಐಎ!