ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಗೃಹ ಬಂಧನದಲ್ಲಿರುವ ಗೌತಮ್ ನವ್ಲಾಖಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) 1ಕೋಟಿ ರೂ.ಪಾವತಿಗೆ ಸೂಚಿಸಿದ್ದು, ಈ ಬಗ್ಗೆ ನವ್ಲಾಖಾ ಪರ ವಕೀಲರು ಕೋರ್ಟ್ನಲ್ಲಿ ಆಕ್ಷೇಪವನ್ನು ಸಲ್ಲಿಸಿದ್ದಾರೆ.
ಆರೋಪಿ ಗೌತಮ್ ನವ್ಲಾಖಾ ಅವರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಗೃಹಬಂಧನದ ವೆಚ್ಚವನ್ನು ಪೂರೈಸಲು ಹೆಚ್ಚಿನ ಮೊತ್ತವನ್ನು ಬೇಡಿಕೆಯಿಡುವ ಮೂಲಕ ಸುಲಿಗೆ ಮಾಡುತ್ತಿದೆ ಎಂದು ಅವರ ಪರ ವಕೀಲ ನಿತ್ಯಾ ರಾಮಕೃಷ್ಣನ್ ಆರೋಪಿಸಿದ್ದಾರೆ. ಪುಣೆಯ ಭೀಮಾ ಕೋರೆಗಾಂವ್ನಲ್ಲಿ 2018ರಲ್ಲಿ ನಡೆದ ಜಾತಿ ಆಧಾರಿತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ, 1967ರಡಿಯಲ್ಲಿ ಗೌತಮ್ ನವ್ಲಾಖಾ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಅವರು ನವೆಂಬರ್ 2022ರಿಂದ ಗೃಹಬಂಧನದಲ್ಲಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಗೌತಮ್ ನವ್ಲಾಖಾ ಅವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ ಮನವಿ ಮತ್ತು ಮುಂಬೈನಲ್ಲಿರುವ ತನ್ನ ಗೃಹಬಂಧನ ಸ್ಥಳವನ್ನು ಸ್ಥಳಾಂತರಿಸುವಂತೆ ಕೇಳಿದ ನವ್ಲಾಖಾ ಅವರ ಮನವಿ ಕುರಿತ ವಿಚಾರಣೆಯ ವೇಳೆ ಈ ವಿಚಾರಗಳ ಪ್ರಸ್ತಾವನೆ ನಡೆದಿದೆ. ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು ಎರಡು ಪ್ರಕರಣಗಳ ವಿಚಾರಣೆ ನಡೆಸಿತ್ತು.
ಸ್ಥಳ ಬದಲಾವಣೆ ಕುರಿತ ಅವರ ಮನವಿಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರತಿ-ಅಫಿಡವಿಟ್ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಗಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರು ಗೃಹಬಂಧನದ ಆದೇಶದ ಬಗ್ಗೆ ಕೇಂದ್ರೀಯ ಸಂಸ್ಥೆಯ ಕಳವಳವನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ನಿವೃತ್ತ ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪೀಠವು ನವ್ಲಾಖಾ ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಮತ್ತು ಅವರ ಹದಗೆಟ್ಟ ಆರೋಗ್ಯದ ಆಧಾರದ ಮೇಲೆ ಗೃಹಬಂಧನದಲ್ಲಿ ಇರಿಸಲು ಅವಕಾಶ ಮಾಡಿಕೊಟ್ಟಿತ್ತು.
ವಿಚಾರಣೆಯ ಸಮಯದಲ್ಲಿ, ಎಎಸ್ಜಿ ರಾಜು ಅವರು ನವ್ಲಾಖಾ ಅವರು ಮನೆಯಲ್ಲಿರುವ ಸ್ಥಳದಲ್ಲಿ ರಾತ್ರಿಯಿಡಿ ಕಣ್ಗಾವಲು ವ್ಯವಸ್ಥೆಗೆ ಒಂದು ಕೋಟಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಬೇಡಿಕೆಗೆ ಗೌತಮ್ ನವ್ಲಾಖಾ ಪರವಾಗಿ ಹಾಜರಾದ ಹಿರಿಯ ವಕೀಲರಾದ ನಿತ್ಯಾ ರಾಮಕೃಷ್ಣನ್ ಆಕ್ಷೇಪಿಸಿದ್ದಾರೆ. ಪಾವತಿಸಬೇಕಾದ ಮೊತ್ತದ ಬಗೆಗಿನ ಕೇಂದ್ರದ ಏಜೆನ್ಸಿಯ ಲೆಕ್ಕಾಚಾರವು ತಪ್ಪಾಗಿದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ. ಇದಲ್ಲದೆ ಕೋರ್ಟ್ ಈ ಮೊದಲು ನೀಡಿರುವ ಆದೇಶದಂತೆ ಈಗಾಗಲೇ ಎಂಟು ಲಕ್ಷ ಠೇವಣಿ ಇಡಲಾಗಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಇದಕ್ಕೆ ತನಿಖಾ ಸಂಸ್ಥೆಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಪ್ರತಿಕ್ರಿಯಿಸಿ, ನವ್ಲಾಖಾ ಅವರು ಮೊದಲು ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು, ಅವರು ಇದುವರೆಗೆ ಕೇವಲ ಹತ್ತು ಲಕ್ಷ ಮಾತ್ರ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ರಾಮಕೃಷ್ಣನ್, ಎನ್ಐಎ ನಿಲುವನ್ನು ಪ್ರಶ್ನಿಸುವುದನ್ನು ಮುಂದುವರೆಸಿದರು, ಸಂಸ್ಥೆಯು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಂತಿಮವಾಗಿ, ನ್ಯಾಯಾಧೀಶರು ಮಧ್ಯಪ್ರವೇಶಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆಯು ಕ್ಲೈಮ್ ಮಾಡಿದ ಮೊತ್ತದ ವಿವಾದವನ್ನು ಸರಿಯಾದ ವಿಚಾರಣೆಯ ಬಳಿಕ ತೀರ್ಮಾನಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಟಿಆರ್ಪಿ ಹಗರಣ: ಅರ್ನಬ್ ಗೋಸ್ವಾಮಿ ವಿರುದ್ಧದ ಪ್ರಕರಣ ಹಿಂಪಡೆಯಲು ಅನುಮತಿಸಿದ ಕೋರ್ಟ್